Advertisement

ಬಾಲ್ಯವಿವಾಹ ತಡೆಗೆ ಹುಟ್ಟಿಕೊಂಡ ಪ್ರೌಢಶಾಲೆ!

09:34 PM Aug 10, 2021 | Team Udayavani |

ವರದಿ: ಶ್ರೀಶೈಲ ಕೆ. ಬಿರಾದಾರ

Advertisement

ಬಾಗಲಕೋಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625ಕ್ಕೆ ಪಡೆದು ರಾಜ್ಯದ ಗಮನ ಸೆಳೆದ ತಾಲೂಕಿನ ಮುಚಖಂಡಿ ತಾಂಡಾ ನಂ.1ರ ಶ್ರೀ ದುರ್ಗಾದೇವಿ ಪ್ರೌಢಶಾಲೆಗೆ ಆರಂಭದ ಹಿಂದೆ ರೋಚಕ ಕಥೆಯೇ ಇದೆ.

ಹೌದು, ಬಾಲ್ಯ ವಿವಾಹ ತಡೆದು ತಾಂಡಾದ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬ 11 ಜನ ಸಮಾನ ಮನಸ್ಕ ಹಿರಿಯರ ಮುಂದಾಲೋಚನೆಯಿಂದ ಆರಂಭಗೊಂಡ ಈ ಶಾಲೆ, ಹಲವು ಕಷ್ಟ-ಸಂಕಷ್ಟದಲ್ಲೂ ಇದೀಗ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೂಲಕ ಸಂಭ್ರಮ ಕಾಣುತ್ತಿದೆ.

ಬಾಲ್ಯ ವಿವಾಹ ತಡೆಗೆ ಹುಟ್ಟಿದ ಶಾಲೆ: ತಾಲೂಕಿನ ಮುಚಖಂಡಿ ತಾಂಡಾ ನಂ.1ರಲ್ಲಿ ಇದೇ 1987ರ ಮುಂಚೆ ಹೆಣ್ಣು ಮಕ್ಕಳು ಹೈಸ್ಕೂಲ್‌ ಮೆಟ್ಟಿಲು ಹತ್ತಿರಲಿಲ್ಲ. ಕೇವಲ 5ನೇ ತರಗತಿ ವರೆಗೆ ಶಾಲೆ ಕಲಿತರೇ ಅದೇ ದೊಡ್ಡದು. ಅದಕ್ಕೂ ಹೆಚ್ಚಿನ ಶಿಕ್ಷಣ ಪಡೆಯಲು 6 ಕಿ.ಮೀ ದೂರದ ಬಾಗಲಕೋಟೆ ನಗರಕ್ಕೆ ಬೇರಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ಲಂಬಾಣಿ ಸಮುದಾಯದ ಜನರು, ತಮ್ಮ ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಕಳುಹಿಸದೇ ಬಾಲ್ಯದಲ್ಲೇ ಮದುವೆ ಮಾಡಿ ಕೊಡುತ್ತಿದ್ದರು. ಇದು ದೇನಪ್ಪ ಲಮಾಣಿ, ತಾವರಪ್ಪ ರಾಠೊಡ, ವೈ.ಆರ್‌. ಲಮಾಣಿ, ಭೀಮಪ್ಪ ಪಿ. ಲಮಾಣಿ ಮುಂತಾದ ಹಿರಿಯರ ಮನಸ್ಸಿಗೆ ತೀವ್ರ ಬೇಸರ ತರಿಸುತ್ತಿತ್ತು. ನಮ್ಮೂರಿನ ಹೆಣ್ಣು ಮಕ್ಕಳೂ ಶಿಕ್ಷಣ ಪಡೆಯಬೇಕು ಎಂಬ ಆಶಯ ಅವರಲ್ಲಿ ಬಲವಾಗಿ ಮೊಳಕೆ ಒಡೆಯಿತು.

ಉನ್ನತ ಶಿಕ್ಷಣ ಪಡೆದ ಮೊದಲ ಹೆಣ್ಣು ಮಗಳು: ತಾಂಡಾದ ಭೀಮಪ್ಪ ಪಿ. ಲಮಾಣಿ ಅವರು, ತಮ್ಮ ತಾಂಡಾದ ಹೆಣ್ಣು ಮಕ್ಕಳನ್ನು ಶಿಕ್ಷಣವಂತರಾಗಲು ಮೊದಲು ಪ್ರಯೋಗ ಮಾಡಿದ್ದು ತಮ್ಮ ಮಗಳ ಮೂಲಕ. ತಮ್ಮ ಮಗಳು ವಿಜಯಶ್ರೀ ಲಮಾಣಿ ಅವರನ್ನು ತಾಂಡಾದಲ್ಲಿ ಶಾಲೆ ಇರದಿದ್ದರೂ ಬಾಗಲಕೋಟೆ ನಗರಕ್ಕೆ ನಿತ್ಯವೂ ಕರೆದುಕೊಂಡು ಬಂದು, ಮರಳಿ ತಾಂಡಾಕ್ಕೆ ಹೋಗುತ್ತ ಬಿಎ, ಬಿಡಿ ಶಿಕ್ಷಣ ಕೊಡಿಸಿದರು. ಇಡೀ ತಾಂಡಾದಲ್ಲೂ ಉನ್ನತ ಶಿಕ್ಷಣ ಪಡೆದ ಮೊದಲ ಹೆಣ್ಣು ಮಗಳೆಂದು ಖ್ಯಾತಿ ಈ ವಿಜಯಶ್ರೀ ಲಮಾಣಿ ಅವರಿಗಿದೆ. ಇದೀಗ ವಿಜಯಶ್ರೀ ಅವರು, ಬಾಗಲಕೋಟೆಯ ಕೆಎಸ್‌ ಆರ್‌ಟಿಸಿ ಉಗ್ರಾಣದಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವಿಜಯಶ್ರೀ ಅವರೇ ತಾಂಡಾದ ಇತರೇ ಹೆಣ್ಣು ಮಕ್ಕಳೂ ಶಿಕ್ಷಣ ಕಲಿಯಲು ಪ್ರೇರಣೆಯಾಯಿತು.

Advertisement

ಮನೆ ಮನೆಗೆ ಹೋಗಿ ದೇಣಿಗೆ: ತಾಂಡಾದ ತಾವರಪ್ಪ, ದೇನಪ್ಪ, ವೈಆರ್‌. ಲಮಾಣಿ, ಭೀಮಪ್ಪ ಲಮಾಣಿ ಮುಂತಾದವರೆಲ್ಲ ಕೂಡಿ 1987-88ರಲ್ಲಿ ತಂಡಾದ ಮನೆ ಮನೆಗೆ ಹೋಗಿ ಬಾಲ್ಯ ವಿವಾಹ ತಡೆಯೋಣ ಎಂಬ ಜಾಗೃತಿ ಮೂಡಿಸಲಿಲ್ಲ. ಬದಲಾಗಿ ಮನೆ ಮನೆಗೆ ಹೋಗಿ ನಿಮ್ಮಲ್ಲಿರುವ 10ರೂದಿಂದ ಹಿಡಿದು 100 ರೂ. ಕೊಡಿ. ನಮ್ಮೂರಲ್ಲಿ ಶಾಲೆ ಕಟ್ಟೋಣ. ನಮ್ಮ ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಿಸೋಣ ಎಂದು ಬೇಡಿಕೊಂಡರು. ಇದಕ್ಕೆ ಬಹುತೇಕರು, ತಮ್ಮಲ್ಲಿರುವ ಒಂದಷ್ಟು ಹಣ ಕೊಟ್ಟರು. ಆಗ ಹುಟ್ಟಿಕೊಂಡಿದ್ದೇ ಶ್ರೀ ದುರ್ಗಾದೇವಿ ಪ್ರೌಢಶಾಲೆ.

ಪ್ರಾಥಮಿಕ ಶಾಲೆಗಾಗಿ ಸರ್ಕಾರಿ ಶಾಲೆ ಇತ್ತು. ಪ್ರೌಢಶಾಲೆಗಾಗಿ ನಗರಕ್ಕೆ ಹೋಗುವ ಬದಲು, ತಾಂಡಾದಲ್ಲೇ ಚಿಕ್ಕದಾಗಿ ಶಾಲೆ ಆರಂಭಿಸಿದರು. ಶಿಕ್ಷಕರ ಸಂಬಳ ಕೊಡಲೂ ಹಣ ಇರಲಿಲ್ಲ. ಕಟ್ಟಡ ಕಟ್ಟಲೂ ಆಗಲಿಲ್ಲ. ಆದರೂ, ದೃತಿಗೆಡದೇ ಎಲ್ಲರೂ ತಮ್ಮ ಹೊಲದಲ್ಲಿ ಬೆಳೆದ ಬೆಳೆ ಮಾರಿ, ಶಿಕ್ಷಕರ ಸಂಬಳ ಕೊಟ್ಟು ಶಾಲೆ ಮುನ್ನಡೆಸಿದರು. ಅದರ ಫಲವಾಗಿ ಇದೀಗ ಇಡೀ ತಾಂಡಾದಲ್ಲಿ ಬಹುತೇಕ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಚಖಂಡಿ ತಾಂಡಾ ನಂ.1ರ ಯುವಕ-ಯುವತಿಯರು, ಹಿರಿಯರು ಹಲವು ಉನ್ನತ ಹುದ್ದೆಯಲ್ಲಿದ್ದಾರೆ. ಅದರಲ್ಲೂ ಪೊಲೀಸ್‌, ಕಂದಾಯ, ಸಾರಿಗೆ ಸಂಸ್ಥೆ ಹೀಗೆ ಹಲವು ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಂದಿಗೂ ಸಂಕಷ್ಟ: ಇಂತಹವೊಂದು ಅದ್ಭುತ ಪರಿಕಲ್ಪನೆಯ ಶಾಲೆ ಇಂದಿಗೂ ಸಂಕಷ್ಟ ಎದುರಿಸುತ್ತಲೇ ಇದೆ. ಶಾಲೆಯ ಪರಿಕಲ್ಪನೆ ಗೊತ್ತಿಲ್ಲದ ಸರ್ಕಾರ ಅಥವಾ ಅಧಿಕಾರಿಗಳು, ಇದರ ನೆರವಿಗೆ ಬರುವ ಪ್ರಯತ್ನ ಮಾಡಿಲ್ಲ. ಆದರೂ, ತಾಂಡಾದ ಪ್ರಮುಖರು, ತಮ್ಮೂರ ಶಾಲೆಗೆ ಯಾವುದೇ ಸಮಸ್ಯೆ ಎದುರಾದರೂ ಬೆನ್ನೆಲುಬಾಗಿ ನಿಂತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next