Advertisement

ವಿಜೃಂಭಣೆಯಿಂದ ನೆರವೇರಿದ ಶ್ರೀ ಬುತ್ತಿ ಬಸವೇಶ್ವರ ಜಾತ್ರಾಮಹೋತ್ಸವ

09:12 PM Feb 16, 2022 | Team Udayavani |

ಕುಷ್ಟಗಿ: ಈ ಭಾಗದ ಆರಾಧ್ಯ ದೈವ ಇಲ್ಲಿನ ಶ್ರೀ ಅನ್ನದಾನೇಶ್ವರ ಶಾಖಾಮಠದ ಭಾರತ ಹುಣ್ಣಿಮೆಯ ಶ್ರೀ ಬುತ್ತಿ ಬಸವೇಶ್ವರ ಜಾತ್ರಾಮಹೋತ್ಸವ ಪ್ರಯುಕ್ತ ಬುಧವಾರ ಸಂಜೆ ಗೋದೂಳಿ ಸಮಯದಲ್ಲಿ ಮಹಾ ರಥೋತ್ಸವ ಭಕ್ತರ ಜಯಘೋಷಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

Advertisement

ಬೆಳಗ್ಗೆ ಶ್ರೀ ಬುತ್ತಿ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನಂತರ ಇಲ್ಲಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ನಂದೀಶ್ವರ ಮೂರ್ತಿ ಹಾಗೂ ರಥದ ಕಳಶದೊಂದಿಗೆ ಸಕಲ ವಾದ್ಯಗಳ ಸಮೇತ ಮೆರವಣಿಗೆ ನಡೆಯಿತು. ಮದ್ಯಾಹ್ನ ದೇವಸ್ಥಾನ ಆವರಣದಲ್ಲಿ ಮಹಾ ದಾಸೋಹದ ನೆರವೇರಿತು.

ಸಂಜೆ ಕೊರಡಕೇರಾ ಗ್ರಾಮದ ವೇದ ಮೂರ್ತಿ ಶಿವಾನಂದಯ್ಯ ಗುರುವಿನ್, ವೇದ ಮೂರ್ತಿ ಬಸಯ್ಯ ಗುರುವಿನ್ ಹಾಗೂ ಹಾಲುಮತ ಭಕ್ತರಿಂದ ತೇರಿನ ಹಗ್ಗವನ್ನು ಮೆರವಣಿಗೆಯಲ್ಲಿ ದೇವಸ್ಥಾನ ಆವರಣದ ರಥದವರೆಗೆ ತರಲಾಯಿತು.

ಹಾಲಕೆರೆ ಸಂಸ್ಥಾನಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ನಂದವಾಡಗಿಯ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕೊಟ್ಟುರು ದೇಶಿಕರು, ಶ್ರಿ ಸಿದ್ದಲಿಂಗ ಸ್ವಾಮೀಜಿ,ಪರ್ವತ ದೇವರು, ವಿಜಯ ಪ್ರಭು ದೇವರು, ನಾಗನಾಥ ದೇವರು, ವಾಗೀಶ ದೇವರು, ಸಮ್ಮುಖದಲ್ಲಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಕುಷ್ಟಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ರಥದ ಮಿಣಿ ಹಿಡಿದು ಪಾದಗಟ್ಟೆಯವರೆಗೂ ಹರ್ಷೋದ್ಘಾರದೊಂದಿಗೆ ಎಳೆದರು, ನಂತರ ದೈವದ ಪಾದಗಟ್ಟೆಯಿಂದ ರಥ ಪುನಃ ದೇವಸ್ಥಾನಕ್ಕೆ ತರಲಾಯಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಸಾಗಿದ ರಥಕ್ಕೆ ಉತ್ತತ್ತಿ ಎಸೆದು ಭಕ್ತಿ ಸೇವೆ ಸಲ್ಲಿಸಿ ಧನ್ಯತಾಭಾವ ಮೆರೆದರು. ಮಹಾರಥ ಪಾದಗಟ್ಟೆ ತಲುಪಿ ಪುನಃ ರಥದ ಮನೆಗೆ ಆಗಮಿಸುತ್ತಿದ್ದಂತೆ ಚಿತ್ತಾಕರ್ಷಕ ಬಾಣ ಬಿರುಸು ಪ್ರದರ್ಶನ ಗಮನಾರ್ಹವೆನಿಸಿತು.

ಇದನ್ನೂ ಓದಿ : ಕಾಮಗಾರಿಗೆ ಸಿಗಂದೂರು ವನ್ಯಜೀವಿ ಸಂರಕ್ಷಿತ ಪ್ರದೇಶದಿಂದ ಮಣ್ಣು ; ಸ್ಥಳೀಯರ ಆಕ್ಷೇಪ

Advertisement

ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ‌ ಶಾಸಕ ದೊಡ್ಡನಗೌಡ ಪಾಟೀಲ, ದೇವೇಂದ್ರಪ್ಪ ಬಳೂಟಗಿ, ಪುರಸಭೆ ಅಧ್ಯಕ್ಷ ಗಂಗಾಧರ ಸ್ವಾಮಿ ಹಿರೇಮಠ, ದೊಡ್ಡಬಸವ ಬಯ್ಯಾಪೂರ, ಪುರಸಭೆ ಸದಸ್ಯರಾದ ರಾಜೇಶ ಪತ್ತಾರ, ಕಲ್ಲೇಶ ತಾಳದ, ಬಸವರಾಜ ಬುಡಕುಂಟಿ, ಮಹಾಂತೇಶ ಕಲ್ಲಭಾವಿ, ಗೀತಾ ಕೋಳೂರು, ಗೀತಾ ತುರಕಾಣಿ, ಮಹಾಂತಯ್ಯ ಅರಳಿಲಿಮಠ, ಸಿ.ಎಂ.ಹಿರೇಮಠ ಮತ್ತೀತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next