Advertisement

ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಸಂಸದ ಕಿಡಿ

09:13 AM Feb 03, 2019 | |

ಚಿತ್ರದುರ್ಗ: ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ ಬಳಿಕ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆಯುವಲ್ಲಿ ತೊಂದರೆ ಎದುರಿಸುತ್ತಿರುವ ಫಲಾನುಭವಿಗಳ ಸಮಸ್ಯೆ ಪರಿಹರಿಸಲು ಫೆ. 15 ರಂದು ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜನಸಂಪರ್ಕ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಸದ ಬಿ.ಎನ್‌. ಚಂದ್ರಪ್ಪ ಹೇಳಿದರು.

Advertisement

ಇಲ್ಲಿನ ಜಿಲ್ಲಾ ಪಂಚಾಯತ್‌ ಮಿನಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆದು ಬದುಕು ಕಟ್ಟಿಕೊಳ್ಳುವ ಕನಸು ಕಾಣುವ ಬಡ ಫಲಾನುಭವಿಗಳಿಗೆ ಬ್ಯಾಂಕ್‌ಗಳು ಇಲ್ಲ ಸಲ್ಲದ ಸಬೂಬು ಹೇಳಿ ಅವರನ್ನು ಅಲೆದಾಡಿಸುತ್ತಿವೆ. ನಂತರ ಸಾಲ ಸೌಲಭ್ಯ ಮಂಜೂರು ಮಾಡದೆ ಸತಾಯಿಸುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಬಡವರ ಬಗ್ಗೆ ಬ್ಯಾಂಕ್‌ ಅಧಿಕಾರಿಗಳು ಕಾಳಜಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಬ್ಯಾಂಕ್‌ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ಅಥವಾ ನೋಟಿಸ್‌ ನೀಡುವುದರಿಂದ ಸಮಸ್ಯೆ ಬಗೆಹರಿಯದು. ಜನಸಂಪರ್ಕ ಸಭೆ ನಡೆಸುವುದೇ ಇದಕ್ಕೆ ಪರಿಹಾರ. ಅದಕ್ಕಾಗಿ ಫೆ. 15 ರಂದು ಎಲ್ಲ ಬ್ಯಾಂಕ್‌ಗಳ ವ್ಯವಸ್ಥಾಪಕರು, ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಆಯ್ಕೆಯಾಗಿ ಇದುವರೆಗೂ ಸಾಲ ಮಂಜೂರು ಆಗದಿರುವ ಫಲಾನುಭವಿಗಳೊಂದಿಗೆ ಜಿಪಂ ಸಭಾಂಗಣದಲ್ಲಿ ಜನಸಂಪರ್ಕ ಸಭೆ ನಡೆಸಲಾಗುವುದು. ಇದೇ ಸಭೆಯಲ್ಲೇ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.

ಸಾಲ ಮಂಜೂರು ಮಾಡದೆ ಏಕಾಏಕಿ ಅರ್ಜಿ ತಿರಸ್ಕರಿಸಿರುವ ಬ್ಯಾಂಕ್‌ ಅಧಿಕಾರಿಯೊಂದಿಗೆ ಸಭೆಯಲ್ಲೇ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡ ಸಂಸದ ಚಂದ್ರಪ್ಪ, ಯಾವುದೇ ಫಲಾನುಭವಿಯ ಅರ್ಜಿ ತಿರಸ್ಕರಿಸುವ ಮೊದಲು ಅವರಿಗೆ ನೋಟಿಸ್‌ ನೀಡಿ ಉತ್ತರ ಪಡೆಯಬೇಕು. ಏಕಾಏಕಿ ಅರ್ಜಿ ತಿರಸ್ಕರಿಸಲು ಈ ದೇಶದಲ್ಲಿ ರಾಷ್ಟ್ರಪತಿಗಳಿಗೆ ಮಾತ್ರ ಅಧಿಕಾರವಿದೆ. ಬಡವರಿಗೆ ಸರ್ಕಾರ ವಿವಿಧ ಯೋಜನೆಗಳಡಿ ಸವಲತ್ತು ನೀಡುತ್ತಿದೆ. ಆದರೆ ಬ್ಯಾಂಕ್‌ ಅಧಿಕಾರಿಗಳ ಕೆಟ್ಟ ಧೋರಣೆಯಿಂದ ಬಡವರು ಆರ್ಥಿಕ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಬ್ಯಾಂಕ್‌ನಿಂದ ಸಾಲ ಪಡೆದು ಉನ್ನತಿ ಸಾಧಿಸಿ ಸುಭದ್ರ ಬದುಕು ಕಟ್ಟಿಕೊಳ್ಳುವ ಕನಸನ್ನು ಬಡವರು ಕಾಣುತ್ತಿರುತ್ತಾರೆ. ಇಲ್ಲದ ಕಾನೂನು ಹೇಳಿ ಸಾಲ ಮಂಜೂರು ಮಾಡದೆ ಅವರ ಕನಸುಗಳಿಗೆ ತಣ್ಣೀರೆರಚುತ್ತಿದ್ದೀರಿ, ಬಡವರ ಬಗ್ಗೆ ಮೊದಲು ಕಾಳಜಿ ತೋರುವುದನ್ನು ಕಲಿಯಿರಿ ಎಂದು ತಾಕೀತು ಮಾಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ನೀಡುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಎಚ್ಚರಿಸಿದರು. ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲು ಠೇವಣಿ ಪಡೆಯುತ್ತಿರುವುದು ಕಾನೂನು ಬಾಹಿರವಲ್ಲವೇ ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರನ್ನು ಪ್ರಶ್ನಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು, ಠೇವಣಿ ಮಾಡಿಸುವುದು ಕಡ್ಡಾಯವಲ್ಲ ಎಂದರು.

ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್‌ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ಆನ್‌ಲೈನ್‌ನಲ್ಲಿ ನೇರವಾಗಿ ಜಮಾ ಮಾಡಬೇಕಿದೆ. ಆಧಾರ್‌ ಸಂಖ್ಯೆ ಜೋಡಣೆಗೆ ಬ್ಯಾಂಕ್‌ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ದೂರಿದರು.

Advertisement

ಸಭೆಯಲ್ಲಿ ಜಿಪಂ ಸಿಇಒ ಪಿ.ಎನ್‌. ರವೀಂದ್ರ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ಅಧಿಕಾರಿ ಮಂಜುನಾಥ್‌, ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ನಿಂಗೇಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಬ್ಯಾಂಕ್‌ಗಳ ವ್ಯವಸ್ಥಾಪಕರು ಭಾಗವಹಿಸಿದ್ದರು.

244 ಅರ್ಜಿ ಪೈಕಿ 40 ಜನರಿಗೆ ಮಾತ್ರ ಸಾಲ ಮಂಜೂರು

ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದಡಿ 137 ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ. ವಿವಿಧ ಬ್ಯಾಂಕ್‌ಗಳಿಗೆ 244 ಅರ್ಜಿಗಳನ್ನು ಕಳುಹಿಸಿಕೊಡಲಾಗಿದೆ. ಈ ಪೈಕಿ ಕೇವಲ 40 ಜನರಿಗೆ ಮಾತ್ರ ಸಾಲ ಮಂಜೂರಾಗಿದೆ. ಪ್ರಮುಖವಾಗಿ ಪ್ರಗತಿ ಕೃಷ್ಣ ಬ್ಯಾಂಕ್‌ಗೆ 110 ಅರ್ಜಿ ಕಳುಹಿಸಿಕೊಟ್ಟಿದ್ದು, ಕೇವಲ 9 ಜನರಿಗೆ ಸಾಲ ಮಂಜೂರಾಗಿದೆ. ಕೆನರಾ ಬ್ಯಾಂಕ್‌ಗೆ 47ರಲ್ಲಿ 11, ಎಸ್‌ಬಿಐ 20 ರಲ್ಲಿ 6, ವಿಜಯ ಬ್ಯಾಂಕ್‌ 23 ರಲ್ಲಿ 5, ಕರ್ನಾಟಕ ಬ್ಯಾಂಕ್‌ 20 ಅರ್ಜಿಗಳಲ್ಲಿ ಇಬ್ಬರಿಗೆ ಸಾಲ ಮಂಜೂರು ಮಾಡಿವೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next