Advertisement

ಶಿವಮೊಗ್ಗ :  ಗೆಣಸಿನಕುಣಿಯಲ್ಲೊಂದು ಸ್ಪಂಜು ನೆಲ

10:01 PM Mar 18, 2021 | Team Udayavani |

ಸಾಗರ: ಕಾಲಿಟ್ಟರೆ ಸ್ಪಂಜಿನಂತೆ ವರ್ತಿಸುವ, ಮನುಷ್ಯನ ಭಾರಕ್ಕೆ ಅಲ್ಲಿಯೇ ಸರಿದಾಡಿ ಜೀವಭಯ ಹುಟ್ಟಿಸುವ ಹಚ್ಚ ಹಸುರಿನ ಭೂ ಪ್ರದೇಶವೊಂದು ತಾಲೂಕಿನ ಆವಿನಹಳ್ಳಿ ಸಮೀಪದ ಗೆಣಸಿನಕುಣಿಯಲ್ಲಿದೆ.

Advertisement

ಗೆಣಸಿನಕುಣಿಯ ಸಿದ್ದೇಶ್ವರ ದೇವಾಲಯದ ಎದುರಿನ ಕೆರೆ ಪಕ್ಕದಲ್ಲಿ ಸೊಪ್ಪಿನ ಬೆಟ್ಟದ ನಡುವೆ ಹಸಿರು ಜೆಡ್ಡಿನಿಂದ ಕೂಡಿದ ಬಯಲು ಪ್ರದೇಶವಿದೆ. ಮಲೆನಾಡಿನ ನೀರಿನ ಒರತೆ ಇರುವ ಪ್ರದೇಶಗಳಲ್ಲಿ ಇಂತಹ ಭೂ ಸ್ವರೂಪ ಸಾಮಾನ್ಯವಾದರೂ ಮೆಟ್ಟಿದಾಗ ನೆಲದ ಮಣ್ಣಿನ ಪದರ ಸ್ಪ್ರಿಂಗ್‌ನಂತೆ ಮೇಲೆ ಕೆಳಗೆ ಆಗುವ ವಿಶಿಷ್ಟ ಅನುಭವ ನೀಡುತ್ತದೆ.

ಒಂದು ಕಾಲದಲ್ಲಿ ಗೆಣಸಿನಕುಣಿ ಸಿದ್ದೇಶ್ವರ ದೇಗುಲದ ಎದುರು ಮೂರು ಕೆರೆಗಳಿದ್ದವು. ದೇವಾಲಯದ ಎದುರಿನ ಕೆರೆಯಲ್ಲಿ ಈಗಲೂ ನೀರಿದ್ದು, ಗ್ರಾಪಂ ನೇತೃತ್ವದಲ್ಲಿ ದುರಸ್ತಿ ಕೆಲಸ ನಡೆದಿದೆ. ಈ ಕೆರೆಯ ಮೇಲೆ ಇರುವ ಇನ್ನೊಂದು ಕೆರೆ ಹೂಳು ತುಂಬಿದ್ದರೂ ಅಸ್ತಿತ್ವದಲ್ಲಿದೆ. ಆದರೆ ಕೆಳಗಿನ ಭಾಗದ ಸ್ಪಂಜು ಭೂಮಿ ವಿಸ್ಮಯದ ಜಾಗ ಈ ಭಾಗದಲ್ಲಿದೆ ಎನ್ನಲಾದ ಮೂರನೇ ಕೆರೆ ಪ್ರದೇಶ ಎಂದು ಇಲ್ಲಿನ ಗ್ರಾಪಂ ಸದಸ್ಯ ಕುಮಾರ್‌ ಕಂಚಿಮನೆ ಪ್ರತಿಪಾದಿಸುತ್ತಾರೆ.

ಅಲ್ಲೊಂದು ಕೆರೆ ಇರಬಹುದು ಎಂಬುದಕ್ಕೆ ಸಾಕ್ಷಿ ಎನ್ನುವಂತೆ ತುಸು ಮೇಲೆ ನೀರಿರುವ ಪುಷ್ಕರಣಿಯೊಂದು ಕಂಡುಬರುತ್ತಿದೆ. ಬಹುಪಾಲು ಕಡೆ ಕೆರೆಯಿದ್ದ ಜಾಗ ನಿರ್ವಹಣೆಯ ಕೊರತೆಯಿಂದ ಹೂಳು ತುಂಬುತ್ತ ಹೋಗುತ್ತದೆ. ಇದರಿಂದ ಕೆಸರು ಮಣ್ಣಿನ ಜೌಗು ಪ್ರದೇಶ ನಿರ್ಮಾಣವಾಗುತ್ತದೆ. ಆದರೆ ಗೆಣಸಿನಕುಣಿಯ ಸ್ಪಂಜು ಭೂಮಿ ಕೌತುಕದಲ್ಲಿ ಹೂಳು ಕಾಣಿಸುವುದಿಲ್ಲ.

ಹಸಿರು ಹುಲ್ಲು ಹಾಸು ಕೃತಕವಾಗಿ ಸಿಂಥೆಟಿಕ್‌ ಟರ್ಫ್‌ ಹಾಕಿದಂತೆ ಚೂರು ಬಲ ಹಾಕಿ ಒತ್ತಿದಾಗಲೆಲ್ಲ ಒಳಹೋಗುತ್ತದೆ. ನರ್ತಿಸಿದರೆ ನೆಲವೂ ನರ್ತಿಸಿದ ಅನುಭವವಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಆಗ ಆನಂದಪುರದಲ್ಲಿ ಉಪತಹಶೀಲ್ದಾರ್‌ ಆಗಿ ಕಾರ್ಯ ನಿರ್ವಹಿಸಿದ್ದ ಪುಟ್ಟರಾಜ ಗೌಡರು ಮೊದಲ ಬಾರಿಗೆ ಈ ವಿಸ್ಮಯದ ಮಾಹಿತಿ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದರು. ಇದರ ಹಿಂದಿನ ವೈಜ್ಞಾನಿಕ ಹಿನ್ನೆಲೆ ಅರಿಯುವ ಪ್ರಯತ್ನವಾಗಿ ಅವರು ಸಂಬಂಧಿಸಿದ ಇಲಾಖೆಗಳಿಗೂ ಮಾಹಿತಿ ನೀಡಿದ್ದರು. ಆದರೆ ಹೆಚ್ಚಿನ ಸಂಶೋಧನೆಗಳು ಮಾತ್ರ ನಡೆದಿಲ್ಲ.

Advertisement

 

 ಮಳೆಗಾಲದಲ್ಲೂ ನೀರು ನಿಲ್ಲುವುದಿಲ್ಲ

ಸ್ವಾರಸ್ಯ ಎಂದರೆ ಈ ಪ್ರದೇಶ ಕೆಲ ವರ್ಷಗಳ ಹಿಂದೆ ಅಕ್ಷರಶಃ ಜೌಗು ಪ್ರದೇಶವೇ ಆಗಿತ್ತು. ಇದನ್ನು ಈ ಭಾಗದ ಜನ ಹುಡ್ಲು ಕೆರೆ ಎನ್ನುತ್ತಿದ್ದರು.

ಹುಲ್ಲಿನ ಆಸೆಗೆ ಈ ಜಾಗಕ್ಕೆ ತೆರಳುವ ಹತ್ತಾರು ಜಾನುವಾರುಗಳು ಇಲ್ಲಿನ ಹೂಳಿನಲ್ಲಿ ಸಿಲುಕಿಕೊಂಡ ಪ್ರಕರಣಗಳು ನಡೆದಿತ್ತು. ಆಗ ಊರವರು ಅವುಗಳನ್ನು ರಕ್ಷಿಸುತ್ತಿದ್ದ ಘಟನೆಗಳನ್ನು ಕುಮಾರ್‌ ನೆನಪಿಸಿಕೊಳ್ಳುತ್ತಾರೆ.

ಇತ್ತೀಚೆಗೆ ಈ ಸ್ಥಳಕ್ಕೆ ಆಗಮಿಸಿ ಪರೀಕ್ಷೆ ನಡೆಸಿರುವ ಅನಾಮಿಕರು ಇಲ್ಲಿನ ಹುಲ್ಲುಹಾಸಿನ ಮಧ್ಯದಲ್ಲಿ ಗುಳಿಯೊಂದನ್ನು ತೋಡಿರುವುದು ಕಂಡುಬರುತ್ತದೆ. ಸ್ಥಳೀಯ ಸಿದ್ದೇಶ್ವರ ದೇವಾಲಯದ ಅರ್ಚಕರಾಗಿರುವ ಆನಂದರಾವ್‌ ಕೆ.ಜೆ. ಇದರೊಳಗೆ ಕಾಲು ಹಾಕಿ ಪರೀಕ್ಷಿಸಿ ಹೇಳುತ್ತಾರೆ. “ಒಂದೂವರೆ ಅಡಿಗೇ ಗಟ್ಟಿ ನೆಲವಿದೆ. ಯಾವುದೇ ಹೂಳು ಕಾಣಿಸುವುದಿಲ್ಲ’. ಇಂತಹದು ದೇಶದ ಹಲವೆಡೆ ಇದೆ. ರಾಜ್ಯದಲ್ಲಿ ಇದಕ್ಕೆ ಕಂಪಲು ಎಂತಲೂ ಕರೆಯುತ್ತಾರೆ ಎಂಬ ಮಾತಿದೆ. ಸ್ವಾರಸ್ಯವೆಂದರೆ, ಜೋರು ಮಳೆಗಾಲದಲ್ಲಿಯೂ ಈ ಜಾಗದಲ್ಲಿ ನೀರು ನಿಲ್ಲುವುದಿಲ್ಲ.

ಈ ರೀತಿಯ ಜೌಗು ಪ್ರದೇಶ ನಿರ್ಮಾಣವಾಗುವ ಹಿನ್ನೆಲೆಯಲ್ಲಿ ಹಲವು ವಾದಗಳಿವೆ. ಸಣ್ಣ ನದಿಯ ಅಂಚಿನುದ್ದಕ್ಕೆ ಇರುವ ಜೌಗು ನೆಲದಲ್ಲಿ ಮರಳು, ಅಂಟು ಜೇಡಿ ಮುಂತಾದ ಮಣ್ಣು ಕಣಗಳು ಒಟ್ಟುಗೂಡುತ್ತವೆ. ಸಾವಯವ ವಸ್ತುಗಳು ನಿಧಾನವಾಗಿ ಸಂಗ್ರಹವಾಗಿ ಇಂಕ್‌ μಲ್ಲರ್‌ ತಂತ್ರದ ಮಾದರಿಯಲ್ಲಿ ನೀರು ಹೀರಿಕೊಳ್ಳುತ್ತದೆ. ತನ್ನ ತೂಕಕ್ಕಿಂತ 13 ಪಟ್ಟು. ತೇವಾಂಶವನ್ನು ಹೊಂದಿರುವ ದೈತ್ಯ ಸ್ಪಂಜಿನಂತೆ ಕಾರ್ಯ ನಿರ್ವಹಿಸುವ ಪೀಟ್‌ ಜೌಗು ಪ್ರದೇಶಗಳು ಹಸಿರು ಹಾಸಿನ ಗುಮ್ಮಟವನ್ನು ರೂಪಿಸುತ್ತವೆ. ಈ ಕಾರಣದಿಂದ ಇಂತಹ ಭೂಮಿ ಮೇಲೆ ನಡೆದಾಗ ಸ್ಪಂಜಿನ ಮೇಲೆ ನಡೆದ ಅನುಭವವಾಗುತ್ತದೆ. ಆದರೆ ಇಂತಹ ಪ್ರದೇಶ ನಿರ್ಮಾಣಕ್ಕೆ ಸಾವಿರಾರು ವರ್ಷ ಬೇಕಾಗುತ್ತದೆ ಎಂಬ ಪ್ರತಿಪಾದನೆಯಿದೆ. ಗೆಣಸಿನಕುಣಿಯ ಜೌಗು ಭೂಮಿ ಸ್ಪಂಜಿನ ನೆಲವಾಗಲು ಸಾವಿರಾರು ವರ್ಷ ತೆಗೆದುಕೊಂಡಿದೆ ಎಂಬ ವಾದಕ್ಕೆ ಸಾಕ್ಷ್ಯಗಳಿಲ್ಲ.

ಎಲ್ಲಿದೆ?

ಸಾಗರ- ಸಿಗಂದೂರು ರಸ್ತೆಯಲ್ಲಿ ಸುಮಾರು 13 ಕಿಮೀ ಸಾಗಿದರೆ ಆವಿನಹಳ್ಳಿ ಸಿಗುತ್ತದೆ. ಅಲ್ಲಿಂದ ಮೂರು ಕಿಮೀ ದೂರದಲ್ಲಿ ಗೆಣಸಿನಕುಣಿ. ಅಲ್ಲಿಂದ ಅನತಿ ದೂರದಲ್ಲಿರುವ ಸಿದ್ದೇಶ್ವರ ದೇವಾಲಯದ ಎದುರು ಇರುವ ಕೆರೆ ಪಕ್ಕದಲ್ಲಿ ಈ ಸ್ಪಂಜು ಭೂಮಿ ಕಂಡುಬರುತ್ತಿದೆ.

ವಿಶಿಷ್ಟ ಸ್ಮಾರಕವಾಗಿ ಉಳಿಸಿಕೊಳ್ಳಿ!

ಗೆಣಸಿನಕುಣಿಯ ಈ ಸ್ಥಳ ಪರಿಸರ ವಿಸ್ಮಯವಾಗಿರುವಾಗ, ವೈಜ್ಞಾ,ನಿಕ ಸಂಶೋಧನೆಗಳಿಗಿಂತ ಇಂತಹ ಸ್ಥಳವನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯ. ಇಡೀ ಪ್ರದೇಶವನ್ನು ಆಡಳಿತ ತನ್ನ ವಶಕ್ಕೆ ತೆಗೆದುಕೊಂಡು ಜನ, ಪ್ರಾಣಿಗಳ ಪ್ರವೇಶವನ್ನು ನಿರ್ಬಂ ಧಿಸಬೇಕು. ಈಗ ಜನ ಹಾಗೂ ಜಾನುವಾರುಗಳ ಓಡಾಟದಿಂದ ಆಗಿರುವ ಹಾನಿಯನ್ನು ತಡೆದರೆ ಇಲ್ಲಿನ ಭೂಮಿಯ ಸ್ಪಂಜಿನ ಅನುಭವ ಹೆಚ್ಚುವುದು ಖಚಿತ. ನಂತರ ಅಧ್ಯಯನದಲ್ಲಿ ಆಸಕ್ತರಿಗೆ ಹಾಗೂ ಕೌತುಕಪ್ರಿಯ ಜನರಿಗೆ ಸೀಮಿತ ಅವಕಾಶ ಕಲ್ಪಿಸುವ ಮೂಲಕ ವಿಶಿಷ್ಟತೆಯನ್ನು ಕಾಪಾಡಬಹುದು. ಸ್ಥಳೀಯ ಆವಿನಹಳ್ಳಿ ಗ್ರಾಪಂ ಈ ಬಗ್ಗೆ ವಿಶೇಷ ಗಮನ ಕೊಡಬೇಕಾದ ಅಗತ್ಯವಿದೆ ಎಂದು ಆವಿನಹಳ್ಳಿಯ ಮಂಜುನಾಥ್‌ ಆಶಯ ವ್ಯಕ್ತಪಡಿಸುತ್ತಾರೆ.

ಮಾ.ವೆಂ.ಸ. ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next