Advertisement

ಜನ ಮತ ದಾನ : ಇದು ಮೂಡಬಿದಿರೆ ವೃತ್ತಾಂತ

08:45 AM Apr 17, 2018 | Team Udayavani |

ಈ ಬಾರಿಯ ಚುನಾವಣಾ ಪೂರ್ವದಲ್ಲಿ ಅಂದರೆ ಒಂದು ವರ್ಷದ ಮೊದಲಿನಿಂದಲೇ ಸಾಕಷ್ಟು ಸುದ್ದಿಯಲ್ಲಿದೆ ಮೂಡಬಿದಿರೆ ವಿಧಾನಸಭಾ ಕ್ಷೇತ್ರ. ಜೈನಕಾಶಿ ಎಂದೇ ಪ್ರಸಿದ್ಧವಾಗಿರುವ ಮೂಡಬಿದಿರೆ 18 ಬಸದಿಗಳು, 18 ದೇವಸ್ಥಾನಗಳು, 18 ಪುಷ್ಕರಿಣಿಗಳ ಅಪೂರ್ವ ಕ್ಷೇತ್ರ. ಈಗ ಶಿಕ್ಷಣಕಾಶಿ ಎಂಬ ಬಿರುದೂ ಸೇರಿದೆ. ಜಗತ್ತಿನಲ್ಲಿಯೇ ಶಿಲ್ಪಕಲಾ ಅದ್ಭುತವೆಂದು ವ್ಯಾಖ್ಯಾನಿಸುವ ಸಾವಿರ ಕಂಬದ ಬಸದಿ ಎಂಬ ನಾಮಾಂಕಿತ ತ್ರಿಭುವನ ತಿಲಕ ಚೈತ್ಯಾಲಯ. ಚೌಟ ಅರಸು ಮನೆತನದವರು ಇಲ್ಲಿ ಸುದೀರ್ಘ‌ ಕಾಲ ಆಳಿದರು. ಇದು ಮಹಾಕವಿ ರತ್ನಾಕರವರ್ಣಿಯ ನಾಡು. ಮೂಡಬಿದಿರೆ ಕ್ಷೇತ್ರವು ಮೂಲ್ಕಿಯ ಸಹಿತವಾಗಿದೆ. ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದಿಂದ ವಿಶೇಷ ಪ್ರಸಿದ್ಧಿ. ಹೀಗೆ ಮೂಡಬಿದಿರೆ ಕ್ಷೇತ್ರವು ಕಡಲು – ಮಲೆನಾಡುಗಳ ಸಂಗಮ. ಕೃಷಿ ಮತ್ತು ಮೀನುಗಾರಿಕೆ ಇಲ್ಲಿದೆ. ಪಕ್ಕದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿ ಇದೆ.

Advertisement

ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ 1962 ಮತ್ತು 1967ರಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿಗಳು ಗೆದ್ದರು. ಮತ್ತೆರಡು ಬಾರಿ ಕಾಂಗ್ರೆಸ್‌ಗೆ ಜಯ. 1983ರಲ್ಲಿ ಜನತಾ ಪಕ್ಷದಿಂದ ಕೆ. ಅಮರನಾಥ ಶೆಟ್ಟಿ ಜಯಿಸಿದರು. 1985ರಲ್ಲೂ ಜಯಿಸಿದರು. 1989ರಲ್ಲಿ ಕಾಂಗ್ರೆಸ್‌. 1994ರಲ್ಲಿ ಮತ್ತೆ ಅಮರನಾಥ ಶೆಟ್ಟಿ ಗೆದ್ದರು – ಈ ಬಾರಿ ಜಾತ್ಯತೀತ ಜನತಾ ದಳದಿಂದ. ಮುಂದೆ 1999, 2004, 2008, 2013ರಲ್ಲಿ- ಅಂದರೆ, ಸತತ 4 ಬಾರಿ ಜಯಿಸಿದವರು ಕಾಂಗ್ರೆಸ್‌ನ ಕೆ. ಅಭಯಚಂದ್ರ ಅವರು. ಇದು ಸತತ ಗೆಲುವಿನಲ್ಲಿ ಜಿಲ್ಲೆಯ ದಾಖಲೆಗಳಲ್ಲೊಂದಾಗಿದೆ. ಕೆ. ಅಮರನಾಥ ಶೆಟ್ಟಿ ಮತ್ತು ಕೆ. ಅಭಯಚಂದ್ರ ಅವರು ಕರ್ನಾಟಕ ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದವರು. ಹೀಗೆ ಇಬ್ಬರು ಸಚಿವರನ್ನು ನೀಡಿದ ಕ್ಷೇತ್ರವಿದು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಂ. ವೀರಪ್ಪ ಮೊಯಿಲಿ ಅವರು ಮೂಡಬಿದಿರೆಯ ಮಾರ್ಪಾಡಿಯವರು.

ಅಂದ ಹಾಗೆ…
ಮೊದಲ ಎರಡು ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಈ ಕ್ಷೇತ್ರ ಈ ಹೆಸರಿನಲ್ಲಿ ಅಸ್ತಿತ್ವದಲ್ಲಿ ಇರಲಿಲ್ಲ. ಮೊದಲ ಚುನಾವಣೆಯಲ್ಲಿ ಇದು ಕಾರ್ಕಳದ ದ್ವಿಸದಸ್ಯ ಕ್ಷೇತ್ರಗಳಲ್ಲೊಂದಾಗಿತ್ತು. ಆಗ ಮದ್ರಾಸ್‌ ಪ್ರಾಂತ. ಮುಂದೆ ಮೂಲ್ಕಿ ಮೂಡಬಿದಿರೆ ಕ್ಷೇತ್ರಕ್ಕೇ ಎಂಬಂತೆ 1962ರಲ್ಲಿ ಚುನಾವಣೆ ನಡೆಯಿತು. ಆಗ ಸ್ವತಂತ್ರ ಪಕ್ಷದ (ರಾಜಾಜಿ ರೂಪಿತ) ಗೋಪಾಲ್‌ ಎಸ್‌. ಅವರು ಗೆದ್ದರು. ಮೊದಲ ಚುನಾವಣೆಯಲ್ಲಿ ಕಾರ್ಕಳದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಮಂಜಪ್ಪ ಉಳ್ಳಾಲ ನಿಕಟ ಸ್ಪರ್ಧಿ. ನಿಕಟ ಸ್ಪರ್ಧೆ ಯಲ್ಲಿ ಅನುಕ್ರಮವಾದ ಮತಗಳು 
10,431 ಮತ್ತು 10,173.

— ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next