Advertisement

Intimate Talk: ಶ್ರೇಷ್ಠ ನಾಟಕಗಳನ್ನು ಪ್ರದರ್ಶಿಸಿದ ಹೆಮ್ಮೆ ಇದೆ…

11:44 AM Sep 10, 2023 | Team Udayavani |

ಚಾಮರಾಜನಗರದ “ಶಾಂತಲಾ ಕಲಾವಿದರು’ ಹವ್ಯಾಸಿ ರಂಗತಂಡಕ್ಕೆ ಈಗ ಸುವರ್ಣ ವರ್ಷದ ಸಂಭ್ರಮ. ಕಳೆದ 50 ವರ್ಷಗಳಲ್ಲಿ ನಿರಂತರವಾಗಿ ರಂಗಚಟುವಟಿಕೆ ನಡೆಸಿಕೊಂಡು ಬಂದದ್ದು ಈ ತಂಡದ ಹೆಗ್ಗಳಿಕೆ. ಈ ಅವಧಿಯಲ್ಲಿ ಮಾಡಿದ ಸಾಹಸ, ಎದುರಿಸಿದ ಸವಾಲು, ತಲುಪಿದ ಗುರಿ, ಭವಿಷ್ಯದ ಗುರಿ- ಮುಂತಾದ ಸಂಗತಿಗಳ ಬಗ್ಗೆ ಆಪ್ತ ಮಾತುಕತೆ…

Advertisement

1 “ಶಾಂತಲಾ ಕಲಾವಿದರು’ ತಂಡ ಆರಂಭವಾಗಿದ್ದು ಯಾವಾಗ ಮತ್ತೆ ಯಾಕೆ?
ಚಾಮರಾಜನಗರದ ಜೆಎಸ್‌ಎಸ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ನಾವೆಲ್ಲ ನಾಟಕಗಳನ್ನು ಮಾಡ್ತಾ ಇದ್ವಿ. ಕಾಲೇಜು ಮುಗಿದ ಮೇಲೂ ಹವ್ಯಾಸಕ್ಕಾಗಿ ನಾಟಕಗಳನ್ನ ಮಾಡ್ತಾ ಇದ್ವಿ. ಮುಂದೆ ನಾವೇಕೆ ಒಂದು ತಂಡ ಕಟ್ಟಬಾರದು ಅಂತ ಯೋಚನೆ ಬಂದು “ಶಾಂತಲಾ ಹವ್ಯಾಸಿ ಕಲಾವಿದರು’ ಅನ್ನೋ ತಂಡ ಕಟ್ಟಿದ್ವಿ. ಮೈಸೂರಿನ “ಸಮತೆಂತೋ’ ನಮಗೆ ಪ್ರೇರಣೆ. ನಾವೂ ಅವರಂತೆಯೇ ನಾಟಕ ಮಾಡಬೇಕೆಂಬ ಒತ್ತಾಸೆ ಮೂಡಿತು. ಆಗ ಟಿ. ಎನ್‌. ಸೀತಾರಾಂ ಅವರ “ಬದುಕ ಮನ್ನಿಸು ಪ್ರಭುವೇ’ ಮತ್ತು ಲಂಕೇಶರ “ಗಿಳಿಯು ಪಂಜರದೊಳಿಲ್ಲ’ ನಾಟಕಗಳನ್ನು 1973ರ ಅಕ್ಟೋಬರ್‌ 10ರಂದು ಚಾಮರಾಜನಗರದ ಗುರುನಂಜ ಶೆಟ್ಟರ ಛತ್ರದಲ್ಲಿ ಪ್ರಯೋಗಿಸಿದೆವು. ಆ ಸ್ಥಳದಲ್ಲಿ ಟಿ. ಪಿ. ಕೈಲಾಸಂ ಕೂಡ ನಮಗೂ ಮೊದಲು ನಾಟಕ ಮಾಡಿದ್ದರು!

2. ಬೆಂಗಳೂರು, ಮೈಸೂರು, ಧಾರವಾಡದಂತಹ ಕಡೆಗಳಲ್ಲೇ ಹವ್ಯಾಸಿ ತಂಡಗಳನ್ನು ಮುನ್ನಡೆಸುವುದು ಕಷ್ಟ. ಹೀಗಿರುವಾಗ ಚಾಮರಾಜನಗರದಂಥ ಪಟ್ಟಣದಲ್ಲಿ ತಂಡವನ್ನು ಬೆಳೆಸಲು ಹೇಗೆ ಸಾಧ್ಯವಾಯ್ತು?

ನಾವು ಹವ್ಯಾಸಿ ತಂಡ ಶುರು ಮಾಡಿದಾಗ ಕೆಲವು ನಿಬಂಧನೆಗಳನ್ನು ಹಾಕೊಂಡಿದ್ವಿ. ನಾವು ನಾಟಕ ಮಾಡಬೇಕು. ಅದನ್ನು ತಯಾರಿಸಲು ಆದ ಖರ್ಚನ್ನು ಟಿಕೆಟ್‌ ಕಲೆಕ್ಷನ್‌ನ ಹಣದಿಂದ ಭರಿಸಬೇಕು. ಯಾವುದೇ ಕಾರಣಕ್ಕೂ ದುಡ್ಡು ನಮ್ಮಲ್ಲಿ ಉಳಿಬಾರದು ಅನ್ನೋ ನಿಬಂಧನೆಗಳನ್ನು ಹಾಕಿಕೊಂಡು ಕೆಲಸ ಶುರು ಮಾಡಿದ್ವಿ. ಬಹಳ ವರ್ಷ ಆ ನಿಯಮಗಳನ್ನ ಪಾಲಿಸಿಕೊಂಡು ಬಂದ್ವಿ. ನಮ್ಮ ತಂಡದ ಗೆಳೆಯರ ಉತ್ಸಾಹ, ತಂಡ ಬೆಳೆಸಲು ಕಾರಣ. ಅಭಿರುಚಿ ಚಂದ್ರು, ಎ. ಡಿಸಿಲ್ವ, ಶ್ರೀನಿವಾಸ ರಂಗನ್‌, ಟಿ. ವಾಸನ್‌ ಮತ್ತು ಕುಮಾರ ಆರಾಧ್ಯರ ಸಹಕಾರದಿಂದ “ಶಾಂತಲಾ ಕಲಾವಿದರು’ ಸ್ಥಾಪನೆಯಾಗಿ ಬೆಳೆಯಿತು.

3. “ಶಾಂತಲಾ ಕಲಾವಿದರು’ ತಂಡ, ಚಾಮರಾಜನಗರದಂಥ ಪಟ್ಟಣಕ್ಕೆ ಇನ್ನಿತರ ತಂಡಗಳನ್ನು ಕರೆಸಿ ನಾಟಕ ಪ್ರದರ್ಶಿಸಿದ್ದು ಇನ್ನೊಂದು ಪ್ರಮುಖ ಕೆಲಸ. ಅದರ ಬಗ್ಗೆ ಹೇಳಿ.

Advertisement

ಮಂಡ್ಯ ರಮೇಶ್‌, ಏಣಗಿ ನಟರಾಜ್‌, ಕೃಷ್ಣಕುಮಾರ್‌ ನಾರ್ಣಕಜೆ, ಲಕ್ಷ್ಮೀ ಕಬ್ಬೇರಳ್ಳಿ, ಸರೋಜಾ ಹೆಗಡೆ ಮುಂತಾದ ಕಲಾವಿದರು “ತಿರುಗಾಟ’ದ ಸಮಯದಲ್ಲಿ ನಮ್ಮಲ್ಲಿಗೆ ಬಂದು ನಾಟಕ ಮಾಡಿದ್ರು. “ನೀನಾಸಂ ತಿರುಗಾಟ’, “ಚಿಣ್ಣ ಬಣ್ಣ’, “ಪ್ರೊಥಿಯು’, “ಪ್ರಯಾಣ’, “ಜನಮನದಾಟ’, “ಆಟ ಮಾಟ’, ಬೆಂಗಳೂರಿನ “ವಾಸ್‌³ ಥಿಯೇಟರ್‌’, “ಅದಮ್ಯ ರಂಗ’, ಹೀಗೆ ಹಲವಾರು ತಂಡಗಳು ಚಾಮರಾಜನಗರಕ್ಕೆ ಬಂದು ನಾಟಕ ಪ್ರದರ್ಶನಗಳನ್ನ ನೀಡಿವೆ. ಮಕ್ಕಳ ನಾಟಕ ಕಾರ್ಯಾಗಾರ ನಡೆಸಿದ್ದೇವೆ. ನೀನಾಸಮ್‌ ತಿರುಗಾಟ, ಪೊ›ಥಿಯೂ ತಿಪಟೂರು ಮುಂತಾದ ತಂಡಗಳಿಗೆ, ಆತಿಥೇಯರಾದ ನಾವು ಹಣ ಉಳಿಸುವ ಸಲುವಾಗಿ, ಮನೆಯಲ್ಲಿಯೇ ಅಡುಗೆ ಮಾಡಿಕೊಟ್ಟೆವು. ಅದು ಖರ್ಚು ಉಳಿಸಿತು. ಕೆಲವು ಸಮಯ ತಂಡಕ್ಕೆ ಖರ್ಚೇ ಬೀಳಲಿಲ್ಲ ! ಜೊತೆಗೆ, ಈ ತಂಡದ ಕಲಾವಿದರು- ಸಂಸ್ಥೆಗಳೊಡನೆ ಸ್ನೇಹ ವೃದ್ಧಿಸಿತು.

4. ಯಾವುದೇ ರಂಗತಂಡಕ್ಕೆ ಸ್ತ್ರೀ ಪಾತ್ರಗಳಿಗೆ ನಟಿಯರನ್ನು ಹುಡುಕುವುದು/ಒಪ್ಪಿಸುವುದು ಬಲು ಕಷ್ಟ. ಈ ಸವಾಲನ್ನು ಹೇಗೆ ನಿಭಾಯಿಸಿದಿರಿ?
ನಾವು ಕಾಲೇಜಿನಲ್ಲಿ ಇದ್ದಾಗ ಹೆಣ್ಣು ಪಾತ್ರಗಳನ್ನು ಹುಡುಗಿಯರೇ ಮಾಡುತ್ತಿದ್ದರು. 50 ವರ್ಷಗಳ ಹಿಂದೆ ಇದೊಂದು ಕ್ರಾಂತಿ. ನಾವು ತಂಡ ಕಟ್ಟಿದ ಮೇಲೆ ನನ್ನ ತಂಗಿ ಮತ್ತು ಸಹಪಾಠಿ ಹೆಣ್ಣು ಪಾತ್ರ ಮಾಡಿದರು. “ಜೋಕುಮಾರಸ್ವಾಮಿ’ ನಾಟಕ ಮಾಡಿದಾಗ, ನಾಟಕ ಪ್ರದರ್ಶನಕ್ಕೆ ಮೂರು ನಾಲ್ಕು ದಿನ ಇದೆ ಎನ್ನುವಾಗ, ಯಾರೋ ರಸ್ತೆಯಲ್ಲಿ ಚುಡಾಯಿಸಿದರು ಅಂತ ನಾಯಕಿ ಪಾತ್ರದಾಕೆ ಹಿಂದೆ ಸರಿದಳು. ಫ‌ಜೀತಿಗೆ ಇಟ್ಟುಕೊಂಡಿತು. ಆಗ “ಕುಮಾರಸ್ವಾಮಿ ನಾಟಕ ಮಂಡಳಿ’ ನಗರದಲ್ಲಿ ಮೊಕ್ಕಾಂ ಹಾಕಿತ್ತು. ಚಾಮರಾಜನಗರದವರೇ ಆದ ಮಹಿಳಾ ಪಾತ್ರಧಾರಿ ಪಂಕಜ ರವಿಶಂಕರ್‌ ಅಲ್ಲಿದ್ದರು. ಅವರನ್ನು ಮತ್ತು ಅವರ ಮಾಲೀಕರನ್ನು ಒಪ್ಪಿಸಿ ಅವರ ಥಿಯೇಟರಿನಲ್ಲಿಯೇ ನಾಟಕ ಮಾಡಿದೆವು. ಇನ್ನುಳಿದ ಸ್ತ್ರೀ ಪಾತ್ರಗಳನ್ನು ಮೈಸೂರಿನಲ್ಲಿದ್ದ ನನ್ನ ಪತ್ನಿಯ ಗೆಳತಿಯರು ನಿರ್ವಹಿಸಿದರು. ಒಮ್ಮೆಯಂತೂ ವೃತ್ತಿ ಕಂಪನಿಯ ನಾಟಕಗಳಲ್ಲಿ ಪಾತ್ರ ಮಾಡುವವರನ್ನು ಕರೆಯಿಸಿ ನಾಟಕ ಮಾಡಿದ್ದೂ ಉಂಟು.

5. ಶಾಂತಲಾ ಕಲಾವಿದರು ತಂಡದ ಮುಂದಿನ ಯೋಜನೆಗಳೇನು?
ಚಾಮರಾಜನಗರದಲ್ಲಿ ನಮಗೆ ‘ಚುಡಾ’ದಿಂದ ಸಿ ಎ ಸೈಟ್‌ ನೀಡಿದ್ದಾರೆ. ಅಲ್ಲಿ ರಂಗಮಂದಿರ ಕಟ್ಟುವ ಆಸೆ ಇದೆ. ಇದಕ್ಕಾಗಿ ಈಗಾಗಲೇ ತಯಾರಿಗಳನ್ನು ಆರಂಭಿಸಿದ್ದೀವಿ. ಈ ವರ್ಷ ರಂಗಮಂದಿರ ನಿರ್ಮಿಸಿ ಅಲ್ಲೇ ಕೆಲಸ ಮುಂದುವರಿಸಬೇಕು ಎನ್ನುವ ಯೋಜನೆ-ಯೋಚನೆ ಇದೆ. ಆ ಸ್ಥಳವನ್ನು ಕೇವಲ ನಾಟಕಗಳಿಗೆ ಮೀಸಲಾಗಿಡದೆ ಒಂದು ಸಾಂಸ್ಕೃತಿಕ ಕೇಂದ್ರ’ ವನ್ನಾಗಿ ಮಾಡಬೇಕು ಎಂಬ ಆಸೆ ಇದೆ. ಅದಕ್ಕೆ ಬಹಳಷ್ಟು ಹಣ ಖರ್ಚಾಗುತ್ತೆ. ಅದನ್ನ ಹೊಂದಿಸಿಕೊಂಡು ಮಾಡುವ ತಯಾರಿಯಲ್ಲಿ ಇದ್ದೇವೆ.

ಶಾಂತಲಾ ಕಲಾವಿದರು ರಂಗತಂಡದಿಂದ 50 ವರ್ಷ ನಿರಂತರವಾಗಿ ರಂಗ ಚಟುವಟಿಕೆ ನಡೆಸಿಕೊಂಡು ಬಂದಿದ್ದೇವೆ. ನಮ್ಮ ತಂಡದ ಏಳೆಂಟು ಜನ ರಂಗ ಶಿಕ್ಷಣದ ಪದವಿ ಪಡೆದಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾಟಕದ ಶಿಕ್ಷಕರಾಗಿದ್ದಾರೆ. ರಂಗಕರ್ಮಿಗಳಾಗಿದ್ದಾರೆ. ನಮ್ಮ ತಂಡ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಯೋಜಿಸುವ “ಯುವಜನೋತ್ಸವ’ ದಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು 3 ಬಾರಿ ಪ್ರತಿನಿಧಿಸಿದೆ.10-10-23ಕ್ಕೆ ಸಂಸ್ಥೆಗೆ 50 ವರ್ಷ ತುಂಬುತ್ತದೆ. ಅಕ್ಟೋಬರ್‌/ ನವೆಂಬರ್‌ನಲ್ಲಿ 50ನೇ ವರ್ಷದ ಸಂಭ್ರಮಾಚರಣೆ ಮಾಡಬೇಕು ಅಂದುಕೊಂಡಿದ್ದೇವೆ.

ವಾರದ ಅತಿಥಿ:
ಕೆ. ವೆಂಕಟರಾಜು, ಮ್ಯಾನೇಜಿಂಗ್‌ ಟ್ರಸ್ಟೀ, ಶಾಂತಲಾ ಕಲಾವಿದರು, ಚಾಮರಾಜನಗರ

Advertisement

Udayavani is now on Telegram. Click here to join our channel and stay updated with the latest news.

Next