Advertisement

Special Story: ವಿಶ್ವಕಪ್‌ ಸಂಭ್ರಮದ ನಡುವೆ ಗಡಿಯಲ್ಲಿ ಯೋಧನ ಒದ್ದಾಟ !

10:24 AM Aug 14, 2023 | Team Udayavani |

“ಮೇರಿ ಮಾಟಿ ಮೇರಾ ದೇಶ್‌’ (ನನ್ನ ಮಣ್ಣು ನನ್ನ ದೇಶ) ಅಭಿಯಾನ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 7, ಉಡುಪಿ ಜಿಲ್ಲೆಯಲ್ಲಿ ಓರ್ವ ಸೇರಿ ಕರಾವಳಿಯ 8 ಮಂದಿ ಹುತಾತ್ಮ ಯೋಧರ ವಿಶೇಷ ಸ್ಮಾರಕ ಅವರ ಊರಿನ ಗ್ರಾಮಗಳಲ್ಲಿ ಸ್ಥಾಪನೆಗೊಳ್ಳಲಿದೆ. ಇಂದಿನ ಸರಣಿಯಲ್ಲಿ ಕುಂಜತ್ತಬೈಲ್‌ನ ಹವಾಲ್ದಾರ್‌ ಗಿರೀಶ್‌ ಅವರ ವೀರಗಾಥೆ.

Advertisement

ಸುರತ್ಕಲ್‌: ಇಡೀ ದೇಶ ವಿಶ್ವಕಪ್‌ ಕ್ರಿಕೆಟ್‌ ಗೆದ್ದ ಸಂಭ್ರಮದಲ್ಲಿದ್ದರೆ ಸುರತ್ಕಲ್‌ ಕೃಷ್ಣಾಪುರ ಕುಂಜತ್ತಬೈಲ್‌ ದೇವಿನಗರದ ವೀರ ಯೋಧ ಹವಾಲ್ದಾರ್‌ ಗಿರೀಶ್‌ (35) ಭಾರತ-ಚೀನಾ ಗಡಿಯ ಪೂರ್ವ ಸಿಕ್ಕಿಂನ ತುದಿಯಲ್ಲಿ ಮಂಜುಗಡ್ಡೆಯಡಿ ಸಿಲುಕಿ ಒದ್ದಾಡುತ್ತಿದ್ದರು. ಅವರ ಕುಟುಂಬ ಶೋಕದಲ್ಲಿ ಮುಳುಗಿತ್ತು. ಮಗಳ ಹುಟ್ಟುಹಬ್ಬ ಆಚರಣೆಗೆ ಬರುತ್ತೇನೆಂದು ಹೇಳಿದ್ದ ಗಿರೀಶ್‌ ಮೃತದೇಹ ಮನೆಗೆ ತಲುಪಿತ್ತು.

ಅಂದು 2011ರ ಎ. 2ನೇ ದಿನಾಂಕ. ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ನಡೆಯುತ್ತಿತ್ತು. ಅತ್ತ ಭಾರತ – ಚೀನಾ ಗಡಿಯ ಪೂರ್ವ ಸಿಕ್ಕಿಂನ ಓಪಿ ಫಾಲ್ಕನ್‌ನ ಸೊಮ್‌ ಸರೋವರ್‌ ಲೇಕ್‌ನಲ್ಲಿ ವಾಟರ್‌ ಸಪ್ಲೆ„ ಸ್ಕೀಮ್‌ನಲ್ಲಿ ಗಿರೀಶ್‌ ಕರ್ತವ್ಯ ನಿರತರಾಗಿದ್ದರು. ಭಾರೀ ಮಂಜುಗಡ್ಡೆ ಬೀಳುತ್ತಿದ್ದುದರಿಂದ ಸೈನಿಕರಿಗೆ “ನೋ ಮೂವ್‌ಮೆಂಟ್‌ ಆರ್ಡರ್‌’ ನೀಡಲಾಗಿತ್ತು. ಆದರೆ ತನ್ನ ಕ್ಯಾಂಪ್‌ನ ಮೆಸ್‌ನಲ್ಲಿ ನೀರಿನ ಅಭಾವ ಉಂಟಾದ ಬಗ್ಗೆ ಕರೆ ಬಂದ ಹಿನ್ನೆಲೆಯಲ್ಲಿ ಕ್ಯಾಂಪ್‌ನ ನೀರು ಪೂರೈಕೆಯವರಿಗೆ ಸಂದೇಶ ನೀಡಿದ್ದರು. ಮಂಜುಗಡ್ಡೆಯ ನಡುವೆ ನೇರವಾಗಿ ನೀರು ಪಡೆಯುವುದು ದೊಡ್ಡ ಸವಾಲಾಗಿತ್ತು. ಅನಂತರ ಖುದ್ದು ಗಿರೀಶ್‌ ಒಬ್ಬರೇ ಸ್ಥಳಕ್ಕೆ ತೆರಳಿದ್ದರು. ರಾತ್ರಿಯಾದರೂ ಅವರು ವಾಪಸಾಗಲಿಲ್ಲ. ಹುಡುಕಾಟ ನಡೆದರೂ ಪತ್ತೆಯಾಗಲಿಲ್ಲ. ಮರುದಿನ ಮಂಜುಗಡ್ಡೆ ಸ್ವಲ್ಪ ಕರಗಿದ ಜಾಗದಲ್ಲಿ ಅವರ ಮಿಲಿಟರಿ ಜಾಕೆಟ್‌ನ ಅಂಚು ಕಾಣಿಸುತ್ತಿತ್ತು. ಅದನ್ನು ತೆರವುಗೊಳಿಸಿದಾಗ ಗಿರೀಶ್‌ ಮೃತದೇಹ ಮಂಜುಗಡ್ಡೆಯಲ್ಲಿ ಹುದುಗಿ ಹೋಗಿತ್ತು. 4ನೇ ದಿನದಲ್ಲಿ ಪಾರ್ಥೀವ ಶರೀರವವನ್ನು ಕೃಷ್ಣಾಪುರದ ಅವರ ಮನೆಗೆ ತರಲಾಯಿತು.

ಕಾರ್ಗಿಲ್‌ ಯುದ್ಧದಲ್ಲೂ ಭಾಗಿ
ಕುಂಜತ್ತಬೈಲ್‌ನ ದೇವಿನಗರ ನಿವಾಸಿ ತಂಗಮ್ಮ ಮತ್ತು ನಾರಾಯಣ ಅವರ ಪ್ರಥಮ ಪುತ್ರ ಗಿರೀಶ್‌ ಅವರು 1977ರ ಡಿ. 15ರಂದು ಜನಿಸಿದರು. ಉಳ್ಳಾಲದ ಸಂತ ಸೆಬೆಸ್ಟಿಯನರ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು ಕೃಷ್ಣಾಪುರದ ಮದ್ಯದಲ್ಲಿ ಐಟಿಐ (ನಾರಾಯಣಗುರು) ಮುಗಿಸಿದರು. 1995ರ ಅ. 26ರಂದು 6 ಮದ್ರಾಸ್‌ ರೆಜಿಮೆಂಟಿನ ಯೋಧನಾಗಿ ಭೂಸೇನೆಗೆ ಆಯ್ಕೆಯಾದರು. ಅಂಡಮಾನ್‌, ರಾಜಸ್ಥಾನ, ಪಂಜಾಬ್‌, ಅಸ್ಸಾಂ, ಜಮ್ಮು-ಕಾಶ್ಮೀರ, ಸಿಕ್ಕಿಂ ಮೊದಲಾದೆಡೆ ಒಟ್ಟು 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಾರ್ಗಿಲ್‌ ಯುದ್ಧದಲ್ಲಿಯೂ ಪಾಲ್ಗೊಂಡಿದ್ದರು.

ತನ್ನ ಪತಿಯವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಕ್ಕಾಗಿ ಪತ್ನಿ ಶ್ರೀಕಲಾ ಹಲವಾರು ಬಾರಿ ಅನುಕಂಪದ ಆಧಾರದಲ್ಲಿ ಸರಕಾರಿ ಕೆಲಸಕ್ಕೆ ಪ್ರಯತ್ನಿಸಿದರೂ ಫ‌ಲ ಸಿಕ್ಕಿಲ್ಲ. ಇಂದಲ್ಲ ನಾಳೆ ಸರಕಾರ ನೆರವಾಗಬಹುದು ಎಂಬ ನಿರೀಕ್ಷೆಯಲ್ಲಿ ತನ್ನ ಇಬ್ಬರು ಮಕ್ಕಳ ಜತೆ ಕೃಷ್ಣಾಪುರದ ಮನೆಯಲ್ಲಿ ವಾಸವಾಗಿದ್ದಾರೆ. ಪುತ್ರ ಎರಡನೇ ವರ್ಷದ ಪದವಿ ಹಾಗೂ ಮಗಳು 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Advertisement

ಮಗಳ ಬರ್ತ್‌ಡೇಗೆ ಬರುತ್ತೇನೆ….
ಗಿರೀಶ್‌ ಅವರು ಸಿಕ್ಕಿಂನಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅನಂತರ ಎನ್‌ಸಿಸಿಯಲ್ಲಿ ಆಯ್ಕೆಯಾಗಿ ತುಮಕೂರಿಗೆ ವರ್ಗಾವಣೆಗೊಂಡು ವರ್ಗಾವಣೆ ಸಮೇತ ರಜೆಯಲ್ಲಿ ಬರುವುದಾಗಿಯೂ ಎ. 16ರಂದು ಮಗಳ ಬರ್ತ್‌ಡೇಯಲ್ಲಿ ಪಾಲ್ಗೊಳ್ಳುವುದಾಗಿಯೇ ಹೇಳಿದ್ದರು. ನಾಪತ್ತೆಯಾಗುವ ಮುನ್ನಾದಿನ ಕೂಡ ಪತ್ನಿ ಶ್ರೀಕಲಾ ಅವರಿಗೆ ಕರೆ ಮಾಡಿ ಒಂದು ತಾಸು ಮಾತನಾಡಿದ್ದರು. ಮರುದಿನ ಮತ್ತೆ ಕರೆ ಮಾಡುವುದಾಗಿ ಹೇಳಿದ್ದರು.

ಸೇವೆಗೆ ಹಲವು ಮೆಡಲ್‌
17 ವರ್ಷಗಳ ದೇಶ ಸೇವೆಯಲ್ಲಿ 50 ಇಂಡಿಪೆಂಡೆನ್ಸ್‌ ಅವಾರ್ಡ್‌ ಮೆಡಲ್‌, 9 ಇಯರ್ ಲಾಂಗ್‌ ಸರ್ವಿಸ್‌ ಮೆಡಲ್‌, ಸೈನ್ಯ ಸೇವಾ ಸರ್ವೀಸ್‌ ಮೆಡಲ್‌(ಜಮ್ಮು ಮತ್ತು ಕಾಶ್ಮೀರ), ಸ್ಪೆಷಲ್‌ ಸರ್ವೀಸ್‌ ಮೆಡಲ್‌ ವಿದ್‌ ಕ್ಲಾಸ್‌³, ಹೈ ಅಟಿಟ್ಯೂಡ್‌ ಮೆಡಲ್‌(ಸಿಕ್ಕಿಂ)ಗಳು ಸಂದಿವೆ.

ಈ ಬಾರಿಯೂ ಸರ್‌ಪ್ರೈಸ್‌ ನೀಡುತ್ತಾರೆ ಅಂದುಕೊಂಡಿದ್ದೆ…
ಮಿಸ್ಸಿಂಗ್‌ ಆಗಿದ್ದಾರೆ ಎಂದು ಎ. 3ರಂದು ಅಪರಾಹ್ನ ಸಂದೇಶ ಬಂದಿತ್ತು. ಅವರಿಗೆ ರಜೆ ಮಂಜೂರಾಗಿತ್ತು. ಹಾಗೆ ಮನೆಗೆ ಬಂದಿರಬಹುದು. ಹೇಳದೆ ಸರ್‌ಪ್ರೈಸ್‌ ಆಗಿ ಬರುವುದು ಹೆಚ್ಚು. ಹಾಗೆ ಅವರು ಹೊರಟಿರಬಹುದು ಅಂದುಕೊಂಡಿದ್ದೆ. ಆದರೆ ಅವರು ಬರಲಿಲ್ಲ.
-ಶ್ರೀಕಲಾ, ಹವಾಲ್ದಾರ್‌ ಗಿರೀಶ್‌ ಅವರ ಪತ್ನಿ

–  ಲಕ್ಷ್ಮೀನಾರಾಯಣ ರಾವ್‌

ಇದನ್ನೂ ಓದಿ: Olympian Sushil Kumar: ಕುಸ್ತಿಪಟು ಹತ್ಯೆ ಪ್ರಕರಣ: ಮತ್ತೆ ಜೈಲಿಗೆ ಶರಣಾದ ಸುಶೀಲ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next