Advertisement

ಕಳಲೆ ಬಂತು ಕಳಲೆ; ಬಗೆ ಬಗೆ ಪಲ್ಯದ ರುಚಿಯೇ…

03:45 AM Jun 30, 2017 | Harsha Rao |

ಬಿದಿರಿನ ಎಳೆ ತುದಿ ಕಳಲೆ. ತುಳುವಿನಲ್ಲಿ ಕಣಿಲೆ. ಗೌಡ ಸಾರಸ್ವತ ಬ್ರಾಹ್ಮಣರಿಗೆ ಇದು ಕೀರ್ಲು. ಮಳೆಗಾಲದ ಪ್ರಾರಂಭದಲ್ಲಿ ಮಾರುಕಟ್ಟೆಗೆ ಬರುವ ಕಳಲೆ ದುಬಾರಿಯಾದರೂ ಇದರ ಖಾದ್ಯದ ರುಚಿ ತಿಳಿದವರು ಯಥೇತ್ಛ ಖರೀದಿಸಿ ವ್ಯವಸ್ಥಿತ ರೂಪದಲ್ಲಿ ದಾಸ್ತಾನು ಇರಿಸಿ ವರ್ಷ ಪೂರ್ತಿ ಬಗೆ ಬಗೆ ಖಾದ್ಯ ತಯಾರಿಸುತ್ತಾರೆ. ಗೌಡ ಸಾರಸ್ವತರಂತು ಇದರ ಖ್ಯಾದ್ಯ ತಯಾರಿಸಲು ನುರಿತರು.

Advertisement

ಕಳಲೆ ಖರೀದಿಸಿ ತಂದರೆ ಅಂದೇ ಅದನ್ನು ಹೆಚ್ಚ ಬೇಕು. ಹೆಚ್ಚು  ದಿನವಾದರೆ ಇದು ಗಡಸು ಆಗಿ ಪಲ್ಯಕ್ಕೆ ಒಪ್ಪದು. ಕಳಲೆಯ ಹೊರ ಪದರು ಒಂದೊಂದಾಗಿ ಕಿತ್ತರೆ ಒಳಗೆ ಬಿಳಿ ಬಣ್ಣದ ತಿರುಳು ಕಾಣುತ್ತದೆ. ಇದರ ಮೇಲ್ಭಾಗದ ಒಂದು ಅಂಗುಲದಷ್ಟು ಗಾತ್ರದ ತಿರುಳು ತೀರಾ ಮೆದು. ಈ ಭಾಗವನ್ನು ಸಾರಸ್ವತರು ನೀಲಿ ಅನ್ನುತ್ತಾರೆ. ನೀಲಿಯನ್ನು ತೀರಾ ಚಿಕ್ಕ ಚಿಕ್ಕದಾಗಿ ಹೆಚ್ಚಿ ಮಾಡುವ ಖಾದ್ಯ ವಿಶೇಷವಾದದ್ದು. ಈ ಭಾಗದಿಂದ ಕೆಳಗಿನ ಭಾಗ ನೀಲಿಯಷ್ಟು ಮೆದು ಅಲ್ಲದಿದ್ದರೂ ಇತರ ಖಾದ್ಯಕ್ಕೆ ದೊಡ್ಡ ತುಂಡುಗಳನ್ನಾಗಿ ಮಾಡಿ ಉಪಯೋಗಿಸುತ್ತಾರೆ.

ಹೆಚ್ಚಿದ ‘ನೀಲಿ’ ಯಾಗಲೀ ಮಾಡಿಟ್ಟ ತುಂಡಾಗಲಿ ತತ್‌ಕ್ಷಣ ಖಾದ್ಯ ಮಾಡಲಾಗದು. ಇದು ಒಗರಾಗಿದ್ದು, ನೀರಿನಲ್ಲಿ ಹಾಕಿಡಬೇಕು. ಹಿಂದೆ ಹೆಚ್ಚಿದ ಕಣಿಲೆಯನ್ನು ವಸ್ತ್ರದಲ್ಲಿ ಬಿಗಿದು ಕಟ್ಟಿ, ಬಾವಿ ನೀರಲ್ಲಿ ನೇತು ಹಾಕುತ್ತಿದ್ದರು. ಸಾಮಾನ್ಯ 24 ಗಂಟೆ ಕಳೆದು ಹೊರ ತೆಗೆದು ತೊಳೆದು ಖಾದ್ಯಕ್ಕೆ ಉಪಯೋಗಿಸುತ್ತಿದ್ದರು. ಇದೀಗ ಹೆಚ್ಚಿದ ಕಳಲೆಯನ್ನು ಉಪ್ಪು ಹಾಕಿ ಭರಣಿಯಲ್ಲೋ, ಪ್ಲಾಸ್ಟಿಕ್‌ ಡಬ್ಬದಲ್ಲೋ ಸಂಸ್ಕರಿಸಲು ಹಾಕಿ ಇಡುತ್ತಾರೆ. ಇದು ವರ್ಷ ಪೂರ್ತಿ ಬೇಕಾದಾಗ ತೆಗೆಯಬಹುದಾದ ವ್ಯವಸ್ಥೆ. ಕೆಲವರು ನೀರಲ್ಲಿ ನೆನೆಹಾಕಿ ಎರಡು ಮೂರು ದಿನ ಕಳೆದು ಖಾದ್ಯಕ್ಕೆ ಉಪಯೋಗಿಸುತ್ತಾರೆ.

ಗೌಡ ಸಾರಸ್ವತ ಬ್ರಾಹ್ಮಣರು (ಕೊಂಕಣಿಗರು) ಈ ಕೀರ್ಲುನಿಂದ ಮಾಡುವ ಖಾದ್ಯ ನೀಲಿ ಸುಕ್ಕೆ, ತುಂಡಿನ ಉಪ್ಪಿನಕಾಯಿ, ಅಂಬಡೆ, ಪನ್ನಾ ಪೋಳ್ಳೋ ಮಾಡುತ್ತಾರೆ. ಹೆಸರು ಕಾಳಿನ ಗಸಿ, ಕೆಸುವಿನ ಖಾದ್ಯಕ್ಕೆ ಸೇರಿಸಿ ಆಳ್ವತಿ, ಹಲಸಿನ ಬೀಜ ಜತೆಯ ಗಸಿ. ಹೀಗೆ ಹತ್ತು ಹಲವು ಖಾದ್ಯ ತಯಾರಿಸುತ್ತಾರೆ.

ಬಿದಿರು ಕಾಡು ಬೆಳೆ, ಹೀಗಾಗಿ ಇದನ್ನು ಕಡಿಯವುದು, ಇದರ ಯಾವುದೇ ಭಾಗಗಳನ್ನು ಕೀಳುವುದನ್ನು ಅರಣ್ಯ ಇಲಾಖೆ ನಿಷೇಧಿಸಿದೆ. ಹೀಗಾಗಿ ಕಾಡಿನಲ್ಲಿ ಬೆಳೆದ ಬಿದಿರಿನಿಂದ ಕಳಲೆ ಮುರಿದು ತರುತ್ತಿರುವುದು ಕಣ್ಣು ತಪ್ಪಿಸಿಕೊಂಡೇ. ಹಿಂದೆ ಇದು ತರಕಾರಿ ಅಂಗಡಿಗಳಲ್ಲಿ ರಾಶಿ ರಾಶಿ ಹಾಕಿ ಮಾರುತ್ತಿದ್ದರು. ಇದೀಗ ಮರೆಯಲ್ಲಿಟ್ಟು ಅಗತ್ಯವಿರುವ ಗಿರಾಕಿಗಳಿಗೆ ಮಾತ್ರ ನೀಡುತ್ತಾರೆ. ಮಂಗಳೂರು, ಉಡುಪಿ ಭಾಗದಲ್ಲಿ ಇದನ್ನು ರಸ್ತೆ ಬದಿಯಲ್ಲೂ ಖರೀದಿಸಲು ಸಿಗುತ್ತಿದೆ. ಸುಳ್ಯ, ಮಡಿಕೇರಿ ಮುಂತಾದ ಪ್ರದೇಶಗಳ ಕಾಡಿನಿಂದ ಇವುಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಇದೀಗ ಸುಲಿದ ಕಳಲೆ ಮಂಗಳೂರು, ಉಡುಪಿ ಕಾರ್‌ ಸ್ಟ್ರೀಟ್‌ ರಸ್ತೆ ಬದಿ ಸಿಗುತ್ತಿದ್ದು, ಪುಟ್ಟ ಒಂದು ಕವರ್‌ನಲ್ಲಿ ಹಾಕಿರುವ ಇದರ ಬೆಲೆ ರೂ. 40. ಪೂರ್ತಿ ಕಳಲೆಗೆ ದರ ಕಿ.ಗ್ರಾಂ.ಗೆ ರೂ. 200 ತೆಗೆಯುತ್ತಾರೆ. ಇಲಾಖೆಯ ನಿಯಂತ್ರಣದಿಂದ ಕಳಲೆ ಮಾರುಕಟ್ಟೆಗೆ ಬರುವುದೇ ಇತಿಮಿತಿಯಲ್ಲಿ. ಬೇಡಿಕೆ ಹೆಚ್ಚಿದರೆ ದರದ ಏರಿಕೆ ಎಷ್ಟಕ್ಕೂ ಏರಬಹುದು. ಇದು ಸೀಸನ್‌ನಲ್ಲಿ ದೊರೆಯುವ ಅಪರೂಪದ ವಸ್ತು. ಇದರ ಸ್ವಾದ ಅರಿತವ ಬೆಲೆ ಗಮನಿಸದೆ ಖರೀದಿಸಿಯೇ ಬಿಡುತ್ತಾನೆ. ಉಪ್ಪಿನಲ್ಲಿ ಹಾಕಿಟ್ಟರೆ ವರ್ಷಪೂರ್ತಿ ಉಪಯೋಗಿಸಲೂಬಹುದಲ್ಲ. ಇದೀಗ ಬಿದಿರನ್ನು ಹುಲ್ಲಿನ ಸಸ್ಯ ಪ್ರಭೇದ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಇಲಾಖೆಯ ನಿಯಂತ್ರಣ ಸ್ವಲ್ಪ ಸಡಿಲಾಗಿದೆಯೋ ಅನ್ನುವ ಗುಮಾನಿಯೂ ಇದೆ. ಇಲಾಖೆಯ ಯಾವುದೇ ದೃಢೀಕರಣ ಇದಕ್ಕೆ ದೊರೆತ್ತಿಲ್ಲ.

Advertisement

ಬಿದಿರಿನ 550 ಪ್ರಭೇದ
ಬಿದಿರನ್ನು ಈಗೀಗ ಶೃಂಗಾರ ಸಸ್ಯವಾಗಿ ಉದ್ಯಾನದಲ್ಲೂ ಬೆಳೆಸುತ್ತಾರೆ. ಸುಮಾರು 550 ಬಿದಿರಿನ ಪ್ರಭೇದಗಳಿದ್ದು ಭಾರತದಲ್ಲೇ ಇವು 173 ಇವೆ. ಇವುಗಳಲ್ಲಿ 40 ಪ್ರಭೇದ ಹೂ ಬಿಡುತ್ತದೆ. ಇದರ ಅಕ್ಕಿಯನ್ನೂ ಪಡೆಯಬಹುದು. ಬಿದಿರು ದಿನಕ್ಕೆ 2-8 ಅಂಗುಲದಷ್ಟು ಎತ್ತರಕ್ಕೆ ಶೀಘ್ರವಾಗಿ ಬೆಳೆಯುವ ಸಸ್ಯ. ಮರವನ್ನು ನೆಟ್ಟು ಬೆಳೆಸಿ ಬಳಕೆಗೆ ತೆಗೆಯಲು ಕಮ್ಮಿಯಲ್ಲಿ 10-12 ವರ್ಷ ಬೇಕಾಗುತ್ತದೆ. ಆದರೆ ಬಿದಿರು ಬೆಳೆ ಬೇಗನೇ ಅಗತ್ಯಕ್ಕೆ ಸಿಗುತ್ತಿದ್ದು, ಶೀಘ್ರ ವರಮಾನ ನೀಡುವ ವಸ್ತುವಾಗಿದೆ. ಭಾರತದ ಈಶಾನ್ಯ ರಾಜ್ಯದಲ್ಲಿ ಕಟ್ಟಡ ಕಟ್ಟಲು ಬಿದಿರೇ ಪ್ರಧಾನ ವಸ್ತು. ಇಲ್ಲಿ ಯಥೇತ್ಛ ಬಿದಿರು ಬೆಳೆಯುತ್ತಿದ್ದು ಸಾಕಷ್ಟು ದೊರೆಯುತ್ತಿದೆ. ಈ ಭಾಗದ ಒಂದು ನೃತ್ಯ ಕೂಡಾ ಬಿದಿರನ್ನು ಅವಲಂಬಿಸಿಯೇ ನಡೆಯತ್ತಿದೆ. ಚೀನಾ, ಜಪಾನ್‌, ಇಂಡೋನೇಷ್ಯಾ, ಬಾಲಿ ಮೊದಲಾದೆಡೆ ಮನೆ ಕಟ್ಟಲು ಹಾಗೂ ವೈವಿಧ್ಯಮಯ ಪೀಠೊಪಕರಣ ಮಾಡಲು ಬಿದಿರು ವ್ಯಾಪಕವಾಗಿ ಬಳಸಲಾಗುತ್ತಿದೆ.

ಬಿದಿರು ಔಷಧ ಗುಣ ಹೊಂದಿದ ಸಂಪತ್ತು. ಕಳಲೆ ರಕ್ತ ಶೋಧಕ ಎನ್ನಲಾಗಿದೆ. ಇದು ಶ್ವಾಸಕೋಶ ಸಂಬಂಧಿ ಕಾಯಿಲೆ, ಹುಳಬಾಧೆಗಳಿಗೆ ಉತ್ತಮ ಮದ್ದು. ಬಿದಿರ ಬೇರು, ಎಲೆ ಅನೇಕ ರೋಗ ಶಮನದ ಮದ್ದಾಗಿ ಆಯುರ್ವೇದದಲ್ಲಿ ಬಳಸಲಾಗುತ್ತಿದೆ. ಬಿದಿರು ಸೀಳಿದಾಗ ಅದರಲ್ಲಿ ದೊರೆಯುವ ಅಂಟು ಪದಾರ್ಥವನ್ನು ವಂಶರೋಚನ ಎನ್ನುತ್ತಾರೆ. ಚರ್ಮ ರೋಗ, ರಕ್ತ ಕ್ಷಯ, ಹೃದ್ರೋಗ, ವಾಂತಿ, ಅತಿಸಾರ, ಮೂತ್ರ ತಡೆ, ನಿತ್ರಾಣ, ಜ್ವರಕ್ಕೆ ಇದು ದಿವ್ಯ ಔಷಧಿ. ಆಯುರ್ವೇದದಲ್ಲಿ ಬಳಸುವ ಔಷಧಿಗಳಾಗಿರುವ ತಾಲೀಪಾಡಿ ಚೂರ್ಣ, ಸಿತೋಪಲಾಡಿ ಚೂರ್ಣಗಳಿಗೆ ವಂಶರೋಚನ ಉಪಯೋಗವಾಗುತ್ತದೆ. ಕಳಲೆಯ ಪೇಸ್ಟ್‌ ಗಾಯ ಒಣಗಲು ಅತೀ ಉತ್ತಮ ಎಂದು ವೈದ್ಯರು ತಿಳಿಸುತ್ತಾರೆ.

ಅಂತು ತೆಂಗಿನ ಬಳಿಕದ ಕಲ್ಪವೃಕ್ಷ ಯಾವುದೆಂದರೆ ಬಿದಿರನ್ನು ಹೆಸರಿಸಿದರೆ ತಪ್ಪಾಗದು. ತೆಂಗಿನಂತೆ ಇದರ ಎಲ್ಲಾ ಭಾಗವೂ ಉಪಯೋಗಕ್ಕೆ ಬರುತ್ತಿದೆ. ಸರ್ವಜ್ಞನ ನುಡಿಯಂತೆ ‘ಬಿದಿರು ಅಂದಣವಕ್ಕು, ಬಿದಿರು ಸತ್ತಿಗೆಯಕ್ಕು, ಅಂದವಿಹ ಮನೆಗೆ ಸಿಂಗಾರವಕ್ಕು’ ಎಂದಿರುವುದು ಬಿದಿರಿನ ಮಹಿಮೆ ಎಷ್ಟು ಅನ್ನುವುದನ್ನು ಮನದಟ್ಟು ಮಾಡಿ ಕೊಡುತ್ತಿದೆ.

1-2 ದಿನ ನೆನೆ ಹಾಕಲೇ ಬೇಕು
ಹೆಚ್ಚಿದ ಕಳಲೆಯನ್ನು ನೀರಲ್ಲಿ ನೆನೆ ಇಡುವುದು ಕೇವಲ ಒಗರು ತೆಗೆಯಲು ಮಾತ್ರವಲ್ಲ. ಇದರಲ್ಲಿ ವಿಷಾಂಶ ಕೂಡಾ ಇದೆ. ಇದನ್ನೂ ಪೂರ್ಣ ತೆಗೆಯಲು ನೀರಲ್ಲಿ ಒಂದೆರಡು ದಿನ ನೆನೆ ಹಾಕಲೇ ಬೇಕು. ಕಳಲೆಯ ಸಿಪ್ಪೆ ದನಕ್ಕೆ ಆಹಾರವಾಗಿ ನೀಡಬಾರದು. ಇದು ಕೂಡಾ ವಿಷಾಂಶಪೂರಿತವಾದುದು. ಈ ಸಿಪ್ಪೆಯನ್ನು ತೆಂಗಿನ ಬುಡಕ್ಕೆ ಹಾಕಿ ಮಣ್ಣಿನಿಂದ ಮುಚ್ಚಿದರೆ ತೆಂಗಿಗೆ ಸಾರಗೊಬ್ಬರವಾಗುತ್ತದೆ. ಅದಲ್ಲದಿದ್ದರೆ ಹೊಂಡ ಮಾಡಿ ಅದರಲ್ಲಿ ಸಿಪ್ಪೆಯನ್ನು ಹೂತು ಹಾಕುವುದು ಒಳಿತು.

– ರಾಮದಾಸ್‌ ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next