Advertisement

‘ದಿವ್ಯದೃಷ್ಟಿಗೆ’ಬಂತು ರಕ್ಷಣಾ ಇಲಾಖೆಯಿಂದ ಆಹ್ವಾನ

04:58 PM Aug 28, 2017 | Team Udayavani |

ಶಿವಮೊಗ್ಗ: ನಗರದ ಇಬ್ಬರು ಉತ್ಸಾಹಿ ಇಂಜಿನಿಯರ್‌ಗಳು ವಿನೂತನವಾಗಿ ರೂಪಿಸಿರುವ ಸಮಗ್ರ ಹಾಗೂ ವ್ಯಾಪಕ ಸಾಮರ್ಥ್ಯದ ವಿಶಿಷ್ಟ ಮಾಸ್ಟ್‌ ಹೆಡ್‌ ಶೀಘ್ರವೇ ಭಾರತೀಯ ಸೇನೆಯ ವಸ್ತು ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಮೂಲಕ ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ರೂಪಿಸಲ್ಪಟ್ಟ ಸಾಧನವೊಂದಕ್ಕೆ ರಕ್ಷಣಾ ಇಲಾಖೆಯ ಮಾನ್ಯತೆ ದೊರೆಯುವ ಸಾಧ್ಯತೆಯಿದೆ.

Advertisement

ಮಾಸ್ಟ್‌ ಹೆಡ್‌ ಅಳವಡಿಕೆ ಸಂಬಂಧ ರಕ್ಷಣಾ ಇಲಾಖೆ ಈ ಇಬ್ಬರು ಇಂಜಿನಿಯರ್‌ಗಳನ್ನು ಆಮಂತ್ರಿಸಿದ್ದು, ಸೆಪ್ಟಂಬರ್‌ನಲ್ಲಿ ಇದರ ಜೋಡಣೆ ನಡೆಯಲಿದೆ. ಈ ಸಮಗ್ರ ಸಿಸಿಟಿವಿ ಮಾಸ್ಟ್‌ ಹೆಡ್‌ ಹೈದರಾಬಾದ್‌ನಲ್ಲಿ ಭಾರತೀಯ ಭೂಸೇನೆ ಆಯೋಜಿಸಿರುವ ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ಕಾರ್ಯಗಳ ವಸ್ತುಪ್ರದರ್ಶನದಲ್ಲಿ ಸೇರ್ಪಡೆಗೊಳ್ಳಲಿದೆ.

ಡಿ.ವೆಂಕಟೇಶ್‌ ಹಾಗೂ ಬಿ.ಎನ್‌.ಕಿರಣ ಸಾಧಕ ಇಂಜಿನಿಯರುಗಳು. ‘ದಿವ್ಯ ದೃಷ್ಟಿ’ ಎಂದು ಕರೆಯಲ್ಪಡುವ ಇದನ್ನು ಜು.21ರಂದು ರಾಜ್ಯ ಪೊಲೀಸ್‌ ಇಲಾಖೆಯ ಡಿಜಿಪಿ ಆರ್‌.ಕೆ.ದತ್ತಾ ಅವರಿಗೆ ಹಸ್ತಾಂತರಿಸಲಾಗಿದೆ. ಪೊಲೀಸ್‌ ಇಲಾಖೆ ಪ್ರಾಯೋಗಿಕವಾಗಿ ಇದನ್ನು ತನ್ನ ವಾಹನದಲ್ಲಿ ಬಳಕೆ ಮಾಡುತ್ತಿದೆ. ಬೆಂಗಳೂರು, ಶಿವಮೊಗ್ಗ ಸೇರಿದಂತೆ ಕೆಲವು ಕಡೆ ಇಲಾಖೆ ಇದನ್ನು ಬಳಸುತ್ತಿದೆ. ಪೊಲೀಸ್‌ ಇಲಾಖೆ ಈಗಾಗಲೇ ಇದರ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದೆ.

ಇದೀಗ ಭಾರತೀಯ ಸೇನೆ ಕೂಡ ಇದರ ಬಗ್ಗೆ ಆಸಕ್ತವಾಗಿದ್ದು, ಆರಂಭಿಕವಾಗಿ ಸೇನೆಯ ವಸ್ತುಪ್ರದರ್ಶನದಲ್ಲಿ ಇದರ ಪರೀಕ್ಷೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಇದು ಸೇನೆಯ ಒಂದು ಭಾಗವಾಗಿ ಕಾರ್ಯ ನಿರ್ವಹಿಸುವಂತಾದರೆ ಅದು ರಾಜ್ಯಕ್ಕೆ ಹೆಮ್ಮೆಯಾಗಲಿದೆ.

ಏನಿದು ದಿವ್ಯ ದೃಷ್ಟಿ?: ಪೊಲೀಸ್‌ ನಿಯಂತ್ರಣ ವಾಹನಕ್ಕೆ ಅಳವಡಿಕೆಯಾಗಿರುವ ಈ ಸಾಧನ ಹಲವು ವಿಶೇಷತೆ ಒಳಗೊಂಡಿದೆ. ಪ್ರಖರ ಬೆಳಕಿನ ಎಲ್‌ಇಡಿ ಲೈಟ್‌ ಮತ್ತು 360 ಡಿಗ್ರಿ ಸುತ್ತ ತಿರುಗುವ ಮೂಲಕ ಅತಿ ದೂರದ ಚಿತ್ರವನ್ನೂ ತೆಗೆಯಬಲ್ಲ ಉದ್ದವಾದ ಮಾಸ್ಟ್‌, ಆಧುನಿಕ ಸೂಕ್ಷ್ಮದರ್ಶಕವನ್ನೊಳಗೊಂಡ ಕ್ಯಾಮರಾ ಒಳಗೊಂಡಿದೆ. 500 ಮೀ.ವ್ಯಾಪ್ತಿಯಲ್ಲಿನ ದೃಶ್ಯವನ್ನು ಸೆರೆಹಿಡಿಯಬಲ್ಲ ಈ ಮಾಸ್ಟ್‌, ರಾತ್ರಿ ಕಾರ್ಯಾಚರಣೆಗೂ ಅನುಕೂಲವಾಗಿದೆ. ಈ ಸಂಚಾರಿ ಮಾಸ್ಟ್‌ನ್ನು ಅಗತ್ಯಕ್ಕನುಗುಣವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಿ ಸ್ಥಾಪಿಸಬಹುದಾಗಿದೆ.

Advertisement

2 ಜಿ ಮತ್ತು 3ಜಿ ನೆಟ್‌ವರ್ಕ್‌ ಹೊಂದಿರುವ ಈ ಮಾಸ್ಟ್‌ 4.50 ಲಕ್ಷ ರೂ.ನಿಂದ 5 ಲಕ್ಷ ರೂ. ವೆಚ್ಚದ್ದಾಗಿದೆ. ವಿಶೇಷ ಎಂದರೆ ಪೊಲೀಸ್‌ ಹಾಗೂ ರಕ್ಷಣಾ ಇಲಾಖೆಯ ಕಾರ್ಯಾಚರಣೆಗೆ ಪೂರಕವಾಗುವಂತೆ ದಿವ್ಯ ದೃಷ್ಟಿಯ ಕ್ಯಾಮರಾ ರಾತ್ರಿ ವೇಳೆ ಇನ್‌ಫ್ರಾರೆಡ್‌ ಲೈಟ್‌ ಹಾಗೂ ಫ್ಲಡ್‌ ಲೈಟ್‌ನಲ್ಲೂ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ರಕ್ಷಣಾ ಇಲಾಖೆಯ ವಾಹನಗಳಿಗೆ ಈ ಸಿಸಿಟಿವಿ ಮಾಸ್ಟ್‌ನ್ನು ಪೈಲಟ್‌ ಪ್ರಾಜೆಕ್ಟ್ ರೀತಿಯಲ್ಲಿ ಅಳವಡಿಸುವಂತೆ ಅಧಿಕಾರಿಗಳು ಈಗಾಗಲೇ ತಿಳಿಸಿದ್ದಾರೆ. ‘ಭೂ ಸೇನೆ ಏರ್ಪಡಿಸಿರುವ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದಿದ್ದೇವೆ. ಮೇಕ್‌ ಇನ್‌ ಇಂಡಿಯಾ ಕಲ್ಪನೆಯಡಿ ರೂಪ ತಳೆದಿರುವ ನಮ್ಮ ಈ ಸಾಧನ ಯಶಸ್ವಿಯಾಗಲಿದೆ’ ಎಂದು ವೆಂಕಟೇಶ್‌ ಮತ್ತು ಕಿರಣ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ದಿವ್ಯ ದೃಷ್ಟಿ’ ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಈ ಸಾಧನ ನಮ್ಮ ಅವಶ್ಯಕತೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ಶ್ರಮ ವಹಿಸಿರುವ ಇಬ್ಬರು ಇಂಜಿನಿಯರ್‌ಗಳು ಅಭಿನಂದನಾರ್ಹರು. ಅಗತ್ಯ ನಿಧಿ ಒದಗಿಸುವ ಮೂಲಕ ನಾವು ಅವರ ಆಲೋಚನೆಗಳಿಗೆ ಬೆಂಬಲ ನೀಡಲಿದ್ದೇವೆ.
– ಅಭಿನವ್‌ ಖರೆ, ಶಿವಮೊಗ್ಗ ಎಸಿ

– ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next