Advertisement

ಸಾರಿಗೆ ಇಲಾಖೆಯಲ್ಲಿ ಸೋರಿಕೆ ತಡೆಗೆ ವಿಶೇಷ ಕ್ರಮ

01:49 PM Jun 02, 2020 | mahesh |

ಬಳ್ಳಾರಿ: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಮತ್ತು ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕ್ರಮವಹಿಸಬೇಕು
ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಅವರು ಅಧಿ ಕಾರಿಗಳಿಗೆ ಸೂಚನೆ ನೀಡಿದರು. ನಗರದ ಪೊಲೀಸ್‌ ಜಿಮ್‌ಖಾನಾದಲ್ಲಿ ಸೋಮವಾರ ನಡೆದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌-19 ನಮ್ಮ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ಬಹುದೊಡ್ಡ ಹೊಡೆತ ನೀಡಿದ್ದು, ನಾಲ್ಕು ಸಾರಿಗೆ ನಿಗಮಗಳು ಬಹಳಷ್ಟು ನಷ್ಟ ಅನುಭವಿಸಿವೆ.

Advertisement

ರಾಜ್ಯದಲ್ಲಿ 4 ಕೋಟಿ ಜನರು ನಮ್ಮ ಸಾರಿಗೆ ಬಸ್‌ಗಳನ್ನು ನೆಚ್ಚಿಕೊಂಡಿದ್ದಾರೆ. ಇದಕ್ಕೆ ಯಾವುದೇ ರೀತಿಯ ಧಕ್ಕೆ ಆಗಬಾರದು ಮತ್ತು ಕರ್ನಾಟಕ ಸಾರಿಗೆ ಸಂಸ್ಥೆಗಳಲ್ಲಿ 1.30ಲಕ್ಷ ಅಧಿ ಕಾರಿಗಳು ಮತ್ತು ಸಿಬ್ಬಂದಿಯಿದ್ದು, ನಾವೇ ಶ್ರಮಪಡಬೇಕು ಮತ್ತು  ಆದಾಯ ಗಳಿಸಬೇಕು ಮತ್ತು ನಮ್ಮ ಸಂಬಳ
ತೆಗೆದುಕೊಳ್ಳಬೇಕು ಎನ್ನುವ ಸ್ಥಿತಿ ಇದ್ದು, ನಮ್ಮವರ ಭದ್ರತೆಗೂ ಧಕ್ಕೆ ಆಗದಂತೆ ಕಾರ್ಯನಿರ್ವಹಿಸುವ ಜವಾಬ್ದಾರಿ ನಮ್ಮ ಮುಂದಿದ್ದು, ಇದನ್ನು
ಗಮನದಲ್ಲಿಟ್ಟುಕೊಂಡು ಅತ್ಯಂತ ಜಾಗೂರಕತೆಯಿಂದ ಹಾಗೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.

401 ಕೋಟಿ ರೂ. ನಷ್ಟ: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಕೋವಿಡ್‌-19 ನಿಮಿತ್ತ ಸಾರಿಗೆ ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ 396.46
ಕೋಟಿ ರೂ. ಸಾರಿಗೆ ಆದಾಯ ಮತ್ತು 4.48 ಕೋಟಿ ರೂ. ವಾಣಿಜ್ಯ ಆದಾಯ ಸೇರಿದಂತೆ 400.92 ಕೋಟಿ ರೂ. ನಷ್ಟವುಂಟಾಗಿದೆ ಎಂದು ಎನ್‌ಇಕೆಎಸ್‌ಆರ್‌
ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಹೀರಾನಸೀಂ ಅವರು ಸಭೆಗೆ ತಿಳಿಸಿದರು. ಕಲಬುರಗಿ ವಿಭಾಗ-1 ಮತ್ತು ವಿಭಾಗ-2ಗೆ 81.80 ಕೋಟಿ ರೂ.,ಯಾದಗಿರಿ-31.86 ಕೋಟಿ ರೂ., ರಾಯಚೂರು-54.76 ಕೋಟಿ ರೂ.,ಬೀದರ್‌ -52.38 ಕೋಟಿ ರೂ., ಕೊಪ್ಪಳ-37.94ಕೋಟಿ ರೂ., ಬಳ್ಳಾರಿ-33.35ಕೋಟಿ ರೂ., ವಿಜಯಪುರ-66.78 ಕೋಟಿ ರೂ., ಹೊಸಪೇಟೆ-41.29ಕೋಟಿ ರೂ. ಹಾಗೂ ಕೇಂದ್ರ ಕಚೇರಿ-0.76ಕೋಟಿ ರೂ ನಷ್ಟವುಂಟಾಗಿದೆ ಎಂದು ಅವರು ಹೇಳಿದರು.

ನಾಲ್ಕು ಗ್ರಾಮಗಳಿಗೆ ಸಿಟಿಬಸ್‌ ಓಡಿಸಿ: ಬಳ್ಳಾರಿ ನಗರಕ್ಕೆ ಹತ್ತಿರವಿರುವ ಮೋಕಾ, ರೂಪನಗುಡಿ, ಕೋಳಗಲ್ಲು ಮತ್ತು ಬೆಳಗಲ್ಲು ಗ್ರಾಮಗಳಿಗೆ ಬಳ್ಳಾರಿಯಿಂದ ಸಿಟಿ ಬಸ್‌ ಓಡಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರು ಡಿಸಿಎಂ ಸವದಿ ಅವರಲ್ಲಿ ಕೋರಿದರು. ಶಾಸಕರ ಅಹವಾಲು ಆಲಿಸಿದ ಡಿಸಿಎಂ ಸವದಿ ಅವರು ಕೂಡಲೇ ಆ ಗ್ರಾಮಗಳಿಗೆ ಸಿಟಿ ಬಸ್‌ ಓಡಿಸುವುದಕ್ಕೆ ವ್ಯವಸ್ಥೆ ಮಾಡಿ ಎಂದು ಎನ್‌ಇಕೆಎಸ್‌ಆರ್‌ಟಿಸಿ ಡಿಸಿ ಚಂದ್ರಶೇಖರ ಅವರಿಗೆ ಸೂಚಿಸಿದರು. ಬಳ್ಳಾರಿ ತಾಲೂಕಿನ 3 ಮತ್ತು ಸಿರಗುಪ್ಪ ತಾಲೂಕಿನ 2 ಗ್ರಾಮಗಳಿಗೆ ಜನವಸತಿ ಇಲ್ಲದ ಗ್ರಾಮಗಳಿಗೆ ಬಸ್‌ ಸೇವೆ ಒದಗಿಸಲಾಗಿಲ್ಲ. ಹೊಸಪೇಟೆ ವಿಭಾಗದ ಕೂಡ್ಲಿಗಿ ಗ್ರಾಮದ 1, ಸಂಡೂರು ತಾಲೂಕಿನ 2 ಮತ್ತು ಹರಪನಳ್ಳಿ ತಾಲೂಕಿನ 5 ಗ್ರಾಮಗಳಿಗೆ ಬಸ್‌ ಸೇವೆ ಒದಗಿಸಬೇಕಾಗಿದೆ ಎಂದು ಹೊಸಪೇಟೆ ಎನ್‌ ಇಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿ ಕಾರಿ ಶೀನಯ್ಯ ಅವರು ಡಿಸಿಎಂ ಅವರ ಗಮನಕ್ಕೆ ತಂದರು.

61778 ವಲಸೆ ಕಾರ್ಮಿಕರ ಕಾರ್ಯಾಚರಣೆ: ಏ. 23ರಿಂದ ಮೇ 31ರವರೆಗೆ ವಲಸೆ ಕಾರ್ಮಿಕರಿಗಾಗಿ ಜಿಲ್ಲಾ ವ್ಯಾಪ್ತಿಯಲ್ಲಿ 2239 ಬಸ್‌ಗಳು ಕಾರ್ಯಾಚರಣೆ
ಮಾಡಿಸಲಾಗಿದ್ದು, ಎನ್‌ಇಕೆಎಸ್‌ಆರ್‌ಟಿಸಿ ವ್ಯಾಪ್ತಿಯ ಜಿಲ್ಲೆಗಳಲ್ಲಿ 61,778 ವಲಸೆ ಕಾರ್ಮಿಕರನ್ನು ಕಾರ್ಯಾಚರಣೆ ಮಾಡಲಾಗಿದೆ ಎಂದು ಎನ್‌ ಇಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸಭೆಗೆ ತಿಳಿಸಿದರು. ಅಂತಾರಾಜ್ಯ ವ್ಯಾಪ್ತಿಯಲ್ಲಿ 311 ಬಸ್‌ಗಳು ಕಾರ್ಯಚರಣೆ ಮಾಡಲಾಗಿದ್ದು, 8762
ಪ್ರಯಾಣಿಕರನ್ನು ಕಾರ್ಯಚರಣೆ ಮಾಡಲಾಗಿದೆ ಎಂದರು.

Advertisement

ಬೆಂಗಳೂರಿನಿಂದ ವಲಸೆ ಕಾರ್ಮಿಕರನ್ನು ಕರೆದುಕೊಂಡು ಬರಲು 3570 ಬಸ್‌ಗಳನ್ನು ಒದಗಿಸಲಾಗಿದ್ದು, 70540 ಪ್ರಯಾಣಿಕರನ್ನು ಕರೆದುಕೊಂಡು ಬರಲಾಗಿದೆ. ಕರಾರು ಒಪ್ಪಂದದ ಅನ್ವಯ 10.07ಕೋಟಿ ರೂ. ಬರಬೇಕಾಗಿದೆ ಎಂದರು. ಸಭೆಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್‌.ಆನಂದಸಿಂಗ್‌, ಸಂಸದರಾದ ವೈ. ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕ ನಾಗೇಂದ್ರ, ಎನ್‌ಇಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಹೀರಾನಸಿಂ, ಜಿಲ್ಲಾ ಧಿಕಾರಿ ಎಸ್‌.ಎಸ್‌ .ನಕುಲ್‌,ಜಿಪಂ ಸಿಇಒ ಕೆ.ನಿತೀಶ್‌, ಎಸ್ಪಿ ಸಿ.ಕೆ.ಬಾಬಾ ಮತ್ತಿತರರು ಇದ್ದರು.

ಮೋದಿ ವಿಶ್ವದ ಮೆಚ್ಚುಗೆ ಗಳಿಸಿದ ಪ್ರಧಾನಿ: ಸವದಿ
ಬಳ್ಳಾರಿ: ಎರಡನೇ ಅವಧಿ ಗೆ ಜನಮನ್ನಣೆಯೊಂದಿಗೆ ಕೇಂದ್ರದಲ್ಲಿ ಅ ಧಿಕಾರಕ್ಕೆ ಬಂದಿರುವ ಪ್ರಧಾನಿ  ನರೇಂದ್ರ ಮೋದಿಯವರು ಆರಂಭದಲ್ಲೇ ಅತಿವೃಷ್ಟಿ
ಎದುರಿಸಿದ್ದು, ಇದು ಕೊನೆಗಾಣುತ್ತಿದ್ದಂತೆ ಕೋವಿಡ್ ಸೋಂಕು ಮಹಾಮ್ಮಾರಿಯನ್ನು ಸಮರ್ಥವಾಗಿ ಎದುರಿಸಿರುವ ಪ್ರಧಾನಿ ನರೇಂದ್ರ ಮೋದಿಯವರು
ವಿಶ್ವದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಐದು ವರ್ಷ ಉತ್ತಮ ಆಡಳಿತ ನೀಡಿದ ಹಿನ್ನೆಲೆಯಲ್ಲಿ 2ನೇ ಅವ  ಧಿಗೂ ಜನಮನ್ನಣೆ ಪಡೆದು ಕೇಂದ್ರದಲ್ಲಿ ಅಧಿ ಕಾರಕ್ಕೆ ಬಂದಿದ್ದಾರೆ. 2ನೇ ಅವಧಿ ಆರಂಭದಲ್ಲೇ ಎದುರಾದ
ಅತಿವೃಷ್ಟಿ, ನದಿಗಳ ಪ್ರವಾಹವನ್ನು ಸಮರ್ಥವಾಗಿ ಎದುರಿಸಿದ ಬೆನ್ನಲ್ಲೇ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್‌ ಮಹಾಮಾರಿ ಆವರಿಸಿದೆ. ಈ
ಎಲ್ಲ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸುತ್ತಲೇ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎಂದು ತಿಳಿಸಿದರು.

ಲಾಕ್‌ಡೌನ್‌ ಸಂಕಷ್ಟದಿಂದ ಕೇಂದ್ರ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸಿದರೂ, ದೇಶವನ್ನು  ಸದೃಢವನ್ನಾಗಿಸಲು ಮತ್ತು ಸಮಾಜಕ್ಕೆ ನೆರವು ನೀಡಲು 20 ಲಕ್ಷ ರೂ. ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನ್ನು ಘೋಷಿಸಿದ್ದಾರೆ. ಇದರಿಂದಾಗಿ ಗರೀಬ್‌ ಕಲ್ಯಾಣ ಯೋಜನೆಯಡಿ 4.7 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳನ್ನು ಸಂಗ್ರಹಿಸಿಡಲಾಗಿದೆ. ರೈತರ ಕೃಷಿ ಚಟುವಟಿಕೆ ನಿಲ್ಲಬಾರದು, ಆರ್ಥಿಕ ತೊಂದರೆ ಎದುರಿಸಬಾರದು ಎಂಬ ಉದ್ದೇಶದಿಂದ ರೈತರು ಬೆಳೆದ ಜೋಳ, ಗೋ , ಕಡ್ಲೆ, ಕಡ್ಲೆಬೀಜ, ಭತ್ತ, ಸಾಸಿವೆ ಸೇರಿ ಹಲವಾರು ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸಿ ದಾಸ್ತಾನು ಮಾಡಲಾಗಿದೆ ಎಂದ ಸಚಿವರು. ಕೃಷಿಗೆ ಹೆಚ್ಚು ಒತ್ತು ನೀಡಲಾಗಿದ್ದು, 60 ವರ್ಷ ಮೀರಿದ ಸಣ್ಣ, ಅತಿಸಣ್ಣ ರೈತರಿಗೆ ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ನೀಡುವ ಯೋಜನೆ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌, ಸಂಸದರಾದ ವೈ. ದೇವೇಂದ್ರಪ್ಪ, ಸಂಗಣ್ಣಕರಡಿ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌ ಸೇರಿದಂತೆ ಪಾಲಿಕೆ ಸದಸ್ಯರು, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next