Advertisement

ಪುಕ್ಕಟೆ ಪ್ರಚಾರದ ಯೋಜನೆಗಳು ನಮ್ಮ ಆದ್ಯತೆಯಲ್ಲ

12:25 AM May 13, 2017 | Karthik A |

4 ವರ್ಷ ಏನಂತಾರೆ ಮಿನಿಷ್ಟ್ರು?: ‘ಜನತಾ ಪರಿವಾರದನಾಯಕರಾಗಿದ್ದ ದಿವಂಗತ ಸಿ. ಬೈರೇಗೌಡ ಅವರ ಪುತ್ರರಾದ ಕೃಷ್ಣಬೈರೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಚ್ಚುಮೆಚ್ಚಿನ ಸಚಿವರಲ್ಲಿ ಒಬ್ಬರು. ಜತೆಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರಿಗೂ ಆಪ್ತರು. ಕೃಷ್ಣಬೈರೇಗೌಡರ ತಂದೆಯೂ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು’

Advertisement

ಕಳೆದ ನಾಲ್ಕು ವರ್ಷಗಳಲ್ಲಿ ಕೃಷಿ ಇಲಾಖೆ ಕಾರ್ಯ ನಿರ್ವಹಣೆ ಬಗ್ಗೆ ಏನು ಹೇಳುವಿರಿ?
ಈ ಹಿಂದೆ ಕೃಷಿ ಇಲಾಖೆ ಹಾಗೂ ರೈತರ ನಡುವೆ ದೊಡ್ಡ ಅಂತರವಿತ್ತು. ನಾನು ಅಧಿಕಾರ ವಹಿಸಿಕೊಂಡ ಬಳಿಕ ಅದನ್ನು ಕಡಿಮೆ ಮಾಡಿ ಇಲಾಖೆಯ ಸೇವೆ ರೈತರ ಮನೆ ಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ತಂತ್ರಜ್ಞಾನ ಬಳಕೆ ಜತೆಗೆ ವೈಜ್ಞಾನಿಕ ಪದ್ಧತಿ ಅಳವಡಿಕೆಗೂ ಆದ್ಯತೆ ನೀಡಲಾಗಿದೆ. ಇಲಾಖೆಗೆ ಹೆಚ್ಚಿನ ಅನುದಾನ ಪಡೆಯುವ ಮೂಲಕ ಆರ್ಥಿಕ ಬಲ ತುಂಬಲಾಗಿದೆ.

ರೈತರ ಸ್ಥಿತಿಗತಿ ಸುಧಾರಣೆಗೆ ಪೂರಕವಾದ ಯೋಜನೆಗಳ ಜಾರಿಗೆ ಅಗತ್ಯ ಅನುದಾನ ಸಿಕ್ಕಿದೆಯೆ?
ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಕೃಷಿಗೆ ಬಜೆಟ್‌ ಅನುದಾನ ಪ್ರಮಾಣ ಶೇ.1.9 ರಿಂದ ಶೇ. 2.3ರಷ್ಟಕ್ಕೆ ಏರಿಕೆಯಾಗಿದೆ. ಬಿಜೆಪಿ ಅಧಿಕಾರಾವಧಿಯ 5 ವರ್ಷಗಳಲ್ಲಿ ಕೃಷಿಗೆ 1183 ಕೋಟಿ ರೂ.ನಿಂದ ಗರಿಷ್ಠ 1898 ಕೋಟಿ ರೂ. ಅನುದಾನವನ್ನಷ್ಟೇ ನೀಡಲಾಗಿತ್ತು. ಆದರೆ ಕಳೆದ 4 ವರ್ಷದಲ್ಲಿ ಕೃಷಿಗೆ ನೀಡಲಾಗುವ ಅನುದಾನ ಪ್ರಮಾಣ 1900 ಕೋಟಿ ರೂ.ನಿಂದ 5000 ಕೋಟಿ ರೂ.ಗೆ ಏರಿಕೆಯಾಗಿದೆ. 4 ವರ್ಷಗಳಲ್ಲಿ ಬಜೆಟ್‌ ಅನುದಾನಕ್ಕಿಂತಲೂ ಹೆಚ್ಚು ಹಣ ವೆಚ್ಚ ಮಾಡಲಾಗಿದೆ. ನಿರೀಕ್ಷೆಗೆ ತಕ್ಕಂತೆ ಸಿಎಂ ಅನುದಾನ ನೀಡಿದ್ದಾರೆ.

ಕೃಷಿಭಾಗ್ಯ ಯೋಜನೆ ನಿಜಕ್ಕೂ ರೈತಾಪಿ ಸಮುದಾಯಕ್ಕೆ ಪ್ರಯೋಜನವಾಗಿದೆಯೇ?
ಕೃಷಿಭಾಗ್ಯ ಯೋಜನೆಯಡಿ ಈವರೆಗೆ 1.31 ಲಕ್ಷ ಕೃಷಿ ಹೊಂಡ ನಿರ್ಮಿಸಲಾಗಿದ್ದು, ಈವರೆಗೆ 1330 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸದ್ಯ 150 ಕೋಟಿ ರೂ. ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿವೆ. ಜುಲೈ ವೇಳೆಗೆ ಕೃಷಿಹೊಂಡಗಳ ಸಂಖ್ಯೆಯನ್ನು 1.60 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ. ಪ್ರಸಕ್ತ ಹಣಕಾಸು ವರ್ಷ ಮುಗಿಯುವುದರೊಳಗೆ ಯೋಜನೆಗೆ 2,000 ಕೊಟಿ ರೂ. ಒದಗಿಸುವ ಅಂದಾಜು ಇದೆ. ತಜ್ಞರಾದ ಪ್ರಕಾಶ್‌ ಕಮ್ಮರಡಿ ಆಯ್ದ 30 ರೈತರ ಸಮೀಕ್ಷೆ ನಡೆಸಿದ್ದು, ಕೃಷಿಹೊಂಡ ಹೊಂದಿದ ರೈತರ ಬೆಳೆ ಇಳುವರಿ ಶೇ.63ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ.

ಸತತ 3 ವರ್ಷಗಳ ಬರದ ಹಿನ್ನೆಲೆಯಲ್ಲಿ ರೈತರು ತತ್ತರಿಸಿದ್ದು, ರೈತರ ಹಿತ ಕಾಪಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?
ನಮ್ಮದು ಕೃಷಿ ಪ್ರಧಾನ ಸಮಾಜ.ಎಷ್ಟೇ ಕಷ್ಟ ಬಂದರೂ ಸಹಿಸುವ ಕ್ಷಮತೆ ರೈತರಲ್ಲಿದೆ. ಸರ್ಕಾರದ ಯೋಜನೆಗಳಿಂದ ರೈತರು ಕೃಷಿಯಲ್ಲಿ ಉಳಿದಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ರೈತರ ತಮ್ಮ ಕ್ಷಮತೆ, ಸಹಿಷ್ಣುತೆ ಎಲ್ಲ ಕಷ್ಟಗಳನ್ನು ಮೆಟ್ಟಿನಿಲ್ಲುವ ಗುಣದಿಂದ ಕೃಷಿಯನ್ನು ಮುಂದುವರಿಸಿದ್ದಾರೆ. ಅದಕ್ಕೆ ಪೂರಕವಾಗಿ ಸರ್ಕಾರ ಸಹಕಾರ ನೀಡುತ್ತದೆ. ಕಳೆದ 2 ವರ್ಷಗಳಲ್ಲಿ ಸರ್ಕಾರ ನೀಡಿರುವಷ್ಟು ಪರಿಹಾರ ಹಿಂದೆಂದೂ ನೀಡಿಲ್ಲ.

Advertisement

ನಿಮ್ಮ ಸರ್ಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂಬ ಆರೋಪವಿದೆಯಲ್ಲಾ?
ರೈತರ ಆತ್ಮಹತ್ಯೆ ಮತ್ತು ಪರಿಹಾರ ಒಂದು ರೀತಿಯ ಜಿಜ್ಞಾಸೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಯಾರೂ ಬಯಸುವುದಿಲ್ಲ. ರೈತರು ಸಂಕಷ್ಟದಲ್ಲಿರುವುದನ್ನೂ ಯಾವ ಸರ್ಕಾರವೂ ಇಷ್ಟಪಡುವುದಿಲ್ಲ. ಆದರೂ ಸರ್ಕಾರ, ಆತ್ಮಹತ್ಯೆಗೆ ಶರಣಾದವರ ಕುಟುಂಬದ ನೆರವಿಗೆ ಪ್ಯಾಕೇಜ್‌ ಘೋಷಿಸಿದೆ. ತಕ್ಷಣದ ಪರಿಹಾರದ ಜತೆಗೆ ಪಿಂಚಣಿ, ಶಿಕ್ಷಣ ಸೌಲಭ್ಯ, ಆರೋಗ್ಯ ಸೌಲಭ್ಯದ ಪ್ಯಾಕೇಜ್‌ ಕಲ್ಪಿಸಲಾಗಿದೆ.

ಸರ್ಕಾರದ ನೆರವು ಅಥವಾ ಸ್ಪಂದನೆ ಸಾವಿಗೆ ಶರಣಾಗುವ ರೈತರ ಮನಸ್ಥಿತಿ ಬದಲಾಯಿಸಲು ಸಾಧ್ಯವಾಗಿದೆಯೇ?
ಪರಿಹಾರ ಎರಡನೇ ವಿಚಾರ. ಮೊದಲಿಗೆ ಆತ್ಮಹತ್ಯೆ ತಡೆಯುವುದು ಮುಖ್ಯ. ಆದರೆ, ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಸರ್ಕಾರ ನೆರವಾಗಲೇಬೇಕು. 2015-16ನೇ ಸಾಲಿನಲ್ಲಿ ಕೆಲ ತಿಂಗಳು 1000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ತಪ್ಪಿಸುವ ಸಲುವಾಗಿಯೇ ರೈತರಿಗೆ ಕೃಷಿ ಜತೆಗೆ ಇತರೆ ಆದಾಯ ಮೂಲ ಸೃಷ್ಟಿಸುವತ್ತ ಗಮನ ಹರಿಸಲಾಗಿದ್ದು, ಪಶುಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ.

ರೈತರ ಆರ್ಥಿಕ ಸಂಕಷ್ಟ ನಿವಾರಿಸಿದ್ದರೆ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿತ್ತು ಎಂಬ ಪ್ರತಿಪಕ್ಷಗಳ ವಾದಕ್ಕೆ ನಿಮ್ಮ ಅಭಿಪ್ರಾಯವೇನು?
ಸಾಲಮನ್ನಾ ಮಾಡಿದ್ದರೆ ಪರಿಸ್ಥಿತಿ ಸುಧಾರಿಸುತ್ತಿತ್ತು ಎಂಬ ಊಹೆ ಸರಿಯಲ್ಲ. ಯಾಕೆಂದರೆ, ಸರ್ಕಾರ ಯಾವುದೇ ರೀತಿಯ ಪರಿಹಾರ ನೀಡಿದರೂ ಅವೆಲ್ಲವೂ ತಾತ್ಕಾಲಿಕ. ಉತ್ತಮ ಮಳೆಯಾದರೆಮಾತ್ರ ಪರಿಸ್ಥಿತಿ ಸುಧಾರಿಸಲಿದೆ.

ನಾಲ್ಕು ವರ್ಷಗಳಲ್ಲಿ ‘ಲ್ಯಾಬ್‌ ಟು ಲ್ಯಾಂಡ್‌’ ಪರಿಕಲ್ಪನೆ ಎಷ್ಟರ ಮಟ್ಟಿಗೆ ಸಾಕಾರಗೊಂಡಿದೆ?
ಕಳೆದ 10- 15 ವರ್ಷಗಳಿಂದ ಇಲಾಖೆ ಹಾಗೂ ಕೃಷಿ ವಿವಿಗಳಿಂದ ವಿಸ್ತರಣಾ ಕಾರ್ಯಗಳು ಬಹಳ ಕಡಿಮೆಯಾಗಿತ್ತು. ಹಾಗಾಗಿ ಕಳೆದ 3ವರ್ಷಗಳಿಂದ ತಂತ್ರಜ್ಞಾನ ಬಳಸಿಕೊಂಡು ವಿಸ್ತರಣಾ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ. ರೈತರಲ್ಲೂ ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾಗಿರುವುದರಿಂದ ಹವಾಮಾನ ಮುನ್ಸೂಚನೆ, ಬೆಳೆ, ಸುಧಾರಿತ ತಂತ್ರಜ್ಞಾನ, ಬೆಳೆಗಳ ಬೆಲೆ ಮಾಹಿತಿಯನ್ನು ಆಧುನಿಕ ಸಂಪರ್ಕ ಮಾಧ್ಯಮಗಳ ಮೂಲಕ ನೀಡುವ ಕಾರ್ಯ ವರ್ಷದಿಂದೀಚೆಗೆ ಆರಂಭವಾಗಿದೆ.

ಡಾ.ಸ್ವಾಮಿನಾಥನ್‌ ಅಧ್ಯಕ್ಷತೆಯ ‘ವಿಷನ್‌ ಗ್ರೂಪ್‌’ ಸಹಕಾರಿಯಾಗಿದೆಯೇ?
ವಿಷನ್‌ ಗ್ರೂಪ್‌ನೊಂದಿಗೆ ಆಗಾಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಸ್ವಾಮಿನಾಥನ್‌ ಅವರೇ ಸಿರಿಧಾನ್ಯಗಳಿಗೆ ಆದ್ಯತೆ ನೀಡಬಹುದೆಂಬ ಶಿಫಾರಸು ನೀಡಿದವರು. ನಿರಂತರವಾಗಿ ಅವರ ಸಲಹೆ ಪಡೆಯಲಾಗುತ್ತಿದೆ.

ರೈತರ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಯಾವುದಾದರೂ ಪ್ರಮುಖ ಯೋಜನೆ ಕೈಗೊಳ್ಳುವ ಚಿಂತನೆ ಇದೆಯೇ?
ಇನ್ನೂ ಕೆಲವು ಯೋಜನೆಗಳನ್ನು ಜಾರಿಗೊಳಿಸುವ ಚಿಂತನೆ ಇದೆ. ರೈತರಲ್ಲಿ ನೀರಿನ ಮಹತ್ವ ತಿಳಿಸುವ ಕಾರ್ಯ ಇನ್ನಷ್ಟು ವ್ಯಾಪಕವಾಗಿ ನಡೆಯಬೇಕಿದೆ. ಇಷ್ಟೆಲ್ಲಾ ಭೀಕರ ಬರ ಅನುಭವಿಸಿದರೂ ನೀರಿನ ಸದ್ಬಳಕೆಗೆ ಆದ್ಯತೆ ನೀಡುತ್ತಿಲ್ಲ. ಕಷ್ಟದಲ್ಲಿರುವ ರೈತರು ಗಮನ ನೀಡುತ್ತಿದ್ದರೂ ಉಳಿದವರು ನೀಡುತ್ತಿಲ್ಲ. ಹಾಗಾಗಿ ಈ ವರ್ಷವಿಡೀ ನೀರಿನ ಸದ್ಬಳಕೆ ಬಗ್ಗೆ ಅರಿವು ಮೂಡಿಸಲು ನಿರ್ಧರಿಸಲಾಗಿದೆ. ಡಿಎಸ್‌ಆರ್‌ ತಂತ್ರಜ್ಞಾನದಡಿ ಭತ್ತ ಬೆಳೆದರೆ 45 ದಿನಗಳವರೆಗೆ ನೀರು ನಿಲ್ಲಿಸಬೇಕಾದ ಅಗತ್ಯವಿಲ್ಲ. ಅದರಂತೆ ತುಂಗಭದ್ರಾ ಭಾಗದಲ್ಲಿ ಒಂದು ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಈ ತಂತ್ರಜ್ಞಾನ ಅನುಸರಿಸಲಾಗುತ್ತಿದೆ.

ತಮ್ಮ ರಾಜ್ಯ ಪ್ರವಾಸದಿಂದ ರೈತರಿಗೆ ಏನಾದರೂ ಪ್ರಯೋಜನವಾಗಿದೆಯೇ?
ಹಿಂದಿನ ಸರ್ಕಾರದ ಇಬ್ಬರು ಸಚಿವರು ಒಟ್ಟು 80 ದಿನ ಪ್ರವಾಸ ಮಾಡಿದ್ದರು. ನಾನು ಈವರೆಗೆ 253 ದಿನ ಪ್ರವಾಸ ಮಾಡಿದ್ದೇನೆ. ತಳಮಟ್ಟಕ್ಕೆ ಹೋಗದಿದ್ದರೆ ನ್ಯೂನತೆಗಳೇ ಗೊತ್ತಾಗುವುದಿಲ್ಲ. ರೈತರ ಬಳಿ ಮಾತನಾಡಿದಾಗ ವಸ್ತುಸ್ಥಿತಿ ಅರಿಯುವ ಜತೆಗೆ ನ್ಯೂನತೆ ಪತ್ತೆ ಹಚ್ಚಿ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಲಿದೆ.

ರೈತರಿಗೆ ಅನುಕೂಲಕರವಾಗಿ ಸ್ಪಂದಿಸಿದ ತೃಪ್ತಿ ಇದೆಯೇ?
ರೈತರಿಗೆ ತಾತ್ಕಾಲಿಕ ಪರಿಹಾರಕ್ಕಿಂತ ದೀರ್ಘಾವಧಿಯಲ್ಲಿ ಅನುಕೂಲವಾಗುವ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗಿದೆ. ಹಾಗಾಗಿ ಪುಕ್ಕಟೆ ಪ್ರಚಾರದ ಯೋಜನೆಗಳ ಮೊರೆ ಹೋಗಿಲ್ಲ. ಕೃಷಿ ಭಾಗ್ಯದಡಿ ರೈತರಿಗೆ ತಲಾ 1.25ರಿಂದ 1.50 ಲಕ್ಷ ರೂ. ವೆಚ್ಚದಲ್ಲಿ ಕಾಯಂ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಈ ಬಾರಿ ಮೋಡ ಬಿತ್ತನೆ ಮಾಡಲಾಗುತ್ತದೆಯೇ? ಇದು ಯಶಸ್ವಿಯಾಗುವುದೇ?
ಮೋಡ ಬಿತ್ತನೆಗೆ ಸಿದ್ಧತೆ ನಡೆದಿದೆ. ಸಂಪೂರ್ಣ ವೈಜ್ಞಾನಿಕ ತಳಹದಿಯ ಮೇಲೆ ನಡೆಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಕುಡಿಯುವ ನೀರಿನ ನಿರ್ದೇಶನಾಲಯವು ಸಿದ್ಧತೆ ಆರಂಭಿಸಿದೆ. ಜಲಸಂಪನ್ಮೂಲ ಇಲಾಖೆಯು ಅಗತ್ಯ ಅನುದಾನ ನೀಡಲಿದ್ದು, ಶೀಘ್ರ ಟೆಂಡರ್‌
ಆಹ್ವಾನಿಸಲಾಗುತ್ತದೆ.

ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತೀರಿ?
ಬಿಡುವಿನ ಸಮಯ ಸಿಗುವುದೇ ಅಪರೂಪ. ನಿತ್ಯ ಮಲಗುವ ಮುನ್ನ ಕೆಲಕಾಲ ಓದುತ್ತೇನೆ. ಕಚೇರಿ ಕೆಲಸ ಮುಗಿಸಿದ ಬಳಿಕ ಶಾಸಕ ಭವನದ ಜಿಮ್‌ನಲ್ಲಿ ಕೆಲ ಹೊತ್ತು ವ್ಯಾಯಾಮದಲ್ಲಿ ತೊಡಗುತ್ತೇನೆ.

ಸಂದರ್ಶನ: ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next