Advertisement

ಸಚಿವನಾದ ಮಾತ್ರಕ್ಕೆ ಅನಂತಕುಮಾರ್‌ ಹೆಗಡೆ ಬದಲಾಗಲ್ಲ

06:05 AM Sep 09, 2017 | |

ಬೆಂಗಳೂರು: ಬಿಜೆಪಿ, ಸಂಘ ಪರಿವಾರದ ಪಾಲಿಗೆ ರಾಷ್ಟ್ರೀಯವಾದಿ, ಇತರರ ಪಾಲಿಗೆ ಕಟ್ಟರ್‌ ಹಿಂದುತ್ವವಾದಿಯಾಗಿರುವ ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ್‌ ಹೆಗಡೆ “ಬೆಂಕಿಯ ಚೆಂಡು’ ಎಂದೇ ಖ್ಯಾತಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನಾರಚನೆ ವೇಳೆ ಮಂತ್ರಿ ಸ್ಥಾನಕ್ಕೆ ಕರೆಬರಬಹುದು ಎಂದು ರಾಜ್ಯದ ಸಚಿವಾಕಾಂಕ್ಷಿ ಸಂಸದರು ಕಾಯುತ್ತಿದ್ದರೆ ಅನಂತ್‌ಕುಮಾರ್‌ ಹೆಗಡೆ ತಣ್ಣಗೆ ದೆಹಲಿಗೆ ಹೋಗಿದ್ದರು. ಕಳೆದ ಶನಿವಾರ (ಸೆ.2) ಸಂಪುಟ ಪುನಾರಚನೆಯ ಪಟ್ಟಿ ಪ್ರಕಟಿಸಿದಾಗ ಎಲ್ಲರಿಗೂ ಅಚ್ಚರಿಯಾಗುವಂತೆ ಅದರಲ್ಲಿ ಕರ್ನಾಟಕದ ನಾಯಕರ ಪೈಕಿ ಹೆಗಡೆ ಅವರ ಹೆಸರು ಮಾತ್ರ ಇತ್ತು.

Advertisement

ತಮ್ಮನ್ನು ಸಚಿವರಾಗಿ ಆಯ್ಕೆ ಮಾಡಿದ್ದು ರಾಜ್ಯದ ಜನರಿಗೆ ಮಾತ್ರವಲ್ಲ, ತಮಗೂ ಅಚ್ಚರಿ ಎನ್ನುವ ಅನಂತಕುಮಾರ್‌ ಹೆಗಡೆ, ಸಚಿವರಾದ ಬಳಿಕ ಮೊದಲ ಬಾರಿಗೆ ತಮ್ಮ ಹಿಂದುತ್ವ ಸಿದ್ಧಾಂತದ ಪ್ರತಿಪಾದನೆ ಹಾಗೂ ಇದುವರೆಗೆ ಸ್ಥಳೀಯ ಮಟ್ಟದಲ್ಲಿ ತಾವು ಮಾಡಿಕೊಂಡು ಬಂದಿರುವ ಕೆಲಸಗಳ ಕುರಿತು ಉದಯವಾಣಿಗೆ ವಿಶೇಷ ಸಂದರ್ಶನ ನೀಡಿದ್ದಾರೆ.

ಎಲ್ಲರ ನಿರೀಕ್ಷೆಗಳು ಹುಸಿಯಾಗುವಂತೆ ಮಾಡಿ ಅಚ್ಚರಿ ಮೂಡಿಸಿದ ರೀತಿ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದಿರಿ. ಇದರ ಗುಟ್ಟೇನು?
      ಖಂಡಿತವಾಗಿಯೂ ನನಗೆ ಸಚಿವ ಸ್ಥಾನದ ನಿರೀಕ್ಷೆಯೂ ಇರಲಿಲ್ಲ, ಅದಕ್ಕಾಗಿ ಅಪೇಕ್ಷೆಪಟ್ಟವನೂ ಅಲ್ಲ. ಹಾಗಾಗಿ ಇಲ್ಲಿ ಗುಟ್ಟಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಭಗವಂತ ಅವಕಾಶ ಕೊಟ್ಟಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆದು ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ವಿಶ್ವಾಸ ಮತ್ತು ನಂಬಿಕೆ ಎರಡೂ ನನಗಿದೆ.

ನಿಮಗೆ ಸಚಿವ ಸ್ಥಾನ ಲಭಿಸಿರುವುದು ರಾಷ್ಟ್ರೀಯವಾದಕ್ಕೆ ಸಿಕ್ಕ ಮನ್ನಣೆಯೋ, ಹಿಂದೂ ಕಟ್ಟರ್‌ವಾದಿ ಎಂಬ ನಿಮ್ಮ ಹಣೆಪಟ್ಟಿಯ ಪರಿಣಾಮವೋ?
      ಜನರ ಮುಂದೆ ನಾಟಕದ ಬದುಕು ಅಥವಾ ಸೋಗಲಾಡಿತನದ ಬದುಕಿನಲ್ಲಿ ನಂಬಿಕೆ ಇಟ್ಟವನು ನಾನಲ್ಲ. ಸ್ಪಷ್ಟವಾದ ವಿಚಾರಧಾರೆ ಹೊಂದಿರುವವನು. ಅದು ವೈಯಕ್ತಿಕ ಬದುಕಿನ ಒಳಗೆ ಇರಲಿ, ಹೊರಗೆ ಇರಲಿ. ಎರಡೂ ಕಡೆ ಒಂದೇ ರೀತಿ ಇರುವವನು. ನೆಮ್ಮದಿಯನ್ನು ನಾವು ಕಾಣಲು ಅಪೇಕ್ಷೆ ಪಡುತ್ತೇವೆ. ಇದು ಒಂದು ಗುಂಪಿನವರಿಗೆ ಹಿಡಿಸಿದೆ, ಇನ್ನೊಂದು ಗುಂಪಿನವರಿಗೆ ಹಿಡಿಸಲಿಲ್ಲ. ಹೀಗಾಗಿ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡುತ್ತಾರೆ. ಸಮಾಜದಲ್ಲಿ ಯಾವ ಜನ ನನ್ನನ್ನು ಬೆಳೆಸಿದ್ದಾರೋ ಅವರ ಮುಂದೆ ನಾಟಕೀಯವಾಗಿ ಇರಲು ಬರುವುದಿಲ್ಲ ಮತ್ತು ಅದರ ಅವಶ್ಯಕತೆಯೂ ಇಲ್ಲ.

ನೀವೊಬ್ಬ ನಿಷ್ಠುರವಾದಿ, ಕಟ್ಟರ್‌ ಹಿಂದುತ್ವ ಪ್ರತಿಪಾದಿಸುವವರು. ಸಚಿವ ಸ್ಥಾನ ಸಿಕ್ಕಿದ ಮೇಲೆ ಅದಕ್ಕೆ ಅವಕಾಶ ಕಡಿಮೆ. ಹೀಗಿರುವಾಗ ನಿಮ್ಮ ಮುಂದಿನ ನಡೆ ಹೇಗಿರುತ್ತದೆ.
      ಹಂಡ್ರೆಡ್‌ ಪರ್ಸೆಂಟ್‌ ಇದುವರೆಗೆ ಹೇಗಿತ್ತೋ, ಅದೇ ರೀತಿ ಮುಂದುವರಿಯುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಾನು ರಾಜಕಾರಣಿಯಾಗಿ ಹುಟ್ಟಲೂ ಇಲ್ಲ, ಸಾಯಲೂ ಇಷ್ಟಪಡುವುದೂ ಇಲ್ಲ. ಆದ್ದರಿಂದ ಜೀವನದಲ್ಲಿ ಸ್ಪಷ್ಟತೆಯನ್ನು ಇಟ್ಟುಕೊಂಡಿರಲು ಬಯಸುತ್ತೇನೆ. ಹೀಗಾಗಿ ನಾನು ಹಿಂದೆ ಹೇಗಿದ್ದೆನೋ ಅದೇ ರೀತಿ ಕೆಲಸ ಮಾಡುತ್ತೇನೆಯೇ ಹೊರತು ಬದಲಾಗುವುದಿಲ್ಲ.

Advertisement

ಅನಂತ್‌ಕುಮಾರ್‌ ಹೆಗಡೆ ಅವರಿಗೆ ರಾಜ್ಯ ರಾಜಕಾರಣದ ಬಗ್ಗೆ ಒಲವಿದೆ. ಅನುಭವ ಪಡೆಯಲು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ ಎಂಬ ಮಾತಿದೆಯಲ್ಲಾ?
      ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಮೊದಲೇ ಹೇಳಿದ್ದೇನೆ, ನನಗೆ ಅಂತಹ ಯಾವ ಕನಸುಗಳೂ ಇಲ್ಲ. ಎಂದೂ ಕನಸುಗಳನ್ನು ಕಾಣದೇ ಬಂದಿರುವವನು ನಾನು. ಕೇಂದ್ರದ ಜವಾಬ್ದಾರಿಯೋ, ಸಂಘಟನೆಯ ಜವಾಬ್ದಾರಿಯೋ, ರಾಜ್ಯದ ಜವಾಬ್ದಾರಿಯೋ ಗೊತ್ತಿಲ್ಲ. ಕೊಟ್ಟಿರುವ ಮತ್ತು ಕೊಡುವ ಜವಾಬ್ದಾರಿಯನ್ನು ಸಮರ್ಥವಾಗಿ ಮತ್ತು ಅಷ್ಟೇ ಪ್ರಾಮಾಣಿಕವಾಗಿ ಮಾಡುತ್ತೇನೆ.

ಪರಿಸರ, ಗ್ರಾಮೀಣಾಭಿವೃದ್ಧಿ, ಸ್ಥಳೀಯರಿಗೆ ಉದ್ಯೋಗ ಮುಂತಾದ ವಿಚಾರಗಳನ್ನು ಪ್ರತಿಪಾದಿಸಿಕೊಂಡು ಬಂದವರು ನೀವು. ಅದಕ್ಕಾಗಿಯೇ ಸರ್ಕಾರೇತರ ಸಂಸ್ಥೆಯೊಂದನ್ನೂ ಹುಟ್ಟುಹಾಕಿದ್ದೀರಿ. ಕೇಂದ್ರ ಸಚಿವರಾಗಿ ರಾಷ್ಟ್ರಮಟ್ಟದಲ್ಲಿ ಜವಾಬ್ದಾರಿ ನಿರ್ವಹಿಸುವಾಗ ನಿಮ್ಮ ಪ್ರತಿಪಾದನೆಗಳ ಪರಿಸ್ಥಿತಿ ಏನು?
      ಆ ನಿಟ್ಟಿನಲ್ಲಿ ಕಳೆದ 10-15 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಅದರ ಪರಿಣಾಮ ನಿಧಾನವಾಗಿ ಒಂದು ವ್ಯವಸ್ಥೆ ನಿರ್ಮಾಣಗೊಂಡಿದೆ. ನಾವೇನು ಕಾರ್ಪೊರೇಟ್‌ ಕಂಪೆನಿಗಳ ರೀತಿ ದೊಡ್ಡ ಹಣ ಹಾಕಿ ಕೆಲಸ ಮಾಡುತ್ತಿಲ್ಲ. ನಮ್ಮದೇ ಶೈಲಿಯಲ್ಲಿ ಬಂಡವಾಳವಿಲ್ಲದೆ ಕೆಲಸ ಶುರು ಮಾಡಿದವರು. ಈಗ ವ್ಯವಸ್ಥೆಯೊಂದು ರೂಪುಗೊಂಡು ಅದು ತನ್ನನ್ನು ತಾನು ಬೆಳೆಸಿಕೊಳ್ಳುವ ಶಕ್ತಿ ಬಂದಿದೆ. ಪ್ರತಿನಿತ್ಯ ನಾವು ಅದನ್ನು ನಿರ್ವಹಿಸಬೇಕಾಗಿಲ್ಲ. ಖಂಡಿತವಾಗಿ ಜನ ಅದರೊಂದಿಗಿರುತ್ತಾರೆ ಮತ್ತು ಸಹಕಾರ ಕೊಡುತ್ತಾರೆ. ಹೀಗಾಗಿ ಈ ಕೆಲಸಗಳು ತಮ್ಮಷ್ಟಕ್ಕೆ ತಾವೇ ನಡೆಯುತ್ತವೆ.

ಕಾರವಾರದ ಸೀಬರ್ಡ್‌ ನೌಕಾನೆಲೆ ಕುರಿತಂತೆ ನಿಮ್ಮ ನಿಲುವೇನು?
      ಈಗಾಗಲೇ ಅದಕ್ಕೊಂದು ತಾರ್ಕಿಕ ಅಂತ್ಯ ಕಂಡುಕೊಂಡಿದ್ದೇವೆ. ಹಿಂದೆ ಈ ಕುರಿತ ಎಲ್ಲಾ ವಿಚಾರಗಳೂ ಸುಪ್ರೀಂ ಕೋರ್ಟ್‌ನಲ್ಲಿ ಹೋಗಿ ಇತ್ಯರ್ಥಗೊಳ್ಳಬೇಕು ಎಂಬ ಪರಿಸ್ಥಿತಿ ಇತ್ತು. ಆದರೆ, ಈಗ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳಬೇಕು ಎಂದು ತೀರ್ಮಾನವಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪಿನ ಆಧಾರದ ಮೇಲೆ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರ ತೀರ್ಮಾನ ಮಾಡಿ ಆಗಿದೆ. ಇನ್ನು ಆಗಬೇಕಾಗಿರುವುದು ಹಣದ ಬಿಡುಗಡೆ ಮತ್ತು ಹಂಚಿಕೆ ಕೆಲಸ. ಅದಕ್ಕೆ ಸುಮಾರು 800 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಬೇಕಾಗಿದ್ದು, ಹಣ ಬಿಡುಗಡೆಗೆ ಪ್ರಯತ್ನ ನಡೆಯುತ್ತಿದೆ.

ಸ್ಪಷ್ಟವಾದ ವಿಚಾರಧಾರೆಯೊಂದಿಗೆ ಬೆಳೆದುಬಂದವನು ನಾನು. ಅದರಲ್ಲೇ ಜೀವನದ ನೆಮ್ಮದಿ ಕಂಡುಕೊಳ್ಳುವ ಮನಸ್ಥಿತಿ ನನ್ನದು. ವೈಯಕ್ತಿಕ ಜೀವನದಲ್ಲಿ ಒಂದು, ಹೊರಗೊಂದು ರೀತಿ ವರ್ತಿಸುವ ಸೋಗಲಾಡಿತನಕ್ಕೆ ಯಾವತ್ತೂ ಅವಕಾಶ ನೀಡಿಲ್ಲ ಮತ್ತು ನೀಡುವುದೂ ಇಲ್ಲ. ನಿರೀಕ್ಷೆ, ಅಪೇಕ್ಷೆಯಿಲ್ಲದೆ ಸಿಕ್ಕಿದ ಮಂತ್ರಿ ಸ್ಥಾನದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಅದೇ ರೀತಿ ವೈಯಕ್ತಿಕವಾಗಿ ಹೇಗಿದ್ದೆನೋ ಅದೇ ರೀತಿ ಮುಂದುವರಿಯುತ್ತೇನೆ.
– ಅನಂತಕುಮಾರ್‌ ಹೆಗಡೆ

– ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next