Advertisement

ಕಾರ್ಯಾಂಗ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಲಿ: ವಿನಯ ಹೆಗ್ಡೆ

09:55 AM Aug 16, 2017 | Karthik A |

ಮೂಡಬಿದಿರೆ: ‘ಜಗತ್ತಿನ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರಜೆಗಳ ಹಿತಾಸಕ್ತಿ ಕಾಪಾಡುವ ಶಾಸನಗಳನ್ನು ಜಾರಿಗೊಳಿಸುವಲ್ಲಿ ಕಾರ್ಯಾಂಗವು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿ ಕಾರ್ಯನಿರ್ವಹಿಸಬೇಕಾಗಿದೆ’ ಎಂದು ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಎನ್‌. ವಿನಯ ಹೆಗ್ಡೆ ಅಭಿಪ್ರಾಯಪಟ್ಟರು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿ ಸನಿಹ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ 26,000 ವಿದ್ಯಾರ್ಥಿಗಳ ಸಹಿತ ಸಿಬಂದಿ ವರ್ಗ, ಪಾಲಕರು ಹಾಗೂ ಸಾರ್ವಜನಿಕರನ್ನೊಳಗೊಂಡಂತೆ ಸುಮಾರು 40,000 ಮಂದಿಯ ಸಮಕ್ಷಮ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ರಾಷ್ಟ್ರ ಧ್ವಜಾರೋಹಣಗೈದು ಅವರು ಮಾತನಾಡಿದರು.

Advertisement

ಗುರಿಯ ಸ್ಪಷ್ಟತೆ ಇರಲಿ
ಸತ್ಯಮೇವ ಜಯತೇ ಎಂಬ ಧ್ಯೇಯವಾಕ್ಯದ ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ಜಗತ್ತಿಗೆ ಸಾರುತ್ತಿರುವ ಭಾರತದ ಪ್ರಜಾಪ್ರಭುತ್ವ ಪ್ರಜೆಗಳೆಲ್ಲರ ಹಿತಾಸಕ್ತಿಯನ್ನು ಸಮಾನವಾಗಿ ಕಾಪಾಡಿಕೊಳ್ಳುವ ಆಶಯ ಹೊಂದಿದೆ. ಸತ್ಯವನ್ನು ಕಂಡುಕೊಳ್ಳಲು, ಸ್ಥಾಪಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಗುರಿಯ ಸ್ಪಷ್ಟತೆ ಮತ್ತು ಗುರಿಯ ಕುರಿತಾದ ವಿಶ್ವಾಸದಿಂದ ಜನರು ವಿಶೇಷವಾಗಿ ಯುವಜನರು ಹೆಜ್ಜೆ ಹಾಕಬೇಕಾಗಿದೆ’ ಎಂದು ಅವರು ಹೇಳಿದರು.

ಶಿಕ್ಷಣವೆಂಬುದು ಅತ್ಯಂತ ಕಠಿನ ಪ್ರಕ್ರಿಯೆ. ಇಲ್ಲಿ ಪರಿಶ್ರಮವೇ ಮುಖ್ಯ. ಅದಕ್ಕೆ ತಕ್ಕುದಾದ ವಾತಾವರಣ, ತರಬೇತಿ ಆಳ್ವಾಸ್‌ನಂಥ ಶಿಕ್ಷಣ ಸಂಸ್ಥೆ ಯಲ್ಲಿದೆ ಎಂದ ಅವರು ಸಮಾಜದಿಂದ ನೀವೇನನ್ನು ಪಡೆದುಕೊಂಡಿದ್ದೀರೋ ಅದರಲ್ಲಿ ಅಲ್ಪಾಂಶವನ್ನಾದರೂ ಸಮಾಜಕ್ಕೆ ನೀಡುವುದು ನಿಮ್ಮ ಕರ್ತವ್ಯ, ಹೊಣೆಗಾರಿಕೆಯಾಗಿದೆ’ ಎಂದು ಎನ್‌. ವಿನಯ ಹೆಗ್ಡೆ ಅವರು ಯುವಜನರಿಗೆ ಕಿವಿಮಾತು ಹೇಳಿದರು.

ಪ್ರಜಾಪ್ರಭುತ್ವದ ಜೀವಂತಿಕೆಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸಮರ್ಥವಾಗಿ ಕಾರ್ಯನಿರ್ವಹಿಸುವಂತೆಯೇ ಪತ್ರಿಕಾರಂಗ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ತಮ್ಮ ಜವಾಬ್ದಾರಿಗಳನ್ನು ಸಮರ್ಥ ವಾಗಿ ನಿರ್ವಹಿಸುವ ಜತೆಗೆ ಮಾಧ್ಯಮರಂಗವು ಸ್ವತಂತ್ರವಾಗಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ಅವರು ಹೇಳಿದರು.

ಸಮ್ಮಾನ
ಆಳ್ವಾಸ್‌ ಹಳೆವಿದ್ಯಾರ್ಥಿಗಳಾದ, ಯುಪಿಎಸ್‌ಸಿ (ಐಎಎಸ್‌) ಪರೀಕ್ಷೆಯಲ್ಲಿ ಕರ್ನಾಟಕದಿಂದ ಇದೇ ಮೊದಲ ಬಾರಿಗೆ ಪ್ರಥಮ ರ್‍ಯಾಂಕ್‌ ಪಡೆದ ನಂದಿನಿ ಕೆ.ಆರ್‌., ಇವರನ್ನು ರೂ. 1 ಲಕ್ಷ ನಗದು ಸಹಿತ, ಸಿಎ-ಸಿಪಿಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ, ದೇಶಕ್ಕೆ ದ್ವಿತೀಯ ಸ್ಥಾನ ಪಡೆದ ತವಿಷಿ ದೇಚಮ್ಮ ಹಾಗೂ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿ. ಸ್ಪಂದನ ಅವರನ್ನು ತಲಾ 50,000 ರೂ. ನಗದು ಸಹಿತ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರು ಅತಿಥಿಗಳ ಜತೆಗೂಡಿ ಸಮ್ಮಾನಿಸಿದರು.

Advertisement

‘ನಾವು ಎಷ್ಟೇ ಸಾಧನೆಗಳನ್ನು ಮಾಡಿದರೂ ಅದು ಸಮಾಜದಿಂದ ಪಡೆದ ಸಾಲವಾಗಿರುತ್ತದೆ. ಅದನ್ನು ಹಿಂದಿರುಗಿಸುವುದು ನಮ್ಮ ಕರ್ತವ್ಯ. ವಿದ್ಯಾರ್ಥಿಗಳು ನೂರಕ್ಕೆ ನೂರು ಶೇಕಡಾ ಪರಿಶ್ರಮಪಟ್ಟು ಯಶಸ್ಸು ಗಳಿಸುವ ಜತೆಗೆ ದೇಶಕ್ಕೂ ಕೊಡುಗೆಯಾಗುವಂಥ ಬದುಕನ್ನು ನಡೆಸುವಂತಾಗಬೇಕು’ ಎಂದು ನಂದಿನಿ ಕೆ.ಆರ್‌. ತಮ್ಮ ಆಶಯ ವ್ಯಕ್ತಪಡಿಸಿದರು.

ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ, ಅಬುಧಾಬಿಯ ಎನ್‌ಎಂಸಿ, ಯುಎಇ ಎಕ್ಸ್‌ ಚೇಂಜ್‌ ಸಂಸ್ಥೆಗಳ ಸಿಇಒ ಡಾ| ಬಿ.ಆರ್‌. ಶೆಟ್ಟಿ, ನಂದಿನಿ ಕೆ.ಆರ್‌, ಮಾಜಿ ಸಚಿವ ಅಮರನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಜಯಶ್ರೀ ಅಮರನಾಥ ಶೆಟ್ಟಿ, ಶ್ರೀಪತಿ ಭಟ್‌, ಆಳ್ವಾಸ್‌ ಮ್ಯಾನೇಜಿಂಗ್‌ ಟ್ರಸ್ಟಿ ವಿವೇಕ್‌ ಆಳ್ವ, ಡಾ| ವಿನಯ್‌ ಆಳ್ವ ಮೊದಲಾದವರಿದ್ದರು. ಪರೇಡ್‌ ಕಮಾಂಡರ್‌ ಚರಿತ್ರಾ ಭಂಡಾರಿ ನೇತೃತ್ವದಲ್ಲಿ ಎನ್‌ಸಿಸಿ ಘಟಕಗಳಿಂದ ಅತಿಥಿಗಳನ್ನು ಸ್ವಾಗತಿಸಿ ಸಶಸ್ತ್ರ ಗೌರವ ರಕ್ಷೆ ನೀಡಲಾಯಿತು. ದೀಪಾ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.

ಹೊಯ್ದಾಡಿದ ತ್ರಿವರ್ಣ
– 12 ಎಕ್ರೆ ವಿಸ್ತಾರದ ಅಂಗಣ, ವೇದಿಕೆ, ಗ್ಯಾಲರಿಯ ಹಿಂಭಾಗ ಹಾಗೂ ಸಭೆಯ ನಡುವೆ ತ್ರಿವರ್ಣ ರೂಪ (ಇಂಗ್ಲಿಷ್‌ನಲ್ಲಿ ಆಳ್ವಾಸ್‌) ಅತ್ಯಂತ ಸುಂದರವಾಗಿ ಮೈದಳೆದಂತಿತ್ತು.

– ರಾಷ್ಟ್ರಗೀತೆಯುದ್ದಕ್ಕೂ ಎಲ್‌ಕೆಜಿ ಪುಟಾಣಿಗಳಿಂದ ತೊಡಗಿ ಹಿರಿಯರವರೆಗೆ ಸುಮಾರು 40,000 ಮಂದಿ ಧ್ವಜಕ್ಕೆ ಸೆಲ್ಯೂಟ್‌ ಸ್ಥಿತಿಯಲ್ಲಿ ಗೌರವ ಸಲ್ಲಿಸಿದರು.

– ಕೋಠಿಕಂಠೊನ್ಸೆ ಹಾಡಿಗೆ 40,000 ಮಂದಿ ತಮ್ಮ ಕೈಯಲ್ಲಿದ್ದ ತ್ರಿವರ್ಣ ಬಾವುಟಗಳನ್ನು ಬೀಸಿದಂತೆಲ್ಲ ತ್ರಿವರ್ಣ ಸಮುದ್ರದಲೆಗಳೇ ಅಂಗಣದಲ್ಲಿ ಹೊಯ್ದಾಡಿದಂತಾಯಿತು. ಗ್ಯಾಲರಿಯ ಹಿಂಭಾಗದಲ್ಲಿ ಭಾರೀ ಗಾತ್ರದ ತ್ರಿವರ್ಣ ರಂಜಿತ ಛತ್ರಿಗಳನ್ನು ತಿರುಗಿಸಿದಾಗ, ಕೊನೆಗೆ ತ್ರಿವರ್ಣ ಬೆಲೂನುಗಳ ಗೊಂಚಲು ಆಕಾಶದತ್ತ ಚಿಮ್ಮಿದಾಗ ನಯನ ಮನೋಹರ ವಾತಾವರಣ ಸೃಷ್ಟಿಯಾಯಿತು. ಆಳ್ವಾಸ್‌ ಬಾಲಕ ಬಾಲಕಿಯರಿಂದ ಮಲ್ಲಕಂಬದ ರೋಚಕ ಪ್ರದರ್ಶನ ನಡೆಯಿತು.

– ಹೊನ್ನಾವರದ ಮದರ್‌ ಥೆರೆಸಾ ಬ್ರಾಸ್‌ಬ್ಯಾಂಡ್‌, ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನ ಯುವಕರು ಮತ್ತು ಯುವತಿಯರ ಡೊಳ್ಳು, ಕೊಂಚಾಡಿಯ ಶ್ರಿಂಗಾರಿ ಮೇಳ, ಕುಂದಾಪುರದ ಕೊರಗರ ಡೋಲು ಕಾರ್ಯಕ್ರಮದ ಆಕರ್ಷಣೆಗಳಾಗಿದ್ದವು.

– ಇಡೀ ಕಾರ್ಯಕ್ರಮ 25 ನಿಮಿಷಗಳಲ್ಲಿ ಮುಕ್ತಾಯವಾದದ್ದು ಮತ್ತೂಂದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next