Advertisement

ಕೃಷಿ ಲಾಭದಾಯಕವಾಗಿಸಲು ವಿಶೇಷ ಒತ್ತು

09:49 PM Feb 21, 2020 | Team Udayavani |

ಮೈಸೂರು: ಕೃಷಿ ಹೆಮ್ಮೆಯ, ನೆಮ್ಮದಿಯ ಕೆಲಸ ಎನ್ನುವಂತಾಗಬೇಕಾದರೆ ಸರ್ಕಾರದ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಕೃಷಿಯನ್ನು ಲಾಭದಾಯಕ ಕಸುಬಾಗಿಸಲು ತಮ್ಮ ಸರ್ಕಾರ ವಿಶೇಷ ಪ್ರಯತ್ನ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ರೈತನ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಸಿಕ್ಕರೆ ಕೃಷಿ ಲಾಭದಾಯಕವಾಗಲಿದೆ. ಕೃಷಿ ಕಾರ್ಮಿಕರು, ವ್ಯಾಪಾರಿಗಳು, ಕೃಷಿ ಉದ್ಯಮಿಗಳಲ್ಲಿ ಅಮೂಲಾಗ್ರ ಬದಲಾವಣೆ ತರಬೇಕಾಗಿದೆ. ರಾಜ್ಯದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಯನ್ನು ನಾವು ಕಂಡಿದ್ದೇವೆ. ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.

ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯು ಫ‌ಲವತ್ತತೆ ಕಳೆದುಕೊಳ್ಳುತ್ತಿದ್ದು, ಕೀಟನಾಶಕ ಸಿಂಪಡಣೆಯಿಂದ ಆಹಾರ ಧಾನ್ಯ ವಿಷವಾಗುತ್ತಿದೆ. ಲಾಭದ ಕಾರಣಕ್ಕಾಗಿ ಹಣ್ಣು, ತರಕಾರಿಗಳಿಗೆ ಅನಗತ್ಯ ಔಷಧಿ ಸಿಂಪಡಣೆ ಪದ್ಧತಿ ನಿಲ್ಲಬೇಕು ಎಂದು ತಿಳಿಸಿದರು.

ಮರಳಿ ಹಳ್ಳಿಯೆಡೆಗೆ: ರಾಜ್ಯದ ರೈತರ ಕೃಷಿಗೆ ಪೂರಕವಾಗುವಂತೆ ಜಲಾಶಯದಿಂದ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಬೇಕು. ಇತ್ತೀಚಿನ ಯುವಕರು ವೃದ್ಧರನ್ನು ಹಳ್ಳಿಯಲ್ಲಿ ಬಿಟ್ಟು ಕೃಷಿ ಕಾಯಕ ತೊರೆದು ಪಟ್ಟಣದ ಕಡೆ ಮುಖಮಾಡಿದ್ದಾರೆ. ಅವರು ಮರಳಿ ಹಳ್ಳಿಯೆಡೆಗೆ ಬಂದು ಕೃಷಿಯಲ್ಲಿ ತೊಡಗಿಕೊಳ್ಳುವಂತಾಗಬೇಕು ಎಂದರು.

ಮಿಶ್ರಬೆಳೆ: ಮಿಶ್ರಬೆಳೆ ಪದ್ಧತಿಯು ಹೆಚ್ಚು ಲಾಭದಾಯಕವಿದ್ದು, ಇದರಿಂದ ಕಡಿಮೆ ನೀರು ಬಳಕೆ ಮಾಡಿ, ಹೆಚ್ಚು ಬೆಳೆ ಬೆಳೆಯಬಹುದು. ಇದಕ್ಕೆ ಪೂರಕವಾಗಿ ಸರ್ಕಾರದ ಸಹಕಾರ ಇದೆ ಎಂದು ಹೇಳಿದರು. ಆಯವ್ಯಯದಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡಲಾಗುವುದು. ಕಳಸಾ-ಬಂಡೂರಿ ಜ್ವಲಂತ ಸಮಸ್ಯೆಗೆ ನಮ್ಮ ವಕೀಲರು ಸಮರ್ಪಕ ವಾದ ಮಂಡಿಸಿ ನ್ಯಾಯ ಕೊಡಿಸಿದ್ದಾರೆ. ಈ ಯೋಜನೆಗಳಿಗೆ ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದರು.

Advertisement

ಕೇಂದ್ರ ಸರ್ಕಾರದ ಈ ಸಾಲಿನ ಬಜೆಟ್‌ನಲ್ಲಿ ಕೃಷಿಗೆ ಶೇ.9.5 ರಷ್ಟು ಹಣ ಮೀಸಲಿಟ್ಟು, 2.83 ಲಕ್ಷ ಕೋಟಿ ಅನುದಾನವನ್ನು ಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬಗೆಗಿನ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಹಿಂದೆ ಕೃಷಿಗೆ ಶೇ.4.5 ರಷ್ಟು ಮಾತ್ರ ಹಣ ನೀಡಲಾಗಿತ್ತು ಎಂದು ವಿವರಿಸಿದರು.

ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು, ಆಯವ್ಯಯ ಮಂಡನೆ ವೇಳೆ ಸುಮಾರು 25-30 ಕೃಷಿ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರ ಈ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಲಿದೆ ಎಂದು ವಿವರಿಸಿದ್ದಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ನಾಡಿನ ರೈತರು ಕೃಷಿಯಲ್ಲಿ ಸುಧಾರಣೆ ಕಂಡು ನೆಮ್ಮದಿಯಿಂದ ಬದುಕಬೇಕು. ಯಾವುದೇ ಕಾರಣಕ್ಕೂ ಧೃತಿಗೆಡದೆ ಆತ್ಮಸ್ಥೈರ್ಯದಿಂದ ಬದುಕಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರು ಹಾಗೂ ಬಡವರಿಗೆ ನೀಡಿರುವ ಕೊಡುಗೆ ಅಪಾರ. ಭೀಕರ ಮಳೆ ಹಾಗೂ ಅದರಿಂದಾದ ಪ್ರವಾಹ ಸಂದರ್ಭದಲ್ಲಿ ದೇಶದ ಯಾವುದೇ ರಾಜ್ಯಗಳು ನೀಡಿರದ ಅನುದಾನವನ್ನು ನೀಡಿ, ಸಂತ್ರಸ್ತರ ನೆಮ್ಮದಿ ಜೀವನ್ಕಕಾಗಿ ಶ್ರಮಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಚಿವರಾದ ಬಿ.ಸಿ.ಪಾಟೀಲ್‌, ಕೆ.ಸಿ.ನಾರಾಯಣಗೌಡ, ಶಾಸಕರಾದ ಎಲ್‌.ನಾಗೇಂದ್ರ, ನಿರಂಜನ್‌ ಕುಮಾರ್‌ ,ಉದ್ಯಮಿ ವಿಜಯ ಸಂಕೇಶ್ವರ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಬಜೆಟ್‌ನಲ್ಲಿ ಕೃಷಿ, ನೀರಾವರಿಗೆ ಆದ್ಯತೆ: ಮಾರ್ಚ್‌ 5ರಂದು ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಕೃಷಿ ಮತ್ತು ನೀರಾವರಿ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.5ರಂದು ಆಯವ್ಯಯ ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಮಾ.3ರೊಳಗೆ ಬಜೆಟ್‌ಗೆ ಅಂತಿಮ ರೂಪ ಸಿಗಲಿದ್ದು, ರೈತಪರವಾದ ಬಜೆಟ್‌ ಮಂಡಿಸಲಾಗುವುದು ಎಂದರು.

ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಳಸಾ-ಬಂಡೂರಿ ನಾಲಾ ಯೋಜನೆಗಳಿಗೆ ಇದ್ದ ಅಡೆತಡೆ ನಿವಾರಣೆ ಆಗಿರುವುದು ಸಂತೋಷದ ಸಂಗತಿ. ಅದಕ್ಕೆ ಹಣ ತೆಗೆದಿಟ್ಟು, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪ್ರಾರಂಭ ಮಾಡುವುದು ನನ್ನ ಮೊದಲ ಆದ್ಯತೆ. ಆದ್ದರಿಂದ ಈ ಯೋಜನೆಗಳಿಗೆ ಕೂಡಲೇ ಚಾಲನೆ ನೀಡಲಾಗುವುದು ಎಂದು ಹೇಳಿದರು.

ನೆರೆ ಹಾಗೂ ಬರ ಸಂತ್ರಸ್ತರಿಗೆ ಈಗಾಗಲೇ ಶಕ್ತಿ ಮೀರಿ ಪರಿಹಾರ ಕ್ರಮ ಕೈಗೊಂಡಿದ್ದೇವೆ. ಎಲ್ಲಾದರೂ ಲೋಪ ಕಂಡುಬಂದಲ್ಲಿ ಸರಿಪಡಿಸಲಾಗುವುದು ಎಂದರು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವ ಅನುದಾನದಲ್ಲಿ ಎಷ್ಟು ಖೋತಾ ಆಗಿದೆ ಎಂಬುದನ್ನು ಲೆಕ್ಕ ಹಾಕುತ್ತಿದ್ದೇವೆ. ಅದನ್ನೆಲ್ಲ ಸರಿದೂಗಿಸಿಕೊಂಡು ಬಜೆಟ್‌ ಸಿದ್ಧಪಡಿಸುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next