Advertisement

6 ದಶಕಗಳ ಸಂಗ್ರಹ…ಪತ್ರಿಕೆಗಳ ಇತಿಹಾಸ ಹೇಳುತ್ತದೆ “ಆಳ್ವಾಸ್ ನ್ಯೂಸಿಯಂ”

02:46 PM Apr 17, 2021 | ಶ್ರೀರಾಜ್ ವಕ್ವಾಡಿ |

ಮೂಡುಬಿದಿರೆ : ಜಗತ್ತಿನ ಅತಿ ದೊಡ್ಡ ನ್ಯೂಸಿಯಂ ವಾಷಿಂಗ್ಟನ್ ನಲ್ಲಿ ಮಾಧ್ಯಮ ಸ್ವಾತಂತ್ರ್ಯದ ಸಲುವಾಗಿ ನಿರ್ಮಾಣವಾದದ್ದಾದರೇ, ಆಳ್ವಾಸ್ ನ ನ್ಯೂಸಿಯಂ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರನ್ನು ಕೇಂದ್ರೀಕರಿಸಿ ನಿರ್ಮಾಣವಾಗುತ್ತಿರುವ ಪತ್ರಿಕಾ ಸಂಗ್ರಹಾಲಯವಾಗಿದೆ.

Advertisement

ಭಾಷಾಂತರಕಾರ, ಹವ್ಯಾಸಿ ಪತ್ರಕರ್ತ ಶ್ರೀಕರ ಎಲ್‌. ಭಂಡಾರಕರ್‌ ಅವರ ಸಂಯೋಜಕತ್ವದಲ್ಲಿ, ಸಾಂಸ್ಕೃತಿಕ ರಾಯಭಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಮ್. ಮೋಹನ್ ಆಳ್ವ ಅವರ ನೇತೃತ್ವದ ಪರಿಕಲ್ಪನೆಯಲ್ಲಿ ವ್ಯವಸ್ಥಿತವಾಗಿ ನಿರ್ಮಿಸುವ ಉದ್ದೇಶ ಹೊಂದಿದ ನ್ಯೂಸಿಯಂ ಇದಾಗಿದೆ.

ಓದಿ : ಕ್ಷೀರಪಥದ ಅಮೋಘ ಚಿತ್ರ ಬಿಡುಗಡೆಗೊಳಿಸಿದೆ ನಾಸಾ..!

ಮಾಧ್ಯಮ ಇಂದು ಅನೇಕ ಆಯಾಮಗಳನ್ನು ಕಂಡುಕೊಂಡು ಬೆಳೆದಿದೆ. ದಿನನಿತ್ಯ ಪತ್ರಿಕೋದ್ಯಮದ ವೇಗ ಹಾಗೂ ಅದರ ಪದ್ಧತಿ ಬದಲಾಗುತ್ತಿವೆ. ಸಾಮಾಜಿಕ ಮಾಧ್ಯಮಗಳು ಹಾಗೂ ನವ ಮಾಧ್ಯಮಗಳ ಭರಾಟೆಯಲ್ಲಿ ಅಧ್ಯಯನ ಶೀಲ ಪತ್ರಿಕೋದ್ಯಮ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ, ಸುಮಾರು 50 ರಿಂದ 60 ವರ್ಷಗಳ ಹಿಂದಿನಿಂದ ಸಂಗ್ರಹಿಸಿಕೊಂಡು ಬಂದ ಕನ್ನಡ ಹಾಗೂ ಇಂಗ್ಲಿಷ್ ನ ಬಹುತೇಕ ಎಲ್ಲಾ ಪತ್ರಿಕೆಗಳ ಎಲ್ಲಾ ಪ್ರತಿಗಳು ಈ ನ್ಯೂಸಿಯಂ ನಲ್ಲಿ ಇವೆ.

ಸದ್ಯಕ್ಕೆ ಈ ನ್ಯೂಸಿಯಂ ಆರಂಭದ ಹಂತದಲ್ಲಿದ್ದು, ಇದು ವ್ಯವಸ್ಥಿತವಾಗಿ ಪೂರ್ಣಗೊಂಡಲ್ಲಿ ವಿಶ್ವದ ಅತ್ಯಂತ ದೊಡ್ಡ ಪತ್ರಿಕೋದ್ಯಮ ಅಧ್ಯಯನ ಕೇಂದ್ರದ ಭಾಗವಾಗಿರುವ ಮೊದಲ ಪತ್ರಿಕಾ ಸಂಗ್ರಹಾಲಯ ಇದಾಗಲಿದೆ. ಹಾಗೂ ದೇಶದ ಮೊದಲ ಅತ್ಯಂತ ದೊಡ್ಡ ಪತ್ರಿಕಾ ಸಂಗ್ರಹಾಲಯ ಇದಾಗಲಿದ್ದು, ಸಂಶೋಧನೆ ಮತ್ತು ಅಧ್ಯಯನ  ಮೂಲವಾಗಲಿಕ್ಕಿದೆ.

Advertisement

ಅಧ್ಯಯನದ ಕೇಂದ್ರವಾಗಲಿದೆ ಆಳ್ವಾಸ್ ನ್ಯೂಸಿಯಂ 

ಸುಮಾರು 50 ರಿಂದ 60 ವರ್ಷಗಳ ಹಿಂದಿನ ಕನ್ನಡ ಹಾಗೂ ಇಂಗ್ಲೀಷ್ ನ ಎಲ್ಲಾ ಪ್ರಮುಖ ಪತ್ರಿಕೆಗಳು ಹಾಗೂ ವಿಶೇಷ ಸಂಚಿಕೆಗಳು, ನಿಯತಕಾಲಿಕೆಗಳು ಎಲ್ಲವೂ ಈ ನ್ಯೂಸಿಯಂ ನಲ್ಲಿ ಇರುವ ಕಾರಣದಿಂದ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ಪಾಲಿಗೆ ಇದು ಅತ್ಯಂತ ದೊಡ್ಡ ಅಧ್ಯಯನ ಕೇಂದ್ರವಾಗಲಿದೆ ಎನ್ನುದರಲ್ಲಿ ಸಂಶಯವಿಲ್ಲ. ಪತ್ರಿಕೋದ್ಯಮ, ರಾಜಕೀಯ ಹಾಗೂ ಎಲ್ಲಾ ಸಾಮಾನ್ಯ ವಿಚಾರಗಳ ಇತಿಹಾಸಗಳನ್ನು ಹೇಳುವ ಮಹಾ ಪತ್ರಿಕಾ ಸಂಗ್ರಹಾಲಯವಿದು. ಸುಮಾರು 6 ದಶಕಗಳ ಪ್ರಮುಖ ಘಟನೆಗಳ ಸಾಕ್ಷಿಯಾಗಿ ಇರುವ ಪತ್ರಿಕೆಗಳು, ನಿಯತಕಾಲಿಕೆಗಳು ಅಧ್ಯಯನ ಹಾಗೂ ಸಂಶೋಧನೆ ಮಾಡುವವರಿಗೆ ಸೂಕ್ತವಾದ ವಸ್ತುವಾಗಿದೆ. ಇನ್ನು, ಕೆಲವು ಪತ್ರಿಕೆಗಳ ಮೊದಲ ಪ್ರತಿಗಳು ಹಾಗೂ ವಿಶೇಷ ಸಂಚಿಕೆಗಳು ಇಲ್ಲಿವೆ. 1966 ಜನವರಿ 11 ರಂದು ಲಾಲ್ ಬಹದ್ದೂರ್ ಶಾಸ್ತ್ರಿ ಪಾಕಿಸ್ತಾನದ ಅಯೂಬ್ ಖಾನ್ ಅವರನ್ನು ಭೇಟಿ ಮಾಡಿದಾಗ ಹಾಗೂ ಅದೇ ದಿನ ಶಾಸ್ತ್ರಿ ಅವರು ತೀರಿಕೊಂಡಾಗ ಪ್ರಕಟಿಸಿದ, ಅಂದರೇ, ‘ದ ಇಂಡಿಯನ್ ಎಕ್ಸ್ ಪ್ರೆಸ್’ ಒಂದೇ ದಿನ ಎರಡು ಸಂಚಿಕೆಗಳನ್ನು ಪ್ರಕಟಿಸಿದ ಪತ್ರಿಕೆಗಳ ಪ್ರತಿಗಳು ಹಾಗೂ ಮಂಗಳನ ಅಂಗಳದಲ್ಲಿ ಮೊದಲು ತೆಗೆದ ಫೋಟೋ ಪ್ರಕಟಗೊಂಡ ಪತ್ರಿಕೆಯ ಪ್ರತಿಗಳಾದಿಯಾಗಿ  ಪತ್ರಿಕೋದ್ಯಮದ 6 ದಶಕಗಳ ಇತಿಹಾಸವನ್ನು ಸಾರುತ್ತದೆ ಈ ನ್ಯೂಸಿಯಂ. ಪತ್ರಿಕೆಗಳೆಲ್ಲಾ ಇನ್ನಷ್ಟೇ ಡಿಜಿಟಲೀಕರಣವಾಗಬೇಕಿದ್ದು, ಅದರ ಕಾರ್ಯ ಪ್ರಗತಿಯಲ್ಲಿದೆ.

“ಆಳ್ವಾಸ್ ನ್ಯೂಸಿಯಂ” ಕನಸು ಮತ್ತು ಅದರ ಹಿಂದಿನ ಕಥೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್ ಮೋಹನ್ ಆಳ್ವರ ನೇತೃತ್ವದಲ್ಲಿ, ಹಿರಿಯ ಪತ್ರಕರ್ತ ಶ್ರೀಕರ ಎಲ್ ಭಂಡಾರ್ಕರ್ ಅವರ ಸಂಯೋಜಕತ್ವದಲ್ಲಿ ನಿರ್ಮಾಣವಾಗುತ್ತಿರುವ ಈ ನ್ಯೂಸಿಯಂ ನಲ್ಲಿ ಸಾವಿರಾರು ಪತ್ರಿಕೆಗಳು ಹಾಗೂ ಪುಸ್ತಕಗಳು, ನಿಯಕಾಲಿಕೆಗಳ ಸಂಗ್ರಹವಿದೆ.

ಶ್ರೀಕರ ಎಲ್ ಭಂಡಾರ್ಕರ್ ಎನ್ನುವ ಪತ್ರಿಕೆಗಳ ಸ್ನೇಹಿ 

ಬಿ.ಲಕ್ಷ್ಮಣ ರಾವ್ ಹಾಗೂ  ಸುನಂದಾ ದಂಪತಿಗಳಿಗೆ 1939 ಮೇ 12ರಂದು ಶಿವಮೊಗ್ಗದ ಹೊಸನಗರದಲ್ಲಿ ಜನಿಸಿದ ಶ್ರೀಕರ ಎಲ್ ಭಂಡಾರ್ಕರ್.. ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ಹಾಗೂ ಮೈಸೂರು ವಿವಿಯಿಂದ ಎಂ.ಎ (ರಾಜ್ಯಶಾಸ್ತ್ರ) ಪದವಿ ಪಡೆದವರು. ರಾಷ್ಟ್ರಭಾಷೆ ವಿಶಾರದ, ಡಿಪ್ಲೊಮಾ ಇನ್ ಫ್ರೆಂಚ್‌, ಡಿಪ್ಲೊಮೊ ಇನ್‌ ಕಂಪ್ಯೂಟರ್‌ ಅಪ್ಲಿಕೇಷನ್ಸ್‌ ಪದವೀಧರರು ಕೂಡ ಹೌದು.

ಓದಿ : ಪ್ರತಿಭಟನೆ, ಹಿಂಸಾಚಾರ:ಹಾಂಗ್ ಕಾಂಗ್ ಪ್ರಜಾಪ್ರಭುತ್ವ ಪರ ಪ್ರತಿಭಟನೆ, 9 ಮಂದಿಗೆ ಜೈಲುಶಿಕ್ಷೆ

ಪಿಯುಸಿಯಲ್ಲಿದ್ದಾಗಲೇ ಹವ್ಯಾಸಿ ಪತ್ರಕರ್ತರಾಗಿದ್ದ ಭಂಡಾರ್ಕರ್. ಅಮೆರಿಕಾದ ದಿ ಸ್ಯಾನ್ ಫ್ರಾನ್ಸಿಸ್ಕೊ ಕ್ರಾನಿಕಲ್ ದೈನಿಕದಲ್ಲಿ ಇವರ ಅನೇಕ ಲೇಖನಗಳು ಪ್ರಕಟವಾಗಿದ್ದವು. ಪದವಿ ಓದುವಾಗಲೇ ಪುಣೆಯ ಸಕಾಲ್ ದೈನಿಕದ ಬಾತ್ಮೀದಾರರಾಗಿದ್ದರು. ನಂತರ, ಮೈಸೂರು  ಪತ್ರಿಕೆ ದೈನಿಕದ ವರದಿಗಾರರಾಗಿದ್ದರು. ಬೆಂಗಳೂರಿನ ಸಂಯುಕ್ತ ಕರ್ನಾಟಕದ (1962) ಸಂಪಾದಕೀಯ ವಿಭಾಗದಲ್ಲಿ ಸೇವೆ, ನಂತರ, ಮಣಿಪಾಲದ ದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಲೋಕ ಸಂಪರ್ಕಾಧಿಕಾರಿಯಾಗಿ , ದ ಅಕಾಡೆಮಿ ಬುಲೆಟಿನ್ ಮಾಸಪತ್ರಿಕೆ ಮತ್ತು ಮಣಿಪಾಲ್ ರೆಕಾರ್ಡ್ ಮಾಸ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದವರು. ಬೆಂಗಳೂರಿನಲ್ಲಿ ಇದ್ದಾಗ ಕನ್ನಡ ಪ್ರಮುಖ ಪತ್ರಿಕೆಗಳಲ್ಲಿ ವರದಿಗಾರರಾಗಿಯೂ ದುಡಿದವರು.

ಮೈಸೂರಿನ ಮಾನಸ ಗಂಗೋತ್ರಿಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮೊದಲ ಬ್ಯಾಚ್ ನ  (1971-73) ಉಪನ್ಯಾಸಕರಾಗಿದ್ದರು. ಮಹಾರಾಜ ಕಾಲೇಜು ಹಾಗೂ ಮಂಗಳೂರು ಮತ್ತು ಭಾರತೀಯ ವಿಧ್ಯಾಭವನದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.  ಬೆಂಗಳೂರಿನಲ್ಲಿ(1975 ರಿಂದ)  ಸ್ವ ಉದ್ಯೋಗವಾಗಿ ಭಾಷಾಂತರ ವಲಯವನ್ನು ಸ್ವೀಕರಿಸಿದರು. ಕಸ್ತೂರಿ ಶ್ರೀನಿವಾಸನ್(ಇಂಗ್ಲಿಷ್ ಹಾಗೂ ಕನ್ನಡ)  ದಿ. ಹಿಂದೂ ಸಂಪಾದಕರ ಜೀವನ ಕಥನ., ಪತ್ರಿಕಾ ಪ್ರಪಂಚ (ಬರಹಗಳ ಸಂಕಲನ), .ಆಧುನಿಕ ಭಾರತದಲ್ಲಿ ಪತ್ರಿಕೋದ್ಯಮ(ಭಾಷಾಂತರ), ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಕಟಣೆಯಲ್ಲಿ ಬೆಂಗಳೂರು ಪಟ್ಟಣ ಮತ್ತು ಗ್ರಾಮಾಂತರ ಜಿಲ್ಲೆಗಳ ಪತ್ರಿಕಾ ಇತಿಹಾಸ ಎಂಬ ಕೃತಿಗಳನ್ನು ಕೂಡ ರಚಿಸಿದ್ದಾರೆ.

ತಮ್ಮ ಇಷ್ಟು ವರ್ಷಗಳ ಜೀವನದಲ್ಲಿ ಸಂಗ್ರಹಿಸಿದ ಕನ್ನಡ ಹಾಗೂ ಇಂಗ್ಲಿಷ್ ನ ಬಹುತೇಕ ಎಲ್ಲಾ ಪತ್ರಿಕೆಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ಸಮರ್ಪಿಸಿ, ಅಲ್ಲಿಯೇ ಈಗ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಶ್ರೀಕರ ಭಂಡಾರ್ಕರ್.

ನ್ಯೂಸಿಯಂ ಗೆ ಇನ್ನೂ ಕೆಲವರ ಕೊಡುಗೆ ಇದೆ 

ದಶಕಗಳ ಇತಿಹಾಸದ ಸಾಕ್ಷಿಯಾಗಿ ನಿರ್ಮಾಣಗೊಳ್ಳುತ್ತಿರುವ ಈ ಆಳ್ವಾಸ್ ನ ಪತ್ರಿಕಾ ಸಂಗ್ರಹಾಲಯಕ್ಕೆ ಶ್ರೀಕರ ಎಲ್ ಭಂಡಾರ್ಕರ್ ಅವರಲ್ಲದೇ, ಪ್ರಭಾಕರ ಕಿಣಿ ಹಾಗೂ ಗಣಪತಿ ಹೆಗಡೆ ಸಾಗರ ಇವರು ಅನೇಕ ಪತ್ರಿಕೆಗಳನ್ನು ಇಲ್ಲಿಗೆ ಸಮರ್ಪಿಸಿದ್ದಾರೆ.

ಓದಿ :  ತಮಿಳು ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು: ಅಭಿಮಾನಿಗಳಲ್ಲಿ ಆತಂಕ

ಅತೀ ಶೀಘ್ರದಲ್ಲಿ ವ್ಯವಸ್ಥಿತವಾಗಿ ನಿರ್ಮಾಣಗೊಳ್ಳಲಿದೆ ಆಳ್ವಾಸ್ ನ್ಯೂಸಿಯಂ

“ಇಂತಹದ್ದೊಂದು ಪತ್ರಿಕಾ ಸಂಗ್ರಹಾಲಯ ನಮಗೆ ಅತ್ಯವಿದೆ ಎನ್ನುವ ದೃಷ್ಟಿಯಿಂದ ನಮ್ಮ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಉಪಯೋಗವಾಗಲಿ ಎಂಬ ಪರಿಕಲ್ಪನೆಯೇ ಆಳ್ವಾಸ್ ನ್ಯೂಸಿಯಂ. ಇದರ ಉಪಯೋಗ ಎಲ್ಲರಿಗೂ ಆಗಬೇಕು. ಅತಿ ಶೀಘ್ರದಲ್ಲಿ ಅದನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಿ, ಪತ್ರಿಕೆಗಳ ದಾಖಲೀಕರಣ ಮಾಡುವಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸಲಿದೆ.”

ಡಾ| ಎಮ್. ಮೋಹನ್ ಆಳ್ವ

ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ.

 

“ಆಳ್ವಾಸ್ ನ್ಯೂಸಿಯಂ ನಲ್ಲಿ ಸುಮಾರು 60 ವರ್ಷಗಳ ಇಡೀ ಜಗತ್ತಿನ ಇತಿಹಾಸವಿದೆ. ಅಧ್ಯಯನ ಹಾಗೂ ಸಂಶೋಧನೆ ಮಾಡುವವರಿಗೆ ಇದು ಸಹಕಾರಿಯಾಗಲಿದೆ.”

ಡಾ| ಕುರಿಯನ್

ಪ್ರಾಂಶುಪಾಲರು, ಆಳ್ವಾಸ್ ಪದವಿ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ವಿದ್ಯಾಗಿರಿ, ಮುಡುಬಿದಿರೆ.

ಓದಿ : ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಟಿಟಿಡಿ ವಿವಾದದ ಬಗ್ಗೆ ಸಂಶೋಧನೆಯಾಗಲಿ: ಸಚಿವ ಲಿಂಬಾವಳಿ

“ಸ್ನಾತಕೋತ್ತರ ಪತ್ರಿಕೋದ್ಯಮದ ಅಂಗವಾಗಿ ಆಳ್ವಾಸ್ ನ್ಯೂಸಿಯಂ ನಿರ್ಮಾಣವಾಗುತ್ತಿದೆ. ವಿದ್ಯಾರ್ಥಿಗಳ ಅಧ್ಯಯನಶೀಲತೆಗೆ ಇದು ಪೂರಕವಾಗಿರಲಿದೆ.”

ಪ್ರಸಾದ್ ಶೆಟ್ಟಿ

ಮುಖ್ಯಸ್ಥರು, ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ

ಆಳ್ವಾಸ್ ಕಾಲೇಜು.

 

  • ಶ್ರೀರಾಜ್ ವಕ್ವಾಡಿ

ಓದಿ : ಗಿನ್ನೆಸ್ ದಾಖಲೆ ಬರೆದ ಮೊಲ ಕಳ್ಳತನ : ಹುಡುಕಿ ಕೊಟ್ಟವರಿಗೆ ಸಿಗುತ್ತೆ 2 ಲಕ್ಷ ಬಹುಮಾನ!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next