Advertisement

ವಿಶ್ವಕಪ್‌ ತಂಡಕ್ಕೆ ಆಯ್ಕೆ ಅದೃಷ್ಟ; ಅರ್ಥ ಮಾಡ್ಕೊಳ್ಳೋದೇ ಕಷ್ಟ…!

12:53 PM Apr 20, 2019 | Hari Prasad |

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಜಾತ್ರೆಯಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ.ಪ್ರಸಾದ್‌ ಹೇಳಿದ ಒಂದು ಮಾತನ್ನು ನೆನಪಿಸಿಕೊಳ್ಳುತ್ತಲೇ ಮುಂದೆ ಹೆಜ್ಜೆ ಹಾಕಬೇಕಾಗಿದೆ, ಭಾರತದ ವಿಶ್ವಕಪ್‌ ತಂಡದ ಆಯ್ಕೆಯಲ್ಲಿ ಈ ಬಾರಿಯ ಐಪಿಎಲ್‌ ಪ್ರದರ್ಶನ ಪರಿಗಣಿಸಲ್ಪಡುವುದಿಲ್ಲ. ಆಯ್ಕೆ ಸಮಿತಿ ಅಧ್ಯಕ್ಷರ ಮಾತಿನ ಹೊರತಾಗಿಯೂ ಫಿಟ್‌ ಆದ ಹಾರ್ದಿಕ್‌ ಪಾಂಡ್ಯ ತಂಡದೊಳಗೆ ಬರುವುದು ಸೇರಿದಂತೆ ಹಲವು ತೀರ್ಮಾನಗಳಲ್ಲಿ ಐಪಿಎಲ್‌ ಆಟದ ಸೋಂಕಿದೆ!

Advertisement

15 ಜನರ ತಂಡದಲ್ಲಿ ಬ್ಯಾಟ್ಸ್‌ಮನ್‌ಗಳಾಗಿ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಮತ್ತು ಶಿಖರ್‌ ಧವನ್‌, ಆಲ್‌ರೌಂಡರ್‌ ಪಾತ್ರದಲ್ಲಿ ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ವಿಜಯ್‌ಶಂಕರ್‌, ರವೀಂದ್ರ ಜಡೇಜ. ವಿಕೆಟ್‌ ಕೀಪರ್‌ಗಳ ಲೆಕ್ಕದಲ್ಲಿ ಮಹೇಂದ್ರಸಿಂಗ್‌ ಧೋನಿ, ದಿನೇಶ್‌ ಕಾರ್ತಿಕ್‌ ಹಾಗೂ ಕೆ.ಎಲ್‌.ರಾಹುಲ್‌. ಉಳಿದಂತೆ ಕುಲ್‌ದೀಪ್‌ ಯಾದವ್‌, ಮೊಹಮದ್‌ ಶಮಿ, ಜಸ್ಪ್ರೀತ್‌ ಬುಮ್ರಾ, ಯಜುರ್ವೇಂದ್ರ ಚಹಲ್‌ ಮತ್ತು ಭುವನೇಶ್ವರ ಕುಮಾರ್‌ ಇದ್ದಾರೆ.

ನಾಲ್ಕನೇ ಕ್ರಮಾಂಕದ ಗೋಜಲು!
ಭಾರತದ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಅಂಬಟಿ ರಾಯುಡು ಅವರನ್ನು ಕಲ್ಪಿಸಿಕೊಂಡಿದ್ದವರಿಗೆ ಅವರ ನಿರ್ಗಮನ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳೆದ ಆರು ತಿಂಗಳಿನಿಂದ ರಾಯುಡುಗೆ ವಿಶ್ವಕಪ್‌ ತಂಡದ ಬ್ಯಾಟಿಂಗ್‌ನಲ್ಲಿ ನಂ.4ನೇ ಸ್ಥಾನ ಎಂದು ಕೊಹ್ಲಿ, ರೋಹಿತ್‌ ಹಾಗು ಕೋಚ್‌ ರವಿಶಾಸ್ತ್ರಿ ಪ್ರತಿಪಾದಿಸಿದ್ದರು. ಈಗ ಕೊಕ್‌! ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನ‌ಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ರಾಯುಡು ತಪ್ಪು ಹೆಜ್ಜೆ ಹಾಕಿರಲಿಲ್ಲ. 42.8 ಸರಾಸರಿಯಲ್ಲಿ ರನ್‌ ಸಂಪಾದಿಸಿದ್ದರು. ಕಾಂಗರೂ ಪಡೆ ಭಾರತಕ್ಕೆ ಬಂದಾಗಲೇ ಎಡವಟ್ಟಾಗಿದ್ದು, ರಾಯುಡು 13, 18, 2ಕ್ಕೆ ಔಟ್‌. ಕೊನೆಯೆರಡು ಪಂದ್ಯಗಳಿಂದಂತೂ ಆಡುವ 11ರಿಂದಲೇ ಹೊರಕ್ಕೆ. ಹೋಗಲಿ, ಐಪಿಎಲ್‌ ಸಹಾಯಕ್ಕೆ ಬರುತ್ತದೆಯೇ ಎಂದರೆ, 28, 5, 1, 0, 21ಅಜೇಯ, 21, 57 ಮತ್ತು 5 ರನ್‌ಗಳ ಇನಿಂಗ್ಸ್‌.

ಅಂಕಿಅಂಶಗಳನ್ನೇ ಆಧರಿಸಿ ಹೇಳುವುದಾದರೆ, ಅಂಬಟಿ ಆಡುವ 15ರಲ್ಲಿರಬೇಕಿತ್ತು. ಕಳೆದ ಸೆಪ್ಟೆಂಬರ್‌ನಿಂದ ಆರಂಭಿಸುವುದಾದರೆ ಅಂಬಟಿ ಭಾರತದ ಟಾಪ್‌ 4 ರನ್‌ ಸಾಧಕರಲ್ಲಿದ್ದಾರೆ. ಏಷ್ಯಾ ಕಪ್‌ನಿಂದ ಮೊನ್ನಿನ ಆಸ್ಟ್ರೇಲಿಯಾ ಸರಣಿಯವರೆಗೆ ನಡೆದ 24 ಪಂದ್ಯಗಳಲ್ಲಿ 21ರಲ್ಲಿ ರಾಯುಡು ಇದ್ದಾರೆ. ಅದರಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧ ಶತಕಗಳನ್ನು ಸಂಪಾದಿಸಿದ್ದಾರೆ. ನ್ಯೂಜಿಲೆಂಡ್‌ ಸರಣಿಯಲ್ಲಂತೂ ಐದು ಇನ್ನಿಂಗ್ಸ್‌ನಿಂದ 190 ರನ್‌. 63.33 ಸರಾಸರಿ. ನಾಲ್ಕನೇ ಕ್ರಮಾಂಕದ ವಿಚಾರ ಬಂದರೆ ಕಳೆದ 20 ಇನ್ನಿಂಗ್ಸ್‌ನಲ್ಲಿ ಅಂಬಟಿ 14 ಬಾರಿ ಈ ಸ್ಥಾನದಲ್ಲಿ ಆಡಿದ್ದಾರೆ ಮತ್ತು 42.18ರ ಸರಾಸರಿಯಲ್ಲಿ 464 ರನ್‌ ಸಂಪಾದಿಸಿದ್ದಾರೆ.

ಎಲ್ಲರಲ್ಲೂ ತಾಳ್ಮೆಯ ಕೊರತೆ!
ಆಯ್ಕೆ ಸಮಿತಿ ಅಧ್ಯಕ್ಷ ಪ್ರಸಾದ್‌ರ ಮಾತನ್ನೇ ನಂಬುವುದಾದರೆ, ರಾಯುಡು ಅವರ ಸರಾಸರಿ ಮಟ್ಟದ ಫೀಲ್ಡಿಂಗ್‌, ಅವರ ಫಿಟ್‌ನೆಸ್‌ನಲ್ಲಿನ ಅರೆಕೊರೆಗಳು ಅವರಿಗೆ ಮುಳುವಾಗಿರಬೇಕು. ಹಾಗಂತ ಈ ಸ್ಥಾನಕ್ಕೆ ವಿಜಯ್‌ ಶಂಕರ್‌ರನ್ನು ಬಳಸಿಕೊಳ್ಳಲು ಇತಿಹಾಸ ಸಮ್ಮತಿಸುವುದಿಲ್ಲ. ಈವರೆಗೆ ಶಂಕರ್‌ ಆಡಿರುವುದು ನಾಲ್ಕು ಏಕದಿನ ಇನ್ನಿಂಗ್ಸ್‌ ಮಾತ್ರ. ಪ್ರಥಮ ಇನ್ನಿಂಗ್ಸ್‌ನಲ್ಲಿ 6ನೇ ಕ್ರಮಾಂಕದಲ್ಲಿ ಬಂದು 45 ರನ್‌. ಮರು ಇನ್ನಿಂಗ್ಸ್‌ನಲ್ಲಿ ಐದನೇ ಕ್ರಮಾಂಕದಲ್ಲಿ 41 ಎಸೆತದ 45, ಮೂರನೇ ಸರದಿಯಲ್ಲಿ ಏಳನೇ ಕ್ರಮಾಂಕ, 30 ಎಸೆತದಲ್ಲಿ 32 ರನ್‌. ಮರು ಅವಕಾಶದಲ್ಲೂ ಇದೇ ಸ್ಥಾನ, 15 ಚೆಂಡಿಗೆ 26 ರನ್‌. ಈತ ನಾಲ್ಕನೇ ಕ್ರಮಾಂಕದ ಅನುಭವವನ್ನೇ ಹೊಂದಿಲ್ಲ. ನಿಜ, ಅವರ ಅದ್ಭುತ ಫೀಲ್ಡಿಂಗ್‌ ಬೋನಸ್‌. ಆದರೆ ನಂ. 4 ಸ್ಥಾನ?

Advertisement

ದಿನೇಶ್‌ ಕಾರ್ತಿಕ್‌, ಕೇದಾರ್‌ ಜಾದವ್‌ ಅಥವಾ ಕೆ.ಎಲ್‌.ರಾಹುಲ್‌ ಉತ್ತರ ಎಂದುಕೊಳ್ಳುವುದು ಕಷ್ಟ. ಇವರ್ಯಾರೂ ತಾಳ್ಮೆಗೆ ಒತ್ತು ಕೊಟ್ಟಿದ್ದು ನೋಡಿಲ್ಲ. ಎಂ.ಎಸ್‌.ಧೋನಿಯವರನ್ನು ಈ ಜಾಗದಲ್ಲಿ ಆಡಿಸುವ ಮಾತು ರೋಹಿತ್‌ ಶರ್ಮರಿಂದ ಬಂದಿದ್ದುಂಟು. ಅನಿಲ್‌ ಕುಂಬ್ಳೆಯವರಿಗೆ ಸಹಮತ ಇತ್ತು. ಆದರೆ ಅನುಭವಿಗಳೆಲ್ಲ ಸಾಲಾಗಿ ಆಡಿದರೆ ಮಧ್ಯಮ ಕ್ರಮಾಂಕ ಅನನುಭವದಿಂದ ನರಳದೇ?.

ಸ್ಥಾನ ಗಿಟ್ಟಿಸಿಕೊಟ್ಟ ಅದೃಷ್ಟ!
ದಿನೇಶ್‌ ಕಾರ್ತಿಕ್‌ ಹಾಗೂ ರವೀಂದ್ರ ಜಡೇಜಾ ಭಾರತದ ತಂಡದಲ್ಲಿ ಸ್ಥಾನ ಪಡೆದ ಅದೃಷ್ಟವಂತರು. ಕೀಪಿಂಗ್‌ನ ಗುಣಮಟ್ಟದ ಕಾರಣದಿಂದಾಗಿಯೇ ದಿನೇಶ್‌ ರಿಷಬ್‌ ಪಂತ್‌ ಅವರಿಗೆ ಢೀ ಕೊಟ್ಟಿರುವುದು ಖರೆ. ಆದರೆ ನಿಯಮಿತವಾಗಿ ತಂಡದಲ್ಲಿರದ, ಆತ್ಮವಿಶ್ವಾಸದ ಕೊರತೆಯಿಂದ ಬಳಲುವ ದಿನೇಶ್‌ ಕಾರ್ತಿಕ್‌ ಎಲ್ಲಿ ಸಲ್ಲುತ್ತಾರೆ ಎಂಬ ಪ್ರಶ್ನೆ ಕಾಡುತ್ತದೆ. ಸ್ವಾರಸ್ಯ ಎಂದರೆ ಕೀಪಿಂಗ್‌ ಕ್ವಾಲಿಟಿಯೇ ಆಯ್ಕೆಗೆ ಮಾನದಂಡವಾಗುವ ಟೆಸ್ಟ್‌ ಸ್ಥಾನ ದಿನೇಶ್‌ರಿಗಿಲ್ಲ, ಪಂತ್‌ಗಿದೆ!

ದಿನೇಶ್‌ ಫೀನಿಕ್ಸ್‌ನಂತೆ ತಂಡಕ್ಕೆ ಮರಳಿದ್ದಾರೆ ಎಂಬುದು ತುಸು ಅತಿರಂಜಿತ­ವಾಗುತ್ತದೆ. 2018ರ ನಿದಾಸ್‌ ಕಪ್‌ ಫೈನಲ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 8 ಎಸೆತಕ್ಕೆ 29 ರನ್‌ ಚಚ್ಚಿದ್ದು ಮತ್ತು ಕೊನೆಯ ನಿರ್ಣಾಯಕ ಚೆಂಡಿನಲ್ಲಿ ಸಿಕ್ಸ್‌ ಎತ್ತಿದ್ದು ಅವರನ್ನು ಅಚಾನಕ್‌ ಹೀರೋ ಮಾಡಿದ್ದು ಸುಳ್ಳಲ್ಲ. ಆದರೆ ನಿದಾಸ್‌ ಕಪ್‌ ಟಿ20 ಟೂರ್ನಮೆಂಟ್‌! ಸಿಕ್ಕ ಅವಕಾಶಗಳಲ್ಲಿ ಕಾರ್ತಿಕ್‌ 2018ರಲ್ಲಿ 41.75 ಸರಾಸರಿಯಲ್ಲಿ 167 ರನ್‌ ಗಳಿಸಿದ್ದೂ ಸತ್ಯ. ಆದರೆ ಅವರ 2019ರ ಏಕದಿನ ಪ್ರದರ್ಶನ ನೀರಸವಾಗಿದೆ. ಐದು ಇನ್ನಿಂಗ್ಸ್‌ನಲ್ಲಿ ಬಂದಿದ್ದು 75 ರನ್‌ ಅಷ್ಟೇ. ರಿಷಬ್‌ ಪಂತ್‌ರನ್ನು ತಿದ್ದಿ ತೀಡಿದ್ದರೆ ಭಾರತಕ್ಕೆ ದೂರಗಾಮಿ ಲಾಭಗಳಿರುತ್ತಿತ್ತು. ಪಂದ್ಯಗಳಿಗೆ ಫಿನಿಶ್‌ ಕೊಡುವ ತಾಕತ್ತು ನಂಬಿ ತಂಡಕ್ಕೆ ಆಯ್ಕೆ ಮಾಡುವುದು ಅಪಾಯಕಾರಿ. ಅಷ್ಟಕ್ಕೂ ದಿನೇಶ್‌ ಕಾರ್ತಿಕ್‌ಗೆ ಈಗ ಬರೋಬ್ಬರಿ 33 ವರ್ಷ!

ಜಡೇಜ ಆಲ್‌ರೌಂಡರ್‌?
ವಿಶ್ವಕಪ್‌ನ ಎರಡನೇ ಹಂತದಲ್ಲಿ ಇಂಗ್ಲೆಂಡ್‌ ಪಿಚ್‌ಗಳು ಒಣಗಿ, ನಿಧಾನಗೊಂಡಾಗ ಮಾತ್ರ ರವೀಂದ್ರ ಜಡೇಜಾ ಗಮನ ಸೆಳೆಯಬಲ್ಲರು ಎಂಬುದು ಒಂದು ವಿಶ್ಲೇಷಣೆ. ಚಾಹಲ್‌ ಮತ್ತು ಯಾದವ್‌ ಇರುವಲ್ಲಿ ಜಡೇಜಾಗೆ 11ರ ಅವಕಾಶವೇ ಕಷ್ಟ. ಕೇದಾರ್‌ ಕೂಡ ಇದ್ದಾರೆ. ಅಷ್ಟಕ್ಕೂ 2018ರಲ್ಲಿ ಜಡೇಜ 8 ಏಕದಿನ ಆಡಿದ್ದು ಹಾರ್ದಿಕ್‌ ಪಾಂಡ್ಯ ಆಡದಿದ್ದಾಗ. 19ರಲ್ಲಿ ಮತ್ತೆ 7 ಅವಕಾಶ ಜಡೇಜಾರಿಗೆ ಸಿಕ್ಕಿದೆ, ಅಷ್ಟೂ ಪಂದ್ಯದಲ್ಲಿ ಪಾಂಡ್ಯ ಆಡಲಾಗಿರಲಿಲ್ಲ!
ಇಂಗ್ಲೆಂಡ್‌ನ‌ಲ್ಲಿನ ಏಕದಿನಗಳಲ್ಲಿ ಜಡೇಜ ಬೌಲಿಂಗ್‌ ಸರಾಸರಿ 27. ಎಕಾನಮಿ 5.13. ಈತ 2013ರ ಚಾಂಪಿಯನ್ಸ್‌ ಟ್ರೋಫಿಯನ್ನು ಇಂಗ್ಲೆಂಡ್‌ನ‌ಲ್ಲಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ನಿಜ. 2017ರಲ್ಲಿ ಇದೇ ಜಡೇಜಾ ಪ್ರಶಸ್ತಿ ಉಳಿಸಿಕೊಳ್ಳಬೇಕಾಗಿದ್ದ ಸಂದರ್ಭದಲ್ಲಿ ಐದು ಒಡಿಐನಲ್ಲಿ ನಾಲ್ಕು ವಿಕೆಟ್‌ ಪಡೆದಿದ್ದರು!

ಆದರೆ 2018ರ ಏಷ್ಯಾಕಪ್‌ ನಲ್ಲಿನ ನಾಲ್ಕು ಪಂದ್ಯಗಳಲ್ಲಿ 7 ವಿಕೆಟ್‌ ಪಡೆದಿದ್ದು, ಬ್ಯಾಟ್‌ನಲ್ಲೂ ರನ್‌ ಸಿಡಿಸಿ ತಂಡದ ಗೆಲುವಲ್ಲಿ ಪಾತ್ರ ವಹಿಸಿದ್ದು ಅವರ ಪರ ಕೆಲಸ ಮಾಡಿದೆ. ಇವತ್ತಿಗೂ ಅವರ ಫೀಲ್ಡಿಂಗ್‌ ಬಗ್ಗೆ ಅಪಸ್ವರಗಳಿಲ್ಲ. ಭಾರತ ದೊಡ್ಡ ಪ್ರಮಾಣದ ಪ್ರತಿಭೆಗಳನ್ನು ಹೊಂದಿದೆ, ಐಪಿಎಲ್‌ ಪ್ರತಿಭಾನ್ವಿತರನ್ನು ತಯಾರಿಸಿ ರಾಷ್ಟ್ರೀಯ ತಂಡಕ್ಕೆ ಒದಗಿಸುತ್ತದೆ ಎಂಬ ಪ್ರತಿಪಾದನೆಗಳ ಕಾಲದಲ್ಲಿ ಪರ್ಯಾಯಗಳಿಲ್ಲದೆ ರವೀಂದ್ರ ಜಡೇಜಾರಲ್ಲಿ ವಿಶ್ವಾಸ ಇರಿಸಬೇಕಾಗುತ್ತದೆ ಎಂಬುದು ಕಟು ಸತ್ಯ. ಅತ್ತ ಅವರನ್ನು ಆಲ್‌ರೌಂಡರ್‌ ಎಂದು ಪರಿಗಣಿಸುವುದೇ ದೊಡ್ಡ ಜೋಕ್‌. ತಮ್ಮ ಬ್ಯಾಟಿಂಗ್‌ಗೆ ಅವರು ನ್ಯಾಯ ಒದಗಿಸಿಲ್ಲ. ಬಾಲಂಗೋಚಿಯೊಬ್ಬ ಆಕಸ್ಮಿಕವಾಗಿ ಕ್ಲಿಕ್‌ ಆಗುವ ಅವರ ಚರಿತ್ರೆ ತಂಡಕ್ಕೆ ಲಗೇಜ್‌ ಅಷ್ಟೇ.

— ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next