Advertisement

ಹೇಳಿ ಹೋಗು ಚಾರಣ : ವೀಕೆಂಡ್‌ ವಿತ್‌ ಟ್ರೆಕ್ಕಿಂಗ್‌

09:51 AM Nov 28, 2019 | Hari Prasad |

ವೀಕೆಂಡ್‌ ನೆಪದಲ್ಲಿ ಸಿಗುವ ವಾರದ ಎರಡು ದಿನಗಳಲ್ಲಿ ಬಹುಪಾಲ ಯುವಜನರ ದೇಹ ಮತ್ತು ಮನಸ್ಸು ಚಾರಣದಲ್ಲಿರುತ್ತದೆ. ವಾರ ಪೂರ್ತಿ ದುಡಿದು, ಕೊನೆಯ ಎರಡು ದಿನ ಉದ್ಯೋಗ ಜಗತ್ತನ್ನೇ ಮರೆತು ಬಿಡಲು ಟ್ರಕ್ಕಿಂಗ್‌ ಒಂದು ನೆಪ. ಬೆಟ್ಟ ಹತ್ತುವುದು, ಕಾಡಿನಲ್ಲಿ ಅಲೆಯುವುದು, ರಿವರ್‌ ರಾಫ್ಟಿಂಗ್‌ ಮಾಡುವುದು ಹೀಗೆ… ಟ್ರಕ್ಕಿಂಗ್‌ ಅನ್ನೋ ನೆಪದಲ್ಲಿ ವೈವಿಧ್ಯಮಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.

Advertisement

ಕಳೆದ ಸೆಪ್ಟೆಂಬರ್‌ ತಿಂಗಳ ವಾರಾಂತ್ಯದಲ್ಲಿ ಬೆಂಗಳೂರಿನಿಂದ ತಂಡದೊಂದಿಗೆ ಟ್ರೆಕ್ಕಿಂಗ್‌ಗೆಂದು ಗಿರಿಗದ್ದೆಗೆ ತೆರಳಿದ್ದ ಸಂತೋಷ್‌, ಅಲ್ಲಿಂದ ಹಿಂದಿರುಗೋ ಸಮಯದಲ್ಲಿ ತಪ್ಪಿಸಿಕೊಂಡು ಕಾಡು ಸೇರಿಬಿಟ್ಟ. ಕಡೆಗೆ, ಹೇಗೋ ಹರಸಾಹಸಪಟ್ಟು ಮರಳಿ ಊರು ಸೇರಿದ್ದು ಎರಡು ದಿನಗಳ ನಂತರ. ಅಕ್ಟೋಬರ್‌ ತಿಂಗಳ ಮಧ್ಯದಲ್ಲಿ ಚಾರಣಕ್ಕೆಂದು ಕುಮಾರಪರ್ವತಕ್ಕೆ ತೆರಳಿದ್ದ ಯುವತಿಯೊಬ್ಬಳು ಕತೆ ಬೇರೆ. ಆಕೆ ಕಾಲು ಉಳುಕಿಸಿಕೊಂಡು ಹೆಜ್ಜೆ ಎತ್ತಿಡಲಾಗದ ಸ್ಥಿತಿ ತಲುಪಿದಳು. ಕೊನೆಗೆ ಸ್ಥಳೀಯರ ಸಹಾಯ ಪಡೆದು ಸುಮಾರು ಏಳು ಕಿಮೀ ದೂರ ಸ್ಟ್ರೆಚರ್‌ ಮೇಲೆ ಹೊತ್ತು ತರಬೇಕಾಯ್ತು.

ಯಾಕೆ ಹೀಗಾಗುತ್ತದೆ?
ವಾರವಿಡೀ ಕ್ಷಣಮಾತ್ರದ ಬಿಡುವಿಗೂ ಆಸ್ಪದವಿಲ್ಲದಂತೆ ಕೆಲಸದೊತ್ತಡದಲ್ಲಿ ತೊಡಗಿಸಿಕೊಂಡು, ಹೆಣಗಿ ಹೈರಾಣಾದ ಯುವ ಮನಸ್ಸುಗಳಿಗೆ ನವಚೈತನ್ಯ ಕಂಡುಕೊಳ್ಳಲು ನಗರ ಪ್ರದೇಶಗಳ ಯುವಜನತೆ ಹುಡುಕಿಕೊಂಡಿರೋ ಮಾರ್ಗೋಪಾಯವೇ ಚಾರಣ ಅರ್ಥಾತ್‌ ಟ್ರೆಕ್ಕಿಂಗ್‌.

ಯಾಂತ್ರಿಕ ಜಗತ್ತಿನಿಂದ ಬಹುದೂರ ಪ್ರಕೃತಿಯ ಒಡಲೊಳಗೆ ಸಾಗಿ, ಮಾಲಿನ್ಯವಿಲ್ಲದ ಶುಭ್ರ, ಸ್ವಚ್ಛ ಪರಿಸರದಲ್ಲಿನ ಓಡಾಟದಿಂದ ದೇಹದಂಡನೆಯ ಜೊತೆಗೆ, ಕಣ್ಮನ ಸೆಳೆವ ಪ್ರಕೃತಿಯ ಮನಮೋಹಕ ದೃಶ್ಯ ವೈಭವವನ್ನೂ ನೋಡಬಹುದು. ಈ ಕಾರಣದಿಂದಾಗಿಯೇ, ಎರಡು ದಿನಗಳ ರಜೆ ಸಿಕ್ಕರೆ ಸಾಕು; ಯುವಜನತೆ ಟ್ರೆಕ್ಕಿಂಗ್‌ ಹೋಗಲು ಸಿದ್ಧರಾಗಿಬಿಡುತ್ತಾರೆ.

ಸಮಸ್ಯೆ ಆಗೋದೇ ಇಲ್ಲಿ
ಎಷ್ಟೋ ಜನ, ಎಲ್ಲೋ ಒಂದಿಷ್ಟು ಮಾಹಿತಿ ಸಂಗ್ರಹಿಸಿ, ಹಿಂದೆ ಯಾವಾಗಲೋ ಮಾಡಿದ್ದ ಚಾರಣದ ಅನುಭವವನ್ನೇ ಆಧಾರವಾಗಿ ಬಳಸಿ, ಹಾದಿಯಲ್ಲಿ ಎದುರಾಗಬಹುದಾದ ಅಡೆತಡೆಗಳ ಕಿಂಚಿತ್ತೂ ಅರಿವಿಲ್ಲದೆ, ಅವುಗಳಿಂದ ಹೊರಬರಲು ಅಗತ್ಯವಾದ ಯಾವುದೇ ಪೂರ್ವ ಸಿದ್ಧತೆಯಿಲ್ಲದೆ, ಅನಿವಾರ್ಯ ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ಸಂಪೂರ್ಣ ನಿರ್ಲಕ್ಷಿಸಿ ಕಾಡಿನೊಳಗೆ ನಡೆದುಬಿಡುತ್ತಾರೆ. ಇಂಥ ಚಾರಣಿಗರು ಖುದ್ದಾಗಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಬಿಟ್ಟಿರುತ್ತಾರೆ.

Advertisement

ಹಾಗಾದರೆ ಚಾರಣ ಅಷ್ಟೊಂದು ಅಪಾಯಕಾರಿಯೇ?
ಖಂಡಿತಾ ಅಲ್ಲ. ತೆರಳುತ್ತಿರೋ ಜಾಗದ ಕುರಿತು ಕನಿಷ್ಠ ಜ್ಞಾನ, ಸಾಗುವ ದಿಕ್ಕಿನ ಮಾಹಿತಿ, ಅಗತ್ಯ ಪೂರ್ವತಯಾರಿ ಅತ್ಯಗತ್ಯ. ಜೊತೆಗೆ, ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಚಾಚೂತಪ್ಪದೆ ಅಳವಡಿಸಿಕೊಂಡು ತಾಳ್ಮೆ ಹಾಗೂ ಸಮಚಿತ್ತತೆಯನ್ನು ಕಾಪಾಡಿಕೊಂಡಲ್ಲಿ ಯಾವೊಂದು ಅಪಸವ್ಯಗಳಿಗೂ ಆಸ್ಪದವಿಲ್ಲದಂತೆ ನಿರಾಳವಾಗಿ ಟ್ರೆಕ್ಕಿಂಗ್‌ ಮಾಡಬಹುದು. ಮುಖ್ಯವಾಗಿ, ಚಾರಣದ ಮೊದಲ ಪಾಠವಾದ ಕಾಡಿನ ಭಾಷೆಯನ್ನು ಅರಿತು ಮುಂದಡಿಯಿಡುವುದು ಅತ್ಯಾವಶ್ಯಕ. ಇದ್ಯಾವುದನ್ನೂ, ರೂಢಿಸಿಕೊಳ್ಳದೆ ಹೋದರೆ, ಕಾಡೊಳಗಿನ ಒಡನಾಟ ಬರಿಗಾಲಿನಲ್ಲಿ ಮುಳ್ಳಿನ ಮೇಲಿನ ನಡಿಗೆಯಿದ್ದಂತೆ.

ಪೂರ್ವತಯಾರಿ ಹೇಗಿರಬೇಕು?
ಚಾರಣ ಅಂದರೆ, ದೇಹದ ಎಲ್ಲ ಶಕ್ತಿಯನ್ನೂ ಕಾಲಿಗೆ ತಂದುಕೊಂಡು ನಡದರೆ ಆಯ್ತು. ಮಿಕ್ಕಿದ್ದನ್ನು ನಾಳೆ ನೋಡಿಕೊಳ್ಳೋಣ ಅನ್ನುವವರೇ ಹೆಚ್ಚು. ಇದು ಆಗದು, ಚಾರಣಕ್ಕೆ ಹೊರಡುವ ಮುನ್ನ ನಿಮ್ಮ ಕಾಲು ಪ್ರತಿನಿತ್ಯ ಕನಿಷ್ಠ ಪಕ್ಷ ಐದು ಕಿ.ಮೀ ಆದರೂ ನಡೆಯೋ ಅಭ್ಯಾಸ ರೂಢಿಸಿಕೊಂಡಿರಬೇಕು.

ಸಾಧ್ಯವಾದಷ್ಟೂ ಬರಿಗಾಲಿನ ನಡಿಗೆ ರೂಢಿಸಿಕೊಂಡಲ್ಲಿ, ಟ್ರೆಡ್‌ ಮಿಲ್‌ ಗಳಿಗೆ ಜೋತುಬೀಳದೆ ಸ್ವಾಭಾವಿಕ ನಡಿಗೆಗಳಿಗೆ ಪ್ರಾಶಸ್ತ್ಯ ನೀಡಿದಲ್ಲಿ ಇನ್ನೂ ಉತ್ತಮ. ಜೊತೆಗೆ ಪ್ರಾಣಾಯಾಮ ಹಾಗೂ ನಿಯಮಿತ ಯೋಗಾಭ್ಯಾಸದಂತಹ ಅಭ್ಯಾಸಗಳೂ ಚಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಚಾರಣದಲ್ಲಿ ಜೊತೆಗಿರಬೇಕಾದ ವಸ್ತುಗಳು.
ನಾವೆಷ್ಟೇ ಸರ್ವ ಸನ್ನದ್ಧರಾಗಿ ಸಕಲ ಸಿದ್ಧತೆಗಳೊಂದಿಗೆ ತೆರಳಿದರೂ, ನಿಸರ್ಗದ ಲೆಕ್ಕಾಚಾರಗಳು ಬೇರೆಯೇ ಆಗಿರುತ್ತವೆ ಹಾಗೂ ಯಾವ ಕ್ಷಣದಲ್ಲಾದರೂ ಅನಿರೀಕ್ಷಿತ ತಿರುವು ಪಡೆಯೋ ಎಲ್ಲಾ ಸಾಧ್ಯತೆಗಳಿರೋದ್ರಿಂದಾಗಿ ಒಂದಷ್ಟು ವಸ್ತುಗಳ ಕುರಿತಾಗಿ ಮುತುವರ್ಜಿ ಅಗತ್ಯ.

ಬ್ಯಾಗ್‌ ಪ್ಯಾಕ್‌ : ಆದಷ್ಟೂ ಹಗುರವಾದ, ಗಟ್ಟಿಮುಟ್ಟಾದ ಅಗತ್ಯಕ್ಕೆ ತಕ್ಕಷ್ಟೇ ಗಾತ್ರದ ಬ್ಯಾಗುಗಳನ್ನು ಆರಿಸಿಕೊಳ್ಳಬೇಕು.

ಶೂಗಳು : ಆದಷ್ಟೂ ವಾಟರ್‌ ಪೂ›ಫ್ ಹಾಗೂ ಟ್ರೆಕ್ಕಿಂಗ್‌ ಗಳಿಗೆಂದೇ ತಯಾರಿಸಲಾಗಿರುವ ತಳದಿಂದ ಗ್ರಿಪ್‌ ಹೊಂದಿರೋ, ಪಾದವನ್ನು ಸಂಪೂರ್ಣ ಮುಚ್ಚುವ ಶೂಗಳ ಆಯ್ಕೆ ಉತ್ತಮ. ಕ್ಯಾಶುಯಲ್‌ ಶೂಗಳು ಅಷ್ಟು ಸೂಕ್ತವಲ್ಲ.

ಮಾತ್ರೆಗಳ ಕಿಟ್‌ : ನೀರು, ಆಹಾರ, ನಿರ್ಜಲೀಕರಣಗಳಿಂದ ಯಾವ ಕ್ಷಣದಲ್ಲಾದರೂ ದೇಹ ಕೈಕೊಡೋ ಸಂಭವವಿರುವ ಕಾರಣ, ವಾಂತಿ, ಬೇಧಿ, ಮೈ ಕೈ ನೋವು, ಜ್ವರ ಸೇರಿದಂತೆ ಕೈ ಕಾಲುಗಳ ನೋವಿನ ಶಮನಕ್ಕೆ ಅಗತ್ಯವಾದ ಮಾತ್ರೆಗಳು ಸದಾ ಜೊತೆಗಿರಬೇಕು.

ಟಾರ್ಚ್‌ : ಮೊಬೈಲ್‌ ಗಳಲ್ಲಿನ ಟಾರ್ಚ್‌ಗಳ ಬೆಳಕು ಕೆಲವೇ ಅಡಿಗಳಷ್ಟು ದೂರಕ್ಕಷ್ಟೇ ಪಸರಿಸೋ ಕಾರಣದಿಂದಾಗಿ, ಅಕಸ್ಮಾತ್‌ ತಪ್ಪಿಸಿಕೊಂಡಲ್ಲಿ ತಂಡಕ್ಕೆ ತಾವಿರೋ ಜಾಗದ ಮಾಹಿತಿ ರವಾನಿಸಲು ಜೊತೆಗೆ ಟಾರ್ಚ್‌ ಕೊಂಡೊಯ್ಯುವುದು ಅತ್ಯಾವಶ್ಯಕ.

ದಿಕ್ಸೂಚಿ : ಚಾರಣ ಆರಂಭಿಸೋ ಹಂತದಲ್ಲಿ, ಶಿಖರವನ್ನೇರೋ ಮಾರ್ಗಮಧ್ಯದಲ್ಲಿ ಆಗಾಗ ದಿಕ್ಸೂಚಿಯಿಂದ ನಾವು ಹೊರಟ ಜಾಗದ ಹಾಗೂ ಸಾಗುತ್ತಿರೋ ದಿಕ್ಕನ್ನು ಗುರುತಿಟ್ಟುಕೊಂಡಲ್ಲಿ ದಾರಿ ತಪ್ಪಿದ ಕ್ಷಣದಲ್ಲೂ ನಾವು ಸಾಗಬೇಕಾದ ದಿಕ್ಕಿನ ಸಣ್ಣದೊಂದು ಅಂದಾಜು ನಮಗಿರುತ್ತದೆ.

ಪೀಪಿ : ಉತ್ತಮ ಗುಣಮಟ್ಟದ ಪೀಪಿಯೊಂದನ್ನು ಸದಾ ಜೊತೆಯಲ್ಲಿಟ್ಟುಕೊಳ್ಳಬೇಕು. ಇದರಿಂದ ಅಂತರ ಕಾಯ್ದುಕೊಂಡಾಗ ಅಥವಾ ತಪ್ಪಿಸಿಕೊಂಡಾಗ ಸಂಗಾತಿಗಳಿಗೆ ತಮ್ಮ ಇರುವನ್ನು ತಿಳಿಸಲು ಅನುಕೂಲವಾಗುತ್ತದೆ. ಯಾಕೆಂದರೆ, ಅನಿವಾರ್ಯ ಸನ್ನಿವೇಶದಲ್ಲಿ ನಮ್ಮ ಗಂಟಲು ಒಣಗಿ, ಮಾತೇ ಬಾರದಂತಾಗಬಹುದು. ಆಗ ಪೀಪಿಯ ಸದ್ದು ಸಹಾಯಕ್ಕೆ ಬರುತ್ತದೆ.

ಅಗತ್ಯದ ತಿನಿಸುಗಳು : ಚಾಕಲೇಟುಗಳು, ಎನರ್ಜಿ ಬಾರ್‌ಗಳು, ಗ್ಲೂಕೋಸ್‌ ಪೌಡರ್‌, ಡ್ರೈ ಫ್ರೂಟ್ಸ್‌ಗಳು, ಬಿಸ್ಕೀಟುಗಳೂ ಜೊತೆಗಿರಬೇಕು.

ದಿಕ್ಕು ತಪ್ಪಿದಾಗ ಬರೋದು ಹೇಗೆ?
ಚಾರಣದ ಮಾರ್ಗದ ತುಂಬೆಲ್ಲಾ ಅಲ್ಲಲ್ಲಿ ಪ್ರಾಣಿಗಳ ಓಡಾಟದಿಂದಾಗಿ ಕಾಲುಹಾದಿಗಳ ರಚನೆಯಾಗಿರುತ್ತದೆ. ಅವೆಲ್ಲವೂ ನೋಡಲು ಒಂದೇ ತೆರನಾಗಿರೋದ್ರಿಂದ ಕೆಲವೊಮ್ಮೆ ಗೊಂದಲ ಉಂಟಾಗುವುದು ಸಹಜ. ಅಲ್ಲದೆ ಅಕಾಲಿಕ ಮಳೆ, ಕ್ಷಣಮಾತ್ರದಲ್ಲಿ ಮಂಜಿನಿಂದಾವೃತವಾಗಿ ಏನೂ ಕಾಣದಂತಾಗೋದು, ಯಾವುದಾದರೂ ಪ್ರಾಣಿಯ ಊಳಿಡುವಿಕೆಯಿಂದಾಗಿ ಉಂಟಾಗೋ ಭಯದ ವಾತಾವರಣ ಹಾದಿಯ ದಿಕ್ಕು ತಪ್ಪಿಸಿ ಬಿಡುತ್ತವೆ.

ಹಾಗಾಗಿ ಆದಷ್ಟೂ ತಂಡದ ಜೊತೆಗೇ ನಿರ್ದಿಷ್ಟ ಅಂತರದಲ್ಲಿ ಪರಸ್ಪರ ಸಂಪರ್ಕ ಸಾಧಿಸುತ್ತಾನಡೆಯುವುದು ಅತೀ ಮುಖ್ಯ. ಹಾಗಿದ್ದೂ ತಪ್ಪಿಸಿಕೊಂಡಲ್ಲಿ ದಿಕ್ಸೂಚಿಯ ಸಹಾಯದಿಂದ ನಾವು ಮರಳಬೇಕಾದ ದಿಕ್ಕಿನ ಜಾಡು ಹಿಡಿದು ಸಾಗುತ್ತಾ ಎದುರಾಗೋ ಯಾವುದಾದರೂ ತೊರೆಯನ್ನೇ ಅನುಸರಿಸಿ ಸಾಗಿದಲ್ಲಿ ಜನಸಂಪರ್ಕ ಸಾಧಿಸುವುದು ಸುಲಭವಾಗುತ್ತದೆ.

ಟ್ರೆಕ್ಕಿಂಗ್‌ನಿಂದ ಏನು ಲಾಭ?
ಉತ್ತಮ ಹಾಗೂ ಪರಿಶುದ್ಧವಾದ ನೀರು, ಗಾಳಿಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿಯ ಹೆಚ್ಚುತ್ತದೆ. ದೇಹದಲ್ಲಿನ ಸ್ನಾಯುಗಳ ಹಿಗ್ಗುವಿಕೆಯಿಂದಾಗಿ ಜಡತ್ವ ನಿವಾರಣೆ. ನಿರಂತರ ಹಾಗೂ ಏಕಾಗ್ರತೆಯ ನಡಿಗೆಯಿಂದಾಗಿ ಕುತ್ತಿಗೆ ಕೈ ಕಾಲು ಬೆನ್ನುಹುರಿಯ ಸೆಳೆತ ಸೇರಿದಂತೆ ಆರ್ಥರೈಟಿಸ್‌ ನಂತಹ ರೋಗಗಳ ನಿವಾರಣೆ.

ಹೃದಯ ಹಾಗೂ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಮಾನಸಿಕ ಒತ್ತಡ, ಆತಂಕದ ಮನಃಸ್ಥಿತಿ, ಬೇಸರ ಹಾಗೂ ಖನ್ನತೆಗಳನ್ನು ತೊಡೆದು ಹಾಕುತ್ತದೆ. ಪಚನಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ದೇಹದಲ್ಲಿನ ಕೊಬ್ಬು ಕರಗಿಸುವಿಕೆ ಹಾಗೂ ಸಕ್ಕರೆ ಪ್ರಮಾಣವನ್ನು ಇಳಿಸುವಲ್ಲಿ ಸಹಾಯಕ. ಜನರೊಂದಿಗೆ ಬೆರೆಯುವಿಕೆ ಹಾಗೂ ಪರಸ್ಪರ ಸಹಕಾರಗುಣಗಳನ್ನು ಬೆಳೆಸುತ್ತದೆ.

ಯಾರು ಹೋಗಬಾರದು?
ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು. ಕಲುಷಿತ ನೀರು, ಸಸ್ಯ ಹಾಗೂ ಕೀಟಗಳಿಂದ ಅಲರ್ಜಿ ಹೊಂದಿರುವಂತವರು. ಸ್ವತ್ಛತೆಯ ಕುರಿತಾದ ಗೀಳು ಬೇನೆ ಒಬ್ಸೆಸಿವ್‌ ಕಂಪಲ್ಸಿವ್‌ ಡಿಸಾರ್ಡರ್‌ ಖಾಯಿಲೆಯವರು. ಉಸಿರಾಟದ ತೊಂದರೆಯುಳ್ಳವರು ಹಾಗೂ ಕಾಲಿನ ಮಂಡಿಚಿಪ್ಪುಗಳಲ್ಲಿ ಬಲವಿಲ್ಲದವರು. ಪ್ರಕೃತಿಯ ಬಗೆಗಿನ ಯಾವೊಂದು ಆಸಕ್ತಿ ಹಾಗೂ ಆಸ್ಥೆಯೂ ಇಲ್ಲದೆ ಕೇವಲ ಶೋಕಿಗಾಗಿ ಕಾಡಿನತ್ತ ತೆರಳುವವರು ನೀವಾಗಿದ್ದಲ್ಲಿ ಟ್ರೆಕ್ಕಿಂಗ್‌ ನಿಂದ ದೂರವಿರೋದು ಉತ್ತಮ.

ದಯವಿಟ್ಟು ಗಮನಿಸಿ
ಕಾಡಿನ ಹಾದಿಯಲ್ಲಿ ಲೌಡ್‌ ಸ್ಪೀಕರ್‌ಗಳಲ್ಲಿ ಹಾಡುಗಳನ್ನು ಕೇಳುತ್ತಾ, ಜೋರಾಗಿ
ಕಿರುಚಾಡುತ್ತಾ ಸಾಗೋದು ತೀರಾ ಅನಾಗರೀಕ ಪ್ರವೃತ್ತಿ. ಆದಷ್ಟೂ ಮೌನವಾಗಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗಿದಲ್ಲಿ ಹಕ್ಕಿಗಳ ನಿನಾದಗಳ ಜೊತೆಗೆ ಕಾಡಿನ ಮಾಧುರ್ಯವನ್ನು ಆನಂದಿಸಬಹುದು.

ಚಾರಣದಲ್ಲಿ ನೀರು ಅತೀ ಪ್ರಮುಖ ಪಾತ್ರ ವಹಿಸುವುದರಿಂದ ಹಾಗೂ ಅತೀ ವಿರಳವಾಗಿ ಲಭ್ಯವಾಗೋ ಕಾರಣ ಆದಷ್ಟೂ ಅನಿವಾರ್ಯ ಪರಿಸ್ಥಿತಿಯಲ್ಲಷ್ಟೇ ಬಳಕೆ ಮಾಡಿ ಕಾಪಿಟ್ಟುಕೊಳ್ಳುವುದು ಉತ್ತಮ. ತೆಗೆದುಕೊಂಡು ಹೋಗಿರೋ ತಿನಿಸುಗಳ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ನಮ್ಮೊಂದಿಗೇ ಮರಳಿ ತರುವ ಅಭ್ಯಾಸವನ್ನು ಬೆಳೆಸಿಕೊಳ್ಳೋದು ಹಾಗೂ ಕಂಡ ಕಸವನ್ನು ಹೆಕ್ಕಿ ತರೋದೂ ಒಳ್ಳೆಯ ಲಕ್ಷಣ.

ಎಲ್ಲೆಲ್ಲಿಗೆ ಹೋಗಬಹುದು?
ನೀವು ಬೆಂಗಳೂರಿನ ನಿವಾಸಿಗಳಾಗಿದ್ದಲ್ಲಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿಯೇ, ಒಂದೇ ದಿನದಲ್ಲಿ ಹತ್ತಿಳಿಯಬಹುದಾದ ಹಲವಾರು ಚಾರಣಯೋಗ್ಯ ಜಾಗಗಳಿವೆ.
ಸಾವನ ದುರ್ಗ. ಮಾಗಡಿ (ಬೆಂಗಳೂರಿನಿಂದ 65ಕಿಮೀ). ರಾಮನಗರ ಬೆಟ್ಟ. ರಾಮನಗರ (55ಕಿಮೀ) ಸ್ಕಂದಗಿರಿ. ಚಿಕ್ಕಬಳ್ಳಾಪುರ (61 ಕಿಮೀ) ಮಾಕಳಿದುರ್ಗ. ದೊಡ್ಡಬಳ್ಳಾಪುರ (70ಕಿಮೀ) ದೇವರಾಯನ ದುರ್ಗ (72 ಕಿಮೀ). ತುಮಕೂರಿನ ಸಿದ್ದರಬೆಟ್ಟ (70ಕಿಮೀ), ಕನಕಪುರ ಕಬ್ಟಾಳದುರ್ಗ (75ಕಿಮೀ) ಚನ್ನರಾಯನ ದುರ್ಗ. ಮಧುಗಿರಿ (100 ಕಿಮೀ), ಕುಂತಿಬೆಟ್ಟ. ಪಾಂಡವಪುರ (122 ಕಿಮೀ), ಹುತ್ತರಿ ದುರ್ಗ. ಕುಣಿಗಲ್‌ (65ಕಿಮೀ) , ಗುಡಿಬಂಡೆ ಕೋಟೆ. ಚಿಕ್ಕಬಳ್ಳಾಪುರ (90ಕಿಮೀ) ಅಂತರಗಂಗೆ. ಕೋಲಾರ (70ಕಿಮೀ). ಇವಲ್ಲದೆ, ಇನ್ನೂ ಹಲವಾರು ಚಾರಣಯೋಗ್ಯ ಜಾಗಗಳು ಲಭ್ಯವಿವೆ.

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಸುಬ್ರಹ್ಮಣ್ಯದ ಪುಷ್ಪಗಿರಿ ಅರಣ್ಯದಲ್ಲಿನ ಕುಮಾರಪರ್ವತ ಶೇಷ ಪರ್ವತ, ಕೊಡಗಿನಲ್ಲಿರುವ ತಡಿಯಂಡಮೋಳ್‌, ಕೊಲ್ಲೂರಿನ ಸಮೀಪದ ನಿಟ್ಟೂರಿನಲ್ಲಿರುವ ಕೊಡಚಾದ್ರಿ, ಕುದುರೆಮುಖದಲ್ಲಿನ ಕುದುರೆಮುಖ ಪೀಕ್‌ ಮೂಡಿಗೆರೆ ಸಮೀಪದ ದೇವರಮನೆ, ಎತ್ತಿನಭುಜ, ಶಿಶಿಲ ಪರ್ವತ ಟ್ರೆಕ್‌ ಗಳು, ಬೆಳ್ತಂಗಡಿಯ ಬಂಡಾಜೆ ಫಾಲ್ಸ… ಹಾಗೂ ಬಲ್ಲಾಳರಾಯನದುರ್ಗ ದಂತಹ ಟ್ರೆಕ್‌ ಗಳು ವಾರಾಂತ್ಯದ ಎರಡು ದಿನಗಳ ಚಾರಣಕ್ಕೆ ಉತ್ತಮ ಜಾಗಗಳಾಗಿವೆ.

– ಸುಧೀರ್‌ ಸಾಗರ್‌

Advertisement

Udayavani is now on Telegram. Click here to join our channel and stay updated with the latest news.

Next