Advertisement

ನೀಲಾವರ ಗೋಶಾಲೆ ; ಗೋಪಾಲನ ಕಿಂಕರನ ಕನಸಿನ ಸಾಕಾರ…

12:22 AM Sep 17, 2020 | Karthik A |

ಜಗದೋದ್ದಾರಕ ಶ್ರೀ ಕೃಷ್ಣ ಗೋಪಾಲಕ. ಗೋವುಗಳೆಂದರೆ ಶ್ರೀ ಕೃಷ್ಣನಿಗೆ ವಿಶೇಷ ಪ್ರೀತಿ, ಗೋವರ್ಧನ ಗಿರಿಯನ್ನು ಎತ್ತಿಹಿಡಿದು ಗೋವುಗಳನ್ನು ಹಾಗೂ ಗೋಪಾಲಕರನ್ನು ರಕ್ಷಿಸಿದ ಕಥೆಯೊಂದೇ ಸಾಕು ಶ್ರೀ ಕೃಷ್ಣನಿಗೆ ಗೋವುಗಳು ಮತ್ತು ಗೋಪಾಲಕರ ಮೇಲಿನ ಪ್ರೀತಿಯನ್ನು ಸಾಬೀತುಪಡಿಸಲು. ಗೋಪಾಲಕನಾಗಿದ್ದ ಶ್ರೀ ಕೃಷ್ಣ ಆ ಬಳಿಕ ಪಾಂಡವ ಪಾಲಕನಾಗಿ ಮಹಾಭಾರತ ಯುದ್ಧದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಕಥೆ ನಮಗೆಲ್ಲಾ ತಿಳಿದೇ ಇದೆ. ಇದು ಪುರಾಣದ ಮಾತಾಯಿತು, ನಮ್ಮ ದೇಶವು ಮೂಲತಃ ಕೃಷಿ ಪ್ರಧಾನ ದೇಶವಾಗಿದ್ದ ಕಾರಣದಿಂದ ಇಲ್ಲಿ ಗೊವುಗಳಿಗೆ ವಿಶೇಷ ಪ್ರಾಧಾನ್ಯತೆ ಮತ್ತು ಪೂಜ್ಯತೆಯ ಸ್ಥಾನಮಾನವಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ನಗರೀಕರಣದ ಪ್ರಭಾವದಿಂದಾಗಿ ನಗರಗಳಲ್ಲಿ ಮಾತ್ರವಲ್ಲದೇ ಗ್ರಾಮೀಣ ಭಾಗಗಳಲ್ಲಿಯೂ ಸಹ ಗೋಸಾಕಾಣಿಕೆ ಮತ್ತು ಹೈನುಗಾರಿಕೆ ಕಡಿಮೆಯಾಗುತ್ತಿರುವ ಕಾರಣದಿಂದ ನಮ್ಮಲ್ಲಿ ಇಂದು ಗೊವುಗಳ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಹೀಗಾಗಿ ನಾವು ಇತ್ತೀಚಿನ ದಿನಗಳಲ್ಲಿ ನೋಡುತ್ತಿರುವಂತೆ ವೃದ್ಧಾಶ್ರಮಗಳ ಸಂಖ್ಯೆಗಳ ಜೊತೆಜೊತೆಗೆ ಗೋಶಾಲೆಗಳ ಸಂಖ್ಯೆಗಳೂ ಹೆಚ್ಚುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ.

Advertisement

ಬೀಡಾಡಿ ದನಗಳನ್ನು, ಗೊಡ್ಡು ದನಗಳನ್ನು, ಗಾಯಗೊಂಡ ದನಗಳು, ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದಾಗ ಪೊಲೀಸರು ವಶಪಡಿಸಿಕೊಂಡ ದನಗಳಿಗೆಲ್ಲಾ ಇಂತಹ ಗೋಶಾಲೆಗಳೇ ಅಂತಿಮ ಆಸರೆ. ಈ ರೀತಿಯಾಗಿ 30 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಅನಾಥ ದನ, ಎತ್ತು, ಎಮ್ಮೆ, ಕೋಣಗಳಿಗೆ ಸುರಕ್ಷಿತ ತಾಣವಾಗಿ ಕಾರ್ಯನಿರ್ವಹಿಸುತ್ತಿದೆ ಬ್ರಹ್ಮಾವರ ಸಮೀಪದ ನೀಲಾವರ ಎಂಬ ಪ್ರದೇಶದಲ್ಲಿ ಪೇಜಾವರ ಮಠದ ಗೋವರ್ಧನಗಿರಿ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೀಲಾವರ ಗೋಶಾಲೆ. ಇದು ಉಡುಪಿಯ ಪೇಜಾವರ ಮಠದ ಕಿರಿಯ ಯತಿಗಳಾಗಿರುವ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಕನಸಿನ ಕೂಸು.

ಇವರು ಗೋಪ್ರಿಯ ಸ್ವಾಮೀಜಿ


ಹೌದು, ಅಷ್ಟಮಠದ ಯತಿಗಳಲ್ಲಿ ವಿಶಿಷ್ಟ ವ್ಯಕ್ತಿತ್ವದವರಾಗಿರುವ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಪೇಜಾವರ ಮಠದ ಕಿರಿಯ ಯತಿಗಳು ಮತ್ತು ಶ್ರೀ ವಿಶ್ವೇಶತೀರ್ಥ ಶ್ರೀಪಾದರ ನೆಚ್ಚಿನ ಶಿಷ್ಯ. ಕೃಷಿಯಲ್ಲಿ ಒಲವು ಮತ್ತು ಪ್ರಾಣಿ ಪಕ್ಷಿಗಳ ಮೇಲೆ ವಿಶೇಷವಾದ ಪ್ರೀತಿಯನ್ನು ಹೊಂದಿರುವ ಸ್ವಾಮೀಜಿಯೆಂದೇ ಇವರು ಜನರಿಗೆ ಪರಿಚಿತರು. ಕರಾವಳಿ ಭಾಗದಲ್ಲಿ ಕೃಷಿಚಟುವಟಿಕೆ ಇಳಿಮುಖಗೊಂಡ ಬಳಿಕ ಉಳುವ ಎತ್ತುಗಳನ್ನು, ಹಾಲು ಕೊಡದ ದನಗಳನ್ನು ಬೀಡಾಡಿ ಮಾಡುತ್ತಿರುವುದನ್ನು ಮತ್ತು ಅವುಗಳು ಅಕ್ರಮ ಕಸಾಯಿಖಾನೆಗಳಿಗೆ ಸಾಗಾಟವಾಗುತ್ತಿರುವುದನ್ನೆಲ್ಲಾ ಕಂಡ ಬಳಿಕ ಸ್ವಾಮೀಜಿಯವರಿಗೆ ಈ ಭಾಗದಲ್ಲಿ ಒಂದು ವಿಶಾಲವಾದ ಮತ್ತು ಉತ್ತಮ ಸೌಕರ್ಯಗಳನ್ನು ಹೊಂದಿರುವ ಗೋಶಾಲೆಯೊಂದು ಅಗತ್ಯವೆಂದು ಕಂಡುಬರುತ್ತದೆ. ಈ ರೀತಿಯಾಗಿ ಹತ್ತು ವರ್ಷಗಳ ಹಿಂದೆ ನೀಲಾವರ ಎಂಬ ಗ್ರಾಮೀಣ ಪ್ರದೇಶದಲ್ಲಿ ‘ಗೋವರ್ಧನಗಿರಿ ಗೋಶಾಲೆ’ ಕಾರ್ಯಾರಂಭ ಮಾಡುತ್ತದೆ.

ಗಾಯಗೊಂಡ ಮತ್ತು ಗೊಡ್ಡು ದನಗಳ ಆಶ್ರಯತಾಣ ಈ ಗೋಶಾಲೆ


ಈ ಗೋಶಾಲೆಯಲ್ಲಿ ಸುಮಾರು ಸಾವಿರಕ್ಕೂಹೆಚ್ಚು ಗೋವುಗಳಿದ್ದು ಇವುಗಳಲ್ಲಿ ಕರುಗಳು, ಎತ್ತುಗಳು, ಎಮ್ಮೆ-ಕೋಣಗಳೂ ಸಹ ಸೇರಿವೆ. ಕೆಲವೇ ಕೆಲವು ದನಗಳು ಮಾತ್ರವೇ ಹಾಲು ನೀಡುವ ಸ್ಥಿತಿಯಲ್ಲಿದ್ದು ಉಳಿದವೆಲ್ಲವೂ ಆಶ್ರಯಬಯಸಿ ಬಂದಿರುವ ರಾಸುಗಳೇ ಆಗಿವೆ. ಇವುಗಳಿಗೆ ಮೂರು ಮಹಡಿಯಿರುವ ಒಂದು ಹೊಸ ಕಟ್ಟಡ ಮತ್ತು ಇನ್ನೆರಡು ಕಟ್ಟಡಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದ ಕೆಲವು ದನಗಳು ಗೋಶಾಲೆಯ ಪರಿಸರದಲ್ಲಿ ಆರಾಮವಾಗಿ ಓಡಾಡಿಕೊಂಡಿರುವ ಸ್ಥಿತಿಯಲ್ಲಿ ನಿಮ್ಮ ಕಣ್ಣಿಗೆ ಬೀಳುತ್ತದೆ.

ಗಾಯಗೊಂಡ ರಾಸುಗಳಿಗೆ ಗೋ ಆಸ್ಪತ್ರೆಯೂ ಹೌದು ಈ ಗೋಶಾಲೆ !
ಈ ಗೋಶಾಲೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ನರಸಿಂಹ ಭಟ್ ಅವರು ಹೇಳುವಂತೆ ಈ ಗೋಶಾಲೆಗೆ ವಿವಿಧ ರೀತಿಯಲ್ಲಿ ಗಾಯಗೊಂಡಿರುವ ರಾಸುಗಳನ್ನು ತಂದುಬಿಡುತ್ತಾರೆ. ಇವುಗಳಲ್ಲಿ ಅಕ್ರಮ ಗೋಸಾಗಾಟಗಾರರ ಕೈಯಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿರುವ ರಾಸುಗಳು, ಚಿರತೆ ಮತ್ತು ಪಟ್ಟೆಹುಲಿಗಳ ಕೈಯಲ್ಲಿ ಗಾಯಗೊಂಡು ತಪ್ಪಿಸಿಕೊಂಡಿರುವ ರಾಸುಗಳೂ ಸೇರಿವೆ. ಈ ರೀತಿಯಾಗಿ ಗಾಯಗೊಂಡು ಗೋಶಾಲೆಗೆ ಕರೆತರಲಾಗುವ ರಾಸುಗಳಿಗೆ ನುರಿತ ಪಶುವೈದ್ಯರಿಂದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಹಾಗೆ ಚಿಕಿತ್ಸೆ ಪಡೆದುಕೊಂಡು ಗುಣಮುಖವಾಗಿರುವ ಕೆಲವೊಂದು ದನಗಳು ಈ ಗೋಶಾಲೆಯ ಪರಿಸರದಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿರುವುದು ನಿಮಗೆ ಕಾಣಸಿಗುತ್ತದೆ.

Advertisement


ದಾನಿಗಳ ಸಹಕಾರದಿಂದಲೇ ನಡೆಯುತ್ತಿದೆ ಈ ಗೋಶಾಲೆ

ಊರಿನ ಮತ್ತು ಪರ ಊರಿನ ದಾನಿಗಳ ಸಹಕಾರದಿಂದ ಈ ಗೋಶಾಲೆ ನಡೆಯುತ್ತಿದ್ದು. ಇಲ್ಲಿರುವ ರಾಸುಗಳಿಗೆ ನಿತ್ಯದ ಆಹಾರವಾಗಿರುವ ಒಣಹುಲ್ಲು, ಹಿಂಡಿ ಮತ್ತು ವೈದ್ಯಕೀಯ ವೆಚ್ಚಗಳನ್ನು ದಾನಿಗಳ ಸಹಕಾರದಿಂದ ಭರಿಸಲಾಗುತ್ತಿದೆ. ಇದರಲ್ಲಿ ಇಲ್ಲಿ ಕೆಲಸ ಮಾಡುವ ಕೆಲಸಗಾರರ ವೇತನವೂ ಸೇರಿದೆ. ಮತ್ತೆ ಇದೀಗ ಕಳೆದ ಎರಡು ವರ್ಷಗಳಿಂದ ರಾಜ್ಯಸರಕಾರದಿಂದಲೂ ವಾರ್ಷಿಕ ನಿಗದಿತ ಮೊತ್ತದ ಸಹಾಯಧನವೂ ಲಭ್ಯವಾಗುತ್ತಿದೆ. ಆದರೂ ದಿನನಿತ್ಯದ ಖರ್ಚುವೆಚ್ಚಗಳನ್ನು ಸರಿತೂಗಿಸಿಕೊಂಡು ಹೋಗುವುದು ಸವಾಲಿನ ಕೆಲಸವೇ ಸರಿ. ಕರಾವಳಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತೀದೊಡ್ಡ ಗೋಶಾಲೆಯಾಗಿ ಕಾರ್ಯನಿರ್ವಹಿಸುತ್ತಿದೆ ಇದು. ಕರಾವಳಿ ಭಾಗದಲ್ಲಿ ಪೊಲೀಸರು ವಶಪಡಿಸಿಕೊಳ್ಳುವ ರಾಸುಗಳನ್ನೂ ಸಹ ಈ ಗೋಶಾಲೆಗೆ ತಂದುಬಿಡುತ್ತಾರೆ.


ನಗರೀಕರಣ ಮತ್ತು ಕೃಷಿಯಿಂದ ವಿಮುಖವಾಗುತ್ತಿರುವ ಇಂದಿನ ಮನಸ್ಥಿತಿಯಲ್ಲಿ ನಿಜವಾಗಿ ಅನಾಥವಾಗುತ್ತಿರುವುದು ಸಾಕುಪ್ರಾಣಿಗಳು ಅದರಲ್ಲೂ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ದನ, ಎತ್ತು, ಎಮ್ಮೆ ಮತ್ತು ಕೋಣಗಳು. ನಮ್ಮ ಬದುಕಿಗೆ ಶಕ್ತಿತುಂಬುತ್ತಿದ್ದ ಗೋ ಸಂತತಿಗೇ ಇಂದು ಶಕ್ತಿ ತುಂಬಬೇಕಾಗಿರುವುದು ನಮ್ಮ ದೌರ್ಭಾಗ್ಯವೇ ಸರಿ. ಇಂತಹ ಅಶಕ್ತ ಗೋವುಗಳ ಸೇವೆಯಲ್ಲಿ ಕೃಷ್ಣ ಸಾಕ್ಷಾತ್ಕಾರವನ್ನು ಕಾಣುತ್ತಿರುವ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಈ ಸಮಾಜಮುಖಿ ಕಾರ್ಯಕ್ಕೆ ನಾಡಿನ ಜನರ ಸಹಕಾರ ಅತ್ಯಗತ್ಯ. ಸುಂದರ ಗ್ರಾಮೀಣ ಪ್ರದೇಶದಲ್ಲಿ ಈ ಗೋಶಾಲೆ ಇರುವುದರಿಂದ ನಮ್ಮ ವಿರಾಮದ ಅವಧಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಇಲ್ಲಿಗೆ ಹೋಗಿ ಒಂದಷ್ಟು ಸಮಯವನ್ನು ಕಳೆದುಬಂದಲ್ಲಿ ನಿತ್ಯಜಂಜಾಟದಿಂದ ಬೇಸತ್ತ ಮನಸ್ಸುಗಳಿಗೆ ಚೈತನ್ಯ ತುಂಬಿದಂತಾಗುತ್ತದೆ. ಮಾತ್ರವಲ್ಲದೇ, ನಮ್ಮ ಮಕ್ಕಳಿಗೆ ಹೈನುಗಾರಿಕೆ ಮತ್ತು ಪಶುಪಾಲನೆಯ ನೈಜದರ್ಶನವನ್ನು ಮಾಡಿಕೊಡುವಲ್ಲಿಯೂ ಇದು ಸಹಕಾರಿಯಾಗಲಿದೆ.


ಗೋಶಾಲೆಯ ಪರಿಸರದಲ್ಲಿ ಸುಂದರವಾದ ಕೆರೆಯೊಂದಿದ್ದು ಈ ನೈಸರ್ಗಿಕ ಕೆರೆಯ ಮಧ್ಯದಲ್ಲಿ ಕಾಳಿಂಗಮರ್ಧನ ಶ್ರೀ ಕೃಷ್ಣನ ದೇಗುಲವಿದ್ದು ನಮ್ಮ ಗಮನವನ್ನು ಸೆಳೆಯುತ್ತದೆ. ಕುಟುಂಬ ಸದಸ್ಯರ ಜನ್ಮದಿನ ಸಂಭ್ರಮ, ವಿವಾಹ ವಾರ್ಷಿಕೋತ್ಸವ ಸಂಭ್ರಮ ಸೇರಿದಂತೆ ನಮ್ಮ ನಮ್ಮ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳ ನೆಪದಲ್ಲಿ ಈ ಗೋಶಾಲೆಯಲ್ಲಿರುವ ಅನಾಥ ಗೋವುಗಳಿಗೆ ನಮ್ಮ ಕೈಯಿಂದಾಗುವ ಸಹಕಾರವನ್ನು ನೀಡಿದಲ್ಲಿ ಇಂತಹ ಗೋಶಾಲೆಗಳನ್ನು ನಡೆಸುತ್ತಿರುವ ಸ್ವಾಮೀಜಿ ಮತ್ತು ಅವರ ಬಳಗದ ಕೈಯನ್ನು ಬಲಪಡಿಸುವಲ್ಲಿ ನಾವೆಲ್ಲಾ ಸಹಕರಿಸಿದಂತಾಗುತ್ತದೆ.






​​​​​​​

Advertisement

Udayavani is now on Telegram. Click here to join our channel and stay updated with the latest news.

Next