Advertisement

ಮುಂಗಾರು ಅಧಿವೇಶನ : ನಿರ್ಧಾರಗಳಿಗೆ ಬರ ಬರಲಿಲ್ಲ

10:28 AM Sep 13, 2019 | Hari Prasad |

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂಸತ್‌ ಕಲಾಪಗಳಿಗೆ ಇರುವ ಮಾನ್ಯತೆ ಬೇರಾವುದಕ್ಕೂ ಇಲ್ಲ. ಯಾಕೆಂದರೆ ಇಡೀ ಪ್ರಜಾತಂತ್ರ ನಡೆಯುವುದು ಇಲ್ಲಿ ಕೈಗೊಳ್ಳಲಾಗುವ ನಿರ್ಧಾರ, ನಿರ್ಣಯಗಳಿಂದ. ಅಧಿವೇಶನಗಳೆಂದರೆ ಗದ್ದಲದ ಗೂಡು ಎಂಬ ಆರೋಪಕ್ಕೆ ಗುರಿಯಾಗುತ್ತಿರುವ ಹೊತ್ತಿನಲ್ಲೇ ಎನ್‌ಡಿ ಎ ಸರಕಾರದ ಮೊದಲ ಅಧಿವೇಶನ ಮುಂಗಾರು ಪರಿಮಳವನ್ನೇ ಕೊಟ್ಟಿದೆ. ಇದೊಂದು ಬಗೆಯ ಕಿಕ್‌ನಂತೆ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ.

Advertisement

— ಹರಿಪ್ರಸಾದ್ ನೆಲ್ಯಾಡಿ

ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಮೋದಿ ನೇತೃತ್ವದ ಎನ್‌.ಡಿ.ಎ. ಸರಕಾರದ ಮೊದಲ ಮೊದಲ ಸಂಸತ್ ಅಧಿವೇಶನವೇ ಮುಂಗಾರು ಅಧಿವೇಶನ. ಹದಿನೇಳನೇ ಲೋಕಸಭೆಯ ಮೊದಲ ಅಧಿವೇಶನ.

ಮೇ 30ರಂದು ನರೇಂದ್ರ ಮೋದಿ ಅವರು ದ್ವಿತೀಯ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.  ಆ ಮೂಲಕ ಮೋದಿ 2.0 ಸರಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಹದಿನೇಳೇ ದಿನಗಳಲ್ಲಿ ಅಧಿವೇಶನ ಪ್ರಾರಂಭಗೊಂಡಿತು.

ಕಳೆದ ಬಾರಿ ಮೋದಿ ಸಚಿವ ಸಂಪುಟದಲ್ಲಿದ್ದ ಸುಷ್ಮಾ ಸ್ವರಾಜ್, ಅನಂತ ಕುಮಾರ್, ಅರುಣ್ ಜೇಟ್ಲಿಯವರಂತಹ ಸಂಸದೀಯಪಟುಗಳ ಅನುಪಸ್ಥಿತಿಯಲ್ಲಿ ಈ ಅಧಿವೇಶನ ಎದುರಿಸಿದ್ದು ವಿಶೇಷ. ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದನ ಕಲಾಪವನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ಹಾಗೂ ಕಳೆದ ಅವಧಿಯ ಬಾಕಿಯ ಕೆಲಸಗಳನ್ನೂ ಜಾರಿಗೊಳಿಸುವ ಗುರುತರ ಹೊಣೆಗಾರಿಕೆ ಇತ್ತು. ಕೆಲವು ಪ್ರಮುಖ ಮಸೂದೆಗಳಿಗೆ ಉಭಯ ಸದನಗಳ ಅನುಮೋದನೆ ಪಡೆದುಕೊಳ್ಳುವ ಬಹುದೊಡ್ಡ ಸವಾಲು ಎದುರಿಗಿತ್ತು.

Advertisement

ಇನ್ನೊಂದೆಡೆ ಕಾಂಗ್ರೆಸ್ ಪಕ್ಷವೂ ಸಹ ಹಿರಿಯ ಸಂಸದೀಯ ಪಟು ಮಲ್ಲಿಕಾರ್ಜುನ ಖರ್ಗೆಯವರಂಥವರ ಅನುಪಸ್ಥಿತಿಯಲ್ಲಿ ಆಡಳಿತ ಪಕ್ಷವನ್ನು ಎದುರಿಸಬೇಕಾದ ಅನಿವಾರ್ಯತೆಯಲ್ಲಿತ್ತು. ಹಿರಿಯ ಸಂಸದರಾಗಿದ್ದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಹುಕುಮ್ ದೇವ್ ನಾರಾಯಣ್ ಯಾದವ್ ಸೇರಿದಂತೆ ಜೆ.ಡಿ.ಎಸ್.ನ ಹೆಚ್.ಡಿ.ದೇವೇಗೌಡ, ಕಾಂಗ್ರೆಸ್ ನಾಯಕರಾದ ವೀರಪ್ಪ ಮೊಯಿಲಿ, ಮುನಿಯಪ್ಪ ಸೇರಿದಂತೆ ಇನ್ನೂ ಹಲವಾರು ಹಿರಿ ತಲೆಗಳು ಈ ಬಾರಿ ಸಂಸತ್ ಪ್ರವೇಶಿಸಲಿಲ್ಲ. ಬದಲಾಗಿ 542 ಸದಸ್ಯರಲ್ಲಿ 300 ಮಂದಿ ಮೊಟ್ಟಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದು ಸಂಸದೀಯ ಇತಿಹಾಸದಲ್ಲಿ ಹೊಸ ದಾಖಲೆ.

ಅಧಿವೇಶನದ ಪ್ರಾರಂಭದ ದಿನವೇ ಮೋದಿ ಅವರು ವಿಪಕ್ಷಗಳ ಸಹಕಾರ ಕೋರಿ, ನಿಮ್ಮ ಪ್ರತೀ ಮಾತಿಗೂ ಸರಕಾರ ಬೆಲೆ ನೀಡಲಿದೆ ಎಂದು ವಿಶ್ವಾಸ ತುಂಬಿದರು. ಇದರ ಪರಿಣಾಮವೇನೋ ಎಂಬಂತೆ ಈ ಅಧಿವೇಶನ ಅತ್ಯಂತ ಫಲಪ್ರದ ಅಧಿವೇಶನಗಳಲ್ಲಿ ಒಂದು ಎಂಬ ಹಿರಿಮೆಗೆ ಪಾತ್ರವಾಯಿತು. ಇದು ಮೋದಿ 2.0 ಸರಕಾರಕ್ಕೆ ಸಿಕ್ಕ ಮೊದಲ ಗೆಲುವು ಎನ್ನಬಹುದು.

ಮೋದಿ ಸರಕಾರದ ಪ್ರಥಮ ಅವಧಿಯಲ್ಲಿ ವಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಗಿನ ಸಂಸದೀಯ ವ್ಯವಹಾರಗಳ ಸಚಿವ ದಿವಂಗತ ಅನಂತ ಕುಮಾರ್ ಅವರ ಸ್ಥಾನವನ್ನು ಕರ್ನಾಟಕದವರೇ ಆಗಿರುವ ಪಕ್ಷದ ಹಿರಿಯ ನಾಯಕ ಪ್ರಹ್ಲಾದ್ ಜೋಷಿ ಅವರು ತುಂಬಿದ್ದಾರೆ. ಸಂಸತ್ತಿನಲ್ಲಿ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಜೋಷಿ ಅವರು ತಮ್ಮ ಪ್ರಥಮ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಮತ್ತಿದು ಸದನದಲ್ಲಿ ಸರಕಾರದ ಟೇಕಾಫ್ ಗೂ ಸಹಕಾರಿಯಾಗಿದೆ.

ರಾಷ್ಟ್ರೀಯ ಹಿತಾಕ್ತಿ ಸಹಿತ ಜನ ಕಲ್ಯಾಣ ಯೋಜನೆಗಳ ಜಾರಿ ವಿಷಯಗಳಲ್ಲಿ ಪಕ್ಷ-ವಿಪಕ್ಷ ಎಂಬುದನ್ನು ಮರೆತು ‘ನಿಷ್ಟಕ್ಷ’ವಾಗಿ ಕೆಲಸ ಮಾಡೋಣ ಎಂದಿದ್ದರು ಮೋದಿ. ಈ ಸರಕಾರದ ಮಹತ್ವಾಕಾಂಕ್ಷಿ ಮಸೂದೆಗಳಾಗಿದ್ದ ತ್ರಿವಳಿ ತಲಾಖ್, ಭದ್ರತಾ ತಿದ್ದುಪಡಿ ಮಸೂದೆ, ಮೋಟಾರು ವಾಹನ ತಿದ್ದುಪಡಿ ಮಸೂದೆ ಸೇರಿದಂತೆ ಪ್ರಮುಖ ಮಸೂದೆಗಳು ಅನುಮೋದನೆ ಪಡೆದದ್ದು ಈ ಅಧಿವೇಶನದಲ್ಲೇ.

ಮೊದಲ ಮಹಿಳಾ ಹಣಕಾಸು ಸಚಿವೆ
ಮಾಜೀ ಪ್ರಧಾನಿ ಇಂದಿರಾ ಗಾಂಧಿ ಅವರು ಹಣಕಾಸು ಖಾತೆಯನ್ನು ಅರೆಕಾಲಿಕವಾಗಿ ನಿರ್ವಹಿಸಿದ್ದು ಹೊರತುಪಡಿಸಿದರೆ, ಸ್ವತಂತ್ರ ಭಾರತದ ಮೊದಲ ಮಹಿಳಾ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್ ಎಂಬ ಕಾರಣಕ್ಕೆ ಈ ಬಾರಿಯ ಕೇಂದ್ರ ಬಜೆಟ್ ವಿಶೇಷತೆ ಪಡೆದಿತ್ತು. 2.0 ರ ಕಾರ್ಯಯೋಜನೆಯ ಮುನ್ನುಡಿ ಎಂಬಂತಿತ್ತು ಈ ಬಜೆಟ್‌.

ತ್ರಿವಳಿ ತಲಾಖ್ ನಿಷೇಧಕ್ಕೆ ಸಂಬಂಧಿಸಿದ ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುರಕ್ಷಣೆ) ವಿಧೇಯಕ 2019ಕ್ಕೆ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಯಿತು. ಇದು ಮೋದಿ ಸರಕಾರದ ಪ್ರಥಮ ಅವಧಿಯಲ್ಲೇ ಲೋಕಸಭೆಯ ಅನುಮೋದನೆ ಪಡೆದ ಮಸೂದೆ. ಆದರೆ ರಾಜ್ಯಸಭೆಯಲ್ಲಿ ಸೋತಿತ್ತು. ಆದರೆ ಈ ಬಾರಿ 245 ಸದಸ್ಯಬಲದ ರಾಜ್ಯಸಭೆಯಲ್ಲಿ ಮಸೂದೆ ಮತಕ್ಕೆ ಹಾಕುವಾಗ ಹಾಜರಿದ್ದದ್ದು 183 ಸದಸ್ಯರು ಮಾತ್ರ. ಹಾಗಾಗಿ ಅಂಗೀಕಾರಕ್ಕೆ 92 ಮತಗಳ ಅಗತ್ಯವಿತ್ತು. ಆದರೆ ಪರವಾಗಿ ಸಿಕ್ಕಿದ್ದು 99. ವಿರುದ್ಧವಾಗಿ 84 ಮತಗಳು ಬಿದ್ದವು.

ಅಚ್ಚರಿಗೆ ಕಾರಣವಾಗಿದ್ದು ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಾಗೂ 35(ಎ) ರದ್ದತಿಯ ಕೇಂದ್ರದ ನಿರ್ಧಾರ. ಜತೆಗೆ ಜಮ್ಮು ಕಾಶ್ಮೀರವನ್ನು ವಿಭಜಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಎಂಬ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರೂಪಿಸುವ ತೀರ್ಮಾನ. ಈ ಮಸೂದೆ ಮೊದಲಿಗೆ ರಾಜ್ಯಸಭೆಯಲ್ಲಿ ಮತ್ತು ಬಳಿಕ ಲೋಕಸಭೆಯಲ್ಲಿ ಮಂಡಿಸಿ ಉಭಯ ಸದನಗಳ ಒಪ್ಪಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಇನ್ನು ದೇಶಾದ್ಯಂತ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಸಿದ್ದ ಕೇಂದ್ರ ಸರಕಾರ ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸಲಾಗುವ ದಂಡ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಏರಿಸಿ ಮತ್ತು ಕೆಲ ಹೊಸ ಉಪಕ್ರಮಗಳೊಂದಿಗೆ ಮೋಟಾರು ವಾಹನ ತಿದ್ದುಪಡಿ ಮಸೂದೆಗೆ ಉಭಯ ಸದನಗಳ ಅನುಮೋದನೆ ಪಡೆಯಲಾಯಿತು.

 ಮುಂಗಾರು ಅಧಿವೇಶನದಲ್ಲಿ ಒಪ್ಪಿಗೆ ಪಡೆದ ಪ್ರಮುಖ ಮಸೂದೆಗಳು:

– ಭಯೋತ್ಪಾದನೆ ನಿಗ್ರಹಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹೆಚ್ಚಿನ ಬಲ ತುಂಬಲು ಎನ್.ಐ.ಎ. ತಿದ್ದುಪಡಿ ವಿಧೇಯಕ.

– ರೈತರ ಸಂಕಷ್ಟಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಮಾನ್ಯತೆ ಇರುವ ರಾಷ್ಟ್ರೀಯ ರೈತರ ಆಯೋಗ ರಚಿಸುವ ನಿರ್ಣಯಕ್ಕೆ ಸರ್ವಾನುಮತದ ಅಂಗೀಕಾರ.

– ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ.

– ಸಂಘಟನೆಯ ಜೊತೆಗೆ ವ್ಯಕ್ತಿಯನ್ನೂ ಸಹ ‘ಉಗ್ರ’ ಎಂದು ಘೋಷಿಸಲು ಅನುವು ಮಾಡಿಕೊಡುವ ಅಕ್ರಮ ಚಟುವಟಿಕೆಗಳ ಕಾಯ್ದೆ ತಿದ್ದುಪಡಿಗೆ ಅಂಗೀಕಾರ.

– ಮಕ್ಕಳ ಮೆಲೆ ಅತ್ಯಾಚಾರ ಎಸಗುವವರಿಗೆ ಗರಿಷ್ಠ ಶಿಕ್ಷೆಯಾಗಿ ಗಲ್ಲು ವಿಧಿಸುವ ಪ್ರಸ್ತಾಪವಿರುವ ಫೋಕ್ಸೋ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ.

– ಚಿಟ್ ಫಂಡ್ ಮೋಸಗಳನ್ನು ತಡೆಯಲು ರೂಪಿಸಲಾದ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮಸೂದೆಗೆ ಅಂಗೀಕಾರ.

– ದೇಶದ ಕಾರ್ಮಿಕ ಕ್ಷೇತ್ರದ ಸುಧಾರಣೆ ನಿಟ್ಟಿನಲ್ಲಿ ಮಹತ್ವದ್ದಾಗಿದ್ದ ವೇತನ ಸಂಹಿತೆ ಮಸೂದೆಗೆ (ಕೋಡ್ ಆಫ್ ವೇಜಸ್) ಅನುಮೋದನೆ.

– ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ (ಎನ್.ಎಂ.ಸಿ.) ಅಂಗೀಕಾರ.

– ಸಾಲ ಮರುಪಾವತಿ ಮಾಡದೇ ಇರುವ ಕಂಪೆನಿಗಳ ಆಸ್ತಿ ಹರಾಜು ಮಾಡುವ ಪ್ರಸ್ತಾವನೆ ಸಹಿತ ಇನ್ನಷ್ಟು ಕಠಿಣ ಅಂಶಗಳನ್ನು ಒಳಗೊಂಡಿರುವ ದಿವಾಳಿ ಮಸೂದೆಗೆ ಅಂಗೀಕಾರ,

ಅಧಿವೇಶನ ವಿಶೇಷ

– ಕೇಂದ್ರದ ಮಾಜ ಸಚಿವ ಎಸ್. ಜೈಪಾಲ್ ರೆಡ್ಡಿ ಅವರಿಗೆ ರಾಜ್ಯಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವಾಗ ಉಪರಾಷ್ಟ್ರಪತಿ ಹಾಗೂ ರಾಜ್ಯ ಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರು ಸಂತಾಪ ಸೂಚಕ ನಿರ್ಣಯವನ್ನು ಓದುತ್ತಲೇ ಕಣ್ಣೀರು ಹಾಕಿದ ಘಟನೆ.

– ಬಿಜೆಪಿ ಸಂಸದೆ, ಲೋಕಸಭೆಯ ಉಪಸಭಾಪತಿ ರಮಾ ದೇವಿ ವಿರುದ್ಧ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಅವರು ಅವಹೇಳನಕಾರಿ ಮಾತುಗಳನ್ನಾಡಿದ್ದು ಟೀಕೆಗೆ ಗುರಿಯಾಗಿದ್ದು.

– ಲಡಾಕ್ ಯುವ ಬಿಜೆಪಿ ಸಂಸದ ಜಮ್ಯಂಗ್ ತ್ಸೆರಿಂಗ್ ನಮ್ಗ್ಯಾಲ್ ತನ್ನ ಭಾಷಣದ ಮೂಲಕ ದೇಶದ ಗಮನ ಸೆಳೆದರು. ಏಳು ದಶಕಗಳಿಂದ ಲಡಾಕ್ ಪ್ರಾಂತ್ಯದ ಜನರು ಅನುಭವಿಸುತ್ತಾ ಬಂದಿರುವ ತಾರತಮ್ಯವನ್ನು ಅವರು ತಮ್ಮ ಭಾಷಣದಲ್ಲಿ ಎಳೆಎಳೆಯಾಗಿ ಬಿಡಿಸಿಡುವ ಮೂಲಕ ವಿಶೇಷ ಸ್ಥಾನಮಾನವನ್ನು ಕೆಲವೇ ಕೆಲವು ವ್ಯಕ್ತಿಗಳು ಹೇಗೆ ದುರುಪಯೋಗಪಡಿಸಿಕೊಂಡರು ಎಂದು ವಿಶ್ಲೇಷಿಸಿದ್ದು ವೈರಲ್‌ ಆಗಿತ್ತು.

– ಮೋಟಾರು ವಾಹನ ತಿದ್ದುಪಡಿ ವಿಧೇಯಕ, ಉಗ್ರ ನಿಗ್ರಹ ಕಾಯ್ದೆ ಸಹಿತ ಕೆಲವೊಂದು ಮಸೂದೆಗಳ ಪರವಾಗಿ ಮುಖ್ಯವಾಗಿ ರಾಜ್ಯಸಭೆಯಲ್ಲಿ ಕಾಂಗ್ರೆಸ್, ಬಿ.ಎಸ್.ಪಿ. ಸಹಿತ ಕೆಲವೊಂದು ವಿರೋಧ ಪಕ್ಷಗಳು ಮತ ಚಲಾಯಿಸಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next