Advertisement

19 ಆಪರೇಷನ್‌ ಆಗಿದ್ದರೂ 89 ಪದಕ ಗೆದ್ದ!

12:38 AM Jun 12, 2022 | Team Udayavani |

“ಈತ ನಿರಂಜನ್‌ ಮುಕುಂದನ್‌. 28 ವರ್ಷದ ಇವನಿಗೆ ಅಂಗವೈಕಲ್ಯವಿದೆ. ಈವರೆಗೂ 19 ಆಪರೇಷನ್‌ಗಳು ಆಗಿವೆ. ಈತ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿ 85 ಪದಕಗಳನ್ನು ಗೆದ್ದಿದ್ದಾನೆ!’ -ಇದಿಷ್ಟು ವಿವರ ಗೂಗಲ್‌ನಲ್ಲಿ ಕಾಣಿಸಿದಾಗ ಕುತೂಹಲವಾಯಿತು. ಒಂದಲ್ಲ ಎರಡಲ್ಲ, 19 ಆಪರೇಷನ್‌ ಆದ ಮೇಲೂ ಮೀನಿನಂತೆ ಈಜಿ ಪದಕಗಳನ್ನು ಗೆದ್ದ ಈತನ ಜತೆ ಮಾತಾಡಬೇಕು, ಆತನ ಬದುಕಿನ ಕಥೆ ಆಲಿಸಬೇಕು ಅನ್ನಿಸಿತು. ಹೆಸರು ನಿರಂಜನ್‌ ಮುಕುಂದನ್‌ ಅಂತ ಇದೆ. ಈತ ತಮಿಳನೋ, ಮಲಯಾಳಿಯೋ ಇರಬೇಕು ಅಂದುಕೊಂಡು, ಮೆಸೆಂಜರ್‌ನಲ್ಲಿ ಹೀಗೊಂದು ಸಂದೇಶ ಕಳಿಸಿದೆ: “ಒಂದು ಸಂದರ್ಶನ ಬೇಕಿದೆ. ನಿಮಗೆ ಇಂಗ್ಲಿಷ್‌ ಓಕೆನಾ ಅಥವಾ ತಮಿಳು/ಮಲಯಾಳ?’

Advertisement

ಹತ್ತು ನಿಮಿಷದ ಅನಂತರ ಉತ್ತರ ಬಂತು: Namaste sir, Heli… ಈ ಉತ್ತರ ನೋಡಿ ಖುಷಿ ಮತ್ತು ಬೆರಗು ಒಟ್ಟಿಗೇ ಆಯಿತು. ಕಾರಣ ಅಲ್ಲಿದ್ದ Heli… ಎಂಬ ಪದ. ಅರೆ ಇವನಿಗೆ ಕನ್ನಡ ಗೊತ್ತಾ ಅಂದುಕೊಳ್ಳುತ್ತಲೇ, ನಿಮಗೆ ಕನ್ನಡ ಗೊತ್ತಾ? ಎಂದು ಮತ್ತೂಂದು ಮೆಸೇಜ್‌ ಕಳಿಸಿದೆ. “ಸಾರ್‌, ನಾನು ಬೆಂಗಳೂರಿನ ಜೆ.ಪಿ. ನಗರದ ಹುಡುಗ…’ ಎಂಬ ಉತ್ತರ ಬಂತು.”ಹೌದಾ? ಸಾರಿ. ನನಗೆ ಗೊತ್ತಿರಲಿಲ್ಲ. ನಿಮ್ಮ ಸಾಧನೆಯ ಕುರಿತು ಒಂದು ಸಾಲನ್ನಷ್ಟೇ ಓದಿ ತತ್‌ಕ್ಷಣ ಮೆಸೇಜ್‌ ಕಳಿಸಿದೆ. ನಿಮ್ಮ ಜತೆ ಮಾತಾಡಲಿಕ್ಕಿದೆ. ಈ ವಾರದಲ್ಲಿ ಭೇಟಿ ಆಗೋಣವಾ?’- ಈ ಪ್ರಶ್ನೆಗೆ ನಿರಂಜನ್‌ ಉತ್ತರಿಸಿದ್ದು ಹೀಗೆ: “ಸರ್‌, ನಾನು ಈಗ ಬೆಂಗಳೂರಿನಲ್ಲಿ ಇಲ್ಲ. ಜರ್ಮನಿಯಲ್ಲಿದ್ದೇನೆ. ಈಜು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು, ತರಬೇತಿ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಒಂದು ಕೆಲಸ ಮಾಡೋಣ, ನೀವು ಪ್ರಶ್ನೆಗಳನ್ನು ಕಳಿಸಿ ಬಿಡಿ. ನಾನು ಸಮಯ ಮಾಡಿಕೊಂಡು ಎಲ್ಲದಕ್ಕೂ ವಾಯ್ಸ್ ಮೇಲ್‌ಲಿ ಉತ್ತರ ಕೊಡ್ತೇನೆ. ಹೀಗೆ ಹೇಳಿದ್ದು ಮಾತ್ರವಲ್ಲ, ಅನಂತರದ ಪೂರ್ತಿ ಐದು ದಿನ ತಮ್ಮ ಬ್ಯುಸಿ ಶೆಡ್ನೂಲ್‌ ನಡುವೆ ಐದೈದು ನಿಮಿಷ ಬಿಡುವು ಮಾಡಿಕೊಂಡು ತಮ್ಮ ಬಾಳಕಥೆಯನ್ನು ನಿರಂಜನ್‌ ಹೇಳಿಕೊಂಡಿದ್ದು ಹೀಗೆ:
***
ನನ್ನ ತಂದೆಯ ಹೆಸರು ಮುಕುಂದನ್‌. ಅಮ್ಮ, ತಂಗಿ, ಅಜ್ಜ-ಅಜ್ಜಿ, ನನ್ನ ಕುಟುಂಬದ ಸದಸ್ಯರು. ಅಪ್ಪ ಜಮೀ ನಾªರರು. ಅಮ್ಮ, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡ್ತಾರೆ. ಕೋವಿಡ್‌ ಸಮಯದಲ್ಲಿ ಅಜ್ಜಿಯನ್ನು ಕಳೆದುಕೊಂಡ್ವಿ. ನನಗೆ Spina Bifida ಎಂಬ ಸಮಸ್ಯೆ ಇದೆ. ಇದು ಸಾವಿರದಲ್ಲಿ ಒಬ್ಬರಿಗೆ ಬರುವ ಒಂದು ವಿಧದ ಅಂಗವೈಕಲ್ಯವಂತೆ. SpinaBifida ಅಂದರೆ ಸೀಳು ಬೆನ್ನುಹುರಿಯ ಸಮಸ್ಯೆ. ಬೆನ್ನುಹುರಿಯಿಂದ ಹೊರಬರುವ ನರಗಳು ಬದಿಗೆ ತಗಲಿಕೊಂಡಿರು ತ್ತವೆ. ಈ ನರಗಳು ಎಳೆ ಯುವುದರಿಂದ ಕಾಲುಗಳು ನೇರವಾಗಿರುವುದಿಲ್ಲ. ಹಾಗಾಗಿ ಕಾಲುಗಳನ್ನು ಸೇರವಾಗಿ ಚಾಚಲು, ಮಡಚಲು ಆಗುವುದಿಲ್ಲ. ಸರಭರನೆ ನಡೆಯಲು, ಓಡಲು ಆಗುವುದಿಲ್ಲ. ಮೂಳೆಗಳು ಬಲಿಯುವ ಮೊದಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಆಶಯದಿಂದ ಎಳೆವಯಸ್ಸಲ್ಲೇ ಆಪರೇಷನ್‌ ಮಾಡುತ್ತಾರೆ. ನನಗೆ 6 ತಿಂಗಳ ಮಗುವಾಗಿ¨ªಾಗಲೇ ಆಪರೇಷನ್‌ ಮಾಡಿ ದರಂತೆ. ಅನಂತರದಲ್ಲಿ ಒಂದರ ಹಿಂದೊಂದು ಆಪರೇಷನ್‌ ಆಗುತ್ತಲೇ ಹೋದರೂ ಈ ಸಮಸ್ಯೆಗೆ ಪರಿಹಾರ ಸಿಗದೇ ಹೋದಾಗ ವೈದ್ಯರು- “ಇದು ಶಾಶ್ವತವಾಗಿ ಉಳಿದು ಬಿಡುವ ಸಮಸ್ಯೆ. ಇದರ ಜತೆಗೇ ಬದುಕಲು ಮಗುವಿಗೆ ಕಲಿಸಿ ಬಿಡಿ. ಬೆನ್ನುಹುರಿಯಿಂದ ಹೊರಬರುವ ನರಗಳನ್ನು ತೆಗೆಯಲು ಆಗಾಗ ಆಪರೇಷನ್‌ ಮಾಡಲೇಬೇಕಾಗ್ತದೆ. ಕುದುರೆ ಸವಾರಿ ಅಥವಾ ಈಜು ಕಲಿಸಿದರೆ ಕಾಲಿನ ನರಗಳು ಸರಿ ಹೋಗಬಹುದು. ಛಾನ್ಸಸ್‌ 50-50. ನಿಮ್ಮ ಮಗನಿಗೆ ಕಾಲಿನ ಒಂದು ಭಾಗದಲ್ಲಿ ಸ್ಪರ್ಶ ಜ್ಞಾನ ಇಲ್ಲ. ಹಾಗಾಗಿ ಈಜುವಾಗ ಗಾಯ ಆದ್ರೆ ಅವನಿಗೆ ಗೊತ್ತಾಗಲ್ಲ. ಇದೆಲ್ಲ ನೆನಪಲ್ಲಿ ಇರಲಿ’ ಅಂದರಂತೆ.
ಇಂಥ ಸಂದರ್ಭವನ್ನು ಬೇರೆ ಪೋಷಕರು ಹೇಗೆ ನಿಭಾಯಿಸ್ತಾ ಇದ್ದರೋ ಗೊತ್ತಿಲ್ಲ. ಆದರೆ ನನ್ನ ಹೆತ್ತವರು ಇದನ್ನು ಒಂದು ಚಾಲೆಂಜ್‌ ಆಗಿ ತಗೊಂಡರು. ಮನೆಯೊಳಗೆ ಓಡಾಡಲೂ ನನಗೆ ಆಗುತ್ತಿರಲಿಲ್ಲ. ಆಗೆಲ್ಲ ಅಪ್ಪ ಎತ್ತಿಕೊಂಡು ಹೋಗುತ್ತಿದ್ದರು. ಯಾವ ಸಂದರ್ಭದಲ್ಲೂ ನೀನು ಅಂಗವಿಕಲ ಅಂತ ಅವರು ಹೇಳಲೇ ಇಲ್ಲ. “ನಿನಗೆ ಈ ಥರದ ಸಮಸ್ಯೆ ಇದೆ. ಸ್ವಿಮ್‌ ಮಾಡ್ತಾ ಹೋದ್ರೆ ಅದು ಸರಿ ಹೋಗುತ್ತೆ. ಸ್ವಿಮ್ಮಿಂಗ್‌ ಕಲಿ’ ಅಂದು, ಜಯನಗರದ ಈಜು ಕಲಿಕ ಕೇಂದ್ರಕ್ಕೆ ಸೇರಿಸಿದರು.

ಅಪ್ಪ-ಅಮ್ಮ ತಂತಮ್ಮ ಕೆಲಸಗಳಲ್ಲಿ ಬ್ಯುಸಿ ಇದ್ದುದರಿಂದ ಹೊರಗೆ ಹೋಗುವಾಗ ನನಗೆ ಅಜ್ಜಿಯದೇ ಸಾಥ್‌. ನಾವು ಈಜು ಕಲಿಯಲು ಹೋಗ್ತಾ ಇದ್ದೇವೆ ಅಂತ ಗೊತ್ತಾದಾಗ ಜನ ಹಿಂದಿನಿಂದ ಆಡಿಕೊಳ್ಳುತ್ತಿದ್ದರು. ಕೆಲವರು- “ಅಯ್ಯೋ, ಇದೆಲ್ಲ ಯಾಕೆ ಬೇಕು? ಅವನಿಗೆ ಮೊದಲೇ ಕಾಲು ಸರಿ ಇಲ್ಲ. ಹಾಗಿರುವಾಗ ಈಜಲು ಕಷ್ಟ ಆಗಲ್ವ? ಅವನನ್ನು ಚೆನ್ನಾಗಿ ಓದಿಸಿ. ಅಂಗವಿಕಲ ಕೋಟಾದಲ್ಲಿ ಕೆಲಸ ಸಿಗುತ್ತೆ. ಅಷ್ಟಾದ್ರೆ ಸಾಕಲ್ವ?’ ಎನ್ನುತ್ತಿದ್ದರು. ಆಗೆಲ್ಲ ನಮ್ಮ ಅಜ್ಜಿ- “ಇಲ್ಲಾರೀ, ನನ್ನ ಮೊಮ್ಮಗ ಯಾರಿಗೂ ಕಡಿಮೆ ಇಲ್ಲ. ಅವನು ಮುಂದೆ ದೊಡ್ಡ ಸಾಧನೆ ಮಾಡ್ತಾನೆ’ ಎನ್ನುತ್ತಿದ್ದರು. ನಾನು ಬೇಗ ಈಜು ಕಲಿತೆ. ವೇಗವಾಗಿ ಈಜುವುದನ್ನು ಗಮನಿಸಿದ ಕೋಚ್‌ ಜಾನ್‌ ಕ್ರಿಸ್ಟೋಫ‌ರ್‌, ನನ್ನ ಹೆತ್ತವರನ್ನು ಕರೆಸಿ- “ಇವನು ಚೆನ್ನಾಗಿ ಈಜುತ್ತಾನೆ. ಅಂಗವಿಕಲರ ಕೋಟಾದಲ್ಲಿ ದೇಶವನ್ನು ಪ್ರತಿನಿಧಿಸಲಿ. ಆ ಥರಾ ತಯಾರು ಮಾಡೋಣ’ ಅಂದರು. ಮರುದಿನದಿಂದಲೇ ಹಲವು ಕೌಶಲಗಳನ್ನು ಹೇಳಿಕೊಟ್ಟು, 2003ರಲ್ಲಿ ಮುಂಬಯಿಯಲ್ಲಿ ನಡೆದ ರಾಷ್ಟ್ರೀಯ ಈಜು ಸ್ಪರ್ಧೆಗೆ ಕಳಿಸಿದರು. ಆಗಿನ್ನೂ ನನಗೆ 9 ವರ್ಷ. ನಾನಲ್ಲಿ ಬೆಳ್ಳಿ ಪದಕ ಗೆದ್ದೆ!

ಅನಂತರದಲ್ಲಿ ಈಜು, ಓದು ಮತ್ತು ಜಿಮ್‌ನಲ್ಲಿ ಅಂಗ ಸಾಧನೆ ಮಾಡುವುದು ನನ್ನ ಬದುಕಿನ ಭಾಗವಾಯಿತು. ದಿನಕ್ಕೆ 7 ಗಂಟೆಯ ಕಾಲ ಈಜಲೇಬೇಕಿತ್ತು. ಸ್ಕೂಲ…- ಕಾಲೇಜುಗಳಲ್ಲಿ, ಅದರಲ್ಲೂ ವಿಶೇಷವಾಗಿ ಜೈನ್‌ ಕಾಲೇಜಿನಲ್ಲಿ ನನಗೆ ತುಂಬಾ ಸಪೋರ್ಟ್‌ ಸಿಕ್ತು. ಕಡೆಗೆ ನ್ಪೋರ್ಟ್ಸ್ ಮ್ಯಾನೇಜ್ಮೆಂಟ್ ನಲ್ಲಿ ಮಾಸ್ಟರ್‌ ಡಿಗ್ರಿ ಪಡೆದೆ. ಈಜು ಸ್ಪರ್ಧೆಗಳಲ್ಲಿ ಒಂದರ ಹಿಂದೊಂದು ಪದಕ ಗೆಲ್ಲುತ್ತಲೇ ಹೋದೆ. 2014ರಲ್ಲಿ, ಇಂಗ್ಲೆಂಡ್‌ನ‌ಲ್ಲಿ ನಡೆದ ವರ್ಲ್ಡ್ ಜೂನಿಯರ್‌ ಗೇಮ್ಸ… ನಲ್ಲಿ 3 ಚಿನ್ನ, 2 ಬೆಳ್ಳಿ, ಮೂರು ಕಂಚು-ಹೀಗೆ ಒಟ್ಟು 8 ಪದಕಗಳನ್ನು ಗೆದ್ದೆ. ಅನಂತರದಲ್ಲಿ ಪಾಲ್ಗೊಂಡ ಸ್ಪರ್ಧೆಗಳಲ್ಲಿ ಐದಾರು ಪದಕಗಳನ್ನು ಗೆಲ್ಲುವುದು ಹವ್ಯಾಸ ಆಯಿತು.

2015ರಲ್ಲಿ ಭಾರತ ಸರಕಾರವು ವರ್ಷದ ಶ್ರೇಷ್ಠ ಕ್ರೀಡಾಪಟು ಎಂದು ಗೌರವಿಸಿದೆ. 2016ರಲ್ಲಿ ಕರ್ನಾಟಕ ಸರಕಾರ ಏಕಲವ್ಯ ಪ್ರಶಸ್ತಿ, ಚೇಂಜ್‌ ಮೇಕರ್‌ ಆಫ್ ಇಂಡಿಯಾ ಪ್ರಶಸ್ತಿ, ರೋಲ್‌ ಮಾಡೆಲ್‌ ಫಾರ್‌ ಯೂತ್‌ ಪ್ರಶಸ್ತಿಗಳು ದೊರಕಿವೆ. ಈಜಿನಲ್ಲಿ ಪದಕ ಗೆದ್ದ ಕಾರಣದಿಂದಲೇ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ, ಪ್ರಧಾನಿ ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳುವ ಅದೃಷ್ಟ ನನ್ನದಾಗಿದೆ. ಪ್ರತೀ ಕ್ಷಣವೂ ಜತೆಗೆ ನಿಂತು ಪ್ರೋತ್ಸಾಹಿಸಿದ ಅಪ್ಪ-ಅಮ್ಮ, ಅಜ್ಜಿ ಮತ್ತು ನನ್ನ ಕೋಚ್‌ಗೆ ನಾನು ಋಣಿ.

Advertisement

ಹಾಗೆಂದು ಕಷ್ಟಗಳು ಇರಲಿಲ್ಲವೆಂದಲ್ಲ. ಅವು ಜತೆಗೇ ಇದ್ದವು. ಒಮ್ಮೆಯಂತೂ ನನ್ನ ಕಾಲುಗಳು ನೇರವಾಗಲಿ ಎಂಬ ಉದ್ದೇಶದಿಂದ ವೈದ್ಯರು ಒಟ್ಟು 36 ರಾಡ್‌ಗಳನ್ನು ಹಾಕಿದ್ದರಂತೆ. ನನಗೆ ಕಾಲಿನಲ್ಲಿ ಒಂದು ಕಡೆ ಸ್ಪರ್ಶ ಜ್ಞಾನ ಇರಲಿಲ್ಲ ಅಂದೆನಲ್ಲ; ಹಾಗಾಗಿ ಗಾಯವಾದರೆ ಕೆಲವೊಮ್ಮೆ ಗೊತ್ತಾಗುತ್ತಿರಲಿಲ್ಲ. ಗೊತ್ತಾಗುವ ವೇಳೆಗೆ ಸೆಪ್ಟಿಕ್‌ ಆಗಿರುತ್ತಿತ್ತು. ಬೆನ್ನುಹುರಿಯಿಂದ ನರಗಳು ಹೊರಬಂದಾಗ ಅವುಗಳನ್ನು ಬಿಡಿಸಲು ಪದೇ ಪದೆ ಆಪರೇಷನ್‌ ಮಾಡಿಸಬೇಕಾಗುತ್ತಿತ್ತು. ಹೀಗೆಲ್ಲ ಆದಾಗ, ದೇಹ ಸ್ಪಂದಿಸದೆ ನನ್ನ ಈಜುವ ವೇಗ ಕಡಿಮೆಯಾಗುತ್ತಿತ್ತು. ಆಪರೇಷನ್‌ ಮುಗಿಯುತ್ತಿದ್ದಂತೆಯೇ ಮತ್ತೆ ಮೊದಲಿನಿಂದ ಈಜಿನಲ್ಲಿ ವೇಗ ಪಡೆದುಕೊಳ್ಳಲು ಪ್ರಯತ್ನಿಸಬೇಕಿತ್ತು. 2014ಮತ್ತು 2018ರಲ್ಲಿ ಹೀಗೇ ದಿಢೀರ್‌ ಆಪರೇಷನ್‌ ಮಾಡಿಸಬೇಕಾಗಿ ಬಂದಿದ್ದರಿಂದ ವಿಶ್ವ ಚಾಂಪಿಯನ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಆಗ ನನ್ನ ಕೋಚ್‌ ಕ್ರಿಸ್ಟೋಫ‌ರ್‌ ಧೈರ್ಯ ತುಂಬಿದರು.

ನನಗೆ ಮೊದಲಿಂದಲೂ ಕಾರ್‌ ಓಡಿಸಬೇಕು ಅಂತ ತುಂಬಾ ಆಸೆಯಿತ್ತು. ಅಪ್ಪನಿಗೆ ಹೇಳಿದಾಗ, ಒಕೆ ಅಂದರು. ಕಾರ್‌ ಡ್ರೈವಿಂಗ್‌ ಕ್ಲಾಸ್‌ಗೆ ಹೋಗುವುದನ್ನು ಕಂಡವರು- ಅಯ್ಯೋ, ಏನ್ರೀ ಇದು? ಅವನಿಗೆ ಮೊದಲೇ ಕಾಲು ಸರಿ ಇಲ್ಲ ಅಂತೀರ. ಹಾಗಿದ್ರೂ ಕಾರ್‌ ಡ್ರೈವ್‌ ಮಾಡಲು ಬಿಟ್ಟಿದೀರ! ಸ್ವಲ್ಪ ಹೆಚ್ಚು ಕಮ್ಮಿ ಆದ್ರೂ ಆಕ್ಸಿಡೆಂಟ್‌ ಆಗಿಬಿಡುತ್ತೆ, ಜೀವ ಮುಖ್ಯ. ಹುಷಾರು’ ಎಂದರು. ಅಪ್ಪ ಆಗಲೂ ಯಾರಿಗೂ ಉತ್ತರಿಸಲಿಲ್ಲ. ಎಚ್ಚರಿಕೆಯಿಂದ ಡ್ರೈವ್‌ ಮಾಡು ಅಂದರು. ಲೈಸನ್ಸ್ ತಗೊಳ್ಳಲು ಹೋದಾಗ, ಆರ್‌. ಟಿ.ಒ. ಅಧಿಕಾರಿಗಳು ತಕರಾರು ತೆಗೆದರು. ಕಾಲಿನ ಸಮಸ್ಯೆ ಇರುವಾಗ ಲೈಸನ್ಸ್ ಕೊಡಲು ಕಷ್ಟ ಅಂದರು. ನಾನು ಅವರ ಎದುರಿಗೇ ಕಾರ್‌ ಓಡಿಸಿ ತೋರಿಸಿ ಲೈಸನ್ಸ್ ಪಡೆದೆ.

ಹೀಗಿರುವಾಗಲೇ, Golden Quadrilateral Challenge ನಲ್ಲಿ ಒಬ್ಬರು 130 ಗಂಟೆಗಳ ಅವಧಿಯಲ್ಲಿ ಕಾರ್‌ ಡ್ರೈವ್‌ ಮೂಲಕ ಮುಂಬಯಿ, ಚೆನ್ನೈ, ದಿಲ್ಲಿ ಮತ್ತು ಕೋಲ್ಕೊತಾ ನಗರಗಳನ್ನು ತಲುಪಿದ್ದಾರೆ ಎಂಬ ಸುದ್ದಿ ಕಾಣಿಸಿತು. ಇಷ್ಟೂ ನಗರಗಳಿಗೆ ಒಬ್ಬರೇ ಡ್ರೈವ್‌ ಮಾಡಿ ಕೊಂಡು ಹೋಗಬೇಕು. ಅದು ನಿಯಮ. ಇದಕ್ಕಿಂತ ಕಡಿಮೆ ಅವಧಿಯಲ್ಲಿ ಹೋಗಿಬರಲು ನಾನು ಪ್ರಯತ್ನಿಸಬಾರದೇಕೆ ಅನ್ನಿಸಿದ್ದು 2017ರಲ್ಲಿ. ನಮ್ಮ ಅಪ್ಪ-ಅಮ್ಮ, ಅಜ್ಜಿ- “ಆಲ್‌ ದಿ ಬೆಸ್ಟ್’ ಅಂದರು! ಬಾಲ್ಯದ ಗೆಳೆಯನನ್ನು ಜತೆಗಿಟ್ಟುಕೊಂಡು ಪ್ರಯಾಣ ಆರಂಭಿಸಿಯೇಬಿಟ್ಟೆ. ಕಡೆಗೆ ನಾಲ್ಕೂ ನಗರಗಳನ್ನು 128 ಗಂಟೆಗಳಲ್ಲಿ ತಲುಪಿ, ಹೊಸ ದಾಖಲೆ ಸೃಷ್ಟಿಸಿದೆ! ಈಗಲೂ ಆ ದಾಖಲೆ ನನ್ನ ಹೆಸರಲ್ಲೇ ಇದೆ.

ಈಗ ಏನಾಗಿದೆ ಅಂದರೆ ಜನ ನನ್ನ ಸಾಧನೆಯನ್ನು ಗುರುತಿಸಿದ್ದಾರೆ. ನನ್ನನ್ನು ಗೇಲಿ ಮಾಡುತ್ತಿದ್ದವರೇ ಈಗ ನಮ್ಮ ಪೋಷಕರಿಗೆ ಕಾಲ್‌ ಮಾಡಿ- ನಿನ್ನೆ ಟಿವಿಯಲ್ಲಿ ನಿಮ್ಮ ಮಗನ ಸಂದರ್ಶನ ಬಂತು. ಅವನ ಸಾಧನೆ ಕಂಡು ಬಹಳ ಖುಷಿ ಆಯ್ತು ಅನ್ನುತ್ತಾರೆ.

ಯಾವುದೇ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುವುದು ಒಬ್ಬ ವ್ಯಕ್ತಿಗೆ ಸಿಗುವ ವಿಶೇಷ ಗೌರವ. ಪ್ಯಾರಾಲಿಂಪಿಕÕ… ಈಜು ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವ ಸೌಭಾಗ್ಯ ಸಿಕ್ಕಿದೆ. ಈ ಕಾರಣದಿಂದಲೇ ಹತ್ತಾರು ದೇಶಗಳನ್ನು ನೋಡಲೂ ಸಾಧ್ಯವಾಗಿದೆ. ಈವರೆಗೆ 89 ಪದಕಗಳನ್ನು ಗೆದ್ದಿದ್ದೇನೆ. (ನಾಲ್ಕು ದಿನಗಳ ಹಿಂದಷ್ಟೇ ಫ್ರಾನ್ಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕಂಚು ಗೆದ್ದೆ) ದೇಹದಲ್ಲಿ ಶಕ್ತಿ ಇರುವವರೆಗೂ ದೇಶವನ್ನು ಪ್ರತಿನಿಧಿಸಬೇಕು. ನಮ್ಮ ಪಾಲಿಗೆ ನಾಳೆ ಅನ್ನುವುದೇ ಇಲ್ಲ. ಇವತ್ತೇ ಕೊನೆಯ ದಿನ ಅನ್ನುವಷ್ಟು ತೀವ್ರವಾಗಿ ಪ್ರತೀ ಕ್ಷಣವನ್ನೂ ಎಂಜಾಯ್‌ ಮಾಡಬೇಕು. ಅನ್ನುವುದು ನನ್ನಾಸೆ. IMPOSSIBLE ಎಂಬ ಪದದಲ್ಲಿ IM ಎಂಬುದನ್ನು, DISABILITY ಯಲ್ಲಿ DIS ಅಕ್ಷರಗಳನ್ನು ತೆಗೆದುಹಾಕಿ ಬದುಕಲು ಕಲಿಯಬೇಕು ಎನ್ನುವುದು ನಾನು ಎಲ್ಲರಿಗೂ ಹೇಳಬಯಸುವ ಮಾತು…
ಹೀಗೆ ಮುಗಿಯುತ್ತದೆ ನಿರಂಜನ್‌ ಮುಕುಂದನ್‌ನ ಮಾತು. ಈತನಿಗೆ ಶುಭ ಹಾರೈಸಬೇಕು ಅನ್ನಿಸಿದರೆ- teamniranjanofficial@gmail.com

– ಎ.ಆರ್‌.ಮಣಿಕಾಂತ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next