Advertisement

ಮಿಸ್ಸೆಸ್‌ ಸಿಎಸ್ಪಿ ಸ್ಪೀಕಿಂಗ್‌…

06:00 AM Jun 20, 2018 | |

ಗೀತಾ ಸೀತಾರಾಮ್‌ ಅವರ ಪರಿಚಯ ಹೆಚ್ಚಿನವರಿಗೆ ಇರಲಿಕ್ಕಿಲ್ಲ. ಪತಿ ಟಿ.ಎನ್‌. ಸೀತಾರಾಮ್‌ ನಿರ್ದೇಶಕರಾಗಿ, ನಟರಾಗಿ ಖ್ಯಾತನಾಮರು. ಆದರೂ ಗೀತಾ ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುವವರಲ್ಲ. ಅಪರೂಪಕ್ಕೆ ಕಾಣಿಸಿಕೊಂಡರೂ ಹೆಚ್ಚು ಮಾತಾಡುವವರಲ್ಲ. ಗಂಡನ ಖ್ಯಾತಿಗೂ, ತನ್ನ ವ್ಯಕ್ತಿತ್ವಕ್ಕೂ ಸಂಬಂಧವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಗೀತಾ ಮಿತಭಾಷಿ ಮತ್ತು ಸಂಕೋಚದ ಸ್ವಭಾವದವರು. “ಅವಳು’ಗಾಗಿ ಮಾತಾಡಿದಾಗಲೂ ಇವರಲ್ಲಿ ಆ ಸಂಕೋಚವೇ ಇತ್ತು. ಮಾತಿನಲ್ಲಿ ಪ್ರಬುದ್ಧತೆ, ಸಹನಾಶೀಲತೆ ಎದ್ದು ಕಾಣುತ್ತಿತ್ತು. “ಗಂಡ ಹೆಂಡತಿ ಪರಸ್ಪರರ ಸ್ವಭಾವ ಅರಿತು, ಹೊಂದಿಕೊಂಡರೆ ವೈಮನಸ್ಸೇಕೆ ಬರುತ್ತದೆ?’ ಎನ್ನುತ್ತಾರವರು. ಅವರ ಸುಖ ಸಂಸಾರದ ಗುಟ್ಟು ಕೂಡ ಅದೇ..

Advertisement

– ನಿಮ್ಮ ಬಾಲ್ಯದ ಬಗ್ಗೆ ಹೇಳಿ…
ನನ್ನ ತಂದೆ ಕೆಇಬಿಯಲ್ಲಿ ಉದ್ಯೋಗದಲ್ಲಿದ್ದರು. ಒಂದೇ ಊರಿನಲ್ಲಿ ಹೆಚ್ಚು ವರ್ಷಗಳ ಕಾಲ ನಾವು ನಿಂತಿದ್ದೇ ಇಲ್ಲ. ರಾಣೆಬೆನ್ನೂರು, ಧಾರವಾಡ… ಹೀಗೆ ಬೇರೆ ಬೇರೆ ಊರಿನಲ್ಲಿ ಬಾಲ್ಯ ಕಳೆದಿದ್ದೇನೆ. ನಾನು ಹೈಸ್ಕೂಲ್‌ಗೆ ಬರುವಾಗ ಅಪ್ಪ ಕೆಇಬಿ ಉದ್ಯೋಗ ತೊರೆದು, ಗೌರಿಬಿದನೂರಿಗೆ ಬಂದು ಎಲೆಕ್ಟ್ರಿಕ್‌ ಕಾಂಟ್ರ್ಯಾಕ್ಟರ್‌ ಆದರು. ಹಾಗಾಗಿ ಕೆಲ ವರ್ಷ ಗೌರಿಬಿದನೂರಿನಲ್ಲೇ ನೆಲೆಸಿದೆವು. ಕಾಲೇಜು ಓದಲೆಂದು ಬೆಂಗಳೂರಿಗೆ ಬಂದೆ. ನಾನು ಮೊದಲಿನಿಂದಲೂ ಓದಿನಲ್ಲಿ ಚುರುಕಿದ್ದೆ. ಬಿ.ಕಾಂ. ಓದುವಾಗ ತಂದೆ ತೀರಿಕೊಂಡರು. ಆಗ ಅಭ್ಯಾಸದಲ್ಲಿ ಸ್ವಲ್ಪ ಹಿಂದೆ ಉಳಿದೆ.

– ಸೀತಾರಾಮ್‌ ಅವರ ಜೊತೆ ನಿಮ್ಮ ಮೊದಲ ಭೇಟಿ… 
ನಮ್ಮದು ಪಕ್ಕಾ ಅರೇಂಜ್ಡ್ ಮ್ಯಾರೇಜ್‌. ಅವರು ಹೆಣ್ಣು ನೋಡಲು ಬಂದಾಗ, ಹುಡುಗಿ ಜೊತೆ ಮಾತಾಡಬೇಕು ಎಂದು ನಮ್ಮ ಅಣ್ಣನಿಗೆ ಕೇಳಿದರು. ಅಣ್ಣ ಒಪ್ಪಿದ. ನಾನು ಈಗಲೇ ಇಷ್ಟು ಕಡಿಮೆ ಮಾತಾಡುತ್ತೇನೆ. ಆಗಂತೂ ಬಾಯಿಂದ ಮಾತೇ ಹೊರಡುತ್ತಿರಲಿಲ್ಲ. ಅವರು ಅವರ ರುಚಿ, ಅಭಿರುಚಿ, ಜೀವನದ ಗುರಿ ಎಲ್ಲದರ ಬಗ್ಗೆ ಹೇಳಿದರು. ನಿನ್ನ ಬಗ್ಗೆ ಹೇಳು ಎಂದು ಕೇಳಿದರು. ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಆಗಷ್ಟೇ, ಕನ್ನಡಕದ ಬದಲಿಗೆ ಕಾಂಟ್ಯಾಕ್ಟ್ ಲೆನ್ಸ್‌ಗಳ ಬಳಕೆ ಶುರುವಾಗಿತ್ತು. ನಾನೂ ಅದನ್ನು ಬಳಸಲು ಆರಂಭಿಸಿದ್ದೆ. ಇವರಿಗೆ ಏನು ಹೇಳಬೇಕು ಅಂತ ತೋಚದೆ, ನಾನು ಲೆನ್ಸ್‌ ಹಾಕಿಕೊಳ್ಳುತ್ತೇನೆ. ನನಗೆ ದೃಷ್ಟಿ ದೋಷವಿದೆ ಎಂದಿದ್ದೆ!


– ಮದುವೆಯಾದ ಬಳಿಕ ಒಟ್ಟು ಕುಟುಂಬದಲ್ಲಿ ಇದ್ದವರು ನೀವು. ಬೆಂಗಳೂರಿಗೆ ಬಂದ ಬಳಿಕ ಜೀವನದಲ್ಲಿ ಆದ ಬದಲಾವಣೆಗಳು ಏನು?
ಸೀತಾರಾಮ್‌ ಮನೆಯಿದ್ದದ್ದು ಗೌರಿಬಿದನೂರಿನಿಂದ ಹೊರಗೆ. ಹೊಲದಲ್ಲಿದ್ದ ಮನೆಯದು. ಅವರದ್ದು ಒಟ್ಟು ಕುಟುಂಬ. ಮದುವೆಯಾದ ಹೊಸರತಲ್ಲಿ ಅವರು ನಾಟಕ, ಚಿತ್ರೀಕರಣ ಎಂದೆಲ್ಲಾ ಬೆಂಗಳೂರು- ಗೌರಿಬಿದನೂರಿನ ನಡುವೆ ಹೆಚ್ಚು ಓಡಾಡುತ್ತಿದ್ದರು. ಮನೆತುಂಬಾ ಜನರಿದ್ದ ಕಾರಣ ನನಗೇನೂ ಬೇಸರವಾಗುತ್ತಿರಲಿಲ್ಲ. ನನ್ನ ಮಕ್ಕಳು, ನನ್ನ ಓರಗಿತ್ತಿಯ ಮಕ್ಕಳೆಲ್ಲಾ ಕೂಡಿ ಆಡುತ್ತಿದ್ದರು. ಮನೆಗೆಲಸ, ಹೊಲದ ಕೆಲಸಗಳನ್ನು ಹಂಚಿಕೊಂಡು ಮಾಡುತ್ತಾ ನಮ್ಮಷ್ಟಕ್ಕೆ ನಾವು ಸದಾ ಬ್ಯುಸಿ ಇರ್ತಾ ಇದ್ವಿ. ನನ್ನ ಮಗಳು ಶಾಲೆಗೆ ಸೇರುವಂತಾದಾಗ ಸೀತಾರಾಮ್‌, ಫ್ಯಾಕ್ಟರಿ ಆರಂಭಿಸಿದರು. ಆಗ ನಾವು ಬೆಂಗಳೂರಿಗೆ ಬಂದು ನೆಲೆಸಿದೆವು. ಆ ಸಮಯದಲ್ಲಿ ಅವರು ಸದಾ ಬ್ಯುಸಿ. ಬೆಳಗಿನ ಜಾವ ಮನೆಯಿಂದ ಹೊರಟರೆ ರಾತ್ರಿ 12, 1 ಗಂಟೆಗೆ ವಾಪಸ್ಸಾಗುತ್ತಿದ್ದರು. ಊರಿನಲ್ಲಿ ನನ್ನಷ್ಟಕ್ಕೆ ಕೆಲಸಗಳಲ್ಲಿ ತಲ್ಲೀನಳಾಗಿ ಅಭ್ಯಾಸವಾಗಿದ್ದ ಕಾರಣ, ಇವರು ನನಗೆ ಸಮಯ ಕೊಡುವುದಿಲ್ಲ ಎಂಬುದೆಲ್ಲ ದೊಡ್ಡ ವಿಷಯ ಅಂತನ್ನಿಸಲೇ ಇಲ್ಲ. ನಾನು ಖುಷಿಯಾಗೇ ಇರುತ್ತಿದ್ದೆ.


– ಮಕ್ಕಳು ಈಗ ಏನು ಮಾಡುತ್ತಿದ್ದಾರೆ. ಮಕ್ಕಳ ಜವಾಬ್ದಾರಿಯನ್ನು ನಿಮ್ಮಿಬ್ಬರಲ್ಲಿ ಹೆಚ್ಚು ತೆಗೆದುಕೊಂಡವರು ಯಾರು?
ಸೀತಾರಾಮ್‌ಗೆ ಮಕ್ಕಳ ಮೇಲೆ ಎಷ್ಟೇ ಪ್ರೀತಿಯಿದ್ದರೂ ಅವರ ಜೊತೆ ಸಮಯ ಕಳೆಯುವುದಕ್ಕೆ ಆಗ್ತಾ ಇರಲಿಲ್ಲ. ಅವರಿಗೆ ಪಾಠ ಹೇಳಿ ಕೊಡುವುದು, ಹೋಂವರ್ಕ್‌ ಮಾಡಿಸುವುದು ಎಲ್ಲವನ್ನೂ ನಾನೇ ಮಾಡುತ್ತಿದ್ದೆ. ಅವರ ಬೇಕು, ಬೇಡಗಳನ್ನೂ ನಾನೇ ನೋಡಿಕೊಳ್ಳುತ್ತಿದ್ದೆ. ಮಕ್ಕಳಿಬ್ಬರೂ ಬುದ್ಧಿವಂತರು. ಮಗಳು ಅಶ್ವಿ‌ನಿ, ಬೆಂಗಳೂರಿನಲ್ಲಿ ಬಿಬಿಎಂ ಓದಿ, ಮೈಸೂರಿನಲ್ಲಿ ಎಂಎ ಮಾಡಿದಳು. ಪತ್ರಕರ್ತೆಯಾಗಿ ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾಳೆ. ಚೆನ್ನಾಗಿ ಬರೆಯುತ್ತಾಳೆ. ಈಗ ಸೀತಾರಾಮ್‌ರ ಹೊಸ ಧಾರಾವಾಹಿ “ಮಗಳು ಜಾನಕಿ’ಯ ಸಂಭಾಷಣೆ, ಕಥೆ, ಚಿತ್ರಕಥೆ ತಂಡದಲ್ಲಿ ಅವಳೂ ಒಬ್ಬಳು. ಶಾಸ್ತ್ರೀಯ ಸಂಗೀತ ಕಲಿತಿದ್ದಾಳೆ. ಒಳ್ಳೆಯ ಹಾಡುಗಾರಳೂ ಹೌದು. ಮಗ ಬಿ.ಇ ಓದಿ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೂ ಸಿನಿಮಾದಲ್ಲಿ ಆಸಕ್ತಿ ಜಾಸ್ತಿ. ಹಾಗಾಗಿ ಉದ್ಯೋಗ ತೊರೆದು, ಇಂಗ್ಲಿಷ್‌ನಲ್ಲಿ ಹಲವಾರು ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ಮಾಡಿದ್ದಾನೆ. ಅಪ್ಪನಂತೆ ಮಕ್ಕಳಿಬ್ಬರೂ ತುಂಬಾ ಸೃಜನಶೀಲರು.

ಸೀತಾರಾಮ್‌ ಅವರ ಸೃಷ್ಟಿಗಳಲ್ಲಿ ನಿಮ್ಮ ಮನಸ್ಸಿಗೆ ಹತ್ತಿರದ್ದು ಅನ್ನಿಸಿದ ಧಾರಾವಾಹಿ ಯಾವುದು? 
ನಾನು ಧಾರಾವಾಹಿಗಳನ್ನು ಹೆಚ್ಚು ನೋಡುವುದಿಲ್ಲ. ಆದರೆ, ಸೀತಾರಾಮ್‌ ಧಾರಾವಾಹಿಗಳನ್ನು ತಪ್ಪದೇ ನೊಡುತ್ತೇನೆ. ನನ್ನ ಗಂಡನ ಧಾರಾವಾಹಿ ಎನ್ನುವುದಕ್ಕಿಂತ, ಅವರ ಧಾರಾವಾಹಿಯ ಕಥೆ ನಮ್ಮದೇ ಕಥೆ ಎನಿಸುತ್ತದೆ. ಇವರೆಲ್ಲಾ ನಮ್ಮ ಮನೆಯವರೇ ಎಂಬಷ್ಟು ಪಾತ್ರಗಳು ಆತ್ಮೀಯವಾಗುತ್ತವೆ. ಬೇರೆ ಧಾರಾವಾಹಿಯಲ್ಲೂ ಇಂಥ ಅಂಶಗಳು ಇರಬಹುದೇನೋ, ಆದರೆ, ನಾನು ಹೆಚ್ಚಾಗಿ ಗುರುತಿಸಿಲ್ಲ. ಅವರ “ಮಾಯಾಮೃಗ’ ನನ್ನ ನೆಚ್ಚಿನ ಧಾರಾವಾಹಿ. ಅದರಲ್ಲಿ ಮಾಳವಿಕಾ ಪಾತ್ರವಂತೂ ನನ್ನನ್ನು ಇನ್ನಿಲ್ಲದಂತೆ ಸೆಳೆದಿತ್ತು. 


– ಸೀತಾರಾಮ್‌ ಅವರು ಹೊಸ ಧಾರಾವಾಹಿ ಆರಂಭಿಸಿದ್ದಾರೆ. ಈಗ ನಿಮ್ಮ ದಿನಚರಿ ಹೇಗಿರುತ್ತದೆ?
ಸೀತಾರಾಮ್‌ ಹೊಸ ಧಾರಾವಾಹಿ ಆರಂಭಿಸಿದರೆ, ಅವರ ಜೊತೆಗೆ ನನಗೂ ಬಿಡುವಿಲ್ಲದ ಕೆಲಸ ಶುರು. ಅವರು ಬೆಳಗ್ಗೆಯೇ ಕಚೇರಿಗೆ ಹೋಗಿಬಿಡುತ್ತಾರೆ. ತಿಂಡಿ ಜೊತೆ ಅವರಿಗೆ ಕಳಿಸಲು ಊಟವೂ ಬೆಳಗ್ಗೆಯೇ ತಯಾರಾಗಬೇಕು. ಮನೆಯ ಕೆಳಗೇ ಕಚೇರಿ ಇದೆ. ಹೀಗಾಗಿ ಕಚೇರಿಗೆ ಯಾರಾದರೂ ಬರುತ್ತಲೇ ಇರುತ್ತಾರೆ. ಅವರಿಗೆ ಕಾಫಿ, ಟೀ ಕಳಿಸಬೇಕು. ಅಡುಗೆಯವರು ಬರುತ್ತಾರೆ. ಆದರೆ, ಅವರು ಬರುವುದರೊಳಗೆ ನಾನೇ ಮುಕ್ಕಾಲು ಭಾಗ ಕೆಲಸ ಮಾಡಿಬಿಟ್ಟಿರುತ್ತೇನೆ. 

– ನೀವು ಮಾಡುವ ಯಾವ ಅಡುಗೆ ಮನೆಯವರಿಗೆಲ್ಲಾ ಫೇವರಿಟ್‌? 
ನಾನು ಮಡುವ ಬಿಸಿಬೇಳೆ ಬಾತ್‌, ಒತ್ತು ಶಾವಿಗೆ ಸೀತಾರಾಮ್‌ಗೆ ತುಂಬಾ ಇಷ್ಟ. ಮಕ್ಕಳಿಗೆ ಚಕ್ಕುಲಿ, ಕೋಡುಬಳೆ ಇಷ್ಟ. ನಾನು ಮಾಡುವ ಸೊಪ್ಪಿನ ಹುಳಿ ಮನೆಯಲ್ಲಿ ಎಲ್ಲರಿಗೂ ಇಷ್ಟ. ಅದನ್ನು ಅಡುಗೆಯವರಿಂದ ಮಾಡಿಸಿದರೆ ಯಾರಿಗೂ ಇಷ್ಟ ಆಗಲ್ಲ. ಭಾನುವಾರ ಅಡುಗೆಯವರು ಇರುವುದಿಲ್ಲ. ಹೀಗಾಗಿ ಪ್ರತಿ ಭಾನುವಾರ ನಮ್ಮನೆಯಲ್ಲಿ ಊಟಕ್ಕೆ ಸೊಪ್ಪಿನ ಹುಳಿ ಕಾಯಂ. ಸೀತಾರಾಂ ಎಷ್ಟೇ ಬ್ಯುಸಿ ಇದ್ದರೂ, ಎಷ್ಟೇ ತಡವಾಗಿ ಮನೆಗೆ ಬರುವವರಿದ್ದರೂ ಅವರು ಮನೆಗೆ ಬಂದೇ ಊಟ ಮಾಡುವುದು. ಹೊರಗಡೆ ಊಟವನ್ನು ಅವರು ಯಾವತ್ತೂ ಇಷ್ಟಪಡಲ್ಲ. 

Advertisement

– ಅಡುಗೆ ವಿಷಯಕ್ಕೆ ನಿಮ್ಮ ಮನೆಯಲ್ಲಿ ತಕರಾರುಗಳು ಇರುವುದಿಲ್ಲವೇ?
ಅಡುಗೆ ವಿಷಯಕ್ಕೆ ತಕರಾರು, ಕಿರಿಕಿರಿ ನಮ್ಮನೆಯಲ್ಲೂ ತಪ್ಪಿದ್ದಲ್ಲ. ಬೆಳಗ್ಗೆ ಉಪ್ಪಿಟ್ಟು ಮಾಡುವುದಾದರೆ ಮೂರು ಬಗೆಯಲ್ಲಿ ಮಾಡಬೇಕು. ಸೀತಾರಾಂಗೆ ಈರುಳ್ಳಿ, ಆಲೂಗಡ್ಡೆ ಹಾಕಿ ಉಪ್ಪಿಟ್ಟು ಮಾಡಬೇಕು. ಮಗನಿಗೆ ಕ್ಯಾಪ್ಸಿಕಂ ಹಾಕಿ ತಯಾರಿಸಬೇಕು. ಮಗಳಿಗೆ ಈರುಳ್ಳಿ ಹಾಕದೆಯೇ ಉಪ್ಪಿಟ್ಟು ಮಾಡಬೇಕು. ಅಡುಗೆಯವರಿಗೆ ಹೇಳಿದರೆ ಅವರು ಕನ್‌ಫ್ಯೂಸ್‌ ಆಗಿ ಏನೇನೋ ಮಾಡಿಬಿಡುತ್ತಾರೆ. ಹಾಗಾಗಿ ಉಪ್ಪಿಟ್ಟನ್ನು ನಾನೇ ಮಾಡುತ್ತೇನೆ.

– ಸೀರೆ, ಒಡವೆ ಮೇಲೆ ನಿಮಗೆ ಎಷ್ಟರಮಟ್ಟಿಗೆ ಆಸಕ್ತಿ ಇದೆ? 
ಸೀರೆ ಬೇಕು, ಒಡವೆ ಬೇಕು ಎಂದು ನಾನು ಯಾವತ್ತೂ ಬಯಸಿದವಳೇ ಅಲ್ಲ. ಅವರ ಬಳಿ ಯಾವತ್ತೂ ಏನನ್ನೂ ಕೇಳಿಲ್ಲ. ಅವರೇ ಒತ್ತಾಯವಾಗಿ ಆಚೆ ಕರೆದುಕೊಂಡು ಹೋಗಿ ಒಟ್ಟಿಗೆ 8-10 ಸೀರೆ ಕೊಡಿಸಿಬಿಡುತ್ತಾರೆ. ಬೇಡ ಎಂದರೂ ಕೇಳಲ್ಲ. ನನ್ನ ಸ್ವಭಾವವೇ ನಮ್ಮಿಬ್ಬರು ಮಕ್ಕಳಿಗೂ ಬಂದಿದೆ. ಇಬ್ಬರೂ ಸರಳಜೀವಿಗಳು. 

– ನೀವು ತುಂಬಾ ಮಿತ ಭಾಷಿ. ನೀವು ಹೆಚ್ಚು ಮಾತಾಡುವುದು ಯಾರೊಂದಿಗೆ?
ನಾನು ಹೆಚ್ಚು ಮಾತನಾಡುವುದು ಮಗಳ ಜೊತೆಯಲ್ಲಿ. ಅವಳು ಬಹಳ ಸ್ನೇಹಜೀವಿ. ಮನೆಗೆ ಆಗಾಗ ಬರುತ್ತಿರುತ್ತಾಳೆ. ಏನಾದರೊಂದು ಹೇಳಿ ನಗಿಸುತ್ತಾಳೆ. ಏನಾದರೂ ಸಲಹೆ ಕೊಡುತ್ತಾಳೆ. ನನ್ನಿಂದ ಸಲಹೆ ಕೇಳುತ್ತಾಳೆ. ಅಮ್ಮನಿಗೆ ಯಾವತ್ತೂ ಬೆಳೆದ ಮಗಳೇ ಆಪ್ತ ಸ್ನೇಹಿತೆ. ಮಗನೂ ತುಂಬಾ ಫ್ರೆಂಡ್ಲಿ. ಆದರೂ ಹೆಣ್ಣು ಮಕ್ಕಳ ಜೊತೆ ಇರುವ ಆತ್ಮೀಯತೆಯೇ ಬೇರೆ. ಸೀತಾರಾಮ್‌ಗೂ ಅವಳು ಮನೆಗೆ ಬಂದರೆ ಭಾರಿ ಖುಷಿ. ಇಬ್ಬರೂ ಗಂಟೆಗಟ್ಟಲೆ ಹರಟೆ ಹೊಡೆಯುತ್ತಾರೆ. 

– ಮೊಮ್ಮಕಳ ಜೊತೆ ನಿಮ್ಮ ಒಡನಾಟ ಹೇಗಿರುತ್ತದೆ?
ಮೊಮ್ಮಕ್ಕಳು ಕೊಡುವ ಅನುಭವವೇ ಬೇರೆ. ಮೊಮ್ಮಗಳಿಗೆ ಈಗ 8 ವರ್ಷ ಮೊಮ್ಮಗನಿಗೆ 3 ವರ್ಷ. ಮೊಮ್ಮಗಳಿಗೆ ನನ್ನ ಜೊತೆ ಮೊದಲಿನಿಂದಲೂ ಒಡನಾಟ ಜಾಸ್ತಿ. ನಾನಿದ್ದರೆ ಅವಳಿಗೆ ಯಾರೂ ಬೇಡ. ಆರಾಮಾಗಿ ನನ್ನ ಜೊತೆ ಇದ್ದು ಬಿಡುತ್ತಾಳೆ. ಆಕೆ ಮಗುವಾಗಿದ್ದಾಗ ನನ್ನ ಜೊತೆಯೇ ಹೆಚ್ಚು ಇರುತ್ತಿದ್ದಳು. ಈಗಲೂ ಭಾನುವಾರ ಬಂತೆಂದರೆ ಮನೆಗೆ ಬಂದು ಬಿಡುತ್ತಾಳೆ. ಮೊಮ್ಮಗ ಅವನಮ್ಮನನ್ನು ಬಿಟ್ಟು ಆಚೀಚೆ ಕದಲುವುದಿಲ್ಲ. ಮನೆಗೆ ಬಂದಾಗ ಮಾತಾಡುತ್ತಾನೆ. ಆದರೆ ಮೊಮ್ಮಗಳಷ್ಟು ನಮ್ಮನ್ನು ಹಚ್ಚಿಕೊಂಡಿಲ್ಲ.

-ನಿಮ್ಮ ಹವ್ಯಾಸಗಳೇನು?
ನಾನು ಬೆಳಗ್ಗೆ 4:45ಕ್ಕೆಲ್ಲಾ ಏಳುತ್ತೇನೆ. ಧ್ಯಾನದ ಮೂಲಕ ನನ್ನ ದಿನಚರಿ ಆರಂಭ. ರೇಖೀ ಕಲಿತಿದ್ದೇನೆ. ಮೊದಲು ಪುಸ್ತಕಗಳನ್ನು ತುಂಬಾ ಓದುತ್ತಿದ್ದೆ. ಈಗ ಸಮಯದ ಅಭಾವ, ಹಾಗಾಗಿ ಮ್ಯಾಗಝಿನ್‌ಗಳಲ್ಲೇ ಕಥೆ ಕಾದಂಬರಿ ಓದುತ್ತೇನೆ. ನೆಂಟರು, ಸಂಬಂಧಿಕರ ಜೊತೆ ಸಂಬಂಧ ಮೊದಲಿನಂತೆಯೇ ಈಗಲೂ ಚೆನ್ನಾಗಿದೆ. ನಮ್ಮನೆಯವರ ಅಕ್ಕ ತಂಗಿಯರು ಆಗಾಗ ಮನೆಗೆ ಬರುತ್ತಿರುತ್ತಾರೆ. ನಾನು ಅವರ ಮನೆಗೆ ಹೋಗುತ್ತಿರುತ್ತೇನೆ. 

– ಧಾರಾವಾಹಿಗಳಲ್ಲಿ ಸೀತಾರಾಮ್‌ರನ್ನು ಕೋಪಿಷ್ಟರಾಗಿ ನೋಡಿರುವ ಜನರು ಅವರು ನಿಜಜೀವನದಲ್ಲೂ ಹಾಗೆಯೇ ಎಂದು ತಿಳಿದಿದ್ದಾರೆ. ಅವರ ಸ್ವಭಾವ ಹೇಗೆ? 
ಸಿಎಸ್‌ಪಿಗಿರುವಷ್ಟು ಕೋಪ ಇವರಿಗೆ ಖಂಡಿತಾ ಇಲ್ಲ. ಆದರಲ್ಲಿ ಅರ್ಧದಷ್ಟು ಇದೆ. ಅವರಿಗೆ ಕೋಪ ಬಂದಾಗ ನಾನು ಮೌನಿಯಾಗಿಬಿಡುತ್ತೇನೆ. ಕೆಲ ಸಮಯದ ಬಳಿಕ ಅವರೂ ಶಾಂತರಾಗುತ್ತಾರೆ. ಹೀಗಾಗಿ ಜಗಳಗಳು ನಮ್ಮ ಮಧ್ಯೆ ಕಡಿಮೆ. ನಾನು ಅವರಿಗೆ ಅಡ್ಜಸ್ಟ್‌ ಆಗಿ ಬಿಟ್ಟಿದ್ದೇನೆ. ಅವರ ಕೋಪ, ತಾಪ ನನ್ನನ್ನು ವಿಚಲಿತಗೊಳಿಸುವುದಿಲ್ಲ. ಅಲ್ಲದೇ, ವಯಸ್ಸಾದಂತೆ ಕೋಪ, ಸಹನೆ ಎಲ್ಲವೂ ಹೆಚ್ಚಾಗುತ್ತದೆ. ನನಗೆ ಸಹನೆ ಹೆಚ್ಚಾಗಿದೆ. ಅವರಿಗೆ ಕೋಪ ಸ್ವಲ್ಪ ಹೆಚ್ಚಾಗಿದೆ ಅಷ್ಟೇ.

*”ಮಾಯಾಮೃಗ’ ಯಾವತ್ತಿಗೂ ನನ್ನ ಫೇವರಿಟ್‌
*ಮೂರು ವರೈಟಿಯ ಉಪ್ಪಿಟ್ಟು ಮಾಡ್ಬೇಕು ಮನೇಲಿ!
*ಸೀತಾರಾಮ್‌ಗೆ ಸ್ವಲ್ಪ ಸಿಟ್ಟು ಜಾಸ್ತಿ, ನನಗೆ ಸಹನೆಯೇ ಆಸ್ತಿ
*ಮೊದಲ ಭೇಟಿಯಲ್ಲಿ- ಲೆನ್ಸ್‌ ಹಾಕ್ಕೊಳ್ತೀನಿ ಅಂದಿದ್ದೆ! 

ಚೇತನ ಜೆ.ಕೆ. 

Advertisement

Udayavani is now on Telegram. Click here to join our channel and stay updated with the latest news.

Next