Advertisement

Christmas Day: ಶಾಂತಿ, ಪ್ರೀತಿ, ಸೌಹಾರ್ದತೆಯ ಕ್ರಿಸ್ಮಸ್‌

01:43 PM Dec 24, 2023 | Team Udayavani |

ಕಿಸ್ಮಸ್‌ ಹಬ್ಬ ಅಥವಾ ಕ್ರಿಸ್ತನ ಜನನದ ವಿಷಯ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ದೇವಪುತ್ರ ಏಸುಕ್ರಿಸ್ತ ಮರಿಯಾ (ಮೇರಿ) ಎಂಬ ಕನ್ಯೆಯ ಉದರದಲ್ಲಿ ಮಾನವ ರೂಪ ತಾಳಿ ಬೆತ್ಲೆಹೆಮ್‌ ನಗರದ ಜಾನುವಾರುಗಳ ಕೊಟ್ಟಿಗೆಯಲ್ಲಿ ಜನಿಸಿದ ಪ್ರಸಂಗದ ಸ್ಮರಣೆಯ ಈ ಹಬ್ಬವನ್ನು ಇಂದಿಗೂ ಆಸ್ತಿಕರು ಬಹಳ ಸಂಭ್ರಮ, ಶ್ರದ್ಧೆಯಿಂದ ಆಚರಿಸುತ್ತಾರೆ. ಏಸುಕ್ರಿಸ್ತ ಜನನದ ಹಿಂದಿನ ಕಾಲವನ್ನು ಕ್ರಿಸ್ತಪೂರ್ವ ಹಾಗೂ ನಂತರದ ಕಾಲವನ್ನು ಕ್ರಿಸ್ತಶಕ ಎನ್ನುವುದು ರೂಢಿಯಲ್ಲಿದೆ. ಈಗ ಡಿಸೆಂಬರ್‌ 25 ರ ಕ್ರಿಸ್ತಶಕ 2023ರ ಕ್ರಿಸ್ತ ಜನನದ ಸ್ಮರಣೆಯ ಕಾಲ.

Advertisement

ವಾರಗಳಿಂದ ಆಚರಣೆ:

ಕ್ರಿಸ್ಮಸ್‌ ಒಂದು ದಿನದ ಹಬ್ಬವಲ್ಲ. ಕೆಲವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸುಮಾರು ಆರು ವಾರಗಳ ಕಾಲದವರೆಗೂ ಈ ಹಬ್ಬದ ಆಚರಣೆ ವಿಸ್ತರಿಸುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿನ ಆಚರಣೆಗಳಲ್ಲೂ ವಿವಿಧತೆ. ಎಷ್ಟೋ ದಿನಗಳ ಮುಂಚೆಯೇ ತಯಾರಿ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಶುಭಾಶಯ ಮತ್ತು ಉಡುಗೊರೆಗಳ ವಿನಿಮಯ ನಡೆಯುವುದು ವಿಶೇಷ. ಕಡಿಮೆ ಆರ್ಥಿಕ ಸಾಮರ್ಥ್ಯ ಇರುವವರಿಗೆ ಸಹಾಯ ಮಾಡುವ ಕಾಲವೂ ಹೌದು. ನಮ್ಮ ದೇಶದಲ್ಲಿ ಹೊರ ನೋಟಕ್ಕೆ ಎರಡು-ಮೂರು ದಿನಗಳ ಆಚರಣೆ ಕಂಡುಬಂದರೂ ನಾಲ್ಕು ವಾರಗಳ ಮೊದಲೇ ಇಗರ್ಜಿಗಳಲ್ಲಿ ಹಾಗೂ ಮನೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.

ಬಾಲ್ಯದ ಮೆಲುಕು:

ಕ್ರಿಸ್ಮಸ್‌ ಹಬ್ಬವೆಂದಾಗ ನನಗೆ ನೆನಪಿಗೆ ಬರುವುದು ಬಾಲ್ಯ ಕಾಲದ ಅಂದರೆ ಸುಮಾರು ಐವತ್ತು ವರ್ಷಗಳ ಹಿಂದಿನ ದಿನಗಳ (1970-80ರ ದಶಕದ) ಗ್ರಾಮೀಣ ಪ್ರದೇಶಗಳ ಹಬ್ಬದ ಆಚರಣೆ. ಇಂದಿನ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿಗೆ ಸೇರಿದ ಮುದರಂಗಡಿಯ ಸೈಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ ಚರ್ಚಿನ ವ್ಯಾಪ್ತಿಯ ನಮ್ಮ ಸುತ್ತಮುತ್ತಲಿನ ಕ್ರೈಸ್ತ ಸಮುದಾಯದ ಜನರು ಹೆಚ್ಚು ಕಡಿಮೆ ಒಂದೇ ರೀತಿಯ ಜೀವನ ಶೈಲಿಯವರು. ಹೆಚ್ಚಿನವರು ಕೆಳ ಮಧ್ಯಮ, ಮಧ್ಯಮ ವರ್ಗದ ಕೃಷಿಕರು. ಕೆಲವು ಕುಟುಂಬಗಳ ಪುರುಷರು ಮುಂಬೈ ನಗರದಲ್ಲಿ, ಮತ್ತೆ ಕೆಲವರು ವಾಣಿಜ್ಯ ಹಡಗುಗಳಲ್ಲಿ, ತೀರಾ ಅಪರೂಪಕ್ಕೆ ಮಧ್ಯಪ್ರಾಚ್ಯ ದೇಶಗಳಲ್ಲಿ ಕೆಲಸ ಮಾಡುವವರಿದ್ದರು. ಕೆಲವು ಕುಟುಂಬಗಳು ಆರ್ಥಿಕವಾಗಿಯೂ ಸ್ವಲ್ಪ ಚೆನ್ನಾಗಿದ್ದರೂ ಜೀವನ ಶೈಲಿಯಲ್ಲಿ ಕಣ್ಣಿಗೆ ರಾಚುವಂತಹ ವ್ಯತ್ಯಾಸವಿರಲಿಲ್ಲ.

Advertisement

ಇಂತಹ ನಮ್ಮ ಕುಟುಂಬಗಳಲ್ಲಿ ಹಬ್ಬಕ್ಕೊಮ್ಮೆ ಸಿಗುವ ಹೊಸಬಟ್ಟೆ, ಆ ಹೊಸಬಟ್ಟೆಯ ಪರಿಮಳ, ಧರಿಸಿದಾಗ ಆಗುತ್ತಿದ್ದ ಸಂಭ್ರಮ ಈಗ ದಿನ ನಿತ್ಯ ಹೊಸದನ್ನು ಧರಿಸುವ ಸಾಮರ್ಥ್ಯವಿದ್ದಾಗಲೂ ಅಥವಾ ಹಲವು ಬಾರಿ ಹೊಸ ಉಡುಗೆಗಳನ್ನು ಧರಿಸುವಾಗಲೂ ಸಿಗುವುದಿಲ್ಲ.

ಮಕ್ಕಳದ್ದೇ ಎಲ್ಲ ಕಾರುಬಾರು:

ಕ್ರಿಸ್ಮಸ್‌ ಹಬ್ಬದ ಆಚರಣೆಗಾಗಿ ನಾವು ಮಕ್ಕಳೇ ಸೇರಿ ಗೋದಲಿ (ದನದ ಕೊಟ್ಟಿಗೆ)ಯನ್ನು ಸಿದ್ಧಪಡಿಸುತ್ತಿದ್ದೆವು. ಹಬ್ಬಕ್ಕೆ ಇನ್ನೂ ಒಂದು ವಾರ ಇರುವಾಗಲೇ ಗದ್ದೆಯ ಮಣ್ಣನ್ನು ತಂದು, ನೀರು ಸೇರಿಸಿ, ಮಣ್ಣಿಗೆ ಹುಳಿಬರಿಸಿ ಬಾಲ ಏಸು, ಮೇರಿ, ಜೋಸೆಫ್, ಆಡು, ಹಸು, ಕುದುರೆ, ಒಂಟೆ, ಕುರುಬರು, ಮೂವರು ಜ್ಞಾನಿಗಳು, ದೇವದೂತರ ಮೂರ್ತಿಗಳನ್ನು ಮಾಡಿ, ಒಣಗಿದ ನಂತರ ಬಣ್ಣ ಹಚ್ಚುವುದು ಇವನ್ನೆಲ್ಲ ಬಹಳ ತಾಳ್ಮೆಯಿಂದ ಮಾಡಬೇಕು. ಗೋದಲಿ ಸಿದ್ಧಪಡಿಸಿದ ನಂತರ ಇವನ್ನೆಲ್ಲ ಗೋದಲಿಯಲ್ಲಿಡುವುದು. ಹೀಗೆ ಒಟ್ಟು ಎರಡು-ಮೂರು ದಿನಗಳ ಕೆಲಸ. ಶಾಲೆಯಲ್ಲಿದ್ದಾಗಲೂ ಮನಸ್ಸು ಗೋದಲಿಯಲ್ಲೇ. ಬಣ್ಣದ ಕಾಗದಗಳನ್ನು ತಂದು ದೊಡ್ಡ ನಕ್ಷತ್ರವನ್ನು ತಯಾರಿಸುವ ಚಾಣಾಕ್ಷತೆ ನಮ್ಮ ಅಣ್ಣನಿಗಿತ್ತು. ಚಿಕ್ಕ ಮಕ್ಕಳು ದೊಡ್ಡ ಹುಡುಗರಿಗೆ ಗೋದಲಿ ನಿರ್ಮಾಣದಲ್ಲಿ ಸಹಾಯಕರಾಗಿ ಕೆಲಸ ಮಾಡಬೇಕು. ಅವರು ಹೇಳಿದಂತೆ ಕೇಳಬೇಕು. ಅಕ್ಕ ಪಕ್ಕದ ಮನೆಯ ಅನ್ಯ ಧರ್ಮದ ಮಕ್ಕಳನ್ನೂ ಸೇರಿಸಿಕೊಂಡು ಗೋದಲಿ ಮಾಡುವುದು ಆಗಿದ್ದ ಸಂಪ್ರದಾಯ. ಅವರಿಗೂ ನಮ್ಮಷ್ಟೇ ಅಥವಾ ಇನ್ನೂ ಸ್ವಲ್ಪ ಹೆಚ್ಚಿನ ಉತ್ಸಾಹ. ನೆರೆಹೊರೆಯವರ ಸಾಮಗ್ರಿಗಳನ್ನೂ ಸಂಗ್ರಹಿಸಿ ಅವರ ಮಕ್ಕಳನ್ನೂ ಸೇರಿಸಿಕೊಂಡು ಸಿದ್ಧಪಡಿಸಿದ ಅಂದಿನ ಗೋದಲಿ ನಮಗರಿವಿಲ್ಲದೆಯೆ ಪರಸ್ಪರ ಸಹಕಾರ, ಭ್ರಾತೃತ್ವ, ಸಹಿಷ್ಣುತೆಯ ಪಾಠಶಾಲೆಯಾಗಿತ್ತು.

ಮನೆಯಲ್ಲೇ ತಯಾರಿಸಿದ ವಿಶೇಷ ತಿಂಡಿ, ತಿನಿಸುಗಳನ್ನು ಡಿಸೆಂಬರ್‌ 24ರಂದು ನೆರೆಹೊರೆಯವರಿಗೆ ಹಂಚುವ ಸಂಭ್ರಮ. ಕರಾವಳಿ ಮೂಲದ ಕೊಂಕಣಿ ಕ್ರೈಸ್ತರು ಈ ತಿಂಡಿಗಳನ್ನು ಒಟ್ಟಾಗಿ “ಕುಸ್ವಾರ್‌’ ಎನ್ನುತ್ತಾರೆ. ರೋಸ್‌ ಕುಕ್ಕೀಸ್‌, ಕಲ್ಕಲ್ಸ್, ಕೇಕ್‌, ಕಜ್ಜಾಯ, ಹುರಿದ ಅಕ್ಕಿ ಹಿಟ್ಟಿನ ಉಂಡೆ, ಚಕ್ಕುಲಿ, ಕೋಡುಬಳೆ ಮೊದಲಾದ ತಿಂಡಿಗಳು.

ಮಧ್ಯರಾತ್ರಿಯ ಪೂಜೆಯಲ್ಲಿ ತೂಕಡಿಕೆ:

ಅಂದೇ ಮಧ್ಯರಾತ್ರಿಯ ಪೂಜೆಗಾಗಿ ನಾವೆಲ್ಲ ಗುಂಪು ಗುಂಪಾಗಿ ಇಗರ್ಜಿಗೆ ಹೋಗುತ್ತಿದ್ದೆವು. ಮಧ್ಯರಾತ್ರಿ ಕ್ರಿಸ್ತನ ಜನನ ಸಮಯದವರೆಗೂ ವಿಶೇಷವಾದ ಹಾಡುಗಳ ಗಾಯನ (Christmas carols) ಸುಮಾರು ಎರಡು ಗಂಟೆಗಳ ಪೂಜಾ ವಿಧಿಯ ಸಮಯದಲ್ಲಿ ಮಕ್ಕಳು ನಿದ್ದೆಯಿಂದ ತೂಕಡಿಸುವುದು ಸಾಮಾನ್ಯ ದೃಶ್ಯವಾಗಿತ್ತು. ಪೂಜೆಯ ನಂತರ ಪರಸ್ಪರ ಶುಭಾಶಯ ವಿನಿಮಯ, ಓಡೋಡಿ ಮನೆಗೆ ಬಂದು ಗೋದಲಿಯಲ್ಲಿ ಬಾಲ ಏಸುವಿನ ಮೂರ್ತಿಯನ್ನಿಡುವುದು, ನಕ್ಷತ್ರದ ಬಲ್ಬನ್ನು ಬೆಳಗಿಸುವುದು, ಗೋದಲಿಯ ಚೆಂದವನ್ನು ಗಮನಿಸುವುದು, ಇನ್ನು ಸಾಕು, ಮಲಗಿಕೊಳ್ಳಿ ಎಂದು ದೊಡ್ಡವರಿಂದ ಬೈಸಿಕೊಳ್ಳುವುದು. ಆಹಾ, ಅವು ಎಂತಹ ಚೆಂದದ ದಿನಗಳಾಗಿದ್ದವು.

ಮರೀಚಿಕೆಯಾಗದಿರಲಿ ಸಂಸ್ಕೃತಿ ಸೌಹಾರ್ದ :

ಮಾರನೆಯ ದಿನ ವಿಶೇಷ ಹಬ್ಬದ ಅಡುಗೆ. ಸಾಮಾನ್ಯವಾಗಿ ಮಾಂಸಾಹಾರ. ಮಧ್ಯಾಹ್ನ ಊಟಕ್ಕೆ ಇತರ ಧರ್ಮದ ನೆರೆಹೊರೆಯವರಿಗೆ ಆಹ್ವಾನ. ಪರಸ್ಪರ ಪ್ರೀತಿ, ವಿಶ್ವಾಸ ನಿವೇದನೆಯ ಅಪೂರ್ವ ಅನುಭವದ ಸೀಸನ್‌. ಊರಿನ ಜಾತ್ರೆ, ಯುಗಾದಿ, ಅಷ್ಟಮಿ, ಚೌತಿ, ದೀಪಾವಳಿ ಮೊದಲಾದ ಹಬ್ಬಗಳ ಸಂಭ್ರಮವನ್ನು ಅವರು ನಮ್ಮೊಂದಿಗೆ, ಕ್ರಿಸ್ಮಸ್‌, ಸಾಂತ್‌ ಮಾರಿ, ತೆನೆ ಹಬ್ಬದ ಸವಿಯನ್ನು ನಾವು ಅವರೊಂದಿಗೆ ಹಂಚಿಕೊಳ್ಳುತ್ತಿದ್ದ ಆ ಸಂಸ್ಕೃತಿ ಈಗ ಕ್ರಮೇಣ ಮರೆಯಾಗುತ್ತಿದೆ. ಹಿಂದಿನ ಸೌಹಾರ್ದತೆಯ ಕಾಲ ಮರೀಚಿಕೆಯಾಗದಿರಲಿ ಎಂಬ ಹಾರೈಕೆಯೊಂದಿಗೆ ಎಲ್ಲರೂ ಒಟ್ಟಾಗಿ ಕ್ರಿಸ್ಮಸ್‌ ಆಚರಿಸೋಣ.

-ಕನ್ಸೆಪ್ಟಾ ಫೆರ್ನಾಂಡಿಸ್‌

Advertisement

Udayavani is now on Telegram. Click here to join our channel and stay updated with the latest news.

Next