Advertisement

ಹುಳಿ ಸಿಹಿ ಕಿತ್ತಳೆ ಹಣ್ಣಿನ ಖಾದ್ಯಗಳು

10:19 AM Mar 02, 2020 | mahesh |

ಕಿತ್ತಳೆಯಲ್ಲಿ ಹಲವಾರು ಆರೋಗ್ಯಕಾರಿ ಉಪಯೋಗವಿದ್ದು, ಸಿಹಿ ಹುಳಿ ರುಚಿಯ ಕಿತ್ತಳೆ ಹಣ್ಣಿನಿಂದ ಕೇವಲ ಜ್ಯೂಸ್‌ ಅಥವಾ ಸಲಾಡ್‌ ತಯಾರಿಸುವ ಬಗ್ಗೆ ಮಾತ್ರ ನೀವು ಕೇಳಿರುತ್ತೀರಿ. ಆದರೆ ಈ ಹಣ್ಣಿನಿಂದ ಇನ್ನಿತರ ಸ್ವಾದಿಷ್ಟಕರವಾದ ತಿನಿಸುಗಳನ್ನು ಮಾಡಬಹುದಾಗಿದ್ದು, ಅಂಥ ಕೆಲವು ಖಾದ್ಯಗಳ ತಯಾರಿಸುವ ವಿಧಾನದ ಮಾಹಿತಿ ಇಲ್ಲಿದೆ.

Advertisement

ಆರೆಂಜ್‌ ಮೇಲೋಗರ
 ಬೇಕಾಗುವ ಸಾಮಗ್ರಿಗಳು
ಕಿತ್ತಳೆ ಹಣ್ಣಿನ ತೊಳೆ-1 ದೊಡ್ಡ ಕಪ್‌, ದೊಡ್ಡ ಟೊಮೇಟೊ-1, ಈರುಳ್ಳಿ-1, ರುಬ್ಬಲು ಕಾಯಿತುರಿ-1 ಸಣ್ಣ ಕಪ್‌, ಹುಳಿ ಪುಡಿ-1 ಟೇಬಲ್‌ ಸ್ಪೂನ್‌, ಕಡ್ಲೆಹಿಟ್ಟು-1 ಟೇಬಲ್‌ ಸ್ಪೂನ್‌, ಶುಂಠಿ ಬೆಳ್ಳುಳ್ಳಿ ಪೇಸ್ಟ್-ಸ್ವಲ್ಪ, ನಿಂಬೆ ರಸ-2 ಚಮಚ, ಬೆಲ್ಲ ಸಣ್ಣ ತುಂಡು, ಉಪ್ಪು-ರುಚಿಗೆ ತಕ್ಕಷ್ಟು, ಅರಿಶಿನ ಪುಡಿ-ಸ್ವಲ್ಪ, ಒಗ್ಗರಣೆಗೆ ಎಣ್ಣೆ-2 ಟೇಬಲ್‌ ಸ್ಪೂನ್‌, ಇಂಗು, ಸಾಸಿವೆ, ಜೀರಿಗೆ, ಕಾಳುಮೆಣಸು, ಮೆಂತ್ಯೆ, ಒಣ ಮೆಣಸಿನಕಾಯಿ ತುಂಡು-4, ಕರಿಬೇವು-ಸ್ವಲ್ಪ.

ವಿಧಾನ: ಒಗ್ಗರಣೆ ಸಾಮಗ್ರಿಯನ್ನು ಹುರಿದು ಹೆಚ್ಚಿದ ಈರುಳ್ಳಿ ಮತ್ತು ಟೊಮೇಟೊ ಹಾಕಿ ಬಾಡಿಸಿ ರುಬ್ಬಿದ ಮಸಾಲೆ, ಉಪ್ಪು, ಬೆಲ್ಲ, ಹುಣಸೆ ರಸ ಮತ್ತು ಅರ್ಧ ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ ಕೊನೆಗೆ ಕಿತ್ತಳೆ ತೊಳೆ ಹಾಕಿ ತಿರುವಿ ಮುಚ್ಚಿ ಬೇಯಿಸಿ. ಸ್ವಲ್ಪ ಸಮಯದ ನಂತರ ಇದನ್ನು ಮತ್ತೆ ಕಲಸಿ ಕೆಳಗಿಳಿಸಿದರೆ ರುಚಿಯಾದ ಮೇಲೋಗರ ರೆಡಿ.

ಕಿತ್ತಳೆ ಸಾಲ್ಸಾ
 ಬೇಕಾಗುವ ಸಾಮಗ್ರಿಗಳು
ಕಿತ್ತಲೆ- 3, ದೊಡ್ಡ ಮೆಣಸಿನಕಾಯಿ – 1 ಈರುಳ್ಳಿ – 1, ಓಮ ಕಾಳು- 1/2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಅಚ್ಚಮೆಣಸಿನ ಪುಡಿ – 1 ಚಮಚ, ವಿನೆಗರ್‌ -1 ಚಮಚ, ಸಕ್ಕರೆ – 2 ಚಮಚ, ಎಣ್ಣೆ – 2 ಚಮಚ.

ವಿಧಾನ: ಕಿತ್ತಲೆ ಹಣ್ಣಿನ ತೊಳೆ ಬಿಡಿಸಿ ಸಣ್ಣದಾಗಿ ಪೀಸ್‌ ಮಾಡಿ, ಕ್ಯಾಪ್ಸಿಕಂನ ಸಿಪ್ಪೆ ಬೇರ್ಪಡಿಸಿ ಅದನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಅನಂತರ ಖಾದ ಬಾಣಲೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ಬಳಿಕ ಇದಕ್ಕೆ ಕ್ಯಾಪ್ಸಿಕಂ, ಕಿತ್ತಲೆ ತೊಳೆಗಳನ್ನು, ಉಪ್ಪು ಖಾರ, ಸಕ್ಕರೆ, ವಿನೆಗರ್‌ ಎಲ್ಲಾ ಬೆರೆಸಿಕೊಂಡು, ಚೆನ್ನಾಗಿ ಕೈಯಾಡಿಸಿ, ಕೆಳಗಿಳಿಸಿ ಈಗ ರುಚಿಕರ ಕಿತ್ತಲೆ ಸಾಲ್ಸಾವನ್ನು ಸವಿಯಿರಿ

Advertisement

ಕೇಸರಿ ಭಾತ್‌
ಬೇಕಾಗುವ ಸಾಮಾಗ್ರಿಗಳು
ಅನ್ನ-1 ಕಪ್‌, ಕಿತ್ತಳೆ ರಸ-1 ಕಪ್‌, ಬೆಲ್ಲ /ಸಕ್ಕರೆ-ರುಚಿಗೆ ತಕ್ಕಷ್ಟು, ತುಪ್ಪ-1/2 ಕಪ್‌, ಕರಿದ ದ್ರಾಕ್ಷಿ ಮತ್ತು ಗೋಡಂಬಿ-ಅರ್ಧ ಕಪ್‌, ಏಲಕ್ಕಿ-ಕಾಲು ಚಮಚ, ಕೇಸರಿ ಬಾದಾಮಿ ಪುಡಿ-1 ಸ್ಪೂನ್‌.

ವಿಧಾನ: ಕಿತ್ತಳೆ ರಸಕ್ಕೆ ಬೆಲ್ಲ ಅಥವಾ ಸಕ್ಕರೆ ಮತ್ತು ತುಪ್ಪ ಹಾಕಿ ಕರಗಿಸಿ. ಬಳಿಕ ಅನ್ನ ಬೆರೆಸಿ ಚೆನ್ನಾಗಿ ಮಿಶ್ರ ಮಾಡಿ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ಬಾದಾಮಿ ಪುಡಿ ಸೇರಿಸಿ ಮೇಲಿನಿಂದ ಒಂದು ಚಮಚ ತುಪ್ಪ ಹಾಕಿ ಕಲಸಿ.

ಕಿತ್ತಳೆ ಮುರಬ್ಬ
ಬೇಕಾಗುವ ಸಾಮಗ್ರಿಗಳು: ಕತ್ತರಿಸಿದ ಕಿತ್ತಳೆ ತುಂಡುಗಳು – 2 ಕಪ್‌, ಸಕ್ಕರೆ – 1/2 ಕೆ.ಜಿ. ಏಲಕ್ಕಿ ಪುಡಿ – 1 ಚಮಚ ಸಿಟ್ರಿಕ್‌ ಆಮ್ಲ – 1/2 ಚಮಚ, ಕೇಸರಿ ಎಸೆನ್ಸ್ – 1/2 ಚಮಚ

ವಿಧಾನ : ಕಾಲು ಲೀಟರ್‌ ನೀರಿನಲ್ಲಿ ಸಕ್ಕರೆ ಸುರಿದು ಪಾಕ ತಯಾರಿಸಿ, ಪೀಸ್‌ ಮಾಡಿರುವ ಕಿತ್ತಳೆ ಹಾಕಿ. ಪಾಕ ಗಟ್ಟಿಯಾಗುವವರೆಗೂ ಕಡಿಮೆ ಉರಿಯ ಮೇಲೆ ಬೇಯಿಸಿ. ಎಸೆನ್ಸ್ ಮತ್ತು ಏಲಕ್ಕಿ ಪುಡಿ ಹಾಕಿ ಕಲಕಿ, ತಂಪು ಮಾಡಿ, ಬಾಟಲ್‌ನಲ್ಲಿ ಇಟ್ಟು ಉಪಯೋಗಿಸಿ. ಇದನ್ನು ಚಪಾತಿ, ರೊಟ್ಟಿ ಜತೆ ತಿನ್ನಲು ಚೆನ್ನ.

ಕಿತ್ತಳೆ ತೊಳೆಯ ರಾಯತ
ಸಾಮಗ್ರಿಗಳು:
ಬಿಳಿ ಸಿಪ್ಪೆ ಬಿಡಿಸಿದ ಕಿತ್ತಳೆ ತೊಳೆ-1 ಕಪ್‌, ಗಟ್ಟಿ ಮೊಸರು-1 ಕಪ್‌, ಉಪ್ಪು-ರುಚಿಗೆ ತಕ್ಕಷ್ಟು, ರುಬ್ಬಲು ಕಾಯಿತುರಿ-1 ಕಪ್‌, ಕಾಳುಮೆಣಸು-4, ಜೀರಿಗೆ-1 ಚಮಚ.

ವಿಧಾನ: ರುಬ್ಬುವ ಸಾಮಗ್ರಿಗೆ ನೀರು ಸೇರಿಸಿ ಚಟ್ನಿ ತರಹ ಅರೆದು ಒಂದು ಸಣ್ಣ ಬೌಲ್‌ಗೆ ಹಾಕಿ ಮೊಸರು, ಉಪ್ಪು ಮತ್ತು ಕಿತ್ತಳೆ ತೊಳೆಗಳನ್ನು ಹಾಕಿ ಬಳಿಕ ಅದಕ್ಕೆ ಸಾಸಿವೆ, ಇಂಗು, ಜೀರಿಗೆ, ಒಣ ಮೆಣಸಿನಕಾಯಿ ತುಂಡಿನ ಒಗ್ಗರಣೆ ಹಾಕಿ ಚೆನ್ನಾಗಿ ಕಲಸಿದರೆ ರಾಯತ ಸಿದ್ಧ.

Advertisement

Udayavani is now on Telegram. Click here to join our channel and stay updated with the latest news.

Next