Advertisement

ಶೀಘ್ರವೇ ಪೊಲೀಸರ ಮೈಗೆ ಕ್ಯಾಮರಾ ಫಿಕ್ಸ್

12:38 PM Sep 21, 2019 | Team Udayavani |

ಮಂಡ್ಯ: ಜಿಲ್ಲೆಯ ಪೊಲೀಸರ ಕೈಯ್ಯಲ್ಲಿ ಲಾಠಿ, ಬಂದೂಕು ಇರುವುದನ್ನು ಕಂಡಿದ್ದೇವೆ. ಆದರೆ, ಮೈಗೊಂದು ಕ್ಯಾಮೆರಾ ಫಿಕ್ಸ್‌ ಮಾಡಿಕೊಂಡು ಕರ್ತವ್ಯಕ್ಕಿಳಿದರೆ ಹೇಗಿರುತ್ತೆ ಅನ್ನೋದನ್ನ ನೋಡಬೇಕಾದರೆ ಸ್ವಲ್ಪದಿನ ಕಾಯಬೇಕು. ಅವರು ಓಡಾಡಿದ ಕಡೆಯ ಕ್ಯಾಮರಾ ಚಿತ್ರೀಕರಣ ಆಗುತ್ತೆ. ಅಂದಹಾಗೆ ಶೀಘ್ರವೇ ಜಿಲ್ಲೆಯ ಪೊಲೀಸರ ಮೈಗೆ ಕ್ಯಾಮರಾ ತಗುಲಿ ಹಾಕಿಕೊಳ್ಳಲಿದೆ.

Advertisement

ಮೊದಲ ಹಂತದಲ್ಲಿ 40 ಬಾಡಿ ವೋರ್‌ ಕ್ಯಾಮರಾಗಳನ್ನು ತರಿಸಿಕೊಳ್ಳಲಾಗುತ್ತಿದೆ. ಒಟ್ಟು 60 ಕ್ಯಾಮರಾಗಳ ಅಗತ್ಯವಿದ್ದು, ಅನುದಾನ ನೋಡಿಕೊಂಡು ಉಳಿದ ಕ್ಯಾಮರಾಗಳನ್ನು ಖರೀದಿ ಮಾಡಲು ಪೊಲೀಸ್‌ ಇಲಾಖೆ ನಿರ್ಧರಿಸಿದೆ. ಕರ್ತವ್ಯದ ವೇಳೆ ಸಂಭವಿಸುವ ಘಟನಾವಳಿಗಳನ್ನು ಸೆರೆಹಿಡಿಯಲು ಈ ಕ್ಯಾಮರಾಗಳು ಪೊಲೀಸರ ನೆರವಿಗೆ ಬರಲಿವೆ.

ಈ ವಿಡಿಯೋ ಕ್ಯಾಮರಾ ಪೊಲೀಸರ ಸಮವಸ್ತ್ರದ ಒಂದು ಭಾಗವಾಗಲಿದೆ. ಲಾಠಿ, ವಾಕಿಟಾಕಿ, ಜೊತೆಯಲ್ಲೇ ಪೊಲೀಸರು ಕ್ಯಾಮರಾಗೆ ಹೊಂದುವುದೂ ಕಡ್ಡಾಯ ಮಾಡಲಾಗುತ್ತದೆ. ದೇಹದ ಎದೆಯ ಭಾಗದಲ್ಲಿ ಶರ್ಟ್‌ಗೆ ಅಳವಡಿಸಿದ ಈ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಲಿವೆ.

ಸಾಕ್ಷಿ ಸಹಿತ ದಾಖಲೆಗೆ ಅನುಕೂಲ: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುವ ಉದ್ದೇಶ ಹಾಗೂ ಕೋಮುಗಲಭೆ, ಬಂದ್‌, ಮುಷ್ಕರದ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವ ದುಷ್ಕರ್ಮಿಗಳ ವಿರುದ್ಧ ಸಾಕ್ಷಿ ಸಹಿತ ದಾಖಲೆ ಒದಗಿಸಲು ಹಾಗೂ ಇತರೆ ಸಂದರ್ಭಗಳಲ್ಲೂ ಈ ಕ್ಯಾಮರಾ ಹೆಚ್ಚು ಉಪಯೋಗಕಾರಿಯಾಗಲಿದೆ.

ಧ್ವನಿ, ದೃಶ್ಯವೂ ದಾಖಲು: ಚಿಕ್ಕದಾಗಿರುವ ಈ ಕ್ಯಾಮರಾ ಶರ್ಟ್‌ ಎದೆಯ ಭಾಗದಲ್ಲಿ ಇರಲಿದ್ದು, ಅಗತ್ಯ ಸಂದರ್ಭಗಳಲ್ಲಿ ಬಟನ್‌ ಒತ್ತಿ ಕ್ಯಾಮರಾ ಆನ್‌ ಮಾಡಿಕೊಳ್ಳಬಹುದು. ಪೊಲೀಸ್‌ ಅಧಿಕಾರಿ ಇತರೆ ಕೆಲಸ ಮಾಡುವ ಸ್ಥಳದಲ್ಲಿ ನಡೆಯುವ ದೃಶ್ಯಗಳೂ

Advertisement

ಇದರಲ್ಲಿ ಸೆರೆಯಾಗುತ್ತವೆ. ಪೊಲೀಸ್‌ ಅಧಿಕಾರಿಯ ಧ್ವನಿ ಹಾಗೂ ಇತರರ ಧ್ವನಿ, ದೃಶ್ಯವೂ ಇದರಲ್ಲಿ ದಾಖಲಾಗುವುದು. ಸಂಚಾರ ಉಲ್ಲಂಘನೆ ಮಾಡುವ ವಾಹನ ಸವಾರರಿಂದ ಸಾಕ್ಷಿ ಸಮೇತ ದಂಡ ವಸೂಲಿಗೂ ಇವು ಅನುಕೂಲಕ್ಕೆ ಬರಲಿವೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಕ್ಯಾಮರಾಗಳು 8 ಗಂಟೆ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿವೆ. ಬೇಕಾದ ದಿಕ್ಕುಗಳಿಗೆ

ಕ್ಯಾಮರಾವನ್ನು ತಿರುಗಿಸಿಕೊಳ್ಳಲು ಅವಕಾಶವಿದ್ದು, ಇದಕ್ಕೆ ಸಂಬಂಧಿಸಿದ ಸರ್ವರ್‌ ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿಯಲ್ಲಿದ್ದು, ವಾರಕ್ಕೊಮ್ಮೆ ಈ ದೃಶ್ಯಗಳನ್ನು ಕ್ಯಾಮರಾದಿಂದ ಸರ್ವರ್‌ಗೆ ವರ್ಗಾಯಿಸಬಹುದು. 90 ದಿನ ದೃಶ್ಯಗಳನ್ನು ಉಳಿಸಿಕೊಳ್ಳುವುದಕ್ಕೆ ಅವಕಾಶವಿದೆ. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯೊಂದಿಗೆ ಇದೂ ಪ್ರಮುಖ ಸಾಕ್ಷ್ಯ ಆಗಲಿದೆ ಎನ್ನುವುದು ಪೊಲೀಸರು

ಹೇಳುವ ಮಾತಾಗಿದೆ.

ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ: ಸಂಚಾರ ನಿಯಮ ಉಲ್ಲಂ ಸಿಲ್ಲವೆಂದು ವಾದಕ್ಕೆ ಇಳಿದಲ್ಲಿ, ಪೊಲೀಸರು ಅನುಚಿತವಾಗಿ ವರ್ತಿಸಿದರೆ ಎಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿರುತ್ತವೆ. ಕೆಲವೊಮ್ಮೆ ಪೊಲೀಸರು ಹಣ ಪಡೆಯುವುದನ್ನು ಮಾತ್ರ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಾರೆ. ಆದರೆ, ರಸೀದಿ ಕೊಡುವುದನ್ನು

ಚಿತ್ರೀಕರಿಸಿರುವುದಿಲ್ಲ. ಇದು ಪೊಲೀಸರಿಗೆ ಕೆಟ್ಟ ಹೆಸರು ತರುವ ಪ್ರಯತ್ನವೂ ಆಗಿರುತ್ತದೆ. ಬಾಡಿ

ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗುವುದರಿಂದ ಯಾರೂ ತಪ್ಪಿಸಿಕೊಳ್ಳಲು ಅವಕಾಶವೇ ಇರುವುದಿಲ್ಲ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

 ಚುನಾವಣಾ ಕ್ಯಾಮೆರಾ ಕಣ್ಗಾವಲು: ಚುನಾವಣಾ ಸಮಯದಲ್ಲಿ ನಾಯಕರ ಜಿದ್ದಾಜಿದ್ದಿ ಕಣಗಳಲ್ಲಿ ಕ್ಯಾಮೆರಾ ಕಣ್ಗಾವಲು ಇಡಲು ಅನುಕೂಲವಾಗುತ್ತದೆ. ಬಹುತೇಕ ಎಲ್ಲ ಕೆಲಸಗಳನ್ನು ಈಗ ಸಿಸಿಟಿವಿ ಕ್ಯಾಮೆರಾ, ವೆಬ್‌ ಕ್ಯಾಸ್ಟಿಂಗ್‌, ವಿಡಿಯೋ, ಫೋಟೋಗ್ರಫಿ ಹೀಗೆ ಒಂದಲ್ಲ ಒಂದು ರೀತಿ ಚುನಾವಣಾ ಚಟುವಟಿಕೆಗಳು ದಾಖಲಾಗುತ್ತಿವೆ. ಅದೇ ರೀತಿ ಪೊಲೀಸರ ಬಾಡಿ ಕ್ಯಾಮರಾವೂ ಮತ್ತೂಂದು ರೀತಿಯಲ್ಲಿ ನೆರವಿಗೆ ಬರುತ್ತದೆ.

 

-ಮಂಡ್ಯ ಮಂಜುನಾಥ್    

Advertisement

Udayavani is now on Telegram. Click here to join our channel and stay updated with the latest news.

Next