Advertisement

ಹಾಡೇ ಬದುಕು, ಬದುಕೇ ಹಾಡು ಪಿಂಚ್‌ ಹಿಟ್ಟರ್‌ ವಿಜಯ್‌ ಪ್ರಕಾಶ್‌

05:33 PM Sep 24, 2017 | |

ಹಿಟ್‌  ಅಂದರೆ ಇದಪ್ಪಾ! 
ಎಲ್ಲರ ಬಾಯಲ್ಲಿ “ಬೆಳಗಾಗೆದ್ದು ಯಾರ ಮುಖವಾ ನಾನು ನೋಡಿದೆ ‘ “ಅಲ್ಲಾಡ್ಸು ಅಲ್ಲಾಡ್ಸು ‘ “ಬೊಂಬೆ ಹೇಳುತೈತೆ.’ ರೆಕಾರ್ಡುಗಳೇ ಓಡುತ್ತಿವೆ. ಯೂಟ್ಯೂಬ್‌ನಲ್ಲಿ ಲಕ್ಷ ಲಕ್ಷ ಲೈಕು.  ವಿಜಯ್‌ಪ್ರಕಾಶ್‌ ಮೈಕು ಹಿಡಿದರೇನೇ ಈ ರೀತಿ ಹಿಟ್ಟಾಗುತ್ತಾ?

Advertisement

ಈ ಪ್ರಶ್ನೆಗೆ ವಿಜಯ್‌ಪ್ರಕಾಶ್‌ ನಕ್ಕರು. ಕಟೌಟ್‌ ರೀತಿ ಎದ್ದು ನಿಂತು ಕೋಟು ಸರಿ ಮಾಡಿಕೊಂಡರು. ತಲೆಯಲ್ಲಿ ನೂರಾರು ಸ್ವರಗಳು ಹಾಡುಗಳಾಗುತ್ತಿದ್ದವೋ ಏನೋ. ಮನಸ್ಸನ್ನು ಮಾತಿಗೆ ಎಳೆದು ತಂದು ಹಾಗೇ ತಣ್ಣಗೆ ಸೋಫಾ ಮೇಲೆ ಕುಳಿತರು. ಧ್ಯಾನಸ್ಥ ಸ್ಥಿತಿಯಲ್ಲಿ ಮಾತಿನ ಬಂಡಿ ಶುರುವಾಯ್ತು.

 “ಎಲ್ಲಾ ವಿಧಿ ಸಾರ್‌. ನಮ್ಮದೇನಿದೆ? ದೇವರು ಒಂದಷ್ಟು ಹಾಡುಗಳನ್ನು ಹಾಡಿ ಬಾರ್ಲಾ ಅಂತ ನಮ್ಮನ್ನು ಭೂಮಿಗೆ ಕಳಿಸಿದ್ದಾನೆ. ನಮ್ಗೆ ಇಂಥದೇ ಬೇಕು. ಹೀಗೇ ಇರಬೇಕು ಅಂತೇನು ಇಲ್ಲ. ಯಾರಾರಿಗೆ ಏನೇನೋ ಬೇಕು ಅದೆಲ್ಲಾ  ಹಾಡ್ತಾ ಹಾಡ್ತಾ ಬದುಕತಾ ಇರಬೇಕು. ಹಾಡೇ ಬದುಕು, ಬದುಕೇ ಹಾಡು …’ ವೇದಾಂತಿಯಂತೆ ಅಂದರು ವಿಜಯ್‌. 

ಕಳೆದ ವರ್ಷ ಪೂರ್ತಿ, ಈ ವರ್ಷದ ಆರಂಭ  ವಿಜಯ ಪ್ರಕಾಶರದ್ದು ಭರ್ಜರಿ ಬ್ಯಾಟಿಂಗ್‌. ವಿಜಯ್‌ ಒಳ್ಳೆ ಹಿಟ್ಟರ್‌. ಚಿತ್ರದ ಟೈಟಲ್‌ ಟ್ರಾಕೇ ಇರಲಿ, ಪ್ಯಾಥೋ ಟ್ರಾಕೇ ಇರಲಿ. ಹೀಗೆ ಚಿತ್ರದಲ್ಲಿ ಯಾವ ಡೌನ್‌ ಬಂದರೂ ಇವರ ಹಾಡು ಹಿಟ್‌; ಇವರು ಒಳ್ಳೇ ಹಿಟ್ಟರ್‌. ಧೋನಿ ರೀತಿ. 

Advertisement

 ಕನ್ನಡದಲ್ಲಿ ಆಗಲೇ ಹಾಡೀ ಹಾಡಿ ಸೆಂಚ್ಯುರಿ ಭಾರಿಸಿದ್ದಾರೆ. 
ಇಷ್ಟಾದರೂ ವಿಜಯ್‌ಪ್ರಕಾಶ್‌ ತಲೆ ಕುತ್ತಿಗೆಯ ಮೇಲೆ ಇದೆ.  ಹೊಗಳಿಕೆಗೆ ಬಾಗದೆ; ಯಶಸ್ಸಿಗೆ ಮೈ ಮರೆಯದೆ. ಯೋಗವು ಒಮ್ಮೆ ಬರುವುದು ನಮಗೇ, ಯೋಗ್ಯತೆ ಒಂದೇ ಉಳಿವುದು ಕೊನೆಗೆ ಅನ್ನೋ ರೀತಿ – ಹಿಟ್‌ಗೂ ನನಗೂ ಯಾವುದೇ ಸಂಬಂಧವಿಲ್ಲ ಅನ್ನೋ ಥರ ವಿರಾಮವಾಗಿ ಕುಳಿತಿದ್ದರು.   

“ಜನ ಪ್ರೀತಿಯಿಂದ, ಬಿಡ್ರೀ … ನೀವು ಬಾಂಬೆಗೆ ಹೋದ್ರಿ, ಒಳ್ಳೇ ಸಾಧನೆ ಮಾಡಿದ್ರೀ ಅಂತ ಕ್ರೆಡಿಟ್‌ ಕೊಡ್ತಾರೆ. ಅದನ್ನು ಮುಚ್ಕೋಂಡು ಗೌರವಯುತವಾಗಿ ತಗೋಬೇಕು. ಅವರ ಜೊತೆ ಸರಿಯಾಗಿ ನಡ್ಕೊàಬೇಕು. ಹೀಗಂತ ಪದೇಪದೇ ನನಗೆ ನಾನೇ ಹೇಳಿಕೊಳ್ಳುತ್ತಿರುತ್ತೇನೆ. ದುಡ್ಡು, ಪ್ರಚಾರ ಎಲ್ಲ ಇವತ್ತು ಬರುತ್ತೆ. ನಾಳೆ ಹೋಗುತ್ತೆ. ಕೊನೆಗೆ ಉಳಿಯೋದು ಇವರೆಡರ ಮಧ್ಯೆ ನಾವೇನು ಮಾಡಿದ್ದೀವಿ ಅನ್ನೋದೆ. 

ಏಕೆಂದರೆ, ಇನ್ನು ಏನೂ ಅಂಥ ಸಾಧನೆ ಮಾಡಿಲ್ಲ ಅನ್ನೋದು ನನಗೆ ಚೆನ್ನಾಗಿ ಗೊತ್ತು.  ಎಲ್ಲವೂ ತಾನು ತಾನಾಗೇ ನಡೆಯುತ್ತಿದೆ.  ಕ್ರಿಡಿಟ್‌ ತಗೊಳ್ಳದೇ ಇದ್ದರೆ ನೆಮ್ಮದಿಯಾಗಿ ಬದುಕಬಹುದು ಅನ್ನೋದನ್ನು ಈ 20 ವರ್ಷದ ಸಂಗೀತಯಾನ ಹೇಳಿಕೊಟ್ಟಿದೆ’. ವಿಜಯ್‌ಪ್ರಕಾಶ್‌ ಸಂಗೀತ ಸ್ವಾಮೀಜಿಯಂತೆ ಮತ್ತಷ್ಟು ಅಧ್ಯಾತ್ಮಿಕರಾದರು. 

“ಬೇರೆಯವರಿಗೆ ಉಪದೇಶ ಮಾಡುವಷ್ಟು ದೊಡ್ಡೋನಲ್ಲ ನಾನು.  ಬೇಸಿಕಲಿ ಇವ್ಯಾವುದೂ  ನಾನು ಸಂಪಾದನೆ ಮಾಡಿದ್ದಲ್ಲ. ದೇವರು ಹಾಡೋಕೆ ಗಂಟಲು ಕೊಟ್ಟಿದ್ದಾನೆ, ಅವಕಾಶ ಇಟ್ಟಿದ್ದಾನೆ. ಅದನ್ನ ಹೇಗೆ ಬಳಸಿ ಕೊಳ್ಳಬೇಕು ಅನ್ನೋದನ್ನು ನಮಗೆ ಬಿಟ್ಟಿದ್ದಾನೆ.  ಹೀಗೆ ಎಲ್ಲವೂ ಅವನ ಕೊಟ್ಟಮೇಲೆ ನಾನು, ನನ್ನದು ಅಂತ ಏನಿದೆ? ಕೆರೆಯ ನೀರನು ಕೆರೆಗೆ ಚೆಲ್ಲಿ ಅಂತಾರಲ್ಲ ಹಾಗೇ ಮಾಡುತ್ತಿದ್ದೇನೆ ಅಷ್ಟೇ.  ನಿಮಗೆ ಗೊತ್ತಾ? ನಾನು ಎಷ್ಟೋ ಸಲ ಅಂದು ಕೊಳ್ತೀನಿ. ಬಾಂಬೆ ಏಕೆ ಹೋಗಿದ್ದು ಅಂತ.  ಅದೇನೋ ವಿಧಿ ಅಲ್ಲಿಗೆ ಎಳೆದು ಕೊಂಡು ಹೋಯ್ತು. ಬದುಕಿನ ಪಾಠ ಕಲಿಸಿತು. ಅಲ್ಲಿಂದ ಜಗತ್ತಿಗೆ ನನ್ನ ಲಾಂಚ್‌ ಮಾಡಿತು’ ಅಂದರು ವಿಜಯ್‌.

ತುಂಡಾದ ಮಾತನ್ನು ಮುಂದವರಿಸಿ, “ನಾನು ಅಲ್ಲೆಲ್ಲೋ ಮಿಂಚ್ತಾ ಇದ್ದೀನಿ. ನಿವ್ಯಾಕೆ ನನ್ನ ಕಡೆ ನೋಡ್ತಾ ಇಲ್ಲ ಅಂತೆಲ್ಲಾ ಇಲ್ಲಿನವರನ್ನು ಕೇಳಬಾರದು. ಏಕೆಂದರೆ ಇಲ್ಲೇ ಇದ್ದಿದ್ದರೆ ಇಲ್ಲೇ ಮಿಂಚುತ್ತಿದ್ದೆ.  20ನೇ ವಯಸ್ಸಿಗೆ ಎಲ್ಲ ರೀತಿ ಸಂಗೀತ ಕಲಿಯುವ ಹುಚ್ಚನ್ನು ತಲೆಗೆ ತುಂಬಿಕೊಂಡು  ಬಾಂಬೆಗೆ ಹೋದದ್ದು ನಾನು. ಯಾರು ಕಳುಹಿಸಿದ್ದಲ್ಲ. ಅಲ್ಲಿಗೆ ಹೋದೆ. ಒಂದಷ್ಟು ಕಲಿತೆ’ ಅಂತ ಕೇಳಬೇಕಾದ ಪ್ರಶ್ನೆಗೆ ಮೊದಲೇ ಉತ್ತರ ಕೊಟ್ಟರು ವಿಜಯ್‌ಪ್ರಕಾಶ್‌.

ಭಟ್ಟರ ಗುಟ್ಟು
 ವಿಜಯ್‌ಪ್ರಕಾಶರ ಯಶಸ್ಸಿನ ಗ್ರಾಫ‌ು ನೋಡಿದರೆ ಅದರಲ್ಲಿ ಯೋಗರಾಜ್‌ ಭಟ್ಟರು,  ಹರಿಕೃಷ್ಣ, ಅರ್ಜುನ್‌ ಜನ್ಯ ಪದೇಪದೇ ಎದುರಾಗಿ ಕೈ ಕುಲುಕುತ್ತಾರೆ.  ಹಾಗೆ ನೋಡಿದರೆ ಪ್ರಕಾಶ್‌ ಒಳ್ಳೆ ಹಿಟ್ಟರ್‌ ಆಗೋಕೆ  ಇವರ ಕೊಡುಗೆಯೇ ಹೆಚ್ಚು.  ಇಂತಿಪ್ಪ ನಿಮ್ಮ, ನಿಮ್ಮಗಳ ನಡುವೆ ಅದೆಂಥ ಕೆಮಿಸ್ಟ್ರಿ ವರ್ಕ್‌ ಆಗುತ್ತೆ ಅಂದರೆ…

“ಒಂದು ವಿಷ್ಯ ಹೇಳ್ತೀನಿ. ಯೋಗರಾಜ್‌ ಭಟ್ಟರ ಸಾಹಿತ್ಯ, ಹರಿಕೃಷ್ಣ ಸಂಗೀತ ಕೊಟ್ಟಿದ್ದಾರೆ ಅಂದರೆ ಕಣ್ಣು ಮುಚ್ಕೋಂಡು ಹಾಡ್ತೀನಿ. ಏಕೆಂದರೆ ಭಟ್ಟರು, ಹರಿ ಸಾರ್‌ ಸುಖಾ ಸುಮ್ಮನೆ ಜನರ ಗಮನ ಸೆಳೆಯೋದಿಲ್ಲ. ಇಬ್ಬರೂ ಸೇರಿದ್ದಾರೆ ಅಂದರೆ ಘನವಾದ ಉದ್ದೇಶ ಇರುತ್ತದೆ ಅಂತಲೇ ಅರ್ಥ. ಭಟ್ಟರ ಸಾಹಿತ್ಯವನ್ನು ಬಹಳ ಎಂಜಾಯ್‌ ಮಾಡ್ಕೊಂಡು ಹಾಡ್ತೀನಿ.  ಚಿತ್ರದ ಪಾತ್ರ, ಸನ್ನಿವೇಶಕ್ಕೆ ಹಾಡು ಬರೆದರೂ ಸಕಲ ಮಧ್ಯಮರ್ಗದ ವಾಸ್ತವ ಬದುಕನ್ನು ಬಹಳ ಚೆನ್ನಾಗಿ ಅನಾವರಣ ಮಾಡುತ್ತಾರೆ. ಉದಾಹರಣೆಗೆ ಈ ವಾಕ್ಯ ಕೇಳಿ, “ಮೀಸೆಗೀಸೆ ಬಂದಾಗ ಹಗಲು ರಾತ್ರಿ ರಾದ್ಧಾಂತ, ಬಿಳೀಗಡ್ಡ ಬಂದಾಗ ಹೇಳಿದ್ದೆಲ್ಲಾ ವೇದಾಂತ …’ ವಿಜಯ್‌ ಹಿನ್ನೆಲೆ ಸಂಗೀತ ವಿಲ್ಲದೇ ಮಾಧುರ್ಯವಾಗಿ ಹಾಡಿದರು.

“ಇದರಲ್ಲಿ ಏನೇನೆಲ್ಲಾ ಅರ್ಥಗಳಿವೆ ಗೊತ್ತಾ?  ಪ್ರಶ್ನೆ ಎಸೆದು ಮಾತು ಮುಂದುವರಿಸಿದರು.
“ಹೀಗೆ ಬದುಕಿನ ಒಳಹುಗಳನ್ನು ತಿಳಿಸೋ ಭಟ್ಟರು ಎಲ್ಲರ ಲೈಫ‌ಲ್ಲೂ ತಲುಪಿಬಿಡ್ತಾರೆ. ಅವರ ಬದುಕಿನ ಸಾರವನ್ನು ತಂದು ಸಾಹಿತ್ಯ ಮಾಡಿ, ಎಲ್ಲರಿಗೂ ಬಡಿಸುತ್ತಾರೆ.  ಅರ್ಜನ್‌ ಜನ್ಯ, ಭಟ್ಟರು, ಹರಿಕೃಷ್ಣ- ಹೀಗೆ ನಾವೆಲ್ಲರೂ ಪ್ರೊಫೆಷನ್‌ಗೂ ಮೀರಿದ  ಸ್ನೇಹಿತರಾಗಿರೋದರಿಂದ ನಮ್ಮ ನಡುವೆ ಯಾವುದೇ ಗೋಡೆಗಳಿಲ್ಲ. ಅದಕ್ಕೆ ಅವರಿಗೆ ಏನುಬೇಕು ಅಂತ ನನಗೆ, ನನ್ನಿಂದ ಎಂಥ ಹಾಡು ಹಾಡಿಸಬಹುದು ಅಂತ ಅವರಿಗೆ ಚೆನ್ನಾಗಿ ಗೊತ್ತಿದೆ ‘ಎಂದು ಯಶಸ್ಸಿನ ಗುಟ್ಟು ಬಿಚ್ಚಿಟ್ಟರು ವಿಜಯ್‌. 

ವಿಜಯ್‌ಪ್ರಕಾಶ್‌ಗೆ ಯಾರೋ ಒಬ್ಬರು ಸಲ  “ಏನ್ರೀ … ಅಲ್ಲಾಡುÕ, ಅಲ್ಲಾಡುÕ’  ಹಾಡನ್ನು ಅದ್ಹೇಗೆ ಒಪ್ಕೊಂಡ್ರಿ’ ಅಂತ ಕೇಳಿಬಿಟ್ಟರಂತೆ.  ವಿಜಯ್‌ಪ್ರಕಾಶ್‌, “ಸ್ವಾಮೀ ಅದ್ಯಾಕೇ ಹಂಗಂತೀರ?  ಪೂರ್ತಿ ಹಾಡನ್ನು ಸರಿಯಾಗಿ ಕೇಳಿ. ಅದರಲ್ಲಿ ಎಲ್ಲರ ಬದುಕಿನ ಸತ್ಯಗಳಿವೆ.  ಸುಮ್ಮನೆ ಅಲ್ಲಾಡ್ಸು ಅಲ್ಲಾಡ್ಸು ಅನ್ನೋ ಒಂದೇ ವಾಕ್ಯದಿಂದ ಇಡೀ ಹಾಡನ್ನು ಅಳೆಯಬೇಡಿ’ ಅಂದರಂತೆ.

“”ಕಾಲಿ ಕ್ವಾಟ್ರಾ ಬಾಟ್ಲಂಗೆ ಲೈಫ‌ು …’ ಹಾಡು ಕುಡುಕರ ಸಾಂಗ್‌ ಅಲ್ಲ. ಅದು ಕುಡುಕರಿಗೋಸ್ಕರ ಬರೆದದ್ದು ಅಷ್ಟೇ. ಅದರಲ್ಲಿ ಕುಡಿಯುವವರ, ಕುಡಿಯದೇ ಇದ್ದವರ ಬದುಕಿನ ವೇದಂತ ಇಲ್ಲವೇ? ಇದೇ ಭಟ್ಟರ ತಾಕತ್ತು’ ಅಂತ ಪ್ರಕಾಶವಾಗಿ ನಕ್ಕರು ವಿಜಯ್‌. 

ಅಷ್ಟರಲ್ಲಿ  ದೂರದಲ್ಲಿ ನಿಂತ ಅಭಿಮಾನಿಗಳನ್ನು ನೋಡಿ  “ಬನ್ನಿ, ಬನ್ನಿ’ ಅಂತ ತಾವೇ ಕರೆದು ಫೋಟೋಗೆ ಫೋಸು ಕೊಟ್ಟರು. ಮುಖದಲ್ಲಿ ವಿಜಯದ ಪ್ರಕಾಶ ಇತ್ತು. 

ಬಾಕ್ಸ್‌ 1
ನಾನು, ನನ್ನದು ಅಂತೇನು ಇಲ್ಲ!
ನಾವು ಹುಟ್ಟಿರೋದು ವಿನಿಯೋಗ ಮಾಡೋಕೆ. ಅದು ಪುಣ್ಯ ಅಂತ ಬಾವಿಸ್ತೀನಿ. ನಾನು ಹಾಡ್ತಾ ಇದ್ದರೆ 50 ಸಾವಿರ ಜನ ಕೇಳ್ತಾ ಇದ್ದಾರೆ. ಸಂತೋಷ ಪಡ್ತಾ ಇದ್ದಾರೆ. ಅವರಲ್ಲಿ ಏನೋ ಕೆಮಿಕಲ್‌ ರಿಯಾಕ್ಷನ್‌ ಆಗ್ತಾ ಇದೆ ಅಂದರೆ ಅದಕ್ಕಿಂತ ಇನ್ನೇನು ಬೇಕು? ಇಲ್ಲಿ ನಮ್ಮದು ಅಂತೇನು ಇಲ್ಲ. ಸ್ವತಃ ನಾನೇ ಸಂಗೀತ ಸೃಷ್ಟಿ ಮಾಡಿದ್ದು ಅಲ್ಲ. ಪ್ರಪಂಚ ಹುಟ್ಟಿದಾಗ ಭಗವಂತ ಅದರಲ್ಲಿ ಸಂಗೀತ ಅನ್ನೋದನ್ನು ಇಟ್ಟಿದ್ದಾನೆ. ಇದರಲ್ಲಿ ನಾನು, ನನ್ನದು ಅಂತೇನು ಇಲ್ಲ.
ಒಂದು ವಿಷ್ಯ- ತೆಂಡ್ನೂಲ್ಕರ್‌ ಸಿಕ್ಸರ್‌ ಹೊಡೆದರು ಅಂದರೆ ಅದು ಅವರಿಗೋಸ್ಕರ ಹೊಡೆದು ಕೊಂಡಿದ್ದೇ? ಖಂಡಿತ ಇಲ್ಲ. ಆ ರೆಕಾರ್ಡು ಅವರ ಹೆಸರಲ್ಲಿ ಇರುತ್ತೆ.  ಅವರು ಸಿಕ್ಸ್‌ ಭಾರಿಸಿದ್ದು ಅಲ್ಲಿ ಕುಳಿತ 70ಸಾವಿರ ಪ್ರೇಕ್ಷಕರಿಗೋಸ್ಕರ.  ಹಾಗೇ ನಾನು ಹಾಡಿದ್ದು ಎಲ್ಲವೂ ಕೇಳುಗರಿಗೋಸ್ಕರ. ಹಾಡು ಕೇಳಿದಾಗ ಅವರು ಪಡುವ ಸಂತೋಷ ಇದೆಯಲ್ಲ. ಅದನ್ನು ನೋಡಿ ನಾನು ಖುಷಿಯಾಗ್ತಿನಿ. 

ಬಾಕ್ಸ್‌ 2
ಗಂಟಲ ಮೇಲೆ ಒಂದು ಕಣ್ಣು ಇದ್ದೇ ಇರುತ್ತೆ
 ಗಂಟಲ ಬಗ್ಗೆ ಬಹಳ ಕೇರ್‌ ತಗೋತೀನಿ. ಹಾಗಂತ ತಿನ್ನೋಲ್ಲ, ಕುಡಿಯಲ್ಲ ಅಂತಲ್ಲ. ಐಸ್‌ಕ್ರೀಂ ಕೂಡ ತಿನ್ನುತ್ತೇನೆ. ಏನೇ ಮಾಡಿದರೂ ನನ್ನ ಗಂಟಲ ಮೇಲೆ ಒಂದು ಕಣ್ಣು ಇಟ್ಟಿರುತ್ತೇನೆ. ಕೋಲ್ಡ್‌, ಟೈರ್ಡ್‌ ಆಯ್ತಾ ವಾಯ್ಸಗೆ ರೆಸ್ಟು. ಫ್ರೆಶ್‌ ಆಗಿದ್ದಾಗ ಹಾಡ್ತಾನಿ ಹೀಗೆ. ಗಂಟಲ ಕಡೆ ಗಮನ ಕೊಟ್ಟಿರುತ್ತೇನೆ.  ನಾನು ಏನೇ ಕೆಲಸ ಮಾಡ್ತಾ ಇದ್ದರೂ ತಲೆಯಲ್ಲಿ ಸಂಗೀತ ಓಡ್ತಾನೇ ಇರುತ್ತದೆ. ದಿನದ 24 ಗಂಟೆ ತಯಾರಿ ಮಾಡ್ಕೊಳ್ತಾ ಇರ್ತೀನಿ. ಕೆಲ ಸಲ ಹೋಟೆಲ್‌ನಲ್ಲಿ ತಾನ್‌ಪುರ ಇಟ್ಟುಕೊಂಡು ಕೂತರೆ ಗಂಟೆಗಳು ಕಳೆಯುವುದೇ ತಿಳಿಯೋಲ್ಲ.  ಪ್ರತಿ ಕಾರ್ಯಕ್ರಮ ವಿಶೇಷ ಮಾಡೋಣ ಅನ್ನೋ ತುಡಿತ.  ಇವಕ್ಕೆಲ್ಲ ಟೈಂ ಎಲ್ಲಿ ಸಿಗುತ್ತೆ ಅಂತ ನೀವು ಕೇಳಬಹುದು? ಕೆಲಸ ಮಾಡೋದು, ಎಷ್ಟು ಮಾಡೋದು ಅನ್ನೋದೆಕ್ಕೆಲ್ಲಾ ಆಸಕ್ತಿ ಮುಖ್ಯ. ಇದೊಂಥರ ಸ್ಟೇಟ್‌ ಆಫ್ ಮೈಂಡ್‌ ಅಷ್ಟೇ. ವಿಜ್ಞಾನ ಹೇಳ್ಳೋ ಪ್ರಕಾರ ಮೆದುಳನ್ನು ನಾವು ಶೇ. 8ರಷ್ಟು ಕೂಡ ಬಳಸುತ್ತಿಲ್ಲ. ಶೇ.100ರಷ್ಟು ಬಳಸಿದ್ದೇ ಆದರೆ ಬಹಶಃ ದೇವರೇ ಬಂದು, “ಬಾರಪ್ಪ, ನನ್ನ ಹತ್ತಿರ ಕೆಲಸ ಮಾಡು ಬಾ …’ ಅಂತ ಕರೀತಾನೆ ಅನಿಸುತ್ತದೆ  ನಕ್ಕರು ವಿಜಯ್‌. 

ಬಾಕ್ಸ್‌ 3
ಸಂಗೀತದ ಹಿಂದೆ ಬೀಳಿ
ವಿಜಯ್‌ಪ್ರಕಾಶ್‌ ಈಗ ಸರಿಗಮಪ ಕಾರ್ಯಕ್ರಮದಿಂದ ಮೂಲಕ ಎಲ್ಲರ ಮನೆ, ಮನಗಳನ್ನು ತಲುಪಿದ್ದಾರೆ. ಕರ್ನಾಟಕದ ಸಂಗೀತ ಪ್ರತಿಭೆಗಳ ದಿಗªರ್ಶನ ಕೂಡ ಇವರಿಗೆ ಆಗಿದೆಯಂತೆ.  “ನಮ್ಮಲ್ಲಿ ಪ್ರತಿಭೆಗಳಿಗೇನು ಕೊರತೆ ಇಲ್ಲ. ರೈತರ ಮಕ್ಕಳು, ದಿನಗೂಲಿ ಮಾಡಿ ಬದುವವರು, ಆಟೋ ಚಾಲಕರು ತಮ್ಮ ಮಕ್ಕಳಿಗೆ ಹೀಗೆ ಸರಿಗಮಪ ಇರೆಲ್ಲರಿಗೂ ಒಳ್ಳೇ ವೇದಿಕೆಯಾಗಿದೆ. ನಮಗೆ ಯಾರನ್ನು ಆಯ್ಕೆ ಮಾಡಬೇಕು, ಯಾರನ್ನು ಬಿಡಬೇಕು- ಇವರೂ ಚೆನ್ನಾಗಿ ಹಾಡ್ತಾರೆ, ಅವರೂ ಚೆನ್ನಾಗಿ ಹಾಡ್ತಾರಲ್ಲಾ ಅನ್ನೋ ಗೊಂದಲ ಸೃಷ್ಟಿ ಮಾಡೋ ಪ್ರತಿಭೆಗಳಿವೆ. ಅವರಿಗೆ ಅವಕಾಶಗಳು ಸಿಗುತ್ತಿವೆ ಅನ್ನೋದು ಖುಷಿ.  ಆದರೆ ಬರೀ ಹಣ, ಜನಪ್ರಿಯತೆ ಹಿಂದೆ ಬಿದ್ದು ಸಂಗೀತದ ಕಲಿಕೆಯನ್ನು ಅರ್ಧಕ್ಕೆ ಬಿಟ್ಟರೆ ಭವಿಷ್ಯ ಇರೋಲ್ಲ. ಪ್ರತಿದಿನ ಕೇಳಬೇಕು, ಹೊಸದನ್ನು ಕಲಿಯಬೇಕು. ಈ ಪ್ರಕ್ರಿಯೆ ಮಾಡುತ್ತಿದ್ದರೆ ಕಲಾವಿದ ಅಪ್‌ಡೇಟ್‌ ಆಗಿರುತ್ತಾನೆ. ಪ್ರಯತ್ನ, ಸಾಧನೆ ಇಲ್ಲದೆ ಸಂಗೀತ ಕ್ಷೇತ್ರದಲ್ಲಿ ಉಳಿಯೋದು ಕಷ್ಟ. ಇವೆಲ್ಲ ಅವರವರ ಕೈಯಲ್ಲಿ ಇದೆ. ನಾವೇನಿದ್ದರು ಕಲೆಗೆ ಪೂರಕ ವಾತಾರವಣ ನಿರ್ಮಿಸೋದು ಅಷ್ಟೇ ಕೆಲಸ.’ ಅಂದರು ವಿಜಯ್‌ಪ್ರಕಾಶ್‌.

ವರದಿ: ಕಟ್ಟೆ ಗುರುರಾಜ್‌; ಚಿತ್ರಗಳು: ಮನು ಮತ್ತು ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next