Advertisement

ಫೀಲ್ಡ್‌ ಬಿಟ್ಟ ಸೋಮನ ಡೆಡ್ಲಿ ಮಾತು

01:06 PM Apr 09, 2020 | |

“ಎದೆಗಾರಿಕೆ’ ಬಂದ ಬಳಿಕ ನಟ ಆದಿತ್ಯ ಅವರನ್ನು ಹುಡುಕಿ ಬಂದ ರೌಡಿಸಂ ಸಿನಿಮಾಗಳಿಗೆ ಲೆಕ್ಕವೇ ಇಲ್ಲ. ಆದರೆ, ಆದಿತ್ಯ ಮಾತ್ರ ಬಂದ ಅಷ್ಟೂ ಚಿತ್ರಗಳನ್ನೂ ಒಪ್ಪಿಕೊಳ್ಳಲಿಲ್ಲ. ಈ ನಡುವೆ “ಸ್ವೀಟಿ ನನ್ನ ಜೋಡಿ’ ಎಂಬ  ಸಿನಿಮಾ ಮಾಡಿದರು. ಆ ಬಳಿಕ ಕನ್ನಡದಲ್ಲಿ ಒಂದಷ್ಟು ಕಥೆಗಳು ಅವರ ಸುತ್ತ ಗಿರಕಿ ಹೊಡೆದರೂ ಅವುಗಳನ್ನೆಲ್ಲ ಪಕ್ಕಕ್ಕಿರಿಸಿದರು. ಕಾರಣ, ಅವರಿಗೆ ಇಷ್ಟವಾಗದ ಕಥೆ. ಇದರ ಮಧ್ಯೆ ತಮಿಳಿನಲ್ಲಿ “ವಾಲು’ ಎಂಬ ಚಿತ್ರ ಮಾಡಿದರು. ಅದಾದ ಮೇಲೂ ಆದಿತ್ಯ ಸಾಕಷ್ಟು ಕಥೆ ಕೇಳುತ್ತಲೇ ಇದ್ದರು. ಆದರೆ, ಯಾವ ಕಥೆಗೂ ಗ್ರೀನ್‌ಸಿಗ್ನಲ್‌ ಕೊಟ್ಟಿರಲಿಲ್ಲ. ದರ್ಶನ್‌ ಜತೆ “ಚಕ್ರವರ್ತಿ’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಅದರ ಜತೆಯಲ್ಲೇ ನಟಿಸಿದ ಪಿ.ಎನ್‌.ಸತ್ಯ ಅವರ ನಿರ್ದೇಶನದ “ಬೆಂಗಳೂರು ಅಂಡರ್‌ವರ್ಲ್ಡ್’ನಲ್ಲೂ ಆದಿತ್ಯ ನಟಿಸಿ, ಇದೀಗ ಎಲ್ಲೆಡೆ ಪುನಃ ಸುದ್ದಿಯಾಗಿರುವುದು ಹೊಸ ವಿಷಯವೇನಲ್ಲ. ಆದಿತ್ಯ ಈಗ ಒಂದಷ್ಟು ತೀರ್ಮಾನಕ್ಕೆ ಬಂದಿದ್ದಾರೆ. ಅವರಿಗೆ ನಿರ್ದೇಶನ ಮಾಡುವ ಮನಸ್ಸಾಗಿದೆ. ಅಷ್ಟೇ ಅಲ್ಲ, ಇನ್ಮುಂದೆ ಅವರು ಒಂದೇ ರೀತಿಯ ಕಥೆ, ಪಾತ್ರ ಇರುವ ಸಿನಿಮಾ ಬಂದರೆ, ಮಾಡುವುದೇ ಇಲ್ಲ ಅಂತಾನೂ ನಿರ್ಧರಿಸಿದ್ದಾರೆ. ಹಾಗಾದರೆ, ಆದಿತ್ಯ ಅವರ ತೀರ್ಮಾನ ಎಂಥದ್ದು, ಅವರ ಮುಂದಿನ ಯೋಜನೆ ಮತ್ತು ಯೋಚನೆಗಳೇನು ಎಂಬಿತ್ಯಾದಿ ಕುರಿತು “ರೂಪತಾರಾ’ದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

Advertisement

ನಿಮ್ಮ “ಬೆಂಗಳೂರು ಅಂಡರ್‌ವರ್ಲ್ಡ್’ ಗೆಲುವಿನ ಬಗ್ಗೆ …
– ಎಲ್ಲಾ ಕಡೆ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ನೋಡಿದವರೆಲ್ಲರೂ ಎಂಜಾಯ್‌ ಮಾಡುತ್ತಿದ್ದಾರೆ. ಇದಕ್ಕಿಂತ ಬೇರೆ ಏನು ಬೇಕು ಹೇಳಿ? ಮಾಧ್ಯಮಗಳಿಂದ ಒಳ್ಳೆಯ ಫೀಡ್‌ಬ್ಯಾಕ್‌ ಬಂದಿದ್ದರಿಂದಲೇ ಚಿತ್ರ ಯಶಸ್ಸು ಗಳಿಸಿದೆ. ಜನರು ನನ್ನ ನಟನೆ ಇಷ್ಟಪಟ್ಟಿದ್ದಾರೆ. ಸಿನಿಮಾದ ಕಥೆ, ಪಾತ್ರ, ಹಿನ್ನೆಲೆ ಸಂಗೀತ ಎಲ್ಲವೂ ಸಿನಿಮಾಗೆ ಪೂರಕವಾಗಿದೆ. ಒಟ್ಟಾರೆ ಸಿನಿಮಾಗೆ ಯುನಾನಿಮಸ್‌ ರಿಪೋರ್ಟ್‌ ಸಿಕ್ಕಿದೆ. ಒಬ್ಬ ನಟನಿಗೆ ಇದಕ್ಕಿಂತ ಖುಷಿಯ ವಿಷಯ ಬೇರೆ ಇಲ್ಲ.

ಹಾಗಾದರೆ, ಇದೇ ಖುಷಿಯಲ್ಲಿ ಮತ್ತೂಂದು “ಅಂಡರ್‌ವರ್ಲ್ಡ್’ ಚಿತ್ರ ನಿರೀಕ್ಷಿಸಬಹುದು ಅನ್ನಿ?
– ಖಂಡಿತ ಆ ನಿರೀಕ್ಷೆ ಇಟ್ಟುಕೊಳ್ಳಬೇಡಿ. ನಿಜ ಹೇಳ್ತೀನಿ. ನಾನು ಇನ್ನು ಮುಂದೆ “ಅಂಡರ್‌ವರ್ಲ್ಡ್’, ರೌಡಿಸಂ ಸಿನಿಮಾಗಳನ್ನು ಮಾಡುವುದಿಲ್ಲ. ಯಾಕೋ ನನಗೇ ಅದು ಅತಿಯಾಯ್ತು ಅನಿಸುತ್ತಿದೆ. ನನಗೂ ಬೇರೆ ಬೇರೆ ಪಾತ್ರ ಮಾಡುವ ಆಸೆ ಇದೆ. ಒಂದೇ ಪಾತ್ರಕ್ಕೆ ಬ್ರಾಂಡ್‌ ಆಗಲು ಇಷ್ಟವಿಲ್ಲ. ಕೆಲ ವರ್ಷದವರೆಗೆ ನಾನು ರೌಡಿಸಂ, ಅಂಡರ್‌ವರ್ಲ್ಡ್ ಸಿನಿಮಾಗಳನ್ನು ಮುಟ್ಟುವುದಿಲ್ಲ.

ದಿಢೀರ್‌ ಅಂತ ಯಾಕೆ ಈ ನಿರ್ಧಾರ?
– “ಎದೆಗಾರಿಕೆ’ ಬಳಿಕ ಅದೇ ರೀತಿಯ ಕಥೆಗಳು ತುಂಬಾ ಬಂದಿದ್ದುಂಟು. ಆದರೆ, ನನಗೆ ಮತ್ತೆ ಮತ್ತೆ ಅದೇ ರೀತಿಯ ಪಾತ್ರ ಮಾಡೋಕೆ ಇಷ್ಟವಿರಲಿಲ್ಲ. ರೌಡಿಸಂ ಕಥೆ, ಪಾತ್ರಗಳೇ ಅಲರ್ಜಿ ಆಗಿದೆ. ನನ್ನ ಬಳಿ ಬರುವವರೆಲ್ಲರೂ ರೌಡಿಸಂ ಅಥವಾ ಅಂಡರ್‌ವರ್ಲ್ಡ್ ಸಬೆjಕ್ಟ್ ಇಟ್ಟುಕೊಂಡೇ ಬರುತ್ತಾರೆ. ನನಗೂ ಬದಲಾವಣೆ ಬೇಕಲ್ಲವೇ? ಹಾಗಾಗಿ ನಾನು, ಆ ರೀತಿಯ ಕಥೆಗಳನ್ನು ಇನ್ನು ಮುಂದೆ ಒಪ್ಪುವುದಿಲ್ಲ, ಮಾಡುವುದೂ ಇಲ್ಲ.

ಎಲ್ಲಿಯವರೆಗೆ ಈ ತೀರ್ಮಾನ?
– ಏನಿಲ್ಲವೆಂದರೂ, ನಾನು ಐದು ಚಿತ್ರಗಳನ್ನು ಮಾಡಬೇಕು. ಆ ಬಳಿಕವಷ್ಟೇ, ರೌಡಿಸಂ, ಅಂಡರ್‌ವರ್ಲ್ಡ್ ಸಿನಿಮಾಗಳ ಬಗ್ಗೆ ಯೋಚಿಸುತ್ತೇನೆ. ಹಾಗೊಂದು ವೇಳೆ, “ಎದೆಗಾರಿಕೆ’, “ಬೆಂಗಳೂರು ಅಂಡರ್‌ವರ್ಲ್ಡ್’ ಕಥೆಗಳ ರೀತಿ ಇದ್ದರೆ, ಖಂಡಿತ ಮಾಡುವ ಬಗ್ಗೆ ಯೋಚನೆ ಮಾಡ್ತೀನಿ.

Advertisement

ಬದಲಾವಣೆ ಅಂತ ಹೇಳಿದ್ರಿ. ಅದು ಯಾವ ರೀತಿಯದ್ದು?
– ನೋಡಿ, ಒಬ್ಬ ನಟನಿಗೆ ಎಲ್ಲಾ ರೀತಿಯ ಪಾತ್ರ ಮಾಡಬೇಕು ಅನ್ನುವ ಆಸೆ ಇದ್ದೇ ಇರುತ್ತೆ. ನನಗೆ ಹುಡುಕಿ ಬಂದ ಚಿತ್ರಗಳ ಪೈಕಿ, ಬಹುತೇಕ ಬಂದಿದ್ದು ರೌಡಿಸಂ, ಅಂಡರ್‌ವರ್ಲ್ಡ್ಗೆ ಸಂಬಂಧಿಸಿದ ಕಥೆಗಳೇ. ಅವುಗಳನ್ನು ಒಪ್ಪಿ ಮಾಡಿದ್ದರೂ, ನಷ್ಟವೇನಾಗಲಿಲ್ಲ. ಆದರೆ, ಮತ್ತದೇ ಪಾತ್ರ, ಕಥೆ ಅಂದರೆ, ಬೇಜಾರು. ಈಗ “ಚಕ್ರವರ್ತಿ’ಯಲ್ಲೊಂದು ಹೊಸ ಬಗೆಯ ಪಾತ್ರ ಮಾಡಿದ್ದೇನೆ. ಆ ಸಿನಿಮಾ ಬಳಿಕ ಖಂಡಿತವಾಗಿಯೂ ಹೊಸ ಬದಲಾವಣೆಯಾಗಲಿದೆ. ಆ ಚಿತ್ರದ ಪಾತ್ರವೇ ಅಂಥದ್ದು, ಅಲ್ಲಿ ನನ್ನನ್ನು ನೋಡಿದವರಿಗೆ ಹೊಸ ಬದಲಾವಣೆ ಕಾಣದಿದ್ದರೆ ಕೇಳಿ.

ಹಂಗಾದ್ರೆ, ಮುಂದೆ ನಿಮ್ಮ ಕಥೆಯ ಆಯ್ಕೆ ಯಾವ ರೀತಿಯದ್ದು?
– ಅದನ್ನು ಇಂಥದ್ದೇ ಅಂತ ಹೇಳುವುದಕ್ಕಾಗುವುದಿಲ್ಲ. ರೌಡಿಸಂ, ಅಂಡರ್‌ವರ್ಲ್ಡ್ ಹೊರತಾಗಿ ಇರುವ ಕಥೆ, ಪಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ. ಈಗಾಗಲೇ ಒಂದು ಹೊಸತರಹದ ಕಥೆ ಕೇಳಿದ್ದೇನೆ . ಸಾಫ್ಟ್ವೇರ್‌ ಎಂಜಿನಿಯರ್‌ವೊಬ್ಬರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಅಮೆರಿಕದಲ್ಲಿ ಇಂಟೆಲ್‌ ಕಂಪೆನಿಯ ಉದ್ಯೋಗಿಯಾಗಿದ್ದ ಅವರಿಗೆ ಸಿನಿಮಾ ಮೇಲೆ ಪ್ರೀತಿ ಇದೆ. ನನಗೆ ಅವರು ಹೆಣೆದುಕೊಂಡಿರುವ ಕಥೆ ಇಷ್ಟವಾಗಿದೆ. ಅದೊಂದು ಆ್ಯಕ್ಷನ್‌ ಕಾಮಿಡಿ ಚಿತ್ರ. ಅದು ನನ್ನ ಮುಂದಿನ ಸಿನಿಮಾ ಆಗಲಿದೆ.

ಜನ ನಿಮ್ಮನ್ನು ಒಪ್ಪಿದ್ದು ಅಂಡರ್‌ವರ್ಲ್ಡ್, ರೌಡಿಸಂ ಸಿನಿಮಾದಿಂದಲೇ ಅಲ್ವಾ?
– ನಿಜ. ನಾನು “ಸ್ವೀಟಿ ನನ್ನ ಜೋಡಿ’ ಎಂಬ ಲವ್‌ಸ್ಟೋರಿ ಸಿನಿಮಾನೂ ಮಾಡಿದ್ದೆ. ಜನ ಒಪ್ಪಲಿಲ್ಲ. ಅದು ಇವತ್ತಿಗೂ ಅರ್ಥವಾಗುತ್ತಿಲ್ಲ. ಜನರು ನನ್ನನ್ನು ಬೇರೆ ರೀತಿ ನೋಡಬೇಕು ಎಂಬ ಆಸೆ ನನ್ನದು. ಆದರೆ, ಅವರಿಗೆ ಅದೇ ಮಚ್ಚುಲಾಂಗು, ಗನ್‌ ಹಿಡಿದು ಕ್ಯಾಮೆರಾ ಮುಂದೆ ನಿಲ್ಲಬೇಕು. ಅದನ್ನು ಒಪ್ಪುತ್ತಾರೆ. ಜನರಿಗೆ ಅದು ಬೇಕು. ಆದರೆ, ನನಗೆ ಅದು ಬೇಡ. ಎಷ್ಟು ದಿನ ಅಂತ ಅದೇ ಲಾಂಗು, ಮಚ್ಚು, ಒಂದೇ ರೀತಿಯ ಡೈಲಾಗ್‌ ಹೇಳಬೇಕು. ಯಾಕೋ ಬೇಡ ಎನಿಸುತ್ತಿದೆ. ಮುಂದಿನ ದಿನಗಳಲ್ಲಿ ರೌಡಿಸಂ, ಅಂಡರ್‌ವರ್ಲ್ಡ್ ಸಬ್ಜೆಕ್ಟ್ ಬ್ರೇಕ್‌ ಮಾಡಬೇಕು. ಅಂತಹ ಚಿತ್ರ ಮಾಡುವ ಆಸೆ ಇದೆ. ಸದ್ಯಕ್ಕೆ “ಚಕ್ರವರ್ತಿ’ ಅಂತಹ ಬ್ರೇಕ್‌ ಮಾಡುವ ಸಿನಿಮಾ ಆಗುತ್ತೆ ನೋಡಿ. ಆ ಚಿತ್ರದ ಪಾತ್ರ ಸಾಕಷ್ಟು ವಿಭಿನ್ನವಾಗಿದೆ.

ನಿಮ್ಮ ಚಿತ್ರಗಳೇಕೆ ಗ್ಯಾಪ್‌ ಆಗುತ್ತವೆ?
– ನಿಜ, ಒಂದೊಳ್ಳೆಯ ಕಥೆ ಆಯ್ಕೆಗೆ ಅಷ್ಟು ಸಮಯ ಬೇಕಾಗುತ್ತೆ. “ಡೆಡ್ಲಿ ಸೋಮ’ ಮಾಡಿದ ಮೇಲೆ ಸಾಕಷ್ಟು ಚಿತ್ರ ಮಾಡಬಹುದಿತ್ತು. ಮಾಡಲಿಲ್ಲ. ಕಾರಣ, ಮತ್ತೂಂದು ಸಕ್ಸಸ್‌ ಬೇಕಾದರೆ, ಒಳ್ಳೇ ಕಥೆ ಬೇಕಿತ್ತು. ಆಗ “ಎದೆಗಾರಿಕೆ’ ಬಂತು. ಅದೂ ಸಕ್ಸಸ್‌ ಆಯ್ತು. ನಂತರ ಬೇರೆ ಬಂದ ಸಿನಿಮಾ ಸದ್ದು ಮಾಡಲಿಲ್ಲ. ಈಗ “ಬೆಂಗಳೂರು ಅಂಡರ್‌ವರ್ಲ್ಡ್’ ಬಂದು ಅದೂ ಗೆಲುವು ಕೊಟ್ಟಿದೆ. ಅದರ ಬೆನ್ನ ಹಿಂದೆಯೇ “ಚಕ್ರವರ್ತಿ’ ಬರುತ್ತಿದೆ. ಇನ್ನು ಮುಂದೆ ನಾನು ಅಂತಹ ಗ್ಯಾಪ್‌ ಆಗಲು ಬಿಡಲ್ಲ. ಆದರೂ, ನನಗೆ ಇಷ್ಟವಾಗುವ ಕಥೆಗಾಗಿ ಕಾಯಲೇಬೇಕು. ಮೊದಲು ನನಗೆ ಇಷ್ಟವಾದಾಗ ಮಾತ್ರ, ಆಡಿಯನ್ಸ್‌ಗೆ ಇಷ್ಟವಾಗುತ್ತೆ. ಯಾವುದನ್ನೂ ನಾನು ಕಾಟಾಚಾರಕ್ಕೆ ಮಾಡೋದಿಲ್ಲ. ಆ ಕಾರಣಕ್ಕೆ ಗ್ಯಾಪ್‌ ಆಗಿದ್ದುಂಟು. ಇನ್ಮುಂದೆ ಹಾಗೆ ಆಗಲ್ಲ.

ಹಾಗಾದರೆ, ಬಯಸೋ ಪಾತ್ರ ಎಂಥದ್ದು?
– ನನಗೆ ಇಂಥದ್ದೇ ಪಾತ್ರ ಮಾಡಬೇಕು ಎಂಬ ಯೋಚನೆಯಂತೂ ಇಲ್ಲ. ವಿಲನ್‌ ಪಾತ್ರ ಕೊಟ್ಟರೂ ಸರಿ ನಾನು ಮಾಡ್ತೀನಿ. ಯಾವುದೋ ಸಿನಿಮಾದಲ್ಲಿ ಒಳ್ಳೇ ವಿಲನ್‌ ಪಾತ್ರ ಇದೆ ಮಾಡಿ ಅಂದರೆ, ಅದು ನನಗೆ ಅದ್ಭುತ ಪಾತ್ರವೆನಿಸಿದರೆ, ಖಂಡಿತವಾಗಿಯೂ ಮಾಡುತ್ತೇನೆ. ಅದೇ ಪಾತ್ರ ಬೇಕು, ಇದೇ ಪಾತ್ರ ಇರಬೇಕು ಅಂತ ಜೋತು ಬಿದ್ದಿಲ್ಲ. ಹಾಗಂತ ಯಾವುದೇ ಚೌಕಟ್ಟು ಹಾಕಿಕೊಂಡಿಲ್ಲ. ಜನರು ನನ್ನ ನಟನೆ ಇಷ್ಟಪಟ್ಟಿದ್ದಾರೆ. ಅದನ್ನು ಇನ್ನು ಚೆನ್ನಾಗಿ ಬೆಳೆಸಿಕೊಂಡು, ಉಳಿಸಿಕೊಂಡು ಹೋಗಬೇಕು. ಹಾಗಾಗಿ ನಾನು ಅಂಡರ್‌ವರ್ಲ್ಡ್ ಪಾತ್ರಕ್ಕೆ ಬ್ರಾಂಡ್‌ ಅಂಬಾಸಿಡರ್‌ ಆಗೋಕೆ ಬಯಸಲ್ಲ.

ನಿಮ್ಮ ತಂದೆಯವರ ನಿರ್ದೇಶನದಲ್ಲೇನಾದರೂ ಇನ್ನೊಂದು ಸಿನ್ಮಾ ಮಾಡ್ತೀರಾ?
– ಸದ್ಯಕ್ಕೆ ಏನೂ ಗೊತ್ತಿಲ್ಲ. ಅಪ್ಪಾಜಿ ಒಂದು ಸಿನಿಮಾ ಪ್ಲಾನ್‌ ಮಾಡುತ್ತಿದ್ದಾರೆ. ಅದು ಬೇರೆಯವರಿಗೆ. ಅದು ಮ್ಯೂಸಿಕ್‌ ಬೇಸ್ಡ್ ಸಿನಿಮಾ ಅನ್ಸುತ್ತೆ. ಮುಂದೊಂದು ದಿನ ಮಾಡಬಹುದಷ್ಟೇ. ಈಗಂತೂ ಏನೂ ಇಲ್ಲ.

ಹಿಂದೊಮ್ಮೆ ನಿರ್ದೇಶನ ಮಾಡುವ ಬಗ್ಗೆ ಹೇಳಿಕೊಂಡಿದ್ದಿರಿ?
– ಹೌದು, ಈ ವರ್ಷ ನಿರ್ದೇಶನ ಮಾಡುವ ಪ್ಲಾನ್‌ ಇದೆ. ಏನೇ ಆದರೂ, ಒಂದು ಸಿನಿಮಾವನ್ನು ಈ ವರ್ಷವೇ ಮಾಡ್ತೀನಿ. ಯಾರಿಗೆ ಅಂತ ಗೊತ್ತಿಲ್ಲ. ನಾನೇ ಇರಿ¤àನಾ ಅದೂ ಗೊತ್ತಿಲ್ಲ. ಒಟ್ನಲ್ಲಿ ಮೂರು ಕಥೆಗಳನ್ನು ರೆಡಿಮಾಡಿಕೊಂಡಿದ್ದೇನೆ. ಆ ಮೂರು ಕಥೆಗಳೂ ನನಗೆ ಇಷ್ಟ. ಯಾವುದನ್ನು ಮಾಡಬೇಕು, ಬಿಡಬೇಕು ಎಂಬ ಗೊಂದಲವಿದೆ. ಯಾವ ರೀತಿಯ ಕಥೆ. ಯಾರು ಇರುತ್ತಾರೆ ಎಂಬುದನ್ನು ಕಾದು ನೋಡಿ. ಅದು ನನ್ನ ಬ್ಯಾನರ್‌ನಲ್ಲೇ ತಯಾರಾಗಲಿದೆ.

ನಿಮ್ಮ ತಂಗಿ ಸಿನ್ಮಾದಲ್ಲಿ ನಟಿಸುತ್ತಿದ್ದೀರಂತೆ?
– ಹೌದು, ಅವಳೊಂದು ಸಿನಮಾ ಮಾಡುತ್ತಿದ್ದಾಳೆ. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾಳೆ. ನಾನೂ ಕೂಡ ಒಂದಷ್ಟು ಸಲಹೆ, ಸೂಚನೆ ಕೊಟ್ಟಿದ್ದೇನೆ. ಉಳಿದಂತೆ ಅತಿಥಿಯಾಗಿಯೂ ಅಲ್ಲಿ ಕಾಣಿಸಿಕಕೊಳ್ಳುತ್ತಿದ್ದೇನೆ.

ಎಲ್ಲಾ ಸರಿ, ಬೇರೆ ಇಂಡಸ್ಟ್ರಿಯಲ್ಲೂ ಕನ್ನಡದ ಇಬ್ಬರು ಸ್ಟಾರ್‌ಗಳ ವಾರ್‌ ಬಗ್ಗೆಯೂ ಸುದ್ದಿ ಇದೆ. ನೀವೇನಂತೀರಿ?
– ನಾನು ಮೊದಲು ಟ್ವೀಟ್‌ ಮಾಡಿದ್ದು ನಿಜ. ಆದರೆ, ಆ ಬಗ್ಗೆ ಈಗ ನಾನೇನೂ ಮಾತಾಡಲ್ಲ. ನನ್ನ ವೈಯಕ್ತಿಕ ವಿಷಯದ ಬಗ್ಗೆ ಮಾತ್ರ ಮಾತಾಡುತ್ತೇನೆ. ಬೇರೆಯವರ ಬಗ್ಗೆ ಏನೂ ಹೇಳಲ್ಲ.

ಪಾತ್ರದಲ್ಲಿ ಧಮ್‌ ಇದ್ದರೆ ವಿಲನ್‌ ಆಗೋಕೂ ರೆಡಿ
ಕಥೆಗಿಂತ, ಹುಡುಕಿ ಬರುವ ಕೆಲ ನಿರ್ದೇಶಕರ ಬಗ್ಗೆ ಹೇಳಬೇಕು. ಎರಡು ಸಿನಿಮಾಗೆ ಕ್ಲಾಪ್‌ ಹಿಡಿದವರೇ ಕಥೆ ಹಿಡಿದು ಬರುತ್ತಾರೆ. ನನಗೆ ಮೊದಲು ಕಥೆ ಸ್ಟ್ರಾಂಗ್‌ ಅನಿಸಬೇಕು. ಅದನ್ನು ಆ ನಿರ್ದೇಶಕ ಸರಿಯಾಗಿ ನಿರ್ವಹಿಸುತ್ತಾನಾ ಎಂಬ ಬಗ್ಗೆ ಗೊತ್ತಾಗಬೇಕು. ಆಗ ಮಾತ್ರ ನಾನು ರೆಡಿಯಾಗ್ತಿàನಿ. ನನಗೆ ಹೊಸಬರು, ಹಳಬರು ಎಂಬ ತಾರತಮ್ಯವಿಲ್ಲ. ಹಾಗಂತ ಎಂಥಧ್ದೋ ಕಥೆ ತಂದರೆ ಮಾಡೋಕೆ ರೆಡಿ ಇಲ್ಲ. ಹೊಸಬರಿದ್ದರೂ, ಕಥೆ ಚೆನ್ನಾಗಿದ್ದರೆ, ಅದನ್ನು ಅವರು ತೆರೆಯ ಮೇಲೆ ಅಚ್ಚುಕಟ್ಟಾಗಿ ತರುತ್ತಾರಾ ಎಂಬ ಭಯವೂ ಇರುತ್ತೆ. ಈಗ ರೌಡಿಸಂ ಬಿಟ್ಟು ಬೇರೆ ಯಾವುದೇ ಪಾತ್ರ ಇದ್ದರೂ ನಾನು ಮಾಡೋಕೆ ರೆಡಿ ಇದ್ದೇನೆ. ಇನ್ನು, ಕೆಲವರು ಬೀದೀಲಿ ಇರುವ ರೌಡಿಗಳ ಕಥೆ ತರುತ್ತಾರೆ. ಅವರ ಹೆಸರು ಕೇಳಿದರೇನೇ ನಗು ಬರುತ್ತೆ. ಅಂತಹವರ ಸಿನಿಮಾ ಮಾಡೋಕ್ಕಾಗುತ್ತಾ? ಎಲ್ಲೋ ಮಲ್ಲೇಶ್ವರಂನ ಬೀದಿಯಲ್ಲಿ ಇರುವ ರೌಡಿಯೊಬ್ಬನ ಕಥೆ ತರುತ್ತಾರೆ. ಅವನು ಮೈಸೂರು, ಮಂಡ್ಯ ಭಾಗದ ಜನರಿಗೆ ಗೊತ್ತಿರಲ್ಲ. ಈಗಲೂ ಅಂಥದ್ದೇ ಕಥೆಗಳು ಬರುತ್ತಿವೆ. ಇನ್ನು ಮುಂದೆ ಬಂದರೆ, ನಿಜವಾಗಿಯೂ ಹತ್ತಿರ ಸೇರಿಸಲ್ಲ.

ಸಿನಿಮಾ ಮೈ ಡಾರ್ಲಿಂಗ್‌
ನಾನು ಸಿನಿಮಾ ಜತೆ ಮದ್ವೆ ಆಗಿದ್ದೀನಲ್ಲಾ! ನಿತ್ಯ ಸಿನಿಮಾ ಬಿಟ್ಟರೆ ಬೇರೇನೂ ಇಲ್ಲ. ಹಾಗಾಗಿ, ಸಿನಿಮಾ ಜತೆಯೇ ಮದ್ವೆಯಾದ ಅನುಭವ ಇದೆ. ಸದ್ಯಕ್ಕೆ ನಾನು ಮದುವೆ ಬಗ್ಗೆ ಯೋಚಿಸಿಲ್ಲ. ಇಲ್ಲಿ ಸೋಲು-ಗೆಲುವು ಸಹಜ. ಬಂದದ್ದನ್ನು ಪ್ರೀತಿಯಿಂದ ಸ್ವೀಕರಿಸಿ, ಪ್ರಯತ್ನ ಮುಂದುವರೆಸುತ್ತಿರಬೇಕಷ್ಟೆ.

ಬರಹ: ವಿಜಯ್‌ ಭರಮಸಾಗರ; ಚಿತ್ರಗಳು: ಮನು ಮತ್ತು ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next