Advertisement

ಸೋಮೇಶ್ವರ ಗ್ರಾ.ಪಂ. ಪುರಸಭೆಯಾಗಿ ಮೇಲ್ದರ್ಜೆಗೆ 

10:09 AM Oct 07, 2018 | Team Udayavani |

ಸೋಮೇಶ್ವರ: ರಾಜ್ಯದಲ್ಲೇ ಅತೀ ದೊಡ್ಡ ಗ್ರಾಮ ಪಂಚಾಯತ್‌ ಆಗಿರುವ ಮಂಗಳೂರು ತಾಲೂಕಿನ ಸೋಮೇಶ್ವರ ಗ್ರಾ.ಪಂ. ಗೆ ಪುರಸಭೆಯಾಗಿ ಮೇಲ್ದರ್ಜೆಗೇರುವ ಯೋಗ ಬಂದಿದೆ. ಕರ್ನಾಟಕ ಸರಕಾರ ಈ ಗ್ರಾ.ಪಂ. ಅನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕರಡು ಅಧಿಸೂಚನೆ ಹೊರಡಿಸಿದ್ದು, ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಥಮ ಹಂತದ ಕಡತ ಸೋಮೇಶ್ವರ ಗ್ರಾಮ ಪಂಚಾಯತ್‌ಗೆ ಬಂದಿದೆ.

Advertisement

ಸೋಮೇಶ್ವರ ಗ್ರಾಮ ಪಂಚಾಯತ್‌ 2,063 ಎಕ್ರೆ ವಿಸ್ತೀರ್ಣ ಹೊಂದಿದ್ದು, 61 ಸದಸ್ಯರಿದ್ದು, 2011ರ ಜನಗಣತಿಯ ಪ್ರಕಾರ 24,660 ಜನಸಂಖ್ಯೆ ಹೊಂದಿದ್ದು, ಪ್ರಸ್ತುತ 30 ಸಾವಿರ ಜನಸಂಖ್ಯೆಯನ್ನು ಹೊಂದಿದೆ. 5,681 ಮನೆ ಮತ್ತು ವಾಣಿಜ್ಯ ಸಂಕೀರ್ಣಗಳು ಈ ಗ್ರಾಮದಲ್ಲಿದ್ದು ಅನುದಾನದ ಕೊರತೆಯಿಂದ ಗ್ರಾಮದ ಅಭಿವೃದ್ಧಿಗೆ ಸಮಸ್ಯೆಯಾಗಿತ್ತು. ಈಗ ಪುರಸಭೆಯಾಗಿ ಮೇಲ್ದರ್ಜೆಗೇರುವ ಹಿನ್ನೆಲೆಯಲ್ಲಿ ಜು. 23ರಂದು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಪುರಸಭೆಯಾಗುವ ಹಿನ್ನೆಲೆಯಲ್ಲಿ ಸಲಹೆಗಳು ಆಕ್ಷೇಪಗಳು ಇದ್ದಲ್ಲಿ ಒಂದು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಪಂಚಾಯತ್‌ ಅಧಿಸೂಚನೆಯ ಪತ್ರವನ್ನು ನೋಟಿಸ್‌ ಬೋರ್ಡ್‌ ನಲ್ಲಿ ಅಳವಡಿಸಿದ್ದು ಯಾವುದೇ ಆಕ್ಷೇಪಗಳು ಬಂದಿಲ್ಲ ಎಂದು ಪಂಚಾಯತ್‌ ಮೂಲಗಳು ತಿಳಿಸಿವೆ.

12 ವರ್ಷಗಳ ಹೋರಾಟ
ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ಪಂಚಾಯತ್‌ ಆಗಿದ್ದ ಸೋಮೇಶ್ವರ ಗ್ರಾಮ ಪಂಚಾಯತ್‌ನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆ ಗೇರಿಸಬೇಕೆಂದು ಪಕ್ಷಾತೀತವಾಗಿ ಸುಮಾರು 12 ವರ್ಷಗಳ ಹಿಂದೆಯೇ ಹೋರಾಟ ಆರಂಭವಾಗಿತ್ತು. ಕಳೆದ ಹಲವು ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿದ್ದ ಈ ಗ್ರಾಮ ಪಂಚಾಯತ್‌ನ ಹೋರಾಟಕ್ಕೆ ಕಾಂಗ್ರೆಸ್‌ ಸಹಿತ ವಿವಿಧ ಪಕ್ಷಗಳು ಸಾಥ್‌ ನೀಡಿದ್ದವು, ಪಂಚಾಯತ್‌ನ ಅಭಿವೃದ್ಧಿಗೆ ಬಿಡುಗಡೆ ಯಾಗುವ ಅನುದಾನ ಸಾಕಾಗುವುದಿಲ್ಲ. ವಿದ್ಯುತ್‌ ಬಿಲ್ಲೇ ಕೋಟಿ ರೂ. ದಾಟುವ ಕಾರಣ ಹೆಚ್ಚುವರಿ ಅನುದಾನಕ್ಕಾಗಿ ಪಟ್ಟಣ ಪಂಚಾಯತ್‌ ಆಗಬೇಕು ಎಂದು ಹೋರಾಟ ನಡೆದಿದ್ದರೂ ಈಗ 12 ವರ್ಷದ ಬಳಿಕ ನೇರವಾಗಿ ಪಟ್ಟಣ ಪಂಚಾಯತ್‌ ಆಗದೆ ಜನಸಂಖ್ಯೆ ಆಧಾರದಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೇರುವ ಪ್ರಕ್ರಿಯೆ ಆರಂಭವಾಗಿದೆ.

ಚುನಾವಣೆ ಬಹಿಷ್ಕರಿಸಲಾಗಿತ್ತು
ಸೋಮೇಶ್ವರವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 2008ರಲ್ಲಿ ಚುನಾವಣೆಯನ್ನು ಬಹಿಷ್ಕರಿಸಲಾಗಿತ್ತು. ಇದ ರಿಂದ 2008ರ ಜನವರಿ 6ರಿಂದ 2010 ಜೂನ್‌ ವರೆಗೆ ಸುಮಾರು 2 ವರ್ಷ 5 ತಿಂಗಳ ಕಾಲ ಆಡಳಿತಾಧಿಕಾರಿಯ ಕೈಯಲ್ಲಿ ಆಡಳಿತವಿತ್ತು. ರಾಜ್ಯದಲ್ಲಿದ್ದ ಬಿಜೆಪಿ ಸರಕಾರ ಸೋಮೇಶ್ವರ ಗ್ರಾ.ಪಂ. ಒಂದು ಕೋಟಿ ವಿಶೇಷ ಅನುದಾನ ಘೋಷಣೆ ಮಾಡಿ ಚುನಾವಣೆ ನಡೆಸಲು ಸ್ಥಳೀಯ ರಾಜಕೀಯ ಪಕ್ಷಗಳನ್ನು ಓಲೈಸಿದ್ದು ಅದರಂತೆ 2010ರ ಜೂನ್‌ನಲ್ಲಿ ಚುನಾವಣೆ ನಡೆದು ಕಳೆದ ಎಂಟು ವರ್ಷಗಳಿಂದ ಬಿಜೆಪಿ ನೇತೃತ್ವದ ಆಡಳಿತ ಅಧಿಕಾರ ನಡೆಸುತ್ತಿದೆ. 10 ವರ್ಷಗಳ ಹಿಂದಿನ ಹೋರಾಟಕ್ಕೆ ಈಗ ಮಾನ್ಯತೆ ಲಭಿಸಿದೆ.

ಶೀಘ್ರದಲ್ಲೇ ಹೊಸ ವ್ಯವಸ್ಥೆ ಆರಂಭ
ಅತೀ ದೊಡ್ಡ ಪಂಚಾಯತ್‌ ಆಗಿರುವ ಸೋಮೇಶ್ವರ ಪುರಸಭೆಯಾಗಿ ಮೇಲ್ದರ್ಜೆಗೇರುವುದರಿಂದ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಹಿಂದೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೆ. ಈ ಬಾರಿ ನನ್ನದೇ ಇಲಾಖೆಯಡಿ ಬರುವುದರಿಂದ ಪ್ರಥಮ ಹಂತದಲ್ಲೇ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಗಳು ಬಾರದೇ ಇದ್ದಲ್ಲಿ ಶೀಘ್ರದಲ್ಲೇ ಸ್ಥಳೀಯಾಡಳಿತ ಸಂಸ್ಥೆಯೊಂದಿಗೆ ಚರ್ಚಿಸಿ ಮುಖ್ಯಾಧಿಕಾರಿಯನ್ನು ನೇಮಿಸುವ ಪ್ರಕ್ರಿಯೆ ಆರಂಭವಾಗಲಿದೆ. ಜನರು ಹೊಸ ವ್ಯವಸ್ಥೆಗೆ ಬದಲಾಗುವ ಆಗತ್ಯವಿದೆ. ಇದರಿಂದ ಗ್ರಾಮದ ಅಭಿವೃದ್ಧಿಗೂ ಪೂರಕವಾಗಲಿದೆ.
 - ಯು.ಟಿ. ಖಾದರ್‌,
    ನಗರಾಭಿವೃದ್ಧಿ ಮತ್ತು ವಸತಿ ಸಚಿವರು

Advertisement

ಗ್ರಾಮದ ಅಭಿವೃದ್ಧಿಗೆ ಪೂರಕ
ಕಳೆದ 10 ವರ್ಷಗಳ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಪುರಸಭೆಯಾಗಿ ಮೇಲ್ದರ್ಜೆಗೇರುವುದರಿಂದ ಸರಕಾರದ ಹೆಚ್ಚುವರಿ ಅನುದಾನ ಲಭಿಸುವುದರಿಂದ ಗ್ರಾಮದ ಅಭಿವೃದ್ಧಿಗೆ ಪೂರಕವಾಗಲಿದ್ದು, ಪುರಸಭೆಯಾಗಿ ಮೇಲ್ದರ್ಜೆಗೇರುವುದರಿಂದ ಗ್ರಾಮಸ್ಥರಿಗೆ ಹೆಚ್ಚು ಹೊರೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಬಹುದಾಗಿದೆ.
ರಾಜೇಶ್‌ ಎ. ಉಚ್ಚಿಲ್‌,
ಅಧ್ಯಕ್ಷ, ಸೋಮೇಶ್ವರ ಗ್ರಾಮ ಪಂಚಾಯತ್‌

 ವಸಂತ್‌ ಎನ್‌. ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next