Advertisement

ಗುರು-ಶಿಷ್ಯರ ವಾಸಸ್ಥಾನವೇ ಮಠ: ಉಜ್ಜಯಿನಿ ಶ್ರೀ

04:31 PM Jan 19, 2020 | Naveen |

ಸೊಲ್ಲಾಪುರ: ಮಠವೆಂದರೆ ಕೇವಲ ಗುರುಗಳ ವಾಸಸ್ಥಾನವಲ್ಲ. ಜೊತೆಗೆ ಅಲ್ಲಿ ಶಿಷ್ಯನೂ ವಾಸವಾಗಿದ್ದು ಅವನು ನಿರಂತರ ಅಧ್ಯಯನಶೀಲನಾಗಿರುವ ಸ್ಥಾನವೇ ಮಠ ಎನ್ನುವ ಗೌರವಕ್ಕೆ ಪಾತ್ರವಾಗುತ್ತದೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

Advertisement

ಉತ್ತರಪ್ರದೇಶದ ಕಾಶಿ ಪೀಠದ ಆಶ್ರಯದಲ್ಲಿರುವ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವದ ಅಂಗವಾಗಿ ವಾರಣಾಸಿಯಲ್ಲಿ ಹಮ್ಮಿಕೊಂಡಿರುವ 38 ದಿನಗಳ “ವೀರಶೈವ ಮಹಾಕುಂಭ’ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಮರಸಿಂಹನು ತನ್ನ ಅಮರ ಕೋಶದಲ್ಲಿ ಮಠ ಎನ್ನುವ ಶಬ್ದದ ಅರ್ಥವನ್ನು ಬರೆಯುವಾಗ ವಿದ್ಯಾರ್ಥಿಗಳ ವಾಸಸ್ಥಾನ ಎಂಬುದಾಗಿ ಹೇಳಿದ್ದಾನೆ. ಆದ್ದರಿಂದ ಕೇವಲ ಗುರುವಿನ ನಿವಾಸ ಸ್ಥಾನವು ಮಠವೆಂದು ಕರೆಸಿಕೊಳ್ಳುವುದಿಲ್ಲ. ಜೊತೆಗೆ ಅಲ್ಲಿ ಶಿಷ್ಯರು ವಾಸವಾಗಿದ್ದು ಗುರುವಿನಿಂದ ಅವರಿಗೆ ಪಾಠ ಪ್ರವಚನಗಳು ನಡೆಯುತ್ತಿದ್ದರೆ ಅದು ಮಠ ಎಂದು ಕರೆಯಿಸಿಕೊಳ್ಳುತ್ತದೆ ಎಂದರು.

ಕಾಶಿ ಕ್ಷೇತ್ರದ ಶ್ರೀ ಜಗದ್ಗುರು ವಿಶ್ವಾರಾಧ್ಯ ಜ್ಞಾನ ಪೀಠವು ಈ ವ್ಯಾಖ್ಯಾನಕ್ಕೆ ಅನುರೂಪವಾಗಿದೆ. ಈ ಜ್ಞಾನ ಪೀಠದಲ್ಲಿ ಕಳೆದ ಸಾವಿರಾರು ವರ್ಷಗಳಿಂದ ಸಂಸ್ಕೃತ ಭಾಷೆಯ ಮಾಧ್ಯಮದಿಂದ ಅನೇಕ ಶಾಸ್ತ್ರಗಳ ಅಧ್ಯಯನವು ನಡೆಯುತ್ತ ಬಂದಿದ್ದು, ಇಲ್ಲಿಯ ವಿದ್ಯಾರ್ಥಿಗಳು ಇಲ್ಲಿನ ಮಹಾ ವಿದ್ಯಾಲಯಗಳಲ್ಲಿ ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆದು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಹಿತ್ಯಕ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ನಾಡಿನ ಸರ್ವ ವರ್ಗದ ಜನರಿಗೆ ಜ್ಞಾನ ಪ್ರಕಾಶವನ್ನು ಸಂವ ರ್ದಿಸಿದ್ದಾರೆ. ಜೊತೆಗೆ ದಕ್ಷಿಣ ಭಾರತದ ಎಲ್ಲ ವೀರಶೈವ ಗುರುಕುಲಗಳಿಗೆ ಗುರುವನ್ನು ಒದಗಿಸಿರುವ ಒಂದು ಸರ್ವೋತ್ಕಷ್ಟವಾದ ಗುರುಕುಲ ಇದಾಗಿದೆ ಎಂದು ಹೇಳಿದರು.

ಕಾಶಿ ಜ್ಞಾನ ಪೀಠದ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ
ಭಗವತ್ಪಾದರು ಆಶೀರ್ವಚನ ನೀಡಿದರು. ಇಂದಿನ ಧರ್ಮಸಭೆಯಲ್ಲಿ ಕಾಶಿ ಪೀಠದ ಗುರುಕುಲದ ವಿದ್ಯಾರ್ಥಿಯಾಗಿದ್ದ ಮತ್ತು ಪ್ರಸ್ತುತ ಶ್ರೀಶೈಲ ಕ್ಷೇತ್ರದಲ್ಲಿ ವೀರಶೈವ ಗುರುಕುಲವನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವೇದಾಧ್ಯಯನ ಮಾಡಿಸಿದ್ದ ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಹಾಗೂ ತೆಲಂಗಾಣ ಪ್ರಾಂತದ ವಿಕಾರಾಬಾದದಲ್ಲಿ ವೇದ ಪಾಠಶಾಲೆ ಪ್ರಾರಂಭಿಸಿ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡಿದ ಶ್ರೀ ಶಂಕರ ಸ್ವಾಮಿಗಳವರ ಸ್ಮರಣೋತ್ಸವ ಆಚರಿಸಲಾಯಿತು.

Advertisement

ಕರ್ನಾಟಕದ ವಿವಿಧ ಜಿಲ್ಲೆಗಳ ಮಠಾಧೀಶರು ಮತ್ತು ಶ್ರೀಶೈಲ ಗುರುಕುಲದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಗುರುಕುಲಕ್ಕೆ ಧನಸಹಾಯ: ಶ್ರೀಶೈಲ ಕ್ಷೇತ್ರದಲ್ಲಿಯ ವೀರಶೈವ ಗುರುಕುಲದ ವಿಕಾಸಕ್ಕಾಗಿ ಕಾಶಿ ಪೀಠದಿಂದ 2 ಲಕ್ಷ 25 ಸಾವಿರ ರೂ. ಧನಸಹಾಯವನ್ನು, ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಗೆ ಮರಣೋತ್ತರವಾಗಿ “ಗುರುಕುಲ ಜ್ಞಾನ ಭಾಸ್ಕರ’ ಎನ್ನುವ ಪ್ರಶಸ್ತಿಯನ್ನು ಹಾಗೂ ಶ್ರೀಶೈಲ ವೀರಶೈವ ಗುರುಕುಲದ ಪ್ರಾಧ್ಯಾಪಕ ವೇ. ಮಲ್ಲಿಕಾರ್ಜುನ ಶಾಸ್ತ್ರೀಗಳಿಗೆ “ಗುರುಕುಲ ಜ್ಞಾನ ಜ್ಯೋತಿ’ ಪ್ರಶಸ್ತಿಯನ್ನು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಅನುಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next