Advertisement

ಅಂಗನವಾಡಿ ಕೇಂದ್ರ ಬಳಿ ಘನತ್ಯಾಜ್ಯ ಸಂಗ್ರಹ 

09:55 PM Mar 23, 2019 | Team Udayavani |

ಪುಂಜಾಲಕಟ್ಟೆ : ಅಂಗನಾಡಿ ಕೇಂದ್ರದ ಬಳಿಯಲ್ಲೇ ಕಸದ ರಾಶಿಯಿಂದ ಗಬ್ಬು ನಾರುತ್ತಿರುವ ಪರಿಸರ. ಪ್ರತಿದಿನ ಪುಟಾಣಿಗಳಿಗೆ ಮೂಗು ಮುಚ್ಚಿಕೊಂಡೇ ಊಟ, ಪಾಠ ಎನ್ನುವಂತಹ ಪರಿಸ್ಥಿತಿ. ಇದು ಬಂಟ್ವಾಳ ತಾಲೂಕಿನ ಬಿ. ಕಸಬಾ ಅಂಗನವಾಡಿ ಕೇಂದ್ರದ ದುಃಸ್ಥಿತಿ.

Advertisement

ಬಂಟ್ವಾಳ ಪುರಸಭಾ ಆಡಳಿತ ಕಚೇರಿ ಹಿಂಭಾಗದಲ್ಲೇ ಕಸದ ಸಂಗ್ರಹ ಮಾಡಿರುವುದರಿಂದ ಅಲ್ಲಿಯೇ ಕಾರ್ಯಾಚರಿಸುತ್ತಿರುವ ಅಂಗನವಾಡಿ ಕೇಂದ್ರಕ್ಕೆ ದುರ್ವಾಸನೆ ಸ್ವಾಗತ. ಅಂಗನವಾಡಿ ಪುಟಾಣಿ ಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.

ಬಂಟ್ವಾಳ ಪುರಸಭೆ ಸ್ವಚ್ಛತಾ ಅಭಿಯಾನ ಕಾರ್ಯ ಬಗ್ಗೆ ಹೆಗ್ಗಳಿಕೆ ಪಡೆದಿದೆ. ಆದರೆ, ಪುರಸಭಾ ಆಡಳಿತ ಕಚೇರಿ ಹಿಂಭಾಗದಲ್ಲಿಯೇ ಘನತ್ಯಾಜ್ಯ ಸಂಗ್ರಹ ಮಾಡುತ್ತಿದ್ದು, ಊರಿನ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಅದರ ಬಳಿಯಲ್ಲೇ ಬಿ. ಕಸಬಾ ಅಂಗನವಾಡಿ ಕೇಂದ್ರವಿರುವುದರಿಂದ ತ್ಯಾಜ್ಯ ರಾಶಿಯಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸ್ಥಳಾಂತರಕ್ಕೆ ಪ್ರಯತ್ನ
ಸ್ವಚ್ಛ ಬಂಟ್ವಾಳ, ಪುರಸಭೆ ಕನಸಾಗಿದ್ದು, ಇದಕ್ಕಾಗಿ ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಘನ ತ್ಯಾಜ್ಯ ಸಂಗ್ರಹ, ಸ್ಥಳಾಂತರಿಸಲು ಜಾಗ ಸಿಗುತ್ತಿಲ್ಲ.

ಪುರವಾಸಿಗಳ ಬೇಡಿಕೆಯಂತೆ, ಘಟಕಕ್ಕೆ ಸೂಕ್ತ ಜಮೀನು ಪರಿಶೀಲನೆ ಮಾಡಿ ಆದಷ್ಟು ಶೀಘ್ರ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗುವುದು. ಜತೆಗೆ ಇಲ್ಲಿನ ಜ್ವಲಂತ ಸಮಸ್ಯೆಯಾಗಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೂ ಮುಕ್ತಿ ನೀಡಲು ಸಾಧ್ಯವಾಗುತ್ತದೆ ಎಂಬುವುದು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರ ಅಭಿಪ್ರಾಯ.

Advertisement

ಆರೋಗ್ಯದ ಮೇಲೆ ದುಷ್ಪರಿಣಾಮ
ಇಲ್ಲಿನ ಅಂಗನವಾಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುತ್ತಿದ್ದರು. ಸದ್ಯದ ವಾಸನೆಯಿಂದ ಹೆತ್ತವರು ಮಕ್ಕಳ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿ ಕಳುಹಿಸುತ್ತಿಲ್ಲ. ಈಗ ಕಡಿಮೆ ಹಾಜರಾತಿಯಿದೆ. ತ್ಯಾಜ್ಯ ಹಾಕಲು ಜಾಗವಿಲ್ಲದೆ ಅಂಗನವಾಡಿ ಬಳಿಯಲ್ಲೇ ಸುರಿಯಲಾಗುತ್ತಿದೆ. ಸೊಳ್ಳೆಗಳ ಕಾಟದಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಸಾಧ್ಯತೆಯಿದ್ದು, ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ ಎಂದು ಹೆತ್ತವರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಆಡಳಿತದ ಕಾರ್ಯವೈಖರಿಗೆ ಸಾರ್ವಜನಿಕರು ಬೇಸತ್ತಿದ್ದಾರೆ. ಕಲುಷಿತ ವಾತಾವರಣದಿಂದ ಮಕ್ಕಳನ್ನು ರಕ್ಷಿಸಬೇಕಾದ ಕೆಲಸ ಅಧಿಕಾರಿಗಳಿಂದ ಆಗಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತ್ಯಾಜ್ಯ ವಾಹನ ಸಮಯ
ಬದಲಾವಣೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಇಲ್ಲ. ಇದರಿಂದ ಪುರಸಭಾ ವ್ಯಾಪ್ತಿಯ ವಿವಿಧೆಡೆ ಸಂಗ್ರಹಿಸಿದ ತ್ಯಾಜ್ಯಗಳನ್ನು ಪುರಸಭಾ ಆಡಳಿತ ಕಚೇರಿ ಹಿಂಭಾಗದಲ್ಲಿ ತಂದು ಸಂಗ್ರಹಿಸಲಾಗುತ್ತಿದೆ. ಸಣ್ಣ ವಾಹನಗಳಿಂದ ತಂದ ತ್ಯಾಜ್ಯಗಳನ್ನು ಹಸಿ-ಒಣ ತ್ಯಾಜ್ಯ ವಿಂಗಡಣೆ ಮಾಡಿ, ಒಣ ಕಸವನ್ನು ಇಲ್ಲಿಯೇ ಅಚ್ಚುಕಟ್ಟಾಗಿ ಸಂಗ್ರಹಿಸಿ, ಹಸಿ ತ್ಯಾಜ್ಯವನ್ನು ಹೊರವಲಯದ ಡಂಪಿಂಗ್‌ ಯಾರ್ಡ್‌ಗಳಿಗೆ ಕಳುಹಿಸಲಾಗುತ್ತಿದೆ. ವಾಹನಗಳಲ್ಲಿ ಬೆಳಗ್ಗೆ ಬಂದತಹ ತ್ಯಾಜ್ಯಗಳನ್ನು ಸಂಜೆ ವೇಳೆಗೆ ವಿಲೇವಾರಿ ಮಾಡಲಾಗುತ್ತಿದೆ. ತ್ಯಾಜ್ಯ ಸಂಗ್ರಹ ವಾಹನ ಬಂದಾಗ ಮಾತ್ರ ವಾಸನೆ ಬರುತ್ತದೆ. ಇದರಿಂದ ತ್ಯಾಜ್ಯ ವಾಹನ ಬರುವಿಕೆ ಸಮಯವನ್ನು ಬದಲಾವಣೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾಗದು.
ರೇಖಾ ಜೆ. ಶೆಟ್ಟಿ
ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ

ಸೂಕ್ತ ಜಾಗದಲ್ಲಿ ವ್ಯವಸ್ಥೆ
ಸ್ವಚ್ಛ ಬಂಟ್ವಾಳ ಪರಿಕಲ್ಪನೆಯಡಿ ಘನತ್ಯಾಜ್ಯ ವಿಂಗಡಣ ಘಟಕ ಯೋಜನೆ ರೂಪಿಸಲಾಗಿದೆ. ಇಲ್ಲಿ ತ್ಯಾಜ್ಯ ವಿಂಗಡಿಸಿ, ಸಂಸ್ಕರಣೆ ಮಾಡಿ ಗೊಬ್ಬರ ತಯಾರು ಮಾಡುವ ಚಿಂತನೆ ಇದೆ. ಇದಕ್ಕಾಗಿ ಪಾಣೆಮಂಗಳೂರಿನ ಸುಣ್ಣದ ಗೂಡು/ ಪುರಸಭಾ ವ್ಯಾಪ್ತಿಯಲ್ಲಿ ಸೂಕ್ತ ಜಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು.
 ಯಾಸ್ಮಿನ್‌ ಸುಲ್ತಾನ,
 ಪರಿಸರ ಎಂಜಿನಿಯರ್ 

ಘಟಕ ಅತ್ಯವಶ್ಯ
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವೆಂಬುವುದೇ ಇಲ್ಲ. ಕಳೆದ 7 ವರ್ಷಗಳಿಂದ ತ್ಯಾಜ್ಯ ವಿಲೇವಾರಿ ಸಂಬಂಧಿತ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದರೂ ಯಾವುದೂ ಕಾರ್ಯಗತಗೊಂಡಿಲ್ಲ. ಈ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆಗೆ ತ್ಯಾಜ್ಯ ವಿಲೇವಾರಿ ಘಟಕ ಅತ್ಯವಶ್ಯವಾಗಿದೆ.
 - ಮುನೀಶ್‌ ಅಲಿ
ಬಂಟ್ವಾಳ ಪುರಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next