Advertisement

ಮಣ್ಣು ಫಲವತ್ತತೆ ಹೆಚ್ಚಿಸಿ-ಬರಗಾಲ ಮೆಟ್ಟಿ ನಿಲ್ಲಿ

10:35 AM Mar 14, 2019 | |

ದಾವಣಗೆರೆ: ಅಡಕೆ ತೋಟದಲ್ಲಿನ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳುವ ಮೂಲಕ ಬರಗಾಲವನ್ನು ಸಮರ್ಥವಾಗಿ ಮೆಟ್ಟಿ ನಿಲ್ಲಬಹುದು ಎಂದು ಸಾವಯವ ಕೃಷಿ ತಜ್ಞ ಡಾ| ಕೆ.ಆರ್‌. ಹುಲ್ಲುನಾಚೇಗೌಡ ತಿಳಿಸಿದ್ದಾರೆ.

Advertisement

ದಾವಣಗೆರೆಯ ಸಾವಯವ ಕೃಷಿ ಮತ್ತು ತರಬೇತಿ ಕೇಂದ್ರ, ಬೆಂಗಳೂರಿನ ಕೃಷಿ ಅಭಿಯಾನ ಟ್ರಸ್ಟ್‌ ಸಹಯೋಗದಲ್ಲಿ ಕಕ್ಕರಗೊಳ್ಳ, ಅವರಗೊಳ್ಳ, ಮಳ್ಳೆಕಟ್ಟೆ, ಅಣಜಿ, ಕರೇಕಟ್ಟೆ, ಕಂಚುಗಾರನಹಳ್ಳಿ, ದಾಗಿನಕಟ್ಟೆ, ರಾಮತೀರ್ಥ ಗ್ರಾಮಗಳ ರೈತರ ಅಡಕೆ, ತೆಂಗು ಹಾಗು ಎಲೆಬಳ್ಳಿ ತೋಟಗಳಲ್ಲಿ ಪ್ರಾತ್ಯಕ್ಷಿಕೆ, ಮಾಹಿತಿ ನೀಡಿದ ಅವರು, ಅಡಕೆ ತೋಟದಲ್ಲಿ ಕನಿಷ್ಟ 200 ರಿಂದ 250 ಗ್ಲಿರಿಸಿಡಿಯಾ (ಗೊಬ್ಬರದ ಗಿಡ) ಬೆಳೆಸುವುದರಿಂದ ಸಾರಜನಕವನ್ನು ಸ್ಥಿರೀಕರಣ ಮಾಡಿಕೊಳ್ಳುವ ಸಾಮರ್ಥ್ಯ ಅಡಕೆ ಗಿಡಗಳಿಗೆ ಬರುತ್ತದೆ ಹಾಗೂ ಕಡಿಮೆ ನೀರನ್ನು ಬಳಸಿ ಯಾವುದೇ ರೋಗಗಳು ಬರದಂತೆ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಅಡಕೆ ಗರಿಗಳಿಂದ ಬುಡದಲ್ಲಿ ಮುಚ್ಚುಗೆ ಮಾಡುವುದರಿಂದ ಮಣ್ಣಿನಲ್ಲಿರುವ ತ್ಯಾಜ್ಯಗಳು ಹ್ಯೂಮಸ್‌ ಆಗಿ ಪರಿವರ್ತನೆಗೊಂಡು ಬೆಳೆಗೆ ಬೇಕಾಗುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವುದರೊಂದಿಗೆ ಸಾವಯವ ಇಂಗಾಲವನ್ನು ಹೆಚ್ಚಿಸುತ್ತದೆ. ಸೂಕ್ಷ್ಮಾಣು ಜೀವಿಗಳು ಮಣ್ಣಿನಲ್ಲಿ ಪುನರುಜ್ಜಿವನಗೊಂಡು ಜೈವಿಕ ಪರಿಸರ ನಿರ್ಮಾಣವಾಗುವುದರಿಂದ ಮಣ್ಣಿಗೆ ರೋಗ ನಿರೋಧಕ ಶಕ್ತಿ ಜಾಸ್ತಿಯಾಗಿ ಮಣ್ಣಿನಲ್ಲಿ ಎರೆಹುಳುಗಳು ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತವೆ ಮತ್ತು ಮಣ್ಣು ಫಲವತ್ತತೆಯೊಂದಿಗೆ ನೀರನ್ನು ಹಿಡಿದಿಟ್ಟುಕೊಳ್ಳಲು ಸಹಾಯಕವಾಗುತ್ತವೆ.

 1ಕೆ.ಜಿ. ಹ್ಯೂಮಸ್‌ ಮಣ್ಣಿನಲ್ಲಿದ್ದರೆ ದಿನಕ್ಕೆ ಕನಿಷ್ಟ 6 ಲೀಟರ್‌ ನೀರನ್ನು ಭೂಮಿಯ ಆಳದಿಂದಾಗಲಿ ಅಥವಾ ವಾತಾವರಣದಲ್ಲಿರುವ ತೇವಾಂಶದಿಂದ ಶೇಖರಿಸಿಟ್ಟುಕೊಳ್ಳುತ್ತದೆ. ಅಡಕೆ ಉಷ್ಣ ವಲಯದ ಬೆಳೆಯಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರುಣಿಸಬಾರದು ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಕೃಷಿ ಅಭಿಯಾನ ಟ್ರಸ್ಟ್‌ನ ದಿದ್ದಿಗೆ ಮಹಾದೇವಪ್ಪ, ವಿಶ್ವನಾಥ್‌ ಕಕ್ಕರಗೊಳ್ಳ, ಬೆಂಗಳೂರಿನ ಚರಣ್‌ ನಾಯ್ಡು, ಮಣಿಕಂಠ, ಅಂಜನ್‌ಕುಮಾರ್‌ ಇತರರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next