Advertisement
ಕಾಪು ಮಾರಿಗುಡಿ ರಸ್ತೆಯ ಆಂಜನೇಯ ಕಾಂಪ್ಲೆಕ್ಸ್ ಎದುರಿನಲ್ಲಿ ಒಳಚರಂಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ಹೊಂಡದೊಳಗೆ ಮಣ್ಣು ಕುಸಿದಿದ್ದು, ಮಣ್ಣಿನಡಿಯಲ್ಲಿ ಕಾರ್ಮಿಕ ಸಿಲುಕಿಕೊಂಡಿದ್ದ. ಮಣ್ಣು ಕುಸಿಯುತ್ತಿರುವಂತೆಯೇ ಮತ್ತೋರ್ವ ಕಾರ್ಮಿಕ ಬೊಬ್ಬೆ ಹೊಡೆದ ಪರಿಣಾಮ ಸಾರ್ವಜನಿಕರು ಧಾವಿಸಿ, ಪರಿಹಾರ ಕಾರ್ಯಾಚರಣೆ ನಡೆಸಿ ಕಾರ್ಮಿಕನನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು.ಕಾರ್ಮಿಕನ ಸಮಯಪ್ರಜ್ಞೆ ಮತ್ತು ಸಾರ್ವಜನಿಕರ ತುರ್ತು ಸ್ಪಂದನೆ ಯಿಂದ ಜೀವಹಾನಿ ತಪ್ಪಿದಂತಾಗಿದೆ.
ಎರಡು ತಿಂಗಳ ಹಿಂದೆಯಷ್ಟೇ ಕಾಪುವಿನಲ್ಲಿ ಒಳಚರಂಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣು ಕುಸಿದು ಕಾರ್ಮಿಕರಿಬ್ಬರು ಮೃತಪಟ್ಟಿದ್ದರು. ರವಿವಾರ ಮತ್ತೆ ಅದೇ ರೀತಿಯ ಘಟನೆ ನಡೆದಿದ್ದು, ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಕಾಮಗಾರಿ ನಡೆಸುತ್ತಿರುವುದು ಇದಕ್ಕೆ ಕಾರಣ ಎಂದು ಹೇಳಲಾಗಿದೆ.