Advertisement

ನೇಪಾಲದ ಮೃದು ಮಾತು; ಬಿಕ್ಕಟ್ಟು ಶಮನವಾಗಲಿ

10:28 PM Aug 18, 2020 | mahesh |

ಕಳೆದ ಕೆಲವು ತಿಂಗಳಿಂದ ಭಾರತ ವಿರುದ್ಧ ಟೀಕಾಸ್ತ್ರಗಳನ್ನು, ತಂತ್ರಗಳನ್ನು ಹೆಣೆಯುತ್ತಾ ಬಂದಿದ್ದ ನೇಪಾಲದ ಆಡಳಿತವೀಗ ಪಾಠ ಕಲಿತಂತೆ ಕಾಣುತ್ತಿದೆ. ಆಗಸ್ಟ್‌ 15ರಂದು ನೇಪಾಲದ ಪ್ರಧಾನಿ ಕೆ.ಪಿ. ಓಲಿಯವರು ಭಾರತಕ್ಕೆ ಶುಭ ಹಾರೈಸಿ, ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆಸಿದ ಬೆನ್ನಲ್ಲೇ, ಈಗ ಸೋಮವಾರ ಎರಡೂ ರಾಷ್ಟ್ರಗಳ ನಡುವಿನ ಉನ್ನತಾಧಿಕಾರಿಗಳ ಸಮಿತಿಯ ನಡುವೆ ಸಭೆ ನಡೆದಿದೆ. ನೇಪಾಲದ ಅನೇಕ ಯೋಜನೆಗಳಿಗೆ ಭಾರತ ಸಹಾಯ ಹಾಗೂ ಹೂಡಿಕೆ ಮಾಡಿದ್ದು, ಈ ಯೋಜನೆಗಳ ಸ್ಥಿತಿಗತಿಯನ್ನು ಅವಲೋಕಿಸಲು ಈ ಸಭೆಯನ್ನು ನಡೆಸಲಾಗಿದೆ. ರೈಲ್ವೇ ಲಿಂಕ್‌ಗಳು, ಪೆಟ್ರೋಲಿಯಂ ಪೈಪ್‌ಲೈನ್‌, ರಸ್ತೆಗಳು, ಸೇತುವೆಗಳು, ವಿದ್ಯುತ್‌, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಸಹಭಾಗಿತ್ವದಲ್ಲಿ, ಮಾರ್ಗದರ್ಶನದಲ್ಲಿ ನೇಪಾಲದಲ್ಲಿ ಯೋಜನೆಗಳು ಕಾರ್ಯರೂಪದಲ್ಲಿವೆ. ಮೇಲ್ನೋಟಕ್ಕೆ ಈ ಸಭೆ, ಕೇವಲ ಅಭಿವೃದ್ಧಿ ಯೋಜನೆಯ ಕುರಿತ ಅವಲೋಕನವೆಂದಷ್ಟೇ ಅನಿಸುತ್ತದಾದರೂ, ರಕ್ಷಣೆ-ರಾಜಕೀಯ ವಿಶ್ಲೇಷಕರು ಇದನ್ನು ಕೆಲವು ಸಮಯದಿಂದ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಶಮನಗೊಳಿಸುವ ಪ್ರಯತ್ನದಲ್ಲಿ ದೊಡ್ಡ ಹೆಜ್ಜೆ ಎಂದು ಕರೆಯುತ್ತಿದ್ದಾರೆ.

Advertisement

ಆದಾಗ್ಯೂ, ಬಿಕ್ಕಟ್ಟನ್ನು ಸೃಷ್ಟಿಸಿದ್ದು ನೇಪಾಲವೇ ಎನ್ನುವುದು ನಿರ್ವಿವಾದ. ಚೀನದ ಕುಮ್ಮಕ್ಕಿನಿಂದಾಗಿ ಭಾರತದೊಂದಿಗೆ ಗಡಿ ತಗಾದೆ ತೆಗೆದ ಕೆ.ಪಿ. ಓಲಿ, ಭಾರತದ ಪ್ರದೇಶಗಳಾದ ಲಿಪುಲೇಖ್‌, ಲಿಂಪಿಯಾಧುರಾ, ಕಾಲಾಪಾನಿ ಪ್ರದೇಶಗಳು ನೇಪಾಲಕ್ಕೆ ಸೇರಿದವೆಂದು ಸಾರುತ್ತಾ, ಜೂನ್‌ ತಿಂಗಳಲ್ಲಿ ಹೊಸ ನಕ್ಷೆಯನ್ನೂ ಬಿಡುಗಡೆ ಮಾಡಿದರು. ತಮ್ಮ ರಾಷ್ಟ್ರದಲ್ಲಿ ಕೋವಿಡ್‌ ಹೆಚ್ಚಾದದ್ದಕ್ಕೆ ಭಾರತವೇ ಕಾರಣ ಎಂದು ಆರೋಪಿಸಿದರು, ಭಾರತವನ್ನು ಮನದಲ್ಲಿಟ್ಟುಕೊಂಡೇ ನೇಪಾಲದ ವಿವಾಹ ಕಾನೂನಿನಲ್ಲಿ ಬದಲಾಣೆ ತಂದರು. ಇಷ್ಟಕ್ಕೆ ನಿಲ್ಲದೆ, ನಿಜವಾದ ರಾಮಜನ್ಮಭೂಮಿ ನೇಪಾಲದಲ್ಲಿದೆ ಎನ್ನುವ ಮೂಲಕ ಭಾರತೀಯರ ಹಾಗೂ ನೇಪಾಲಿಯರ ಮುನಿಸಿಗೆ ಪಾತ್ರರಾದರು. ಮೊದಲಿಂದಲೂ ಓಲಿ ನೇತೃತ್ವದ ಕಮ್ಯುನಿಸ್ಟ್‌ ಸರಕಾರ‌ ಚೀನಪರ ಧೋರಣೆಯನ್ನೇ ಪ್ರದರ್ಶಿಸುತ್ತಾ ಬರುತಿತ್ತಾದರೂ, ಅದು ಹಿಂದೆಂದೂ ಈ ರೀತಿಯಲ್ಲಿ ಭಾರತ ವಿರೋಧಿ ಮನಃಸ್ಥಿತಿಯನ್ನು ಪ್ರದರ್ಶಿಸಿರಲಿಲ್ಲ. ಓಲಿಯವರ ಈ ವರ್ತನೆ ಭಾರತಕ್ಕಷ್ಟೇ ಅಲ್ಲ, ಖುದ್ದು ನೇಪಾಳಿಯರಲ್ಲಿ ಹಾಗೂ ಆಡಳಿತ ಪಕ್ಷದ ನಾಯಕರಲ್ಲೇ ಅಚ್ಚರಿ-ಅಸಮಾಧಾನಕ್ಕೆ ಕಾರಣವಾಗಿದೆ. ಬಹುಕಾಲದಿಂದಲೂ ನೇಪಾಲಕ್ಕೆ ಸಕಲ ರೀತಿಯಲ್ಲೂ ಸಹಾಯ ಮಾಡುತ್ತಾ ಬಂದ, ಸರ್ವಋತು ಮಿತ್ರನೆಂದು ಕರೆಸಿಕೊಳ್ಳುವ ಭಾರತದಿಂದ ದೂರವಾಗಿ, ಚೀನದ ಜೋಳಿಗೆಗೆ ನೇಪಾಲವನ್ನು ಹಾಕುವ ಪ್ರಯತ್ನವಿದು ಎಂದೇ ಜೋರಾಗಿ ಅಸಮಾಧಾನ ಭುಗಿಲೆದ್ದಿದೆ. ಈ ಅಸಮಾಧಾನವು ಓಲಿಯವರನ್ನು ಕುರ್ಚಿ ಕಳೆದುಕೊಳ್ಳುವ ಹಂತಕ್ಕೆ ಹೋಗಿ ನಿಲ್ಲಿಸಿದೆ.

ಹೀಗಾಗಿ ಓಲಿ ಭಾರತದ ಕುರಿತು ಮೃದು ಧೋರಣೆ ತೋರಿಸುತ್ತಿರುವುದು ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಎಂದು ಪರಿಣತರು ವಿಶ್ಲೇಷಿಸುತ್ತಿದ್ದಾರೆ. ಏನೇ ಇದ್ದರೂ ಭಾರತ ಮತ್ತು ನೇಪಾಲ ನಡುವೆ ರಾಜತಾಂತ್ರಿಕ ಮಟ್ಟದಲ್ಲಷ್ಟೇ ಅಲ್ಲದೇ, ಶತಮಾನಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವಿದೆ, ಇತಿಹಾಸವಿದೆ. ಇದನ್ನೆಲ್ಲ ಬಲಿಕೊಟ್ಟು ಡ್ರ್ಯಾಗನ್‌ ರಾಷ್ಟ್ರದ ತಾಳಕ್ಕೆ ಕುಣಿಯುವ ತಪ್ಪನ್ನು ಮುಂದುವರಿಸಿದರೆ, ಓಲಿ ಆಡಳಿತ ಪತನಗೊಳ್ಳುವುದರಲ್ಲಿ ಸಂದೇಹವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next