Advertisement

ಸಮಾಜಕ್ಕೆ ಬೇಕಿದೆ ನಿಸ್ವಾರ್ಥ ನಾಯಕತ್ವ

05:42 AM Feb 14, 2019 | |

ದಾವಣಗೆರೆ: ಕುರುಬ ಸಮಾಜದಲ್ಲಿ ನಿಸ್ವಾರ್ಥವಾಗಿ ಸಮಾಜಕ್ಕಾಗಿ ದುಡಿಯುವ ನಾಯಕತ್ವದ ಕೊರತೆ ಕಂಡು ಬರುತ್ತಿದೆ ಎಂದು ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಬುಧವಾರ ಜಿಲ್ಲಾ ಕುರುಬರ ಹಾಸ್ಟೆಲ್‌ನಲ್ಲಿ ವೇ. ಚನ್ನಯ್ಯ ಒಡೆಯರ್‌ ಸಂಕೀರ್ಣ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಯಾರೋ ಕಷ್ಟಪಟ್ಟು ಕಟ್ಟಿಸಿದಂತಹ ಮನೆಗೆ ಯಜಮಾನರಾಗಲಿಕ್ಕೆ ಬಯಸುತ್ತಾರೆಯೇ ಹೊರತು ತಾವೇ ಖುದ್ದು ಮನೆ ಕಟ್ಟಿ ಯಜಮಾನರಾಗಲಿಕ್ಕೆ ಯಾರೂ ಬಯಸದ ವಾತಾವರಣ ಕಂಡು ಬರುತ್ತಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯಾ ಬರುವ ಮುನ್ನವೇ 1933ರಲ್ಲೇ ಮೊಟ್ಟ ಮೊದಲ ಬಾರಿಗೆ ಅಂದಿನ ಮೈಸೂರು ರಾಜ್ಯದಲ್ಲಿ ಕುರುಬ ಸಮಾಜದ ಸಂಘಟನೆಯನ್ನು ನಮ್ಮ ಹಿರಿಯರು ಪ್ರಾರಂಭಿಸಿದ್ದರು. ಕರ್ನಾಟಕ ಪ್ರದೇಶ ಕುರುಬರ ಸಂಘದಲ್ಲಿ ಇಂದಿಗೂ ಮೈಸೂರು ಪ್ರದೇಶ ಕುರುಬರ ಸಂಘದ ನಾಮಫಲಕ ಕಾಣಬಹುದು.  ನಮ್ಮ ಸಮಾಜದ ಹಿರಿಯರು ಸಂಘಟನೆಗೆ ಕೊಟ್ಟಂತಹ ಬಹು ದೊಡ್ಡ ಅವಕಾಶವನ್ನು ನಾವು ಯಾರೂ ಮರೆಯಬಾರದು ಎಂದು ತಿಳಿಸಿದರು.

ದಾವಣಗೆರೆಯಲ್ಲಿ 1967ರಲ್ಲೇ ಕುರುಬರ ಹಾಸ್ಟೆಲ್‌ ನಿರ್ಮಾಣ ಮಾಡಲಾಗಿತ್ತು. ಎಲ್ಲಿಯೇ ನೋಡಿದರೂ ಕುರುಬರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಎಂದೇ ಪ್ರಾರಂಭಿಸಿರುವುದು ಕುರುಬ ಸಮಾಜದವರು ತಮ್ಮ ಸಮಾಜದ ವಿದ್ಯಾರ್ಥಿಗಳು ಮಾತ್ರವೇ ಶಿಕ್ಷಣ ಪಡೆಯಬೇಕು ಎಂದು ಬಯಸುವವರಲ್ಲ. ಪ್ರತಿಯೊಂದು ಶೋಷಿತ, ದಮನಿತ, ಅಕ್ಷರ ವಂಚಿತ ಸಮಾಜದವರು ಸಹ ಶಿಕ್ಷಣ ಪಡೆಯುವಂತಾಗಬೇಕು ಎಂಬ ಮಹತ್ತರ ಸದುದ್ದೇಶದಿಂದ ಹಾಸ್ಟೆಲ್‌ಗ‌ಳನ್ನು ಪ್ರಾರಂಭಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ದಾವಣಗೆರೆ ಮಾತ್ರವಲ್ಲ, ಎಲ್ಲಾ ಕಡೆ ಕುರುಬರ ಹಾಸ್ಟೆಲ್‌ ಇವೆ. ಆದರೆ, ಅನೇಕ ಕಡೆ ಇಂದಿಗೂ ಸೂಕ್ತ ನಿರ್ವಹಣೆ, ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆ ಕಂಡು ಬರುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಕುರುಬ ಸಮಾಜದಲ್ಲಿ ದಾನಿಗಳು, ಶಿಕ್ಷಣ ಪ್ರೇಮಿಗಳಿಗೆ, ಸೌಲಭ್ಯಕ್ಕೆ ಕೊರತೆ ಇಲ್ಲವೇ ಇಲ್ಲ. ಆದರೆ, ಹಾಸ್ಟೆಲ್‌ಗ‌ಳಲ್ಲಿ ಸೂಕ್ತ ನಿರ್ವಹಣೆ, ಮೂಲಭೂತ ಸೌಲಭ್ಯ ಒದಗಿಸುವಂತಹವರ, ನಿಸ್ವಾರ್ಥವಾಗಿ ದುಡಿಯುವಂತಹವರ ಕೊರತೆ ಕಂಡು ಬರುತ್ತಿದೆ. ಆ ಕಾರಣಕ್ಕಾಗಿಯೂ ಕುರುಬ ಸಮಾಜ ಶಿಕ್ಷಣದಲ್ಲಿ ಹಿನ್ನಡೆ ಕಾಣುತ್ತಿದೆ ಎಂದು ತಿಳಿಸಿದರು.

Advertisement

ತಮ್ಮನ್ನೂ ಒಳಗೊಂಡಂತೆ ಅನೇಕರು ಹುಟ್ಟುವ ಮುನ್ನವೇ ನಮ್ಮ ಸಮಾಜದ ಹಿರಿಯರು ಯಾವ ಸದುದ್ದೇಶದಿಂದ ಹಾಸ್ಟೆಲ್‌ಗ‌ಳನ್ನು ಕಟ್ಟಿದ್ದಾರೋ ಅಂತಹ ಆಶಾಭಾವನೆಗೆ ಅಪಚಾರ ಬಾರದಂತೆ ಪದಾಧಿಕಾರಿಗಳು ಕೆಲಸ ಮಾಡಬೇಕು. ಸಮಾಜದ ಯುವ ಜನಾಂಗ ನಮ್ಮ ಹಿರಿಯರನ್ನು ಗೌರವದಿಂದ ಕಾಣುವಂತಾಗಬೇಕು ಎಂದು ತಿಳಿಸಿದರು. 

ಇಂದಿಗೂ ಕೆಲವಾರು ಕಡೆ ಸಾಯುವವರೆಗೂ ಅವರೇ ಅಧ್ಯಕ್ಷರು ಎನ್ನುವಂತೆ ಇದ್ದಾರೆ. ಅವರೇ ಫಿಕ್ಸ್‌ ಎನ್ನುವಂತೆ ಅವಿರೋಧ ಆಯ್ಕೆ ನಡೆಯುತ್ತಿದೆ. ಅಂತಹ ಕೆಲವರು ಕರ್ನಾಟಕ ಪ್ರದೇಶ ಕುರುಬರ ಸಂಘ, ಮಠಗಳ ಮಾತನ್ನೂ ಕೇಳುವುದಿಲ್ಲ. ಯಾರಾದರೂ ಏನನ್ನಾದರೂ ಕೇಳಿದರೆ ಹೊರಕ್ಕೆ ತಳ್ಳುವಂತಹ ರೌಡಿಸಂ… ಸಹ ಕಂಡು ಬರುತ್ತಿದೆ. ಕರ್ನಾಟಕದಲ್ಲಿ ಕಾಗಿನೆಲೆ ಕನಕ ಗುರುಪೀಠ ಮಹಾಸಂಸ್ಥಾನ ಮಠ ಮತ್ತು ಕರ್ನಾಟಕ ಪ್ರದೇಶ ಕುರುಬರ ಸಂಘ ಎರಡು ಕುರುಬ ಸಮಾಜದ ಕಣ್ಣುಗಳು. ದಾವಣಗೆರೆ ಒಳಗೊಂಡಂತೆ ಎಲ್ಲ ಸಂಘಗಳು ಕರ್ನಾಟಕ ಪ್ರದೇಶ ಕುರುಬರ ಸಂಘದಡಿಯಲ್ಲೇ ನಡೆಯಬೇಕು. ಬೇಕಾದಲ್ಲಿ ಸಮಿತಿಗಳ ಮೂಲಕ ಜವಾಬ್ದಾರಿ ನಿರ್ವಹಿಸಲಿ ಎಂದು ಸ್ವಾಮೀಜಿ ಸಲಹೆ ನೀಡಿದರು.

ದಾವಣಗೆರೆಯಲ್ಲಿ ಹಿಂದೆಯೇ ಶಾಲೆ ಪ್ರಾರಂಭಿಸಲಾಗಿತ್ತು. ಈಚೆಗೆ 70-80 ಲಕ್ಷ ವೆಚ್ಚದಲ್ಲಿ ಮತ್ತೂಂದು ಶಾಲೆ ಪ್ರಾರಂಭಿಸಲಾಗಿದೆ. ಈ ಹಿಂದೆ ಪ್ರಾರಂಭಿಸಲಾಗಿದ್ದ ಶಾಲೆಗೆ ಪ್ರವೇಶ ಇಲ್ಲದಂತಾಗುತ್ತಿದೆ. ಅದು ಯಾವ ಕಾರಣಕ್ಕೆ ಎಂಬುದರ ಬಗ್ಗೆ ಎಲ್ಲರೂ ಚರ್ಚೆ ನಡೆಸಬೇಕು. ಈ ಹಿಂದೆ ಪ್ರಾರಂಭಿಸಿದ್ದ ಶಾಲೆಯನ್ನು ಬೆಳ್ಳೊಡಿ ಮಠಕ್ಕೆ ವಹಿಸಿಕೊಡುವಂತಾಗಬೇಕು. 

ಇಲ್ಲಿ ಪ್ರಾರಂಭಿಸಿರುವ ಪಿಯು ಕಾಲೇಜಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವ ಜೊತೆಗೆ ಸೂಕ್ತ ರೀತಿ ನಿರ್ವಹಣೆ ಮಾಡಬೇಕು. ಏಕೆಂದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಎಲ್ಲಾ ಮೂಲಭೂತ ಸವಲತ್ತು ಬಯಸುತ್ತಾರೆ. ಹೊಸದುರ್ಗದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 4 ಸಾವಿರ ಮಕ್ಕಳ ಪ್ರವೇಶವಕಾಶದ ಸುಸಜ್ಜಿತ ಶಾಲೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮುದಹದಡಿ ಬಿ. ದಿಳೆಪ್ಪ ಅಧ್ಯಕ್ಷತೆ, ಹದಡಿಯ ಚಂದ್ರಗಿರಿ ಮಠದ ಶ್ರೀ ಮುರುಳೀಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಕೆ. ಮಲ್ಲಪ್ಪ, ಡಾ| ಕೆ.ಪಿ. ಸಿದ್ದಬಸಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಕೆ.ಆರ್‌. ಜಯಶೀಲಾ, ಸದಸ್ಯರಾದ ಕೆ.ಎಸ್‌. ಬಸವಂತಪ್ಪ, ಎಚ್‌.ಬಿ. ಪರಶುರಾಮಪ್ಪ, ಮಾಜಿ ಸದಸ್ಯ ಎಸ್‌. ವೆಂಕಟೇಶ್‌, ಮಾಜಿ ಮೇಯರ್‌ ಎಚ್‌. ಬಿ. ಗೋಣೆಪ್ಪ, ನಗರಪಾಲಿಕೆ ಸದಸ್ಯ ಎಚ್‌. ತಿಪ್ಪಣ್ಣ, ಬಿ. ಷಣ್ಮುಖಪ್ಪ, ಕೆಂಗೋ ಹನುಮಂತಪ್ಪ, ಎಲ್‌.ಬಿ.ಭೈರೇಶ್‌, ಜೆ.ಕೆ. ಕೊಟ್ರಬಸಪ್ಪ ಇತರರು ಇದ್ದರು. 

ಹಾಲುಮತ-ಕುರುಬ ಒಂದೇ
ತಾವು ಕಾರ್ಯಕ್ರಮಕ್ಕೆ ಭಾಗವಹಿಸಲು ಬರುವಾಗ ಮಾಧ್ಯಮದವರು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕುರುಬ ಸಮಾಜದವರು ಟಿಕೆಟ್‌ ಬಯಸುತ್ತಿರುವ ಬಗ್ಗೆ ತಮ್ಮ ಪ್ರತಿಕ್ರಿಯೆ ಕೇಳಿದರು. ಚನ್ನಯ್ಯ ಒಡೆಯರ್‌ ನಂತರ ಹಾಲುಮತ ಸಮಾಜದವರು ಯಾರೂ ಎಂಪಿ ಆಗಿಲ್ಲ. ಈಗ ಟಿಕೆಟ್‌ ಕೊಡುವುದು ಒಳ್ಳೆಯದು ಎಂಬ ಉತ್ತರ ನೀಡಿದ್ದಾಗಿ ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದಾಗ, ಹಾಲುಮತ ಸಮಾಜ- ಕುರುಬರು ಬೇರೆ ಬೇರೆನಾ ಎಂದು ಜೆ.ಕೆ. ಕೊಟ್ರಬಸಪ್ಪ ಪ್ರಶ್ನಿಸಿದರು. ಹಾಲುಮತ-ಕುರುಬ ಸಮಾಜ ಒಂದೇ. ನಾವು ಬೇರೆ ಎಂದು ಹೇಳಿಯೇ ಇಲ್ಲ ಎಂದು ಸ್ವಾಮೀಜಿ ತಿಳಿಸಿದರು.

ಮತ್ತೆ ಸಿಎಂ ಆಗುವ ಶಕ್ತಿ ಇದೆ
ನಮ್ಮ ಸಮಾಜದ ಸಿದ್ದರಾಮಯ್ಯ ಮತ್ತೇನಾದರೂ ಮುಖ್ಯಮಂತ್ರಿ ಆಗಿದ್ದರೆ ಈಗೇನು ನಡೆಯುತ್ತಿದೆಯೋ ಅಂತಹ ಡ್ರಾಮಾ, ಅಪಚಾರ ಆಗುತ್ತಲೇ ಇರಲಿಲ್ಲ. ಸಿದ್ದರಾಮಯ್ಯ ಅವರಿಗೆ ಮತ್ತೆ ಮುಖ್ಯಮಂತ್ರಿ ಆಗುವ ಶಕ್ತಿ, ಎಲ್ಲಾ ಅರ್ಹತೆ ಇದೆ ಎಂದು ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next