Advertisement

ಮೋದಿಯಿಂದ ಸಮಾಜ ವಿಭಜಿಸುವ ರಾಜಕಾರಣ

07:38 AM Mar 16, 2019 | Team Udayavani |

ಚಾಮರಾಜನಗರ: 40 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ನರೇಂದ್ರ ಮೋದಿಯವರಷ್ಟು ಸುಳ್ಳು ಹೇಳಿದಂಥ ಪ್ರಧಾನಿ ಯಾರೂ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ರಾಮಮಂದಿರ, ಹಿಂದುತ್ವ, ಸರ್ಜಿಕಲ್‌ ಸ್ಟ್ರೈಕ್‌ನಂಥ ಭಾವನಾತ್ಮಕ ವಿಚಾರಗಳನ್ನು ಜನರ ಮನಸಿನಲ್ಲಿ ಬಿತ್ತಿ ಕೆರಳಿಸಿ ಸಮಾಜ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

Advertisement

ನಗರದ ಡಾ.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಶುಕ್ರವಾರ ಆಯೋಜಿಸಿದ್ದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿ, ಅನೇಕ ಬಾರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪಗೆ ನಮ್ಮ ಸಾಧನೆ ಮತ್ತು ಅವರ ಸಾಧನೆಗಳ ಬಗ್ಗೆ ಚರ್ಚೆ ಮಾಡಲು ಕರೆದಿದ್ದೇನೆ. ಅಭಿವೃದ್ಧಿ ಮಾಡದ ಯಾವುದೇ ಕೆಲಸ ನಾವು ಕೇಳಿಲ್ಲ. 165 ಭರವಸೆಗಳನ್ನು ಈಡೇರಿಸಿದ ಸರ್ಕಾರ ನಮ್ಮದು. ನರೇಂದ್ರ ಮೋದಿ 5 ವರ್ಷ ಇದ್ದರು, ಅವರು ಏನೇನು ಮಾಡಿದ್ದೇವೆಂದು ಹೇಳಲಿ ಎಂದು ಸವಾಲು ಹಾಕಿದರು.

ಸಮಾಜ ಹೊಡೆಯುವ ಹೇಳಿಕೆ: ಬಿಜೆಪಿಯವರು ಭಾವನಾತ್ಮಕ ವಿಚಾರ ಬಿತ್ತಿ, ಕೆರಳಿಸಿ ಸಮಾಜ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಒಂದು ಕಡೆ ಸುಳ್ಳು. ಇನ್ನೊಂದೆಡೆ ಸಮಾಜವನ್ನು ಹೊಡೆಯುವ ಕೆಲಸ. ತಮ್ಮ ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡುವುದಿಲ್ಲ. ಅವರ ಭಾಷಣಗಳನ್ನು ನೋಡಿ. 2014ರಲ್ಲಿ ಏನು ಭರವಸೆ ನೀಡಿದ್ದೆವು? ಅವುಗಳಲ್ಲಿ ಎಷ್ಟು ಪಾಲನೆಯಾಗಿದೆ? ಹುಬ್ಬಳ್ಳಿ  ಕಲಬುರಗಿ ಭಾಷಣದಲ್ಲಿ ಎಲ್ಲಿಯೂ ಹೇಳಲಿಲ್ಲ ಎಂದು ಆರೋಪಿಸಿದರು.

ಬಡವರಿಗಿಲ್ಲ ಅಚ್ಚೇ ದಿನ್‌: ನರೇಂದ್ರ ಮೋದಿಯವರು ಏನೆಲ್ಲ ಹೇಳಿದರು, ಅಚ್ಚೇ ದಿನ್‌ ಆಯೇಗಾ ಎಂದಿದ್ದರು. ನೀರವ್‌ ಮೋದಿ, ವಿಜಯ್‌ಮಲ್ಯ, ಅಮಿತ್‌ಶಾ, ನರೇಂದ್ರಮೋದಿ ಅವರಿಗೆ ಅಚ್ಛೇದಿನ್‌ ಬಂತು. ಬಡವರಿಗೆ ಬರಲಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಸಹಕಾರ ನೀಡದ ಮೋದಿ: ರೈತರು ದೇಶದ ಬೆನ್ನೆಲುಬು. ನಾನು ನಿಯೋಗ ಕರೆದುಕೊಂಡು ಹೋದೆ. ರಾಜ್ಯದಲ್ಲಿ ಬರಗಾಲ ಇತ್ತು. ಬಿಜೆಪಿ ಸಂಸದರನ್ನು ಕರೆದುಕೊಂಡು ಹೋದೆ. ನಮ್ಮಲ್ಲಿ ಭೀಕರ ಬರಗಾಲ ಇದೆ. ದಯಮಾಡಿ ರೈತರ ಸಾಲ ಮನ್ನಾ ಮಾಡಿ. ಏನ್‌ ಮಾಡಿದ್ರೂ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ನರೇಂದ್ರ ಮೋದಿ ಹೇಳಿದರು. ನಾವು 8165 ಕೋಟಿ ಸಾಲ ಮನ್ನಾ  ಮಾಡಿದ್ದೆವು. ಸಮ್ಮಿಶ್ರ ಸರ್ಕಾರದಲ್ಲಿ  ರಾಷ್ಟ್ರೀಕೃತ ಬ್ಯಾಂಕ್‌ ಸಾಲ 36 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ ಎಂದರು.

Advertisement

15 ಪೈಸೆ ಹಾಕದ ಪ್ರಧಾನಿ: ಈಗ ಒಂದು ಅನಿಲ ಸಿಲಿಂಡರ್‌ ಬೆಲೆ 1000 ರೂ. ಆಗಿದೆ. ಯುಪಿಎ ಸರ್ಕಾರ ಇದ್ದಾಗ  450 ರೂ. ಇತ್ತು.  ಅಚ್ಚೇದಿನ್‌ ತರುತ್ತಾರಂತೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ಕಚ್ಚಾ ತೈಲದರ ಇಳಿಕೆಯಾಗಿದೆ. ಆದರೂ ಪೆಟ್ರೋಲ್‌ ದರ ಮಾಡಲಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಸಣ್ಣ ಕೈಗಾರಿಕೆಗಳು ಮುಚ್ಚಿದ್ದರಿಂದ ಕೋಟ್ಯಂತರ ಮಂದಿ ಇರುವ ಉದ್ಯೋಗವನ್ನೂ ಕಳೆದುಕೊಂಡರು. ಜನರ ಖಾತೆಗೆ  15 ಲಕ್ಷ ರೂ. ಇರಲಿ 15 ಪೈಸೆ ಕೂಡ ಹಾಕಲಿಲ್ಲ ಎಂದು ಅವರು ಟೀಕಿಸಿದರು.

ಕೊಳಕು ಮನಸ್ಸಿನ ಬಿಜೆಪಿ: ನರೇಂದ್ರ ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿರುವ ಅನಂತಕುಮಾರ ಹೆಗಡೆ ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿದ್ದಾರೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಿದ ಸಂವಿಧಾನವನ್ನೇ ಬದಲಿಸುತ್ತೇವೆ ಎಂದಿರುವ,ಸಂವಿಧಾನಕ್ಕೆ ವಿರುದ್ಧವಾಗಿರುವವರನ್ನು ಯಾರೂ ನಂಬೇಡಿ. ಆರೆಸೆಸ್‌ ಸರಸಂಚಾಲಕ ಮೋಹನ್‌ ಭಾಗವತ್‌ ಮೀಸಲಾತಿ ರದ್ದಾಗಬೇಕು ಎಂದಿದ್ದಾರೆ. ಮೀಸಲಾತಿಯನ್ನು ರದ್ದು ಮಾಡಬೇಕೆಂಬ ಸಂವಿಧಾನಕ್ಕೆ ವಿರುದ್ಧವಾಗಿರುವ ಈ ಕೊಳಕು ಮನಸುಗಳನ್ನು ಬದಲಿಸದಿದ್ದರೆ ಬಡವರು, ದಲಿತರು,  ಅಲ್ಪಸಂಖ್ಯಾತರು ಇವರ್ಯಾರಿಗೂ ಉಳಿಗಾಲವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ, ವಿಧಾನಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ, ಸಂಸದ ಆರ್‌. ಧ್ರುವನಾರಾಯಣ, ಮಾಜಿ ಸಚಿವರಾದ ಎಚ್‌.ಸಿ. ಮಹದೇವಪ್ಪ, ಗೀತಾ ಮಹದೇವಪ್ರಸಾದ್‌, ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ್‌,  ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ. ಮರಿಸ್ವಾಮಿ, ಶಾಸಕರಾದ ನರೇಂದ್ರ, ಯತೀಂದ್ರ, ಅನಿಲ್‌ ಚಿಕ್ಕಮಾದು, ಧರ್ಮಸೇನ, ಮಾಜಿ ಶಾಸಕರಾದ ವಾಸು, ಎ.ಆರ್‌. ಕೃಷ್ಣಮೂರ್ತಿ, ಎಸ್‌. ಜಯಣ್ಣ, ಎಸ್‌. ಬಾಲರಾಜು,

ಕೇಶವಮೂರ್ತಿ, ಕೃಷ್ಣಪ್ಪ, ವಾಸಂತಿ ಶಿವಣ್ಣ, ಸುಮಾ ವಸಂತ್‌, ಮಲ್ಲಾಜಮ್ಮ, ಲಕ್ಷ್ಮಿನಾರಾಯಣ, ಮಾಜಿ ಸಂಸದ ಸಿದ್ದರಾಜು, ಜಿ.ಪಂ. ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಯೋಗೀಶ್‌, ಜಿಲ್ಲಾಧ್ಯಕ್ಷೆ ಲತಾ ಜಯಣ್ಣ, ಜಿ.ಪಂ. ಸದಸ್ಯರಾದ ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್‌, ಕೆ.ಎಸ್‌. ಮಹೇಶ್‌, ನಗರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ಎಚ್‌.ಎಸ್‌. ನಂಜಪ್ಪ, ಎಪಿಎಂಸಿ ಸದಸ್ಯ ಬಿ.ಕೆ. ರವಿಕುಮಾರ್‌, ಡಿ.ಎನ್‌.ನಟರಾಜು, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next