Advertisement

ಹೀಗೊಂದು ಅಸಾಮಾನ್ಯ “ಇಸಂ’

02:51 PM Nov 20, 2021 | Team Udayavani |
-ಮಟಪಾಡಿ ಕುಮಾರಸ್ವಾಮಿನಮಗೆ ಕಾಣುವ "ಇಸಂ' (ಸಿದ್ಧಾಂತ) ವಾದಿಗಳು ಇಂತಹುದೇ ಕೆಟ್ಟ ಅನುಭವಗಳನ್ನು ಚಿಕ್ಕಪ್ರಾಯದಲ್ಲಿ ಕಂಡವರೇ. ಚಿಕ್ಕ ಪ್ರಾಯದಲ್ಲಿ ನೋಡುವ ಕಾರಣ ದರ್ಪ ತೋರಿಸಿದಾತನ ಜಾತಿ, ವೃತ್ತಿಗಳನ್ನು ತಿಳಿದುಕೊಳ್ಳುವ ಅಥವಾ ಪ್ರತಿಕ್ರಿಯೆ ತೋರಿಸುವ ಶಕ್ತಿ ಇರುವುದಿಲ್ಲ. ಸಾಮಾಜಿಕ ಕೆಡುಕುಗಳು ಒಂದೊಂದೆ ಕಣ್ಣಿಗೆ ರಾಚುತ್ತವೆ. ತುಸು ದೊಡ್ಡವರಾದ ಬಳಿಕ ಯಾವ ಜಾತಿ/ ವೃತ್ತಿಯವರಿಗೆ ದರ್ಪ ಇದೆ ಎನ್ನುವುದು ತಿಳಿಯುತ್ತದೆ. ಕ್ರಮೇಣ ಆ ವರ್ಗಗಳ ಮೇಲೆ ದ್ವೇಷ ಸಾಧಿಸುವ ಪ್ರವೃತ್ತಿ ಬೆಳೆಯುತ್ತದೆ. ಇಂತಹ "ಇಸಂ'ಗೂ "ಗುರು-ಶಿಷ್ಯ' ಸಂಬಂಧವಿದೆ. ಈ ಗುರುಗಳು ಸಮಾನಮನಸ್ಕ ಶಿಷ್ಯ ಪರಂಪರೆಯನ್ನು ಬೆಳೆಸಲು...
Now pay only for what you want!
This is Premium Content
Click to unlock
Pay with

ನಾವು ಕಾಣುವ ಜನರ “ಇಸಂ’ಗಳ ಹಿಂದೆ ದೊಡ್ಡ ಇತಿಹಾಸವಿರುತ್ತದೆ. ಬಹುತೇಕರಿಗೆ ಚಿಕ್ಕ ಪ್ರಾಯದಲ್ಲಿ ಆದ ಕಹಿ ಅನುಭವಗಳೇ ಇದಕ್ಕೆ ಕಾರಣವಾಗಿರುತ್ತವೆ.ಈ ಕಥಾನಕದ ವ್ಯಕ್ತಿಗೂ ಕಹಿ ಅನುಭವವೇ ಆಗಿದೆ. ಆದರೆ ಅದು ನಾವು ಲೋಕದಲ್ಲಿ ಸಾಮಾನ್ಯವಾಗಿ ಕಾಣುವ ರೀತಿಯ “ಇಸಂ’ ಅಲ್ಲ.

Advertisement

ಶಿವಮೊಗ್ಗ ಜಿಲ್ಲೆಯ ಕುಂಸಿಯಲ್ಲಿ ಅಶ್ವತ್ಥನಾರಾಯಣಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. 1964ರಲ್ಲಿ ಅಶ್ವತ್ಥನಾರಾಯಣ ಪ್ಪನವರು ಶಿವಮೊಗ್ಗದ ಎಇಒ ಕಚೇರಿಗೆ ಹೋದಾಗ ಹತ್ತು ವರ್ಷದ ಮಗ ಪ್ರಭಾಕರನೂ ಜತೆಗಿದ್ದ. ಅಶ್ವತ್ಥನಾರಾಯಣಪ್ಪನವರು ಸಲ್ಲಿಸಿದ ಕಡತವನ್ನು ಎಇಒ ದರ್ಪದಿಂದ ತೆಗೆದು ಎಸೆದ. ಮೇಲಾಧಿಕಾರಿಯ ದರ್ಪ ಮಗನ ಮೇಲೆ ಗಂಭೀರ ಪರಿಣಾಮ ಬೀರಿತು.

“ಆ ಸ್ಥಳ ಈಗಲೂ ನನ್ನ ಕಣ್ಣೆದುರು ಇದೆ. ನಾನದನ್ನು ಗುರುತಿಸಬಲ್ಲೆ. ಇಂತಹ ದರ್ಪದ ನಡವಳಿಕೆಯನ್ನು ನಾನು ಮುಂದೆಂದೂ ಯಾರಿಗೂ ಮಾಡಕೂಡದು, ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂಬ ನಿರ್ಧಾರಕ್ಕೆ ಆಗಲೇ ಬಂದೆ. ನನ್ನ ಸೇವಾವಧಿಯಲ್ಲಿ ಬುದ್ಧಿಪೂರ್ವಕವಾಗಿ ಯಾರಿಗೂ ದರ್ಪ ತೋರಿಸಲಿಲ್ಲ’ ಎಂದು ಹೇಳುವ ಎದೆಗಾರಿಕೆ ಸರಕಾರದ ವಿವಿಧ ಹಂತಗಳಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಭಾಕರ ಶರ್ಮ ಅವರಿಗೆ ಇದೆ.

ನಮಗೆ ಕಾಣುವ “ಇಸಂ’ (ಸಿದ್ಧಾಂತ) ವಾದಿಗಳು ಇಂತಹುದೇ ಕೆಟ್ಟ ಅನುಭವಗಳನ್ನು ಚಿಕ್ಕಪ್ರಾಯದಲ್ಲಿ ಕಂಡವರೇ. ಚಿಕ್ಕ ಪ್ರಾಯದಲ್ಲಿ ನೋಡುವ ಕಾರಣ ದರ್ಪ ತೋರಿಸಿದಾತನ ಜಾತಿ, ವೃತ್ತಿಗಳನ್ನು ತಿಳಿದುಕೊಳ್ಳುವ ಅಥವಾ ಪ್ರತಿಕ್ರಿಯೆ ತೋರಿಸುವ ಶಕ್ತಿ ಇರುವುದಿಲ್ಲ. ಸಾಮಾಜಿಕ ಕೆಡುಕುಗಳು ಒಂದೊಂದೆ ಕಣ್ಣಿಗೆ ರಾಚುತ್ತವೆ. ತುಸು ದೊಡ್ಡವರಾದ ಬಳಿಕ ಯಾವ ಜಾತಿ/ ವೃತ್ತಿಯವರಿಗೆ ದರ್ಪ ಇದೆ ಎನ್ನುವುದು ತಿಳಿಯುತ್ತದೆ. ಕ್ರಮೇಣ ಆ ವರ್ಗಗಳ ಮೇಲೆ ದ್ವೇಷ ಸಾಧಿಸುವ ಪ್ರವೃತ್ತಿ ಬೆಳೆಯುತ್ತದೆ. ಇಂತಹ “ಇಸಂ’ಗೂ “ಗುರು-ಶಿಷ್ಯ’ ಸಂಬಂಧವಿದೆ. ಈ ಗುರುಗಳು ಸಮಾನಮನಸ್ಕ ಶಿಷ್ಯ ಪರಂಪರೆಯನ್ನು ಬೆಳೆಸಲು ಹೊಂಚು ಹಾಕುತ್ತಿರುತ್ತಾರೆ. ಸಮಾಜ ಒಳ್ಳೆಯವರ/ಕೆಟ್ಟವರ ಮಿಶ್ರಣವಾದ ಕಾರಣ ಸಮಾಜ ಎಲ್ಲ ಬೀಜಗಳು ಮೊಳಕೆ ಬಂದು ಬೆಳೆಯುವುದಕ್ಕೆ ನೀರು, ಗೊಬ್ಬರ ಕೊಡುತ್ತಲೇ ಇರುತ್ತದೆ.

ಇದನ್ನೂ ಓದಿ:ಸಮಾನ ನಾಗರಿಕ ಸಂಹಿತೆ ಜಾರಿ ಮಾಡಿ: ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ

Advertisement

ನಮಗೆ ಬೇಡವಾದ ಯಾವ ವರ್ತನೆಯನ್ನು ಕಂಡೆವೋ ಅದನ್ನೇ ಆ ವರ್ಗಕ್ಕೆ ಜೀವಮಾನ ಪರ್ಯಂತ ತೋರಿಸುತ್ತಲೇ ಇರುವುದನ್ನು ಕಾಣುತ್ತೇವೆ. ನೋವು ಉಂಡವರು ದರ್ಪಿಷ್ಠನ ಬದಲು ಆತ ನನ್ನು ಪ್ರತಿನಿಧಿಸುವ ವರ್ಗ/ವೃತ್ತಿಯವರಿಗೆ ದ್ವೇಷವನ್ನು ತೋರಿಸುತ್ತಲೇ ಹೋಗು ತ್ತಾರೆ. ನಮಗೆ ಬೇಡವಾದದ್ದನ್ನು ಇತರರಿಗೆ ಹಂಚುತ್ತಿದ್ದೇವೆಂಬ ಪ್ರಜ್ಞೆ ಇವರಿಗೆ ಇಲ್ಲ, ಮುಂದೆ ತನ್ನದೇ ವರ್ಗಕ್ಕೆ ತನ್ನ ದರ್ಪ ಮುಳುವಾಗುತ್ತದೆ, ಅನವಶ್ಯವಾಗಿ ತನ್ನಿಂದ ಮುಗ್ಧರು ನೋವು ಅನುಭವಿಸಬೇಕಾಗುತ್ತದೆ ಎಂಬ ಪ್ರಜ್ಞೆ ದರ್ಪಿಷ್ಟ ಅಧಿಕಾರಶಾಹಿಗೂ ಇರುವುದಿಲ್ಲ. ಮಕ್ಕಳ ಎದುರು ನೇತ್ಯಾತ್ಮಕವಾಗಿ ವರ್ತಿಸಿದಂತೆ ಎಚ್ಚರಿಕೆ ಬೇಕು. ಸರಕಾರ, ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹೀಗೆ ಎಲ್ಲ ಬಗೆಯ ಕ್ಷೇತ್ರಗಳಲ್ಲೂ ಅಧಿಕಾರದೊಂದಿಗೆ ದರ್ಪ ನುಸುಳಿ ಬಂದಿರುತ್ತದೆ. ಇವರೆಲ್ಲರೂ ತಮ್ಮನ್ನು ಭಾರೀ ಕಲಿತ ವರ್ಗದವರೆಂದು ಭಾವಿಸಿಕೊಳ್ಳುತ್ತಾರೆ. ಸ್ವಜನಪಕ್ಷಪಾತದ ಜಾತೀವಾದಿ ಇನ್ನೊಂದು ವರ್ಗವಿದೆ. ಇವರೆಲ್ಲ ಜಾತ್ಯತೀತ (ಎಲ್ಲರನ್ನೂ ಸಮಾನವಾಗಿ ಕಾಣುವುದು) ವ್ಯವಸ್ಥೆಯನ್ನು ಒಪ್ಪಿ ಆ ಕುರ್ಚಿಯಲ್ಲಿ ಆಸೀನರಾದವರು.

ಪ್ರಭಾಕರ ಶರ್ಮ ಈ ಎಲ್ಲರಂತಲ್ಲ. ತನಗೆ ಬೇಡವಾದದ್ದನ್ನು ಇತರರಿಗೆ ಹಂಚದೆ, ತನಗೆ ಬೇಕಾದದ್ದನ್ನು ಇತರರಿಗೆ ಸೇವಾವಧಿಪರ್ಯಂತ ಹಂಚಿದರು. “ನಮಗೆ ಯಾವುದು ಹಿತವೋ ಅದನ್ನು ಇತರರಿಗೆ ಹಂಚಬೇಕು, ನಮಗೆ ಯಾವುದು ಅಹಿತವೋ ಅದನ್ನು ಇತರರಿಗೆ ಹಂಚಬಾರದು’ ಎಂಬ ನೀತಿಪಾಠ ಮಹಾಭಾರತದಲ್ಲಿದೆ. “ದಕ್ಷ ಆಡಳಿತ, ಭ್ರಷ್ಟಾಚಾರರಹಿತ, ಸೌಜನ್ಯಪೂರಿತ ಸೇವೆ ಈ ಮೂರನ್ನೂ ಒಬ್ಬರಲ್ಲಿ ನೋಡುವುದು ಬಹಳ ಅಪರೂಪ. ಇವು ಶರ್ಮರಲ್ಲಿದೆ’ ಎಂದು ಹಿರಿಯ ಸಹಕಾರಿ ಧುರೀಣ ದಿ| ಪೆರಾಜೆ ಶ್ರೀನಿವಾಸ ರಾವ್‌ ಹೇಳುತ್ತಿದ್ದರು. ಶರ್ಮ ನಿವೃತ್ತಿ ಬಳಿಕ ದ.ಕ. ಜಿಲ್ಲಾ ರೆಡ್‌ಕ್ರಾಸ್‌ ಸೊಸೈಟಿ ಗೌರವ ಕಾರ್ಯದರ್ಶಿಯಾಗಿ ಸಮಾಜಮುಖೀಯಾಗಿದ್ದಾರೆ.

ನಿನ್ನೆ ಎಸಿ, ನಾಳೆ ಎಡಿಸಿ, ಇಂದೇನು?
ಪ್ರಭಾಕರ ಶರ್ಮ 2005-06ರಲ್ಲಿ ಮಂಗಳೂರಿನಲ್ಲಿ ಸಹಾಯಕ ಕಮಿಷನರ್‌ ಆಗಿದ್ದ ಸಂದರ್ಭ ಲಾಲ್‌ಭಾಗ್‌ ಪ್ರದೇಶದಲ್ಲಿ ವಸತಿಗೃಹವಿತ್ತು. ಅಲ್ಲೇ ಸಮೀಪ ಒಂದು ಕಾಡು ಇತ್ತು. ಅಲ್ಲಿನ ಮರಗಳನ್ನು ಯಾರೋ ಕಡಿಯುತ್ತಿದ್ದರು. ಶರ್ಮರದು ರೆವೆನ್ಯೂ ಮೈಂಡ್‌. ಅಳತೆ ಮಾಡಿಸಿದರು. 80 ಸೆಂಟ್ಸ್‌ ಸ್ಥಳ ಸರಕಾರದ ಸ್ವಾಧೀನಕ್ಕೆ ಬಂತು. ಮಹಾನಗರಪಾಲಿಕೆಯಲ್ಲಿ ಮಹಿಳೆ ಮತ್ತು ಮಕ್ಕಳ ಉದ್ದೇಶದ ಪಾರ್ಕ್‌ಗಾಗಿ ಕಾಯ್ದಿರಿಸಿ ಸಹಾಯಕ ಕಮಿಷನರ್‌ ಆಗಿ ಶರ್ಮ ಆದೇಶ ಹೊರಡಿಸಿದರು. ಬಳಿಕ ಕುಂದಾಪುರದ ಸಹಾಯಕ ಕಮಿಷನರ್‌ ಆಗಿ ನಿಯುಕ್ತರಾದರು. 2007ರಲ್ಲಿ ದ.ಕ. ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಭಡ್ತಿ ಹೊಂದಿ ವರ್ಗವಾದಾಗ ಶುಕ್ರವಾರ ಅಧಿಕಾರ ಹಸ್ತಾಂತರ ಮಾಡಿ ಮಂಗಳೂರಿಗೆ ಬಂದರು. ತಾನೇ ಕಾಯ್ದಿರಿಸಿದ ಜಾಗದಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಾಣವಾದದ್ದು ಮತ್ತೆ “ರೆವೆನ್ಯೂ ಮೈಂಡ್‌’ ಕಣ್ಣಿಗೆ ಬಿತ್ತು. ಆ ದಿನ ಅಧಿಕಾರ ಹಸ್ತಾಂತರ ಮಾಡಿದ ಕಾರಣ ಎಸಿ ಅಲ್ಲ, ಅಧಿಕಾರ ಸ್ವೀಕರಿಸದ ಕಾರಣ ಎಡಿಸಿಯೂ ಅಲ್ಲ. ಶೆಡ್‌ನ‌ಲ್ಲಿ ದಢೂತಿಗಳು ಇದ್ದರು. ಅಲ್ಲೊಬ್ಬ ಗುರುತು ಹಿಡಿದು “ನೀವು ಇಲ್ಲಿ ಎಸಿ ಆಗಿದ್ದಿರಲ್ವಾ?’ ಎಂದ. ಅವರಿಗೆಲ್ಲ ಎಚ್ಚರಿಕೆ ಕೊಟ್ಟು ಸೋಮವಾರ ಎಡಿಸಿಯಾಗಿ ಮತ್ತೆ ಜಾಗವನ್ನು ಸ್ವಾಧೀನಪಡಿಸಿಕೊಂಡರು. ಆ ಜಾಗದಲ್ಲಿ ಈಗ ಮಹಾನಗರಪಾಲಿಕೆ ವ್ಯಾಪ್ತಿಯ ಇಂದಿರಾಪ್ರಿಯದರ್ಶಿನಿ ಪಾರ್ಕ್‌ ತಲೆ ಎತ್ತಿ ಸಾರ್ವಜನಿಕರಿಗೆ ಒಳಿತನ್ನು ಉಣಬಡಿಸುತ್ತಿದೆ. ನಾವು ಕೆಟ್ಟದ್ದನ್ನು ಮಾಡಿದರೂ ಒಳಿತನ್ನು ಕೊಡುವುದೇ ನಿಸರ್ಗದ ನಿಯಮ, ನಾವೂ ನಿಸರ್ಗದ ಒಂದು ಭಾಗವಲ್ಲವೆ?

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.