Advertisement

ಕೊರಟಗೆರೆಯ ದೊಡ್ಡಪಾಲನಹಳ್ಳಿ ಗ್ರಾಮದಲ್ಲಿ ಸಮಸ್ಯೆಗಳ ಸಾಗರ

03:23 PM Apr 16, 2022 | Team Udayavani |

ಕೊರಟಗೆರೆ: 300 ಕ್ಕೂ ಹೆಚ್ಚು ಕುಟುಂಬಗಳಿರುವ ಕೊರಟಗೆರೆ ತಾಲೂಕಿನ ದೊಡ್ಡಪಾಲನಹಳ್ಳಿ ಗ್ರಾಮದಲ್ಲಿ 1500 ರಷ್ಟು ಜನಸಂಖ್ಯೆ ಇದೆ,ಗ್ರಾಮಕ್ಕೆ ಸಂಪರ್ಕ ರಸ್ತೆ ಇದೆ ಡಾಂಬರು ಕೂಡ ಹಾಕಲಾಗಿದೆ,ಆದರೆ ಊರಿಗೆ ಬರುವುದು ಒಂದೇ ಬಸ್ಸು. ಬೆಳಿಗ್ಗೆ ಒಮ್ಮೆ ಬಂದರೆ ಅದೇ ಬಸ್ಸು ಸಂಜೆ ಬರುತ್ತದೆ.

Advertisement

ಗ್ರಾಮದಲ್ಲಿ ಅತೀ ಹೆಚ್ಚು ಹಿಂದುಳಿದ ಸಮುದಾಯದ ಜನರೇ ಇದ್ದಾರೆ ಗ್ರಾಮದಲ್ಲಿರುವ ಸಾಕಷ್ಟು ಕುಟುಬಂದ ಮಕ್ಕಳೆಲ್ಲಾ ಬೆಂಗಳೂರಿನ ಗಾಮೆಂಟ್ಸ್, ಸಕ್ಯೂರಿಟಿ ಗಾರ್ಡ್ ಸೇರಿದಂತೆ ಹಲವು ಕೆಲಸಗಳನ್ನು ಹುಡುಕಿ ಹೋಗುತ್ತಿದ್ದಾರೆ ಬಹತೇಕ ಮಧ್ಯ ವಯಸ್ಕರು, ವೃದ್ದರು, ಮಕ್ಕಳೇ ಗ್ರಾಮದಲ್ಲಿ ಇದ್ದಾರೆ.

ಬಹುತೇಕ ಗ್ರಾಮದಲ್ಲಿರುವ ಜನರೆಲ್ಲರೂ ಕೃಷಿಯನ್ನೇ ಆಶ್ರಯಿಸಿ ಬದುಕುತ್ತಿದ್ಧಾರೆ ಆದರೆ ಮಳೆಯ ಅಭಾವ, ವಿದ್ಯುತ್ ತೊಂದರೆ, ಕೂಲಿ ಕಾರ್ಮಿಕರ ಸಮಸ್ಯೆಯಿಂದ ಹಲವರು ಕೃಷಿಯನ್ನು ಪೂರ್ಣ ಪ್ರಮಾಣದಲ್ಲಿ ಮಾಡದೇ ಅಲ್ಪ ಸ್ವಲ್ಪದರಲ್ಲೇ ಚಟುವಟಿಗೆ ನಡೆಸುತ್ತಿದ್ದಾರೆ.

ಗ್ರಾಮದಲ್ಲಿ 900 ಜನ ಎಸ್ ಟಿ, 400 ಜನ ಎಸ್ ಸಿ, 310 ಜನ ತಿಗಳ ಸಮುದಾಯ, ಉಳಿದಂತೆ ಬೆರಳೆಣಿಕೆಯಷ್ಟು ಲಿಂಗಾಯತ, ಬ್ರಾಹ್ಮಣ, ಭಜಂತ್ರಿ ಸಮುದಾಯವರು ಇದ್ದಾರೆ ಹೆಚ್ಚು ಎಸ್ಸಿ/ಎಸ್ ಟಿ ಅನುದಾನಗಳನ್ನು ಗ್ರಾಮದಲ್ಲಿ ಬಳಸಿಕೊಂಡು ಹೆಚ್ಚಿನ ಅಭಿವೃದ್ಧಿಯನ್ನು ಮಾಡಬಹುದಾದರೂ,ನೋಡಿದರೆ ಇದೊಂದು ಕುಗ್ರಾಮದಂತೆಯೇ ಕಾಣಿಸುತ್ತದೆ.

ಎಲ್ಲಾ ಇದ್ದರೂ ಯಾವುದೂ ಸರಿಯಿಲ್ಲದ ಗ್ರಾಮ
ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ, ಕಟ್ಟಡವೂ ಚೆನ್ನಾಗಿದೆ ಆದರೆ ಇಲ್ಲಿಗೆ ವೈದ್ಯರು ಬರುವುದು ಮಾತ್ರ ಅಮಾವಾಸ್ಯೆಗೆ ಮತ್ತು ಹುಣ್ಣಿಮೆಗೆ, ಗ್ರಾಮದಲ್ಲಿ ಕುಡಿಯುವ ನೀರಿನ ಘಟಕಗಳಿಗೆ ಅದರಲ್ಲಿ ಒಂದು ಸುಸ್ಥಿತಿಯಲ್ಲಿದೆ ಮತ್ತೊಂದು ದುರಸ್ಥಿಯಾಗಿ 2 ವರ್ಷ ಕಳೆದರೂ ಸಹ ಇನ್ನು ಅದರ ಸುಸ್ಥಿತಿಗೆ ಬಂದಿಲ್ಲ, ವಿದ್ಯುತ್ ಸಂಪರ್ಕವಿದೆ ಆದರೆ ಬೀದಿ ದೀಪಗಳಿಲ್ಲ, ಗ್ರಾಮದಲ್ಲಿ 4 ಕೊಳವೆ ಬಾವಿಗಳಿದ್ದು ಎಲ್ಲದರಲ್ಲೂ ನೀರಿದೆ ಆದರೆ ನೀರು ಬಿಡುವಂತಹ ವಾಟರ್ ಮ್ಯಾನ್ ಸರಿಯಿಲ್ಲದೇ ನೀರು ಸಮರ್ಪಕವಾಗಿ ಸಿಗುತ್ತಿಲ್ಲ, ಸಿಸಿ ರಸ್ತೆಯಿದೆ ಆದರೆ ರಸ್ತೆ ಕಾಮಗಾರಿ ಕಳಪೆ ಇನ್ನೂ ಕೆಲವು ಕಡೆ ಮಣ್ಣಿನ ರಸ್ತೆಗಳೇ ಕಾಣಸಿಗುತ್ತವೆ, ಚರಂಡಿ ನಿರ್ಮಿಸಲಾಗಿದೆ ಆದರೆ ಹಲವು ಕಡೆ ಮುಚ್ಚಿದೆ, ಇನ್ನೂ ಕೆಲವು ಕಡೆ ಸ್ವಚ್ಚತೆಯೇ ಇಲ್ಲ, ಇರುವ ಚರಂಡಿಯನ್ನೇ ಸ್ವಚ್ಚ ಮಾಡುತ್ತಿಲ್ಲ ಆದರೂ ಹೊಸ ಚರಂಡಿಗಳ ನಿರ್ಮಾಣ ಈಗೆ ಗ್ರಾಮದಲ್ಲಿ ಎಲ್ಲವೂ ಇದೆ ಆದರೆ ಯಾವುದೂ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ ಎನ್ನುವುದು ಮಾತ್ರ ಗ್ರಾಮಕ್ಕೆ ಭೇಟಿ ನೀಡಿದರೆ ಕಣ್ಣಿಗೆ ರಾಚುತ್ತದೆ.

Advertisement

ಗ್ರಾಮದಲ್ಲಿದೆ ನಿರಂತರವಾಗಿ ಸಿಗುತ್ತದೆ ಮದ್ಯ
ಯಾವುದೇ ವೈನ್ಸ್ ಗೆ ಗ್ರಾಮದಲ್ಲಿ ಅನುಮತಿ ಇಲ್ಲದಿದ್ದರೂ ಗ್ರಾಮದಲ್ಲಿನ ಚಿಲ್ಲರೆ ಅಂಗಡಿಯಲ್ಲಿಯೇ ನಿರಂತರವಾಗಿ ಮದ್ಯ ಮಾರಾಟ ನಡೆಯುತ್ತಿದೆ ಸಂಜೆಯಾಯಿತೆಂದರೆ ಮಹಿಳೆಯರು ಮನೆಯಿಂದ ಹೊರ ಬರಲು ಹೆದರುವಂತೆ ಮದ್ಯ ವ್ಯಸನಿಗಳು ಬೀದಿಗಳಿಯುತ್ತಾರೆ ಗ್ರಾಮದಲ್ಲಿ ಬುದುಕುವುದು ಕಷ್ಟವಾಗುತ್ತಿದ್ದು ಇದಕ್ಕೆ ಬ್ರೇಕ್ ಬೀಳಬೇಕು ಎಂದು ಹೆಸರು ಹೇಳಲು ಇಚ್ಚಿದ ಮಹಿಳೆಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.

ಮದ್ಯವ್ಯಸನಿಯ ಸಾವು
ಕಳೆದ ಒಂದು ತಿಂಗಳ ಹಿಂದೆಯಷ್ಟೇ ಗಂಗಣ್ಣ(45) ಎನ್ನುವ ಮದ್ಯವ್ಯಸನಿಯೋರ್ವ ನಿರಂತರವಾಗಿ ಮದ್ಯಪಾನ ಮಾಡಿ ಮೃತಪಟ್ಟಿದ್ದು ಇದಕ್ಕೆ ಅತಿಯಾದ ಮದ್ಯಪಾನವೇ ಕಾರಣ ಎಂದು ಹೇಳಲಾಗುತ್ತಿದ್ದು ಈತನ ಕುಟುಂಬ ಮನೆಯ ಯಜಮಾನನಿಲ್ಲದೇ ಅನಾತವಾಗಿದ್ದು ಇದೇ ರೀತಿ ಮದ್ಯವ್ಯಸನಿಗಳು ಗ್ರಾಮದಲ್ಲಿ ಹೆಚ್ಚಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

ಗ್ರಾಮದಲ್ಲಿನ ಹಿರಿಯ ಪ್ರಾಥಮಿಕ  ಶಾಲೆ
ಗ್ರಾಮದಲ್ಲಿನ ಶಾಲೆಯಲ್ಲಿ 103 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ 4 ಜನ ಶಿಕ್ಷಕರು ಇದ್ದು ಇನ್ನೂ ಎರಡು ಕೊಠಡಿಗಳ ಅವಶ್ಯತೆಇದೆ ಎಂದು ಇಲಾಖೆಗೆ ಇಲ್ಲಿನ ಶಿಕ್ಷಕರು ತಿಳಿಸಿದ್ದು ಕೊಠಡಿ ಬಿಡುಗಡೆಯಾಗಿದೆ ಎಂದು ಮಾಹಿತಿಯಿದೆಯಾದರೂ ಇನ್ನೂ ಹೆಂಚಿನ ಕೊಠಡಿಯಲ್ಲಿಯೇ ಶಾಲೆ ನಡೆಯುತ್ತಿದೆ.

ಜಿಲ್ಲಾಧಿಕಾರಿ ಭೇಟಿ ಇದೆ ಎಂದರೂ ಬದಲಾಗದ ಗ್ರಾಮದ ವ್ಯವಸ್ಥೆ
ಏ. 16 ಎಂದು ಗ್ರಾಮವಾಸ್ತವ್ಯಕ್ಕೆ ಗ್ರಾಮಕ್ಕೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಇದ್ದರೂ ಸಹ ಇಲ್ಲಿನ ಸ್ಥಳೀಯ ಗ್ರಾ.ಪಂ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಸೇರಿದಂತೆ ಯಾರೊಬ್ಬರೂ ತಲೆ ಕೆಸಿಕೊಂಡಿಲ್ಲ, ಎಲ್ಲವೂ ಮಾಮೂಲಿಯಂತೆಯೇ ಇದೆ.

ನಮ್ಮ ಮನೆ ಸೋರುತ್ತಿದೆ.. ಮನಗೆ ಮನೆ ಹಾಕಿಕೊಡಿ ಎಂದು ಹಲವು ಬಾರಿ ಮನವಿ ಮಾಡಿದ್ದೇನೆ ಆದರೆ ಗ್ರಾ.ಪಂ ನವರು ಮೀನಾಮೇಷ ಎಣಿಸುತ್ತಿದೆ ನಮಗೆ ಮನೆಯನ್ನು ನೀಡುತ್ತಿಲ್ಲ. ಮನೆ ಇರುವವರಿಗೇ ಮನೆ ನೀಡಿದ್ದಾರೆ ನಮ್ಮಂತರವರಿಗೆ ಅನ್ಯಾಯವಾಗುತ್ತಿದೆ.

-ರಾಮಚಂದ್ರಯ್ಯ, ಗ್ರಾಮ ವಾಸಿ

ಗ್ರಾಮದಲ್ಲಿ ಚರಂಡಿ ಇದೆ ಆದರೆ ಹಲವು ಕಡೆ ಚರಂಡಿ ಮುಚ್ಚಿ ಹೋಗಿವೆ ಇನ್ನೂ ಕೆಲವು ಕಡೆ ಮುಚ್ಚುವ ಹಂತಕ್ಕೆ ತಲುಪಿದೆ ಯಾವುದನ್ನೂ ಸ್ಚಚ್ಚತೆ ಮಾಡಿಲ್ಲ, ಇನ್ನು ಹಲವು ಕಡೆ ಚರಂಡಿ ಅವಶ್ಯತೆಯಿಲ್ಲದಿದ್ದರೂ ಬಿಲ್ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಚರಂಡಿಯನ್ನು ಮಾಡುತ್ತಿದ್ದಾರೆ ಹೇಳುವವರು, ಕೇಳುವವರು ಯಾರೂ ಇಲ್ಲದ ರೀತಿಯಾಗಿದೆ.

-ನಾಗರಾಜು, ದೊಡ್ಡಪಾಲನಹಳ್ಳಿ ಗ್ರಾಮವಾಸಿ

ಸೂಕ್ತ ರಸ್ತೆ ವ್ಯವಸ್ತೆ ಇಲ್ಲ,ಬೀದಿ ದೀಪಗಳನ್ನು ಹಾಕಿಯೇ ಇಲ್ಲ. ಹುಲಿರಾಮ ನಗರದಲ್ಲಿ ಹೆಚ್ಚು ಎಸ್ ಸಿ/ಎಸ್ಟಿ ಸಮುದಾದವರೇ ವಾಸವಾಗಿದ್ದೇವೆ ಆದರೆ ಇಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ ಮರೀಚಿಗೆಯಾಗಿದ್ದು ಇದನ್ನು ನಮಗೆ ನೀಡಿಲ್ಲ ಇಲ್ಲಿ ಕರಡಿ, ಚಿರತೆ ಸೇರಿದಂತೆ ಇತರೆ ಕಾಡು ಪ್ರಾಣಿಗಳು ಆಗಾ ಕಾಣಿಸಿಕೊಳ್ಳುತ್ತಿದ್ದು ಜನರು ಭಯದಲ್ಲಿ ಬದುಕುತ್ತಿದ್ದಾರೆ.

-ಗಿರಿಜಮ್ಮ, ಬಿಜೆಪಿ ಮಹಿಳಾ ಅಧ್ಯಕ್ಷೆ , ದೊಡ್ಡಪಾಲನಹಳ್ಳಿ.

ಗ್ರಾಮಕ್ಕೆ ಬೇಕಿರುವುದೇನು?

ಸಮರ್ಪಕ ಚರಂಡಿ ವ್ಯವಸ್ಥೆ
ಶುದ್ಧ ಕುಡಿಯವ ನೀರು
ರಸ್ತೆ ಅಭಿವೃದ್ಧಿ
ಬೀದಿ ದೀಪಗಳ ಅಳವಡಿಕೆ
ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ ಅನುಧಾನ
ಗ್ರಾಮದಲ್ಲಿರುವ ದೇವಾಲಯಗಳ ಅಭಿವೃದ್ಧಿ
ಅಕ್ರಮ ಮದ್ಯಮಾರಾಟ ತಡೆಗಟ್ಟುವುದು
ಜೂಜಾಟಕ್ಕೆ ಬ್ರೇಕ್
ಕರಡಿ ಕಾಟ ತಪ್ಪಿಸಬೇಕು
ಬಸ್ ವ್ಯವಸ್ಥೆ ಬೇಕು
ಹುಲಿರಾಮ ನಗರದಲ್ಲಿ ರಸ್ತೆ ಅಭಿವೃದ್ಧಿ.

ಸಿದ್ದರಾಜು.ಕೆ

Advertisement

Udayavani is now on Telegram. Click here to join our channel and stay updated with the latest news.

Next