ಕೊಟ್ಟಾಯಂ : ಕೇರಳದ ಹೆಸರಾಂತ ಹಾವು ಹಿಡಿಯುವವರಲ್ಲಿ ಒಬ್ಬರಾದ ವಾವಾ ಸುರೇಶ್ ಅವರಿಗೆ ಸೋಮವಾರ ವಿಷಪೂರಿತ ನಾಗರಹಾವು ಕಚ್ಚಿದ್ದು, ಅವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾವು ಬದುಕಿನ ನಡುವೆ ಹೋರಾಡುತ್ತಿರುವ ವಾವಾ ಸುರೇಶ್ ಅವರ ಚೇತರಿಕೆಗಾಗಿ ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ಅವರು ಪ್ರಸ್ತುತ ವೆಂಟಿಲೇಟರ್ ಬೆಂಬಲದಲ್ಲಿದ್ದು,ಸ್ಥಿತಿ ಚಿಂತಾಜನಕವಾಗಿದೆ ಆದರೆ ವಿಶೇಷ ಆರೈಕೆಗಳ ಬಳಿಕ ಆರೋಗ್ಯ ಸ್ವಲ್ಪ ಸುಧಾರಿಸಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಕೊಟ್ಟಾಯಂನ ಕುರಿಚಿ ಗ್ರಾಮದ ಮನೆಗೆ ಹಾವು ಹಿಡಿಯಲು ಹೋದಾಗ ಹಾವು ಕಚ್ಚಿಯೇ ಬಿಟ್ಟಿದೆ.
ಸುರೇಶ ಹಾವನ್ನು ಹಿಡಿಯುವುದನ್ನು ವೀಕ್ಷಿಸಲು ಅಪಾರ ಜನಸ್ತೋಮವೇ ನೆರೆದಿತ್ತು, ಒಂದು ಕೈಯಲ್ಲಿ ಬಾಲ ಹಿಡಿದುಕೊಂಡು ಗೋಣಿ ಚೀಲಕ್ಕೆ ಹಾಕಲು ಯತ್ನಿಸುತ್ತಿದ್ದಾಗ ಸರ್ಪ ಬಲತೊಡೆಗೆ ಕಚ್ಚಿದೆ. ಕಚ್ಚಿದ ಬಳಿಕವೂ ತಪ್ಪಿಸಿಕೊಂಡ ನಾಗರಹಾವನ್ನು ಹಿಡಿದು, ಅದನ್ನು ಪ್ಯಾಕ್ ಮಾಡಿ, ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿದರು ಎಂದು ವರದಿ ತಿಳಿಸಿದೆ.