Advertisement

ಮೆಸೇಜ್ ಮಹಾತ್ಮೆ

09:32 AM Apr 02, 2020 | Suhan S |

ಒಂದು ಬಾರಿ ವಾಟ್ಸ್ಯಾಪ್‌ನಲ್ಲಿ ಯಾರಿಂದಲೋ ಒಂದು ಫಾರ್ವರ್ಡ್‌ ಮೆಸೇಜ್‌ ಬಂತು. ಒಬ್ಬ ವಿದ್ಯಾರ್ಥಿಯ ಮಾರ್ಕ್ಸ್ ಕಾರ್ಡ್‌ ಕಳುವಾಗಿದೆ. ಅದು ಸಿಕ್ಕವರು ಈ ನಂಬರನ್ನು ಸಂಪರ್ಕಿಸಿ ಅಂತ. ಪಾಪ, ಯಾರ ಭವಿಷ್ಯವೋ ಏನೋ ಅಂತ ಆತಂಕದಿಂದ, ಸಿಕ್ಕಸಿಕ್ಕವರಿಗೆಲ್ಲಾ ನಾನೂ ಅದನ್ನು ಫಾರ್ವರ್ಡ್‌ ಮಾಡಿದೆ. ನನಗೆ ಆ ಮಾರ್ಕ್ಸ್ ಕಾರ್ಡ್‌ ಸಿಗುತ್ತದೋ ಇಲ್ಲವೋ, ಸಿಕ್ಕವರಾದರೂ ವಾರಸುದಾರರಿಗೆ ಕೊಡಲಿ ಅಂತೆಲ್ಲ ಯೋಚಿಸಿ, ಇದ್ದಬದ್ದ ನಂಬರುಗಳಿಗೆಲ್ಲಾ ಆ ಮೆಸೇಜ್‌ ಕಳಿಸಿದ್ದೇ ಕಳಿಸಿದ್ದು. ಏನೋ ಘನಕಾರ್ಯ ಮಾಡಿದ ತೃಪ್ತಿ ನನಗೆ.

Advertisement

ಛೇ… ಈ ವಿಷಯ ಗಮನಿಸಿ ಯಾರೂ ನನ್ನನ್ನು ಹೊಗಳಲಿಲ್ವಲ್ಲ? ಹೋಗಲಿ, ನನ್ನ ಬೆನ್ನು ನಾನೇ ತಟ್ಟಿಕೊಳ್ಳೋಣ ಅಂದುಕೊಳ್ಳುತ್ತಿದ್ದೆ ಅಷ್ಟರಲ್ಲಿ, ಅಣ್ಣನ ಮಗ ಬಂದವನೇ, ನನ್ನ ವಿಜಯೋತ್ಸಾಹವನ್ನು ಟುಸ್‌ ಎನಿಸಿಬಿಟ್ಟ. “ಅಯ್ಯೋ, ಇದು ತುಂಬಾ ಹಳೆಯ ಮೆಸೇಜು. ಈಗಲೂ ಫಾರ್ವರ್ಡ್‌ ಆಗುತ್ತಲೇ ಇದೆ. ಆ ಮಾರ್ಕ್ಸ್ ಕಾರ್ಡ್‌ ಕಳೆದುಕೊಂಡಿದ್ದ ಹುಡುಗ ಈಗಾಗಲೇ ಓದು ಮುಗಿಸಿ ಕೆಲಸ ಹುಡುಕುತ್ತಿರಬಹುದು’ ಅಂದ ಜೋರಾಗಿ ನಗುತ್ತಾ. ಥತ್ತೇರಿಕೆ! ಸರಿಯಾಗಿ ಬೇಸ್ತು ಬಿದ್ದಿದ್ದೆ.

ಇನ್ನೊಮ್ಮೆ, ಯಾರಿಗೋ ರಕ್ತದ ಅವಶ್ಯಕತೆ ಇದೆ ಅಂತ ಫಾರ್ವರ್ಡ್‌ ಮೆಸೇಜು ಬಂತು. ಈಗಾಗಲೇ ಒಮ್ಮೆ ಬೇಸ್ತು ಬಿದ್ದಿದ್ದರೂ, ಒಂದು ಜೀವ ಉಳಿಸುವ ಪ್ರಶ್ನೆಯಲ್ಲವೇ ಎಂದು ಯೋಚಿಸಿ, ತಕ್ಷಣವೇ ಅದನ್ನು ಒಂದಷ್ಟು ಜನಕ್ಕೆ ಫಾರ್ವರ್ಡ್‌ ಮಾಡಿದೆ. ನಂತರ, ಯಾವುದಕ್ಕೂ ಇರಲಿ ಅಂತ, ಅವರು ಕಾಂಟ್ಯಾಕ್ಟ್ ಮಾಡಲು ಕೊಟ್ಟಿದ್ದ ನಂಬರಿಗೆ ಡಯಲ್‌ ಮಾಡಿದರೆ, ಆ ನಂಬರ್‌ ಅಸ್ತಿತ್ವದಲ್ಲಿಯೇ ಇರಲಿಲ್ಲ.

ಅಯ್ಯೋ ಇದೇನಾಗಿ ಹೋಯ್ತು… ಹಿಂದೆ ಮುಂದೆ ಯೋಚಿಸದೇ ಮೆಸೇಜು ಕಳಿಸಿಬಿಟ್ಟೆನಲ್ಲ, ಮೊದಲೇ ಈ ನಂಬರನ್ನು ಕ್ರಾಸ್‌ ಚೆಕ್‌ ಮಾಡ ಬಾರದಿತ್ತೇ ಅಂತ ತಲೆ ಚಚ್ಚಿಕೊಳ್ಳುವಂತಾಯ್ತು. ತೀರಾ ಇತ್ತೀಚಿಗೆ ವಾಟ್ಸಾಪಿನಲ್ಲಿ ಒಂದು ಸಂದೇಶ ಬಂತು. ಆ ಸಂದೇಶ ಓದುತ್ತಿದ್ದಂತೆಯೇ ನನ್ನ ಕಣ್ಣಾಲಿಗಳು ತೇವಗೊಂಡವು. ಇಟಲಿಯ ಅಧ್ಯಕ್ಷ, ತನ್ನ ದೇಶದಲ್ಲಿ ಕೋವಿಡ್ 19 ಹರಡುತ್ತಿರುವುದನ್ನು ತಡೆಯಲು ತಮ್ಮಿಂದ ಸಾಧ್ಯವಾಗುತ್ತಿಲ್ಲ ಅಂತ ಕಣ್ಣೀರು ಹಾಕುತ್ತಿದ್ದ ದೃಶ್ಯ ಅದು.

ಅಯ್ಯೋ! ಮನುಕುಲವೇ ನಾಶವಾಗುತ್ತದಲ್ಲ ಎಂಬ ಅಸಹಾಯಕತೆಯಿಂದ ನಾನೂ ಅದನ್ನು ಎಲ್ಲರಿಗೂ ಫಾರ್ವರ್ಡ್‌ ಮಾಡಿದೆ. ಎಲ್ಲರೂ ನನ್ನಂತೆಯೇ ಕಣ್ಣು ತೇವ ಮಾಡಿಕೊಂಡಿರಬಹುದು ಎಂಬ ನಿರೀಕ್ಷೆಯಲ್ಲಿದ್ದಾಗಲೇ, ಆ ಮೆಸೇಜಿನ ಕುರಿತಾದ ನಿಜ ವಿಷಯ ಬಹಿರಂಗವಾಯ್ತು. ಏನೆಂದರೆ, ಇಟಲಿಯ ಅಧ್ಯಕ್ಷರು ಕಣ್ಣೀರು ಹಾಕಿದ್ದು ನಿಜ. ಆದರೆ, ಸಂದರ್ಭ ಕೋವಿಡ್ 19 ಬಗ್ಗೆ ಮಾತನಾಡುವಾಗ ಅಲ್ಲ, ಬದಲಿಗೆ, ಚುನಾವಣೆ ಸಮಯದಲ್ಲಿ. ಸುಳ್ಳು ಸುದ್ದಿಯಿಂದ ನಾನು ಮತ್ತೂಮ್ಮೆ ಬೇಸ್ತು ಬಿದ್ದಿದ್ದೆ. ಇಂಥ ಸಂದರ್ಭದಲ್ಲಿಯೂ ನಗು ತರಿಸುತ್ತಿದ್ದ ಸಂಗತಿ ಏನೆಂದರೆ, ಬಹಳಷ್ಟು ಜನರು ಈ ಮೆಸೇಜನ್ನು ನಿಜ ಅಂತ ನಂಬಿ ನನಗೇ ತಿರುಗಿ ಕಳಿಸಿದ್ದರು. ಅವರೇ ಬೇಸ್ತು ಬಿದ್ದ ಮೇಲೆ ನನ್ನದೇನಿದೆ ಅಂತ ಸಮಾಧಾನ ಮಾಡಿಕೊಂಡೆ.

Advertisement

ಈ ವಾಟ್ಸಾಪ್‌ನ ಫಾರ್ವರ್ಡ್‌ಮೆಸೇಜುಗಳಿಂದ ಆಗುವ ಅನಾಹುತಗಳು ಒಂದೆರೆಡಲ್ಲ. ಪೇಪರ್‌, ಮ್ಯಾಗಜೀನುಗಳಂತೆ ಬರವಣಿಗೆ ರೂಪದಲ್ಲಿರುವ ಮೆಸೇಜುಗಳು ಸಹ ಸತ್ಯವೇ ಅಂತ ನಂಬುತ್ತಾರೆ ಜನ. ಹಾಗಾಗಿ, ತಮಗೆ ಬಂದ ಕೂಡಲೇ ತಮ್ಮವರಿಗೆ ಫಾರ್ವರ್ಡ್‌ ಮಾಡಿಬಿಡುತ್ತಾರೆ. ಚಿಕ್ಕ ಪುಟ್ಟ ವಿಷಯಗಳಾದರೆ ಹೇಗೋ ಸಮಜಾಯಿಷಿ ಕೊಟ್ಟುಕೊಳ್ಳಬಹುದು. ಆದರೆ,  ಸೀರಿಯಸ್‌ವಿಷಯದಲ್ಲಿ ತಗುಲಿ ಹಾಕಿಕೊಂಡರೆ? ಒಮ್ಮೆ ಅಂಥ ಅನುಭವವೂ ಆಗಿಯೇ ಬಿಟ್ಟಿತು. ಜನರ ಆಕ್ರೋಶ ಕೇವಲ ತಮಗೆ ಮೆಸೇಜ್‌ ಫಾರ್ವರ್ಡ್‌ ಮಾಡಿದವರ ಮೇಲೆ ಇರುತ್ತದೆಯೇ ಹೊರತೂ, ಆ ಸುಳ್ಳು ಮೆಸೇಜ್‌ ಸೃಷ್ಟಿಸಿದವನ ಮೇಲಲ್ಲ ಅಂತ ಅರ್ಥವಾಗಿದ್ದು ಆಗಲೇ. ಆದದ್ದಿಷ್ಟೇ. ಒಂದು ದಿನ ಬೆಳ್ಳಂಬೆಳಗ್ಗೆಯೇ, ಅಮೆರಿಕದವರು ಕೋವಿಡ್ 19 ಕ್ಕೆ ಔಷಧಿ ಕಂಡುಹಿಡಿದಿದ್ದಾರೆ ಎಂಬ ಸುದ್ದಿ ವಾಟ್ಸಾéಪಿನಲ್ಲಿ ಬಂತು. ಎದ್ದ ಕೂಡಲೇ ಕಂಡ ಆ ಸುದ್ದಿ ನೋಡಿ ನನಗೆ ಕುಣಿದಾಡುವಷ್ಟು ಸಂತಸವಾಯ್ತು.

ಸತ್ಯಾಸತ್ಯತೆ ಪರೀಕ್ಷಿಸದೆ, ಆ ಮೆಸೇಜನ್ನು ಎಲ್ಲರಿಗೂ ಫಾರ್ವರ್ಡ್‌ ಮಾಡಿದ್ದಲ್ಲದೇ, ಫೇಸ್‌ಬುಕ್‌ ಅಲ್ಲಿ ಕೂಡ ಹಾಕಿಬಿಟ್ಟೆ. ಅಂತೂ ಆ ಕಾಯಿಲೆಗೆ ಔಷಧಿ ಕಂಡುಹಿಡಿದರಲ್ಲ ಎಂಬ ಖುಷಿ ಬಿಟ್ಟರೆ, ಬೇರೆ ಉದ್ದೇಶ ಇರಲಿಲ್ಲ. ಆದರೆ, ಮುಂದೆ ನಡೆದದ್ದೇ ಬೇರೆ. ಈಗಾಗಲೇ ಕೊರೊನಾದಿಂದ ಹತಾಶರಾಗಿದ್ದ ಜನರು, ಈ ಮೆಸೇಜಿನಿಂದ ಮತ್ತಷ್ಟು ಕ್ರುದ್ಧರಾದರು. ಸೋಷಿಯಲ್‌ ಮೀಡಿಯಾದಲ್ಲಿ ಯಾರೊಬ್ಬರೂ ಈ ಸಂದೇಶವನ್ನು ನಂಬಲಿಲ್ಲ. ಬದಲಿಗೆ, ನನ್ನ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.

“ಔಷಧ ಕಂಡುಹಿಡಿದಿದ್ದಾರೆ ಅನ್ನುವುದಕ್ಕೆ ಏನು ಸಾಕ್ಷಿ?’, “ಔಷಧ ಕಂಡು ಹಿಡಿದಿದ್ದರೆ ಅದನ್ನು ಪ್ರಸರಣ ಮಾಧ್ಯಮಕ್ಕೆ ಯಾಕೆ ಬಿಡುಗಡೆ ಮಾಡಲಿಲ್ಲ?’, “ಈ ವಿಷಯವನ್ನು ವೈದ್ಯಕೀಯ ಅನ್ವೇಷಕರು ಯಾಕೆ ಹೊರಗೆಡವಿಲ್ಲ?’ - ಈ ಯಾವ ಪ್ರಶ್ನೆಗೂ ನನ್ನಲ್ಲಿ ಉತ್ತರವಿರಲಿಲ್ಲ. ಸಂದೇಶವನ್ನು ಫಾರ್ವರ್ಡ್‌ ಮಾಡುವ ಮುನ್ನ ಈ ಪ್ರಶ್ನೆಗಳು ನನ್ನಲ್ಲಿ ಮೂಡಲೂ ಇಲ್ಲ. ಉತ್ಸಾಹದ ಭರದಲ್ಲಿ ಇವೆಲ್ಲ ಯೋಚಿಸದೆ ಮೆಸೇಜ್‌ ಫಾರ್ವರ್ಡ್‌ ಮಾಡಿದ್ದು ನನ್ನ ತಪ್ಪು. ನ್ಯೂಸ್‌ ಚಾನೆಲ್‌ಗ‌ಳ ಹಾಗೆ, ಈ ವಿಷಯ ಮೊದಲು ನಾವೇ ಬಿತ್ತರಿಸಿದ್ದು ಅಂತಸಾರುವ ಹಪಹಪಿ ನನಗೆ ಯಾಕೆ ಬಂತು ಅಂತ ಬೈದುಕೊಂಡೆ.

ಈಗಲೂ ದಿನಕ್ಕೆ ಮೂರು ನಾಲ್ಕು ಬಾರಿ ಕೋವಿಡ್ 19 ತಡೆಗಾಗಿ ದೇಸಿ ಔಷಧಿ ಇದೆ ಅನ್ನುವ ಮೆಸೇಜುಗಳು ಫಾರ್ವರ್ಡ್‌ ಆಗುತ್ತಲೇ ಇರುತ್ತದೆ. ಆದರೆ, ಫಾರ್ವರ್ಡ್‌ ಮೆಸೇಜುಗಳ ಮೇಲಿನ ವಿಶ್ವಾಸವೇ ಹೊರಟು ಹೋಗಿದೆ. ನಾನೇ ನಂಬದಿದ್ದ ಮೇಲೆ, ಬೇರೆಯವರಿಗೆ ಕಳಿಸುವುದಾದರೂ ಹೇಗೆ ಅಂತ ಸುಮ್ಮನಾಗುತ್ತೇನೆ. ಮುಂದೊಮ್ಮೆ ಈ ಮೆಸೇಜುಗಳಲ್ಲಿ ಸತ್ಯವೇ ಪ್ರಸಾರವಾದರೂ, ಅದು ಸತ್ಯ ಅಂತ ನಂಬುವುದು ಹೇಗೆ ಎಂಬ ಆತಂಕ ಕಾಡುತ್ತದೆ.­

 

-ಕೆ.ಎ. ಸೌಮ್ಯ, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next