Advertisement

ಉಸಿರು ಕಟ್ಟಿಸುವ ಹೊಗೆ; ಕಾನೂನು ಗೊತ್ತಿರಬೇಕು ನಮಗೆ!

12:10 PM Jun 25, 2018 | Harsha Rao |

ಒಬ್ಬ ಆರ್‌ಟಿಒ ಅಧಿಕಾರಿ, ನಮ್ಮ ಸಂಪೂರ್ಣ ಮಾಹಿತಿಯನ್ನು ತಂತ್ರಜಾnನದ ಮೂಲಕ ಪಡೆಯಲು
ಸಾಧ್ಯವಿರುವಾಗ, ಇದೇ ಸಾಧನದ ಮೂಲಕ ವಾಹನದ ಆರ್‌ಸಿ ರಿನ್ಯೂವಲ್‌ ಮಾಡಿಸಿರುವುದು, ವಿಮೆ ಚಾಲ್ತಿಯಲ್ಲಿರುವುದು ಹಾಗೂ ಹೊಗೆ ಪರೀಕ್ಷೆಯನ್ನು ಈ ಆರು ತಿಂಗಳ ಅವಧಿಯಲ್ಲಿ ಮಾಡಲಾಗಿರುವುದನ್ನು ಕೂಡ ಕಂಡುಕೊಳ್ಳುವುದು ಸಾಧ್ಯವಿದೆ ತಾನೇ? ಅಷ್ಟೇಕೆ, ಒಂದು ವಾಹನದ ಮಾಲೀಕ, ಚಾಲಕ ಒಬ್ಬನೇ ಆಗಿದ್ದರೆ ಆತನ ಫೋಟೋ, ಆತ ಅಧಿಕೃತ ಚಾಲನಾ ಪತ್ರ ಹೊಂದಿದ್ದಾನೆ ಎಂಬುದನ್ನು ಕೂಡ ಕಂಡುಕೊಳ್ಳಲು ಸಾಧ್ಯವಿದೆ.

Advertisement

ಈ ದೇಶದಲ್ಲಿ ಸಕಾರಾತ್ಮಕ ಕಾರಣಗಳಿಗಿಂತ ಸಲ್ಲದು ಎಂದು ನಿಷೇಧಾತ್ಮಕವಾಗಿ ಸೃಷ್ಟಿಯಾಗುತ್ತಿರುವ ಸಂದರ್ಭಗಳೇ ಹೆಚ್ಚಾಗಿದೆ. ಆಶ್ರಯ ಮನೆ ಹಂಚಿಕೆ ನಿಯಮಗಳು ಎಂದಿಟ್ಟುಕೊಳ್ಳೋಣ, ಅಲ್ಲಿನ ನಿರ್ಬಂಧದ ಷರತ್ತುಗಳು ಮುಖ್ಯವಾಗುತ್ತವೆ. ಇನ್ನೊಂದೆಡೆ ಮಹತ್ವದ ಕಾನೂನುಗಳು ಜನೋಪಯೋಗಿ ಆಗುವುದಕ್ಕಿಂತ ದುರ್ಬಳಕೆಯಾಗುತ್ತಿವೆ. ಜಾತಿನಿಂದನೆ ಪ್ರಕರಣಗಳ ಬಗ್ಗೆ ನ್ಯಾಯಾಲಯವೇ ಇಂತಹ ಆತಂಕ ವ್ಯಕ್ತಪಡಿಸಿದೆ. ಇನ್ನೂ ಕೆಲವು ಕಾನೂನುಗಳು ಸರ್ಕಾರದ ಅಧಿಕೃತ ಆದಾಯ ಮೂಲಗಳಾಗಿವೆಯೇ ಎಂಬ ಅನುಮಾನ ಕಾಡುತ್ತದೆ!

ಆದಾಯವೇ ಪ್ರಧಾನ!
ಸರ್ಕಾರಗಳು ಕಮರ್ಷಿಯಲ್‌ ಆಗಿ ಯೋಚಿಸುವುದಕ್ಕೆ ಆರಂಭಿಸಿ ಬಹಳೇ ವರ್ಷಗಳಾದವು. ಇಂದು ಸಾರಿಗೆ ಇಲಾಖೆ ಕೇವಲ ಅಧಿಕಾರಿಗಳಿಗೆ, ಬ್ರೋಕರ್‌ಗಳಿಗೆ ಕಮಾಯಿ “ನೋಟ್‌ ಮಿಷನ್‌’ ಅಲ್ಲ, ಸರ್ಕಾರಕ್ಕೂ! ಚಾಲನಾ ಪತ್ರ, ವಾಹನದ ನೋಂದಣಿಗಳ ಶುಲ್ಕ ಹೆಚ್ಚಿದೆಯಷ್ಟೇ ಅಲ್ಲ, ಒಂದೊಮ್ಮೆ ವಿಳಂಬವಾದರೆ ಕೊಡಬೇಕಾದ ದಂಡ ಸಾವಿರ ಸಾವಿರ ರೂ.ಗಳನ್ನು ದಾಟಿದೆ. ಉದ್ದೇಶ ಸ್ಪಷ್ಟ, ಇಲಾಖೆಯಿಂದ ಆದಾಯವನ್ನು ಹೆಚ್ಚಿಸುವುದು. ಉದಾಹರಣೆಗೆ, ಚಾಲನಾ ಪತ್ರದ ನವೀಕರಣದ ಶುಲ್ಕ 200 ರೂ. ಒಂದೊಮ್ಮೆ ವಿಳಂಬವಾಗಿದ್ದರೂ ರಿಯಾಯ್ತಿ ಅವಧಿಯಲ್ಲಿ ನವೀಕರಣಕ್ಕೆ ಕೊಟ್ಟರೆ 300. ಇದೂ ದಾಟಿದರೆ ನವೀಕರಣ ಶುಲ್ಕ ಪ್ರತಿ ವರ್ಷದ ಲೆಕ್ಕದಲ್ಲಿ ಹೆಚ್ಚುವರಿ ಸಾವಿರ ರೂ. ಒಂದು ವೇಳೆ ಒಂದು ವರ್ಷವನ್ನೂ ದಾಟಿದ ಸಂದರ್ಭದಲ್ಲಿ ನವೀಕರಣಕ್ಕೆ ಮುಂದಾದರೆ ಪ್ರತಿ ವರ್ಷಕ್ಕೆ ಸಾವಿರ ರೂ. ಹಾಗೂ ಕೊನೆಯ ಕೆಲ ದಿನಗಳಿಗೆ ದಿನದ ಲೆಕ್ಕದಲ್ಲಿ ಸಾವಿರ ರೂ.ನ ಭಾಗಾಂಶವನ್ನು ತೆಗೆದುಕೊಳ್ಳಲಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ,ಡಿ.ಎಲ್‌ ಅವಧಿ ಮುಗಿಯುತ್ತದೆ ಎಂಬ ಮಾಹಿತಿಯನ್ನು ಯಾವ ಮಾಧ್ಯಮದ ಮೂಲಕವೂ ಇಲಾಖೆ ಚಾಲಕನಿಗೆ ತಿಳಿಸುವುದಿಲ್ಲ.

ಅಂದರೆ, ಸರ್ಕಾರಕ್ಕೆ ಚಾಲಕ ಡಿ.ಎಲ್‌ ಪಡೆಯಬೇಕು. ಅದನ್ನು ನಿಗದಿತ ಕಾಲಕ್ಕೆ ನವೀಕರಿಸಿ ಆತ ದಾಖಲೆಗಳನ್ನು ಸರಿಯಾಗಿಟ್ಟುಕೊಳ್ಳಬೇಕು ಎಂಬ ಇರಾದೆಗಿಂತ, ಹೇಗಾದರೂ ನಿಯಮ ಭಂಗವುಂಟಾಗಿ ಸರ್ಕಾರಕ್ಕೆ ಹೆಚ್ಚು ಆದಾಯ ಬರಲಿ ಎಂದೇ ಇಂಗಿತವಿದೆ ಎಂದು ಭಾವಿಸಲು ಕಾರಣವಿದೆ. ಅವರು ಓರ್ವ ವಾಹನ ಚಾಲನಾ ಪರವಾನಗಿ ಪಡೆಯುವವನಿಂದ ಆತನ ಆಧಾರ್‌ ಸೇರಿದಂತೆ ಎಲ್ಲ ದಾಖಲೆ ಪಡೆದಿರುತ್ತಾರೆ. ಇಂದಿನ ತಂತ್ರಜಾnನದಲ್ಲಿ ಅಂತಹವನಿಗೆ ಡಿ.ಎಲ್‌ ಅವಧಿ ಮುಗಿಯುತ್ತಿರುವುದನ್ನು ತಿಳಿಸುವುದು ಕಷ್ಟವಲ್ಲ. ಎಷ್ಟೆಂದರೂ ಆತ ತಮ್ಮ ಪ್ರಜೆ. ಡಿ.ಎಲ್‌, ವಾಹನದ ಆರ್‌ಸಿ ಥರದವು ಅವಧಿ ಮುಕ್ತಾಯವಾದ ಸಂದರ್ಭದಲ್ಲಿಯೇ ಅವಘಡಗಳಾದರೆ ನಮ್ಮ ಜನತೆಯೇ ಸಂಕಷ್ಟಕ್ಕೊಳಗಾಗುತ್ತಾರೆ ಎಂದು ಸರ್ಕಾರ ಯೋಚಿಸಬೇಕಿತ್ತಲ್ಲವೇ?

ಇದರ ಬದಲು ಸರ್ಕಾರ ಇಲಾಖೆಗೆ ವಾರ್ಷಿಕ ಇಷ್ಟು ದಂಡ ಭಾಗದ ಮೂಲಕ ಸರ್ಕಾರಕ್ಕೆ ಆದಾಯ ತಂದುಕೊಡಬೇಕು ಎಂದು ನಿರೀಕ್ಷಿತ ವರಮಾನ ಗುರಿಯನ್ನು ಎದುರಿಗಿಡುತ್ತದೆ. ಆರ್‌ಟಿಓಗಳು ರಸ್ತೆಗಿಳಿದು ವಾಹನ ತಪಾಸಣೆಗಿಳಿಯುವುದು ಜನರಿಗೆ ಜಾಗೃತಿ ತರಲೆಂದೇನೂ ಅಲ್ಲ, ಅದು ಚಾಲಕರ ದೋಷಗಳನ್ನು ಪತ್ತೆ ಹಚ್ಚಿ ಹೆಚ್ಚಿನ ಪ್ರಮಾಣದಲ್ಲಿ ದಂಡ ಆದಾಯವನ್ನು ಸಂಗ್ರಹಿಸುವ ಉದ್ದೇಶ ಹೊಂದಿರುತ್ತದೆ!

Advertisement

ದುರಂತವೆಂದರೆ, ಒಂದು ವಾಹನದ ಚಾಲಕ ತನ್ನ ಚಾಲನಾ ಪತ್ರ, ವಾಹನದ ವಿಮೆ, ನೋಂದಣಿ ದಾಖಲೆ, ಹೊಗೆ ಪರೀûಾ ವರದಿಗಳನ್ನು ಕಾಲಕಾಲಕ್ಕೆ ಮಾಡಿಸಿದರೆ ಅವನ ಜವಾಬ್ದಾರಿ ಮುಗಿಯುವುದಿಲ್ಲ. ಅದನ್ನು ಚಾಲನೆಯ ಸಂದರ್ಭದಲ್ಲಿ ಜೊತೆಗಿಟ್ಟುಕೊಂಡಿರಬೇಕು. ಅದು ಪರಿಶೀಲನೆಯ ಸಂದರ್ಭದಲ್ಲಿ ಅಲಭ್ಯ ಎಂದರೆ ಆತ ಆ ದಾಖಲೆಗಳನ್ನು ಹೊಂದಿರದೆ ಕಾನೂನು ಉಲ್ಲಂ ಸಿದ್ದಾನೆ ಎಂತಲೇ ಅರ್ಥ. ಅದಕ್ಕೆ ನಿಗದಿಯಾದ ದಂಡವನ್ನು ಭರಿಸಬೇಕಾಗುತ್ತದೆ. ಇಂದು ಆರ್‌ಟಿಓ ಅಧಿಕಾರಿಗಳಲ್ಲಿ ತಂತ್ರಜಾnನವಿದೆ. ಆತನ ವಾಹನದ ನೋಂದಣಿ ಸಂಖ್ಯೆಯನ್ನು ತನ್ನಲ್ಲಿರುವ ಡಿವೈಸ್‌ ಮೂಲಕ ನಮೂದಿಸಿ ನಮ್ಮ ಸಂಪೂರ್ಣ ವಿವರ ಪಡೆದು ದಂಡದ ಬಿಲ್‌ ಹರಿಯುತ್ತಾನೆ.

ಪ್ರಾಮಾಣಿಕರು ಬೇಕಾಗಿಲ್ಲ!
ಒಬ್ಬ ಆರ್‌ಟಿಒ ಅಧಿಕಾರಿ, ನಮ್ಮ ಸಂಪೂರ್ಣ ಮಾಹಿತಿಯನ್ನು ತಂತ್ರಜಾnನದ ಮೂಲಕ ಪಡೆಯಲು
ಸಾಧ್ಯವಿರುವಾಗ, ಇದೇ ಸಾಧನದ ಮೂಲಕ ವಾಹನದ ಆರ್‌ಸಿ ರಿನ್ಯೂವಲ್‌ ಮಾಡಿಸಿರುವುದು, ವಿಮೆ ಚಾಲ್ತಿಯಲ್ಲಿರುವುದು ಹಾಗೂ ಹೊಗೆ ಪರೀಕ್ಷೆಯನ್ನು ಈ ಆರು ತಿಂಗಳ ಅವಧಿಯಲ್ಲಿ ಮಾಡಲಾಗಿರುವುದನ್ನು ಕೂಡ ಕಂಡುಕೊಳ್ಳುವುದು ಸಾಧ್ಯವಿದೆ ತಾನೇ? ಅಷ್ಟೇಕೆ, ಒಂದು ವಾಹನದ ಮಾಲೀಕ, ಚಾಲಕ ಒಬ್ಬನೇ ಆಗಿದ್ದರೆ ಆತನ ಫೋಟೋ, ಆತ ಅಧಿಕೃತ ಚಾಲನಾ ಪತ್ರ ಹೊಂದಿದ್ದಾನೆ ಎಂಬುದನ್ನು ಕೂಡ ಕಂಡುಕೊಳ್ಳಲು ಸಾಧ್ಯವಿದೆ. ಸರ್ಕಾರ ಮತ್ತು ಇಲಾಖೆಗೆ ಎಲ್ಲರೂ ಕಾನೂನುಬದ್ಧವಾಗಿ ವಾಹನ ಚಾಲನೆ ಮಾಡಲಿ ಮತ್ತು ದಂಡ ವಿಧಿಸುವ ಹಪಹಪಿ ಅದಕ್ಕಿಲ್ಲ ಎಂದು ಭಾವಿಸುವುದಾದರೆ ತಂತ್ರಜಾnನವನ್ನು ಬಳಸಿದ್ದರೆ ತಪಾಸಣೆಯ ವೇಳೆ ಪ್ರಾಮಾಣಿಕರನ್ನು ದಾಖಲೆಗಳಿಗಾಗಿ ಪೀಡಿಸಬೇಕಿರಲಿಲ್ಲ, ದಂಡ ವಿಧಿಸಬೇಕಿರಲಿಲ್ಲ. ಒಂದು ಲೆಕ್ಕದಲ್ಲಿ, ದಾಖಲೆಗಳನ್ನು ಹೊಂದಿದ ಪ್ರಾಮಾಣಿಕ ಎಂದು ಗುರುತಿಸಿ ಭೇಷ್‌ ಎನ್ನಬಹುದಿತ್ತು. ಆದರೆ ಆಗುತ್ತಿರುವುದು ಭಿನ್ನ.

ವಾಹನಗಳ ಹೊಗೆ ಪರೀಕ್ಷೆಯ ವಿಚಾರವನ್ನೇ ತೆಗೆದುಕೊಳ್ಳಿ. ಹೊಸದಾದ ವಾಹನಕ್ಕೆ, ಅದು ಬೈಕ್‌ ಆಗಿರಲಿ ಅಥವಾ ಕಾರ್‌ ಆಗಿರಲಿ; ಮೊದಲ ವರ್ಷ ಎಮಿಷನ್‌ ಟೆಸ್ಟ್‌ ಮಾಡಿಸುವ ಅಗತ್ಯವಿಲ್ಲ. ಆನಂತರ ಎರಡಕ್ಕೂ ಪ್ರತಿ ಆರು ತಿಂಗಳಿಗೊಮ್ಮೆ ಹೊಗೆ ಪರೀಕ್ಷೆ ಮಾಡಿಸಿ, ನಿಗದಿತ ಪ್ರಮಾಣದಲ್ಲಿಯಷ್ಟೇ ಹೊಗೆ ಇದೆ ಎಂಬುದನ್ನು ದೃಢಪಡಿಸುವ ವರದಿಯನ್ನು ವಾಹನದ ಜೊತೆ ಹೊಂದಿರುವುದು ಕಡ್ಡಾಯ. 1989ರ ಕೇಂದ್ರ ಮೋಟಾರ್‌ ವಾಹನ ಕಾಯ್ದೆಯ ನಿಯಮ 115ರ ಪ್ರಕಾರ, ಬಿಎಸ್‌ ಒನ್‌ನಿಂದ ಬಿಎಸ್‌ 4ರವರೆಗೆ ಮತ್ತು ಸಿಎನ್‌ಜಿ, ಎಲ್‌ಪಿಜಿ ಇಂಧನ ವಾಹನಗಳಿಗೂ “ಪಲ್ಯೂಷನ್‌ ಅಂಡರ್‌ ಕಂಟ್ರೋಲ್‌’ ಸರ್ಟಿಫಿಕೇಟ್‌ ಯಾನೆ ಪಿಯುಸಿ ಅತ್ಯಗತ್ಯ. ರಸ್ತೆಯ ಮೇಲಿನ ಎಲ್ಲ ವಾಹನಗಳಿಗೆ ಎಂದು ನಿಯಮ 115 ಸ್ಪಷ್ಟಪಡಿಸಿದೆ. ಮೊದಲ ಒಂದು ವರ್ಷ ಎಂಬುದರ ಬಗ್ಗೆ ತೀರಾ ಸ್ಪಷ್ಟ ವಿವರಣೆ ಇಲ್ಲವಾದರೂ, ನೋಂದಣಿಯಾದ ದಿನಾಂಕದಿಂದ ಒಂದು ವರ್ಷ ಒಂದು ಪರಿಗಣಿಸಬಹುದು. ಈ ಒಂದು ವರ್ಷ ಪಿಯುಸಿ ಸರ್ಟಿಫಿಕೇಟ್‌ನ್ನು ವಾಹನದ ಜೊತೆ ಹೊಂದಿರುವ ಅಗತ್ಯವೇ ಇಲ್ಲ. ಬಿಎಸ್‌4ಕ್ಕೆ, ಎಲ್‌ಪಿಜಿಗೆ ನಿಜಕ್ಕೂ ಪಿಯುಸಿ ಬೇಕೆ ಎಂದು ಕೇಳಬೇಕಾದವರು ಯಾರು? ಆದಾಯದ ಮೂಲವನ್ನಂತೂ ಕಳೆದುಕೊಳ್ಳಲು ಸರ್ಕಾರ ಸಿದ್ಧವಿಲ್ಲ.

ಅಸಲಿಗೆ ಸಮಸ್ಯೆ ಜನರದ್ದು ಮಾತ್ರ!
ಮತ್ತೆ ಒಂದು ಜಿಜಾnಸೆ ಕಾಡಬಹುದು. ಮೋಟಾರ್‌ ವಾಹನ ಕಾಯ್ದೆಯ ಪ್ರಕಾರ, ವಾಹನ ಚಾಲನಾ ಸಂದರ್ಭದಲ್ಲಿ ಪ್ರತಿಯೊಬ್ಬ ಚಾಲಕನಲ್ಲಿ ಆರ್‌ಸಿ, ಡಿಎಲ್‌, ಪಿಯುಸಿ ಹಾಗೂ ವಿಮೆಯ ಅಸಲಿ ದಾಖಲೆಗಳೇ ಜೊತೆಯಲ್ಲಿರಬೇಕು. ಕಾನೂನಿನನ್ವಯ, ಇವುಗಳ ಜೆರಾಕ್ಸ್‌ ಮಾದರಿಗಳನ್ನು ಹೊಂದಿರುವುದು ಕಾನೂನು ಸಮ್ಮತವಲ್ಲ. ಬಹುಶಃ ಇಂತಹ ದಾಖಲೆಗಳು ಕಳೆದುಹೋದರೆ ಇದರ ನಕಲನ್ನು ಪಡೆಯಲು ಪೊಲೀಸ್‌ ದೂರು ಕೊಡು, ನ್ಯಾಯಾಲಯದಲ್ಲಿ ಅಫಿಡೆವಿಟ್‌ ಮಾಡಿಸು, ಆರ್‌ಟಿಓನಲ್ಲಿ ನಕಲಿಗಾಗಿ ದಂಡ ಶುಲ್ಕ ಪಾವತಿಸುವುದು ಮೊದಲಾದ ಪ್ರಕ್ರಿಯೆಗಳು ಚಾಲಕನ ಹಣ ಹಾಗೂ ಸಮಯವನ್ನು ದೊಡ್ಡ ಪ್ರಮಾಣದಲ್ಲಿ ಕಸಿಯುತ್ತವೆ. ಅದಕ್ಕೆ ಬದಲಿ ವ್ಯವಸ್ಥೆಗಳನ್ನು ಮಾಡಿಕೊಡುವುದು ಸರ್ಕಾರದ ಜವಾಬ್ದಾರಿಯಲ್ಲವೇ?

ಕೇಂದ್ರ ಸರ್ಕಾರ ಡಿಜಿ ಲಾಕರ್‌ ಎಂಬ ವ್ಯವಸ್ಥೆಯನ್ನು 2015ರಿಂದಲೇ ಮಾಡಿದೆ. ಈ ವ್ಯವಸ್ಥೆಯಡಿ ನಾವು ನಮ್ಮ ವಾಹನದ ನೋಂದಣಿ ದಾಖಲೆ ಸೇರಿದಂತೆ ಮೇಲಿನ ಎಲ್ಲ ದಾಖಲೆಗಳನ್ನು ಸಂರಕ್ಷಿಸಬಹುದು. ಆದರೆ ಆರ್‌ಟಿಓ ಅಥವಾ ಪೊಲೀಸ್‌ ವಾಹನ ತಪಾಸಣೆಯ ವೇಳೆ ನಾವು ಡಿಜಿ ಲಾಕರ್‌ನಲ್ಲಿ ತೋರಿಸುವ ದಾಖಲೆಗಳನ್ನು ಅಧಿಕೃತ ಎಂದು ಒಪ್ಪಿಕೊಳ್ಳದಿದ್ದರೆ ನಾವು ಕೈಕೈ ಹಿಸುಕಿಕೊಳ್ಳಬೇಕಾಗುತ್ತದಷ್ಟೇ.

ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ಘೋಷಿಸಿದೆ.  ರಾಜ್ಯದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡಲು ಬಯಸುವ ಹಿರಿಯ ನಾಗರಿಕರು ತಮ್ಮ “ಹಿರಿತನ’ವನ್ನು ತೋರಿಸುವ ಯಾವುದೇ ದಾಖಲೆ ತೋರಿಸಿದರೂ ಸಾಕು. ಅದನ್ನು ಪಡೆಯಲು ಖುದ್ದು ಕೆಎಸ್‌ಆರ್‌ಟಿಸಿ ನೀಡಿದ ರಿಯರ ಗುರುತಿನ ಪತ್ರವನ್ನೇ ಕೊಡಬೇಕೆಂದಿಲ್ಲ. ಆದರೆ ಇಂದಿಗೂ ಕೆಎಸ್‌ಆರ್‌ಟಿಸಿಯ ಸೀನಿಯರ್‌ ರಿಯಾಯಿತಿ ಪಡೆಯಲು ಅದೇ ಕಾರ್ಡ್‌ನ್ನು ಪ್ರದರ್ಶಿಸಬೇಕಿದೆ ಎಂದು ಹಿರಿಯರೇ ಅಲವತ್ತುಗೊಳ್ಳುತ್ತಿದ್ದಾರೆ. ಬದಲಾದ ನಿಯಮ ಅದನ್ನು ಒಪ್ಪಿಕೊಳ್ಳಬೇಕಾದವನನ್ನು ಮುಟ್ಟದಿದ್ದರೆ ಡಿಜಿ ಲಾಕರ್‌ ಕೂಡ ವ್ಯರ್ಥ! ಎಲ್ಲವನ್ನೂ ಕಾನೂನೇ ಸರಿಮಾಡುತ್ತದೆಯೇ?

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next