Advertisement

ಸ್ಮಾರ್ಟ್‌ಫೋನ್‌ V/s ಕಂಪ್ಯೂಟರ್‌

08:22 PM Dec 01, 2019 | Team Udayavani |

ವಿಶ್ವ ಜಾಹೀರಾತು ಸಂಶೋಧನೆ ಕೇಂದ್ರ (ಡಬ್ಲ್ಯುಎಆರ್‌ಸಿ) ನಡೆಸಿರುವ ಅಧ್ಯಯನದ ಪ್ರಕಾರ, ವಿಶ್ವಾದ್ಯಂತ 390 ಕೋಟಿ ಜನ ಸ್ಮಾರ್ಟ್‌ಫೋನ್‌ ಬಳಕೆದಾರರಿದ್ದಾರೆ. ಇವರಲ್ಲಿ 200 ಕೋಟಿ ಜನ ಸ್ಮಾರ್ಟ್‌ಫೋನ್‌ನಿಂದ ಇಂಟರ್‌ನೆಟ್‌ ಸೌಲಭ್ಯವನ್ನು ಬಳಸುತ್ತಿದ್ದಾರೆ. ಸ್ಮಾರ್ಟ್‌ಫೋನ್‌ ಮೂಲಕ ಇಂಟರ್‌ನೆಟ್‌ ಬಳಕೆ ಜನಪ್ರಿಯತೆಯಿಂದ ಇ-ಕಾಮರ್ಸ್‌ ಉದ್ಯಮಕ್ಕೂ ಲಾಭವಾಗುತ್ತಿದೆ. 2018ರಲ್ಲಿ, ಜಗತ್ತಿನಾದ್ಯಂತ ಸ್ಮಾರ್ಟ್‌ಫೋನ್‌ ಗ್ರಾಹಕರು ನಡೆಸಿರುವ ವಹಿವಾಟಿನ ಒಟ್ಟು ಮೊತ್ತ ಏಳು ಲಕ್ಷ ಕೋಟಿ ರೂ.ಗಳಷ್ಟು. ಸ್ಮಾರ್ಟ್‌ಫೋನ್‌ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ, ಅವರ ಖರೀದಿಗಳನ್ನು ಉತ್ತೇಜಿಸಲು, ವಾಣಿಜ್ಯ ಸಂಸ್ಥೆಗಳು, ಜಾಹೀರಾತುಗಳಿಗೆ ಖರ್ಚು ಮಾಡುತ್ತಿರುವ ಮೊತ್ತವೂ ಕಡಿಮೆಯೇನಿಲ್ಲ. ಈ ಜಾಹೀರಾತುಗಳೆಲ್ಲವೂ ಸ್ಮಾರ್ಟ್‌ಫೋನ್‌ ಕೇಂದ್ರಿತವಾದವು ಎನ್ನುವುದು ಗಮನಾರ್ಹ.

Advertisement

ಸ್ಮಾರ್ಟ್‌ಫೋನ್‌ ಬಳಕೆದಾರ ಪ್ರತಿದಿನ ಇಂಟರ್ನೆಟ್‌ನಲ್ಲಿ ಕಳೆಯುತ್ತಿರುವ ಸಮಯ ಸರಾಸರಿ 3 ಗಂಟೆ 22 ನಿಮಿಷಗಳು! ಅದೇ ರೀತಿ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ಗ್ಳನ್ನು ಬಳಸುವವರು ಪ್ರತಿದಿನ 3 ಗಂಟೆ 19 ನಿಮಿಷಗಳ ಕಾಲ ಇಂಟರ್ನೆಟ್‌ನಲ್ಲಿ ಕಳೆಯುತ್ತಿದ್ದಾರೆ. ಇನ್ನು ಅತಿ ವೇಗದ್ದು ಎಂದೇ ಹೇಳಲಾಗುತ್ತಿರುವ 5ಜಿ ಸೇವೆಗಳು ಲಭ್ಯವಾದ ಮೇಲೆ, ಕಂಪ್ಯೂಟರ್‌ನ ಬಳಕೆ ಇನ್ನಷ್ಟು ಕಡಿಮೆಯಾಗಿ ಅದರ ಬಳಕೆದಾರರೂ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗೆ ಶಿಫ್ಟ್ ಆಗುವ ದಿನಗಳು ದೂರವಿಲ್ಲ. ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ ಬಳಕೆದಾರರ ಸಂಖ್ಯೆಯನ್ನು ಹೋಲಿಸಿದರೆ, ಸ್ಮಾರ್ಟ್‌ಫೋನ್‌ ಬಳಸುವವರೇ ಹೆಚ್ಚು ಎಂಬುದು ತಿಳಿದುಬರುತ್ತದೆ. ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ನೂತನ ಸಂಶೋಧನೆಗಳು ನಡೆದ ನಂತರ ಕಂಪ್ಯೂಟರ್‌ಗಿಂತ ಫೋನಿನಲ್ಲಿಯೇ ಜನರು ಇಂಟರ್ನೆಟ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಉದ್ಯಮ ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ.

ಫೋನ್‌ ಮೇಲೆ ಆಸೆ, ಕಂಪ್ಯೂಟರ್‌ ಮೇಲೆ ಪ್ರೀತಿ
ಕಂಪ್ಯೂಟರ್‌ಗೆ ಹೋಲಿಸಿದರೆ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ ತುಂಬಾ ಚಿಕ್ಕದು. ಹಾಗಾಗಿ, ಅದರಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳು, ಇ-ಪುಸ್ತಕಗಳನ್ನು ಓದುವುದು ಕಷ್ಟದ ಕೆಲಸ. ಸ್ಮಾರ್ಟ್‌ಫೋನ್‌ ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ನಿಜ ಆದರೆ ಕಂಪ್ಯೂಟರ್‌ಗಿರುವ ಸಂಗ್ರಹ ಸಾಮರ್ಥ್ಯ ಫೋನ್‌ಗೆ ಬಂದಿಲ್ಲ. 128ಜಿಬಿ, 256ಜಿಬಿ ಸಾಮರ್ಥ್ಯದ ಮೆಮೋರಿ ಕಾರ್ಡ್‌ ಬಳಕೆಯನ್ನು ನಾವು ಸಾಮಾನ್ಯವಾಗಿ ಕಾಣಬಹುದು. ಹಾರ್ಡ್‌ಡಿಸ್ಕ್ನಲ್ಲಾದರೆ 1,000 ಜಿಬಿ(1ಟಿಬಿ)ಗೂ ಹೆಚ್ಚು ಸಂಗ್ರಹ ಸಾಮರ್ಥ್ಯ ಹೊಂದಿರುತ್ತದೆ. ಆ ರೇಂಜಿನ ಮಾಹಿತಿ ಸಂಸ್ಕರಣೆ ಸಾಮರ್ಥ್ಯವನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ.

ಇನ್ನು ಬ್ಯಾಟರಿ ವಿಷಯಕ್ಕೆ ಬಂದರೆ ಸ್ಮಾರ್ಟ್‌ಫೋನ್‌ ಬ್ಯಾಟರಿ ಲ್ಯಾಪ್‌ಟಾಪ್‌ಗ್ಳಿಗಿಂತ ದೀರ್ಘ‌ ಕಾಲ ಬಾಳಿಕೆ ಬರುತ್ತದೆ. ಜಾಲತಾಣಗಳನ್ನು ಸಂದರ್ಶಿಸುವವರಲ್ಲಿ ಸ್ಮಾರ್ಟ್‌ಫೋನ್‌ ಗ್ರಾಹಕರು ಹೆಚ್ಚು, ಆದರೆ ಆ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುವವರು ಕಂಪ್ಯೂಟರ್‌ ಬಳಕೆದಾರರು ಎನ್ನುವುದು ಸಂಶೋಧನೆಯೊಂದರಿಂದ ದೃಢಪಟ್ಟಿದೆ. ಮೊಬೈಲ್‌ ಬ್ಯಾಂಕಿಂಗ್‌ ಸೇವೆ ಶುರುವಾಗಿ ಯಾವುದೋ ಕಾಲವಾಗಿದ್ದರೂ ಇನ್ನೂ ಹಲವರು ಕಂಪ್ಯೂಟರ್‌ನಲ್ಲಿಯೇ ಬ್ಯಾಂಕ್‌ ವಹಿವಾಟುಗಳನ್ನು ನಡೆಸಲು ಇಚ್ಛಿಸುತ್ತಿದ್ದಾರೆ. ಹೀಗೆ ಸ್ಮಾರ್ಟ್‌ಫೋನ್‌ ಬಳಕೆ ಜನಪ್ರಿಯವಾಗಿದ್ದರೂ ಕೂಡಾ ಕೆಲ ನಿರ್ದಿಷ್ಟ ಕಾರಣಗಳಿಗೆ ಹೆಚ್ಚು ಜನ ಕಂಪ್ಯೂಟರ್‌ ಬಳಸಲು ಒಲವು ತೋರಿಸುತ್ತಿದ್ದಾರೆ.

ಫೋನ್‌ ಬಳಕೆದಾರರು ಹೆಚ್ಚಲಿದ್ದಾರೆ
ಕೀಬೋರ್ಡ್‌ ಅಥವಾ ಕೀಪ್ಯಾಡ್‌ ಬಳಸದೆ ಬಳಕೆದಾರನ ಸೂಚನೆಗಳನ್ನು ಮಾತಿನ ಮೂಲಕವೇ ಗ್ರಹಿಸಿ ಸ್ಪಂದಿಸುವ ಧ್ವನಿಗ್ರಹಣ ತಂತ್ರಜ್ಞಾನ ಹಿಂದೆಂದಿಗಿಂತಲೂ ಈಗ ಸುಧಾರಿತವಾಗಿದೆ. ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ಫೋನ್‌ ಎರಡರಲ್ಲೂ ಇದರ ಬಳಕೆಯನ್ನೂ ಕಾಣಬಹುದು.

Advertisement

ಪ್ರಾದೇಶಿಕ ಭಾರತೀಯ ಭಾಷೆಗಳಲ್ಲಿ ಧ್ವನಿಯಾಧಾರಿತ ಸೇವೆಗಳು ಮತ್ತು ತಂತ್ರಾಂಶಗಳು ಅಭಿವೃದ್ಧಿಯಾದಲ್ಲಿ ಕಂಪ್ಯೂಟರ್‌ನ ಬಳಕೆ ಇನ್ನಷ್ಟು ತಗ್ಗಿ ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಈಗಾಗಲೇ ವಿಡಿಯೋ ಗೇಮ್‌ಗಳು, ಸುದ್ದಿಪತ್ರಿಕೆಗಳು, ದೃಶ್ಯಮಾಧ್ಯಮಗಳು ಸ್ಮಾರ್ಟ್‌ಪೋನ್‌ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಆ್ಯಪ್‌ಗ್ಳನ್ನು ಅಭಿವೃದ್ಧಿಪಡಿಸಿರುವುದನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಆಗ ಖಾಸಗಿ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಕೂಡಾ ಸ್ಮಾರ್ಟ್‌ಫೋನ್‌ ಕೇಂದ್ರಿತವಾಗಿ ತಮ್ಮ ಜಾಲತಾಣಗಳನ್ನು, ಆ್ಯಪ್‌ಗ್ಳನ್ನು ರೂಪಿಸಬೇಕಾಗಿ ಬರುವುದು.

ಇ-ತ್ಯಾಜ್ಯದ ಅರಿವು
ಸ್ಮಾರ್ಟ್‌ಫೋನ್‌ ಇರಲಿ, ಕಂಪ್ಯೂಟರ್‌ ಇರಲಿ, ಇವೆರಡೂ ಇ- ತ್ಯಾಜ್ಯದ ಸೃಷ್ಟಿಗೆ ಕಾರಣವಾಗುತ್ತವೆ. ಹೀಗಾಗಿ, ಆ ಕುರಿತೂ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ. ಕೆಲವರು ಅಗತ್ಯಕ್ಕಿಂತ ಹೆಚ್ಚು ಹೆಚ್ಚು ಫೋನ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವರು ಹಳೆಯದನ್ನು ಎಸೆದು ಹೊಸತನ್ನು ಕೊಳ್ಳುವ ಗೀಳನ್ನು ಹೊಂದಿರುತ್ತಾರೆ. ಹೊಸತು ಬೇಗ ಹಳತಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ, ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ಆಗುತ್ತಿರುವ ಕ್ರಾಂತಿಕಾರಿ ಸಂಶೋಧನೆಗಳು. ಇದರಿಂದಾಗಿ ಜಗತ್ತಿನಾದ್ಯಂತ ಅವುಗಳ ಬಿಡಿಭಾಗಗಳ ತ್ಯಾಜ್ಯದ ಬೆಟ್ಟವೇ ಸೃಷ್ಟಿಯಾಗುತ್ತಿದೆ. ಇದರ ದುಷ್ಪರಿಣಾಮ ಪರಿಸರದ ಮೇಲೆ ಆಗಬಾರದು ಎಂದರೆ ಹಳೆಯ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಇತ್ಯಾದಿಗಳಿಂದ ಪುನರ್‌ಬಳಕೆ ಮಾಡಬಹುದಾದ ಚಿನ್ನ, ಬೆಳ್ಳಿ ಮೊದಲಾದವುಗಳನ್ನು ಬೇರ್ಪಡಿಸುವ ಘಟಕಗಳು ನಮ್ಮ ದೇಶಕ್ಕೂ ಅಗತ್ಯವಾಗಿದೆ. 2020ರಲ್ಲಿ ಜಪಾನ್‌ನ, ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ನೀಡಲಾಗುತ್ತದೆ. ಈ ಪದಕಗಳನ್ನು ತಯಾರಿಸಲು 60 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ 78,985 ಟನ್‌ ಇ-ತ್ಯಾಜ್ಯದಿಂದ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಬೇಕಾದ ಲೋಹಗಳನ್ನು ಪಡೆಯಲಾಗಿದೆ. ಇಂಥ ಒಳ್ಳೆಯ ಕೆಲಸಗಳು ನಮ್ಮಲ್ಲೂ ಆಗಬೇಕು.

-ಉದಯ್‌ಶಂಕರ್‌ ಪುರಾಣಿಕ್‌

Advertisement

Udayavani is now on Telegram. Click here to join our channel and stay updated with the latest news.

Next