Advertisement

ಮೂರು ತಿಂಗಳೊಳಗೆ ನಗರಕ್ಕೆ ಸ್ಮಾರ್ಟ್‌ ಟ್ರಾಫಿಕ್‌ ಜಂಕ್ಷನ್‌

01:51 AM Jan 31, 2020 | Sriram |

ಉಡುಪಿ: ಟ್ರಾಫಿಕ್‌ ಸಮಸ್ಯೆಗೆ ಸದ್ಯ ಜಿಲ್ಲೆಯಲ್ಲಿ ಪರಿಹಾರ ಕಾಣುವ ಲಕ್ಷಣ ಗೋಚರಿಸುತ್ತಿದೆ. ಆಧುನಿಕ ಸಿಗ್ನಲ್‌ ನಗರದಲ್ಲಿ ಹಾದುಹೋಗುವ ರಾ. ಹೆದ್ದಾರಿ ಸಹಿತ 15 ಕಡೆಗಳಲ್ಲಿ ಸಂಚಾರ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಸ್ಮಾರ್ಟ್‌ ಟ್ರಾಫಿಕ್‌ ಜಂಕ್ಷನ್‌ ರೂಪಿಸಲಾಗುತ್ತಿದೆ.

Advertisement

ವಾಹನ ಸವಾರರು ಸಂಚಾರಿ ನಿಯಮ ಉಲ್ಲಂ ಸಿದರೆ ಮಾಹಿತಿ ಆರ್‌ಟಿಒ ಆಫೀಸ್‌ಗೆ ತಲುಪಲಿದೆ. ಆ ಮೂಲಕ ಸವಾರರಿಗೆ ದಂಡ ಹಾಕುವ ವ್ಯವಸ್ಥೆ ಇರಲಿದೆ. ಬಲಾಯಿಪಾದೆ, ಅಂಬಲಪಾಡಿ, ಸಂತೆಕಟ್ಟೆ, ಕಲ್ಸಂಕ ಸಹಿತ 15 ಕಡೆಗಳಲ್ಲಿ ತಲಾ 30 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್‌ ಸಿಗ್ನಲ್‌ 3 ತಿಂಗಳೊಳಗೆ ಕಾರ್ಯಾರಂಭ ಮಾಡಲಿವೆ. ಅತ್ಯಾಧುನಿಕ ಕೆಮರಾ ಹಾಗೂ ಸಿಗ್ನಲ್‌ ಲೈಟ್‌ಗಳನ್ನು ಇದಕ್ಕಾಗಿ ಅಳವಡಿಸಲಾಗುತ್ತದೆ.

ವರ್ಷದ ಹಿಂದೆ ಪ್ರಸ್ತಾವನೆ
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಸಾರ್ವಜನಿಕರ ಮನವಿಯ ಮೇರೆಗೆ ಉಡುಪಿ ನಗರ ಸಭೆ ವ್ಯಾಪ್ತಿಯ ಪ್ರದೇಶಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ ಸಿಗ್ನಲ್‌ ಲೈಟ್‌ಗಳನ್ನು ಅಳವಡಿಸುವಂತೆ ಉಡುಪಿ ನಗರ ಸಭೆಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪೊಲೀಸ್‌ ಇಲಾಖೆ ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಅದಕ್ಕೆ ಅನುಮೋದನೆ ಸಿಕ್ಕಿದ್ದು, ಮೂರು ತಿಂಗಳ ಒಳಗೆ ನಗರದಲ್ಲಿ ಕಾರ್ಯಾರಂಭ ಮಾಡಲಿದೆ.

ಟ್ರಾಫಿಕ್‌ ದಟ್ಟಣೆ ನಿವಾರಿಸಲು ಹಲವು ಮಾರ್ಗ
ಪ್ರಮುಖ ರಸ್ತೆಗಳಾದ ಕವಿ ಮುದ್ದಣ ಮಾರ್ಗ, ಕೋರ್ಟ್‌ ರಸ್ತೆ, ಸರ್ವಿಸ್‌ ಬಸ್‌ ನಿಲ್ದಾಣ, ಕೆಎಸ್‌ಆರ್‌ಟಿಸಿ, ಸಿಟಿಬಸ್‌ ನಿಲ್ದಾಣ, ಕಲ್ಸಂಕ, ಮಣಿಪಾಲದಲ್ಲಿ ವಾಹನದಟ್ಟಣೆ ಮಿತಿಮೀರುತ್ತಿದೆ. ಪ್ರಸ್ತುತ ಸವಾರರು ಈ ರಸ್ತೆಯಲ್ಲಿ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಟ್ರಾಫಿಕ್‌ ದಟ್ಟಣೆಗೆ ಮುಕ್ತಿ ನೀಡಲು ಕಿನ್ನಿಮೂಲ್ಕಿ-ಬ್ರಹ್ಮಗಿರಿ-ಬನ್ನಂಜೆ ರಸ್ತೆಗಳು ಸವಾರರಿಗೆ ಅನುಕೂಲ ಮಾಡಿಕೊಡುತ್ತಿವೆ. ಮಣಿಪಾಲಕ್ಕೆ ಹಾಗೂ ಉಡುಪಿ ನಗರಭಾಗಕ್ಕೆ ತೆರಳುವವರು ಕರಾವಳಿ ಬೈಪಾಸ್‌ ಮೂಲಕ ಸಂಚರಿಸಿದರೂ ನಗರದಲ್ಲಿ ಉಂಟಾಗುವ ಟ್ರಾಫಿಕ್‌ ದಟ್ಟಣೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ.

ಸಾವಿರಕ್ಕೂ ಅಧಿಕ ವಾಹನಗಳು
ನಗರದಲ್ಲಿ ವಾಹನ ದಟ್ಟಣೆ ದಿನಕಳೆದಂತೆ ಅಧಿಕವಾಗುತ್ತಿದೆ. ನಗರದಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಟ್ರಾಫಿಕ್‌ ದಟ್ಟಣೆ ಸರ್ವಸಾಮಾನ್ಯವಾಗಿದೆ. ಟ್ರಾಫಿಕ್‌ ಪೊಲೀಸರೂ ಇದನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

Advertisement

ಈಗಾಗಲೇ ಈ ವ್ಯಾಪ್ತಿಯ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಬ್ರಹ್ಮಗಿರಿ ವೃತ್ತವಾಗಿ ಚಾಲಕರು ಸರ್ಕ್ನೂಟ್‌ಹೌಸ್‌ ಮಾರ್ಗವಾಗಿ ಯಾವುದೇ ಟ್ರಾಫಿಕ್‌ ತೊಂದರೆ ಇಲ್ಲದೆ ಸಂಚಾರ ಮಾಡಬಹುದಾಗಿದೆ. ರಸ್ತೆ ಹಾಗೇ ಸೂಚಕ ಪಟ್ಟಿಗಳನ್ನು ಕೂಡ ಹೊಸದಾಗಿ ಮಾಡಿರುವುದರಿಂದ ಚಾಲಕರಿಗೆ ರಸ್ತೆ ಮಾರ್ಗಸುಲಭದಲ್ಲಿ ಗೋಚರವಾಗುತ್ತದೆ.

ಕರಾವಳಿ ಜಂಕ್ಷನ್‌ ಮಾರ್ಗವಾಗಿ
ಮಂಗಳೂರು ಭಾಗದಿಂದ ಬರುವ ವಾಹನಗಳು ಕಿನ್ನಿಮೂಲ್ಕಿಯ ಉಡುಪಿ ಸ್ವಾಗತಗೋಪುರ ಮಾರ್ಗವಾಗಿ ಬರುವ ಬದಲು ರಾ.ಹೆ.ಯಲ್ಲಿ ನೇರವಾಗಿ ಬಂದು ಅಂಬಲಪಾಡಿಯಾಗಿ ಆದಿಉಡುಪಿಯ ಕರಾವಳಿ ಜಂಕ್ಷನ್‌ ಮೂಲಕ ಮಣಿಪಾಲ -ಶಿವಮೊಗ್ಗದ ಕಡೆಗೆ ರಾ.ಹೆ. 169ಎ ಮೂಲಕ ಪ್ರಯಾಣಿಸಬಹುದಾಗಿದೆ.

3 ತಿಂಗಳಲ್ಲಿ ಲಭ್ಯ
ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಗರದ 15 ಕಡೆಗಳಲ್ಲಿ ಸ್ಮಾರ್ಟ್‌ ಟ್ರಾಫಿಕ್‌ ಜಂಕ್ಷನ್‌ಗಳನ್ನು ಮೂರು ತಿಂಗಳೊಳಗೆ ಅಳವಡಿಸಲಾಗುತ್ತದೆ. ಎಲ್ಲವೂ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ. ಅತ್ಯಾಧುನಿಕ ಕೆಮರಾ ಹಾಗೂ ಸಿಗ್ನಲ್‌ ಲೈಟ್‌ಗಳನ್ನು ಇದಕ್ಕಾಗಿ ಅಳವಡಿಸಲಾಗುತ್ತದೆ.
-ಕೆ.ರಘುಪತಿ ಭಟ್‌, ಶಾಸಕರು

ಸಮಯ ಉಳಿತಾಯ
ಹೆಚ್ಚಾಗಿ ವಾಹನಗಳು ಜೋಡುಕಟ್ಟೆಯಾಗಿ ಸಿಟಿ ಮಾರ್ಗವನ್ನು ಪ್ರವೇಶಿಸುತ್ತದೆ.
ಆದರೆ ಈ ಮಾರ್ಗ ಸುಮಾರು ವರ್ಷಗಳಿಂದ ಇದೆ. ಈ ರಸ್ತೆ ಉತ್ತಮವಾಗಿದೆ. ಯಾವುದೇ ಕಿರಿಕಿರಿ ಇಲ್ಲದೆ ಜನರು ಸಂಚರಿಸಬಹುದು. ಮುಖ್ಯವಾಗಿ ಇಲ್ಲಿ ತೆರಳುವುದರಿಂದ ಸಮಯ ಉಳಿತಾಯವಾಗಲಿದೆ.
-ಸುರೇಶ್‌,ಆಟೋ ರಿಕ್ಷಾ ಚಾಲಕ

ಪರ್ಯಾಯ ಮಾರ್ಗ
ಮಣಿಪಾಲ- ಶಿವಮೊಗ್ಗಕ್ಕೆ ಭಾಗಕ್ಕೆ ತೆರಳುವ ವಾಹನಗಳು ಅನಗತ್ಯವಾಗಿ ಜೋಡುಕಟ್ಟೆ, ಕೋರ್ಟ್‌ ರೋಡ್‌, ಡಯಾನ ಸರ್ಕಲ್‌, ಹನುಮಾನ್‌ ಸರ್ಕಲ್‌ ಹಾಗೂ ಸರ್ವಿಸ್‌ ಬಸ್‌ ನಿಲ್ದಾಣವಾಗಿ ನಗರಕ್ಕೆ ಬಂದು ಮತ್ತೆ ರಾ.ಹೆ. 169 ಎ ಮಾರ್ಗವಾಗಿ ಸೇರುತ್ತಿರುವುದು ಟ್ರಾಫಿಕ್‌ ದಟ್ಟನೆಯ ಪ್ರಮುಖ ಸಮಸ್ಯೆಗಳಲ್ಲೊಂದು. ಇದರ ಬದಲು ಉಡುಪಿ ಸಿಟಿಯಲ್ಲಿ ವ್ಯವಹಾರ ಇಲ್ಲದೆ ಬರುವ ವಾಹನಗಳು ಉಡುಪಿ ಸ್ವಾಗತಗೋಪುರದ ಎಡಕ್ಕೆ ತಾಗಿರುವ ಬ್ರಹ್ಮಗಿರಿ ಮಾರ್ಗವಾಗಿ (ಸ್ವಾಮಿ ವಿವೇಕಾನಂದ ರಸ್ತೆ, ನಾಯರ್‌ಕೆರೆ) ಅಥವಾ ಕರಾವಳಿ ಜಂಕ್ಷನ್‌ ಮಾರ್ಗವಾಗಿ ರಾ.ಹೆ.169ನ್ನು ಕಡಿಮೆ ಸಮಯದಲ್ಲಿ ಸೇರಬಹುದು. ಉಡುಪಿ ಕಿನ್ನಿಮೂಲ್ಕಿಯ ಸ್ವಾಗತಗೋಪುರದ ಬಲಕ್ಕೆ ಇರುವ ವಾಣಿಜ್ಯ ತೆರಿಗೆ ಕಚೇರಿ, ಅಬಕಾರಿ, ಅಗ್ನಿಶಾಮಕ ಕಚೇರಿಯ ಒತ್ತಿನಲ್ಲಿರುವ ನಾಯರ್‌ಕೆರೆ ಮಾರ್ಗವಾಗಿ ಬ್ರಹ್ಮಗಿರಿ ಸರ್ಕಲ್‌ ಮೂಲಕ ಸರ್ಕ್ನೂಟ್‌ ಹೌಸ್‌ ಮಾರ್ಗವಾಗಿ ಚಾಲಕರು ಯಾವುದೇ ಟ್ರಾಫಿಕ್‌ ಕಿರಿಕಿರಿ ಇಲ್ಲದೆ ತೆರಳಬಹುದು. ಅನೇಕ ವರ್ಷಗಳಿಂದ ಈ ಮಾರ್ಗ ಇದ್ದು. ಜನರು ಅರ್ಧ ಕಿ.ಮೀ. ದೂರ ಬರವಾಗಿ ಹೋಗಬೇಕೆಂಬ ಕಾರಣಕ್ಕೆ ಸಿಟಿ ಮಾರ್ಗವನ್ನು ಆಶ್ರಯಿಸುತಿದ್ದಾರೆ. ಆದರೆ ಈ ಮಾರ್ಗದಲ್ಲಿ ದ್ವಿಚಕ್ರ ಮತ್ತು ಕಾರುಗಳು ಯಾವುದೇ ಟ್ರಾಫಿಕ್‌ ದಟ್ಟನೆಯಿಲ್ಲದೆ ಆರಾಮವಾಗಿ ಸಾಗಬಹುದಾಗಿದೆ.

– ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next