Advertisement

ಕಾನೂನು ಸುವ್ಯವಸ್ಥೆಗೂ, ಕಲೆ ಸಂಸ್ಕೃತಿಗೂ ಸಣ್ಣ ಜಿಲ್ಲೆಗಳು ಸಹಕಾರಿ

08:50 AM Aug 24, 2017 | Team Udayavani |

ಉಡುಪಿ: ಸಣ್ಣ ಸಣ್ಣ ಜಿಲ್ಲೆಗಳು ರಚನೆಯಾದರೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುಕೂಲ ಎಂಬುದು ಅನುಭವಸಿದ್ಧ ವಿಷಯ. ಕೇವಲ ಇಷ್ಟಕ್ಕೇ ನಿಲ್ಲುವುದಿಲ್ಲ. ಕಾನೂನು ಸುವ್ಯವಸ್ಥೆ, ಕಲೆ, ಸಂಸ್ಕೃತಿ ಕ್ಷೇತ್ರಕ್ಕೂ ಇದರ ವಿಸ್ತಾರ ಹರಡಿದೆ. 
ಜಿಲ್ಲಾ ಕೇಂದ್ರದಲ್ಲಿ ಸಶಸ್ತ್ರ ಮೀಸಲು ಪಡೆ ಇತ್ಯಾದಿ ಸುರûಾ ಬಲವಿರುತ್ತದೆ.  ದೂರದೂರುಗಳಲ್ಲಿ ಗಲಭೆ ಸಂಭವಿಸಿದರೆ ಜಿಲ್ಲಾ ಕೇಂದ್ರದಿಂದ ಸುರûಾ ಪಡೆಗಳು ಹೋಗುವಾಗ ಕೈಮೀರುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ಜಿಲ್ಲಾಧಿಕಾರಿಯವರ ಮೇಲೆ ಮರಳು ಮಾಫಿಯಾ ಹಲ್ಲೆ ನಡೆಸಿದ ಸಂದರ್ಭವನ್ನು ನೆನಪಿಸಿಕೊಳ್ಳ ಬಹುದು. ಒಂದು ವೇಳೆ ಅವಿಭಜಿತ ದ.ಕ. ಜಿಲ್ಲೆಯಾಗಿದ್ದರೆ ಮಂಗಳೂರಿನಿಂದ ಪೊಲೀಸ್‌ ಬಲದ ಸಹಾಯ ಬೇಕಿದ್ದರೆ ಕನಿಷ್ಠ ಎರಡು ಗಂಟೆ ಕಾಯಬೇಕಿತ್ತು. ಪೊಲೀಸ್‌ ನೇಮಕಾತಿಯಂತಹ ಸಂದರ್ಭಗಳಲ್ಲಿಯೂ ಅನುಕೂಲಕರ. ಪೊಲೀಸ್‌ ಠಾಣಾ ಹೊಸ ಕಟ್ಟಡ, ಸಿಬಂದಿ ವಸತಿಗೃಹ ಮೊದಲಾದ ಮೂಲಭೂತ ಸೌಕರ್ಯಗಳ ಒದಗಣೆಗೂ ಜಿಲ್ಲೆ ರಚನೆ ಸಹಕಾರಿಯಾಗಿದೆ. ಹೊಸ ಠಾಣೆಗಳನ್ನು ರಚಿಸಲೂ ಇದು ಸಹಕಾರಿಯಾಗಿದೆ. 

Advertisement

ಸಾರ್ವಜನಿಕರು ದೂರುಗಳನ್ನು ನೇರವಾಗಿ ಎಸ್ಪಿಯವರಿಗೆ ನೀಡಬೇಕಾದರೆ ಹಿಂದೆ ಮಂಗಳೂರಿಗೆ ಹೋಗಬೇಕಿತ್ತು. ಈಗ ಹಾಗಲ್ಲ. ಹೆಚ್ಚೆಂದರೆ ಒಂದೆರಡು ಗಂಟೆಗಳ ಅವಧಿಯಲ್ಲಿ ಅವರು ಎಸ್ಪಿಯವರನ್ನು ಸಂಪರ್ಕಿಸಲು ಸಾಧ್ಯವಿದೆ. ಉನ್ನತಾಧಿಕಾರಿಗಳು ದೂರವಿದ್ದಷ್ಟೂ ಅವರು ಜನರಿಂದಲೂ ಸಹಜವಾಗಿ ದೂರ ಇರುತ್ತಾರೆ. ಉನ್ನತಾಧಿಕಾರಿಗಳು ಹತ್ತಿರವಿದ್ದಾಗ ಜನಸಾಮಾನ್ಯರಿಗೂ ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಕುದುರಲು ಸಾಧ್ಯವಾಗುತ್ತದೆ ಮತ್ತು ಕೈಕೆಳಗಿನ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಾಗ ಹೆಚ್ಚಿಗೆ ಜಾಗರೂಕತೆ ವಹಿಸುತ್ತಾರೆ. 

ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಇರುತ್ತದೆ. ಇಲಾಖೆಗೆ ಬರುವ ಅನುದಾನ ಉಡುಪಿ ಜಿಲ್ಲೆಗೂ ಅನ್ವಯವಾದ ಕಾರಣ ಇಲಾಖೆಯ ವಿವಿಧ ಯೋಜನೆಗಳಿಗೆ ಬಹಳಷ್ಟು ಸಹಕಾರಿಯಾಗಿದೆ. ಆರಂಭದಲ್ಲಿ ಕೆಲವೇ ಲಕ್ಷ ರೂ.ಗಳಿಗೆ ಮೀಸಲಾದ ಅನುದಾನ ಈಗ 50-60 ಲ.ರೂ. ವರೆಗೆ ತಲುಪಿದೆ. ಇದರಿಂದ ಅದೆಷ್ಟೋ ಪರಿಶಿಷ್ಟ ಜಾತಿ, ಪಂಗಡದ ಕಲಾವಿದರಿಗೆ ಅನುಕೂಲವಾಗಿದೆ. ಶಾಲೆಗಳಲ್ಲಿಯೂ ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜನೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುತ್ತವೆ. ರಾಜ್ಯ ಮಟ್ಟದ ಯಕ್ಷಗಾನ ಬಯಲಾಟ ಅಕಾಡೆಮಿ ಸ್ಥಾಪನೆಯಾದ ಅಂದಿನಿಂದ ಅಧ್ಯಕ್ಷರು, ಸದಸ್ಯರ ನೇಮಕಾತಿಯಲ್ಲಿ, ಪ್ರಶಸ್ತಿ ಆಯ್ಕೆಯಲ್ಲಿ ಪ್ರತ್ಯೇಕ ಜಿಲ್ಲೆಯಾದ ಕಾರಣ ನಿರ್ದಿಷ್ಟ ಪಾಲು ಸಿಗುತ್ತದೆ. ಎಷ್ಟೋ ಬಾಲ ಕಲಾವಿದರೂ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಪ್ರತಿಭೆಯನ್ನು ತೋರುತ್ತಿದ್ದಾರೆ. 

ಪೊಲೀಸ್‌ ಅಧೀಕ್ಷಕರ ಸೇವೆ
1. ಸವಿತಾ ಹಂದೆ (25-8-1997ರಿಂದ 4-7-1998)
2. ಡಾ|ಎಂ.ಎ.ಸಲೀಂ (4-7-1998ರಿಂದ 13-6-2000)
3. ಅಮೃತ್‌ಪಾಲ್‌ (16-6-2000ರಿಂದ 25-7-2003)
4. ಎಸ್‌.ಮುರುಗನ್‌ (25-7-2003ರಿಂದ 10-5-2006)
5. ಡಾ|ಸುಬ್ರಹ್ಮಣ್ಯೇಶ್ವರ ರಾವ್‌ (29-5-2006ರಿಂದ 8-10-2007)
6. ದೇವಜ್ಯೋತಿ ರೇ (10-10-2006ರಿಂದ 14-7-2008)
7. ಪ್ರವೀಣ್‌ ಮಧುಕರ್‌ ಪವಾರ್‌ (14-7-2008ರಿಂದ 24-3-2011)
8. ಡಾ| ವೈ.ಎಸ್‌.ರವಿಕುಮಾರ್‌ (25-03-2011ರಿಂದ 26-1-2012)
9. ಡಾ|ಬೋರಲಿಂಗಯ್ಯ ಎಂ.ಬಿ. (27-1-2012ರಿಂದ 1-8-2014)
10. ಪಿ.ರಾಜೇಂದ್ರಪ್ರಸಾದ್‌ (11-8-2014ರಿಂದ 1-1-2015)
11. ಕೆ.ಅಣ್ಣಾಮಲೈ  (1-1-2015ರಿಂದ 3-8-2016)
12. ಕೆ.ಟಿ. ಬಾಲಕೃಷ್ಣ (11-8-2016ರಿಂದ 10-8-2017)
13. ಡಾ| ಸಂಜೀವ ಎಂ. ಪಾಟೀಲ್‌ (10-8-2017ರಿಂದ)

– ಮಟಪಾಡಿ ಕುಮಾರಸ್ವಾಮಿ

Advertisement
Advertisement

Udayavani is now on Telegram. Click here to join our channel and stay updated with the latest news.

Next