Advertisement

ಸಣ್ಣ ಸಣ್ಣ  ವಿಷಯಗಳ‌ಲ್ಲಿರುವ ದೊಡ್ಡ ದೊಡ್ಡ ಸಂತೋಷಗಳು…

03:45 AM Feb 17, 2017 | |

ಒಂದು ಶುಕ್ರವಾರ ಸಂಜೆ, ಮೈಸೂರಿನಿಂದ ಬೆಂಗಳೂರಿಗೆ ಹೋಗುವ ರೈಲಿನಲ್ಲಿ ಇಬ್ಬರು ಯುವಕರು ಎದುರು ಬದುರು ಕೂತು ಹೋಗ್ತಾ ಇರ್ತಾರೆ. ಒಬ್ಬ ತಾನು ದೊಡ್ಡ ಸಂಗೀತ ನಿರ್ದೇಶಕ ಆಗಬೇಕು ಅಂತ, ಇದ್ದ ಕೆಲಸವನ್ನು ಬಿಟ್ಟು, ಮನೆಯವರ ಮಾತು ಕೇಳದೇ, ಆ ರೈಲಿನಲ್ಲಿ ಬೆಂಗಳೂರಿನ ದಾರಿ ಹಿಡಿದವನಾದರೆ, ಇನೊಬ್ಬ ಮೈಸೂರಿನಲ್ಲಿ ಕೆಲಸದಲ್ಲಿದ್ದುಕೊಂಡು ತನ್ನ ದಿನದ ಕೆಲಸವನ್ನೆಲ್ಲ ಮುಗಿಸಿ, ವಾರಾಂತ್ಯವನ್ನು ತನ್ನ ಮನೆಯವರೊಂದಿಗೆ ಕಳೆಯಲು ಹೊರಟಿರುತ್ತಾನೆ.

Advertisement

ಹೀಗೆ, ಇಬ್ಬರು ಮಾತನಾಡಿಕೊಂಡು ಪರಿಚಯ ಮಾಡಿಕೊಳ್ಳುತ್ತಾರೆ. ಕೆಲಸದಲ್ಲಿರುವ ಹುಡುಗ ಸಂಗೀತ ನಿರ್ದೇಶಕನಾಗಬೇಕು ಅಂತಾ ಹೊರಟವನ ಬಳಿ ಕೇಳುತ್ತಾನೆ, “ಯಾಕೆ ನೀವು ಅಷ್ಟು ಒಳ್ಳೆಯ ಕೆಲಸ ಬಿಟ್ಟು, ಈ ದಾರಿ ಹಿಡಿದಿದ್ದೀರಿ’ ಅಂತ, ಅದಕ್ಕೆ ಅವನು, “ನನಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು, ಎತ್ತರದ ಹಂತಕ್ಕೆ ಹೋಗಬೇಕು, ಸಾವಿರಾರು ಜನರ ಮನಸ್ಸು ಗೆಲ್ಲಬೇಕು, ನನ್ನ ಸಂಗೀತಕ್ಕೆ ಜನ ಹುಚ್ಚೆದ್ದು ಕುಣಿಯಬೇಕು, ಅನ್ನೋ ಆಸೆ ಇದೆ, ಅದಕ್ಕೋಸ್ಕರ ಈ ಪಯಣ’ ಅಂತಾನೆ. ಹಾಗೆಯೇ ಅವನು ಕೆಲಸದಲ್ಲಿರುವ ಹುಡುಗನಿಗೆ ಮರು ಪ್ರಶ್ನೆ ಹಾಕುತ್ತಾನೆ. “ನಿಮಗೆ ಇದೇ ತರಹ ಯಾವುದೇ ಗುರಿಗಳು ಇಲ್ಲವಾ?’ ಅಂತ. ಅದಕ್ಕೆ ಅವನು, “ನನಗೂ ಇದೆ, ಈಗ ಇರುವ ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಹೋಗಬೇಕು, ನನ್ನ ತಂಗಿಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಬೇಕು, ನನ್ನ ತಂದೆ-ತಾಯಿಯನ್ನು ಅವರು ನನ್ನನ್ನು ನೋಡಿಕೊಂಡಿದ್ದಕ್ಕಿಂತ ಚೆನ್ನಾಗಿ ನೋಡಿಕೊಳ್ಳಬೇಕು, ನಾನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುವಂತಹ ಹುಡುಗಿಯನ್ನು ಮದುವೆ ಆಗಿ, ನಮ್ಮ ಬಂಧು-ಬಳಗದವರಲ್ಲಿ ಸೈ ಎನಿಸಿಕೊಳ್ಳಬೇಕು ಅಂತ.

ಇಲ್ಲಿ ಗಮನಿಸಬೇಕಾದ ವಿಚಾರ ಒಂದೇ, ಕೆಲವರು ಏನೋ ಒಂದು ದೊಡ್ಡ ಸಾಧನೆ ಮಾಡಬೇಕು ಅಂತಾ ಹೇಳಿ ತಮ್ಮ ಸುತ್ತಮುತ್ತಲಿನವರನ್ನು ಮರೆಯುತ್ತಿದ್ದಾರೆ. ಸಾವಿರಾರು ಜನರ ಮನಸ್ಸನ್ನು ಗೆಲ್ಲಲು ಹೊರಟವನಿಗೆ ತನ್ನ ತಂದೆ-ತಾಯಿಯ ಮನಸ್ಸಿಗಾದ ಗಾಯ ಕಾಣುವುದಿಲ್ಲ. ನಾವೂ ಹೀಗೆ ಯಾವುದು, ಯಾವುದರಲ್ಲೋ ಸಂತೋಷವನ್ನು ಹುಡುಕುತ್ತೇವೆ, ಆದರೆ ಸಂತೋಷ ಅನ್ನೋದು ಸಣ್ಣ ಸಣ್ಣ ವಿಷಯಗಳಲ್ಲಿ ಇರುತ್ತೆ, ಅದನ್ನು ನೋಡುವ ಕಣ್ಣು ಬೇಕು ಅಷ್ಟೇ. ನಾವು ಮಾಡುವ ಕೆಲಸಕ್ಕೆ ಇಂತಹದ್ದೇ ಫ‌ಲಿತಾಂಶ ಬರಬೇಕು ಅಂತ ನಾವು ಮೊದಲೇ ನಿರ್ಧಾರ ಮಾಡಿ ಕೆಲಸ ಪ್ರಾರಂಭಿಸುತ್ತೇವೆ, ಆ ಫ‌ಲಿತಾಂಶ ಬೇರೆ ಆದಾಗ ನಮಗೆ ಹಿಡಿಸುವುದಿಲ್ಲ. ಅದಕ್ಕೇ ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿದ್ದು, ಕರ್ಮವನ್ನು ಮಾಡು, ಫ‌ಲಾಫ‌ಲಗಳನ್ನು ನನಗೆ ಬಿಡು ಅಂತ !

ಹಾಗಾದರೆ, ಜೀವನದಲ್ಲಿ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳುವುದು ತಪ್ಪೆ? ಅಂತಾ ಕೇಳಿದರೆ, ನಿಜವಾಗ್ಲೂ ತಪ್ಪಲ್ಲ , ಆದರೆ, ಆ ಗುರಿ ಸಾಧನೆಯ ಹಾದಿಯಲ್ಲಿ ನಮ್ಮವರನ್ನು ದೂರಮಾಡಿಕೊಳ್ಳಬಾರದು. ನಮ್ಮವರೊಂದಿಗೆ ಚೆನ್ನಾಗಿದ್ದುಕೊಂಡು ಆ ಗುರಿ ತಲುಪಿದರೆ ಅದುವೇ ನಿಜವಾದ ಯಶಸ್ಸು.

ಇನ್ನೂ ಕೆಲವರು ಇದ್ದಾರೆ, ಇನ್ನೊಬ್ಬರನ್ನು ನೋಡಿ ಕೊರಗುವವರು. ಅವನು ಬಾರಿ ಸಾಧನೆ ಮಾಡಿದ, ನಾನೇನು ಮಾಡಲಿಲ್ಲ, ದಿನಾ ಆಫೀಸಿಗೆ ಹೋದೆ ಬಂದೆ, ಇದೇ ಆಯ್ತು ಅಂತ. ಇದು ಹೇಗಾಯ್ತು ಅಂದ್ರೆ ಕಾಲಿಲ್ಲದವನಿಗೆ ಕಾಲಿನ ಚಿಂತೆ, ಕಾಲಿದ್ದವನಿಗೆ ಶೂವಿನ ಚಿಂತೆ ಅಂದ ಹಾಗಾಯ್ತು. ನಮಗೆ ಏನು ಸಿಕ್ಕಿದೆಯೋ ಅದರಲ್ಲಿ ಸಂತೋಷವನ್ನು ಕಾಣಲು ಕಲಿಯಬೇಕು. ಎಲ್ಲೋ ದೂರದಲ್ಲಿದ್ದುಕೊಂಡು ದಿನಕ್ಕೋ, ವಾರಕ್ಕೋ ಒಂದು ಸಾರಿ ಫೋನ್‌ ಮಾಡಿ ಮನೆಯವರೊಂದಿಗೆ ಮಾತನಾಡುವವರಿಗಿಂತ, ದಿನಾ ಬೆಳ್ಳಗ್ಗೆ ಆಫೀಸಿಗೆ ಹೋಗಿ ಸಂಜೆ ಮನೆಗೆ ಬಂದು, ತಂದೆ ತಾಯಿ ಜೊತೆ ಮಾತನಾಡಿಕೊಂಡು, ಮಕ್ಕಳ ಜೊತೆ ಆಟವಾಡಿಕೊಂಡಿರುವುದರಲ್ಲೇ ಸಂತೋಷ, ನೆಮ್ಮದಿ ಜಾಸ್ತಿ.

Advertisement

ಸಂಜೆ ಕೆಲಸ ಮುಗಿಸಿ ಬರುವಾಗ, ಮಲ್ಲಿಗೆ ತಂದು ಹೆಂಡತಿಗೆ ಕೊಟ್ಟಾಗ ಅವಳ ಮುಖದಲ್ಲಿ ಕಾಣುವ ನಗು, ಮೊದಲ ಸಂಬಳ ತಂದೆಯ ಕೈಗೆ ನೀಡಿದಾಗ ಅವರ ಮೊಗದಲ್ಲಿ ಕಾಣುವ ಖುಷಿ, ಭಿಕ್ಷುಕನಿಗೆ ಹಣ ನೀಡಿದಾಗ ಅವನ ಮುಖದಲ್ಲಿ ಅರಳುವ ನಗು, ಯಾರಿಗಾದ್ರೂ ಸಹಾಯ ಮಾಡಿದಾಗ ಅವರು ಹೇಳುವ ಧನ್ಯವಾದ ಇನ್ನೂ ಅನೇಕ, ಇವೆಲ್ಲ ಸಣ್ಣ ಸಣ್ಣ ವಿಷಯದಲ್ಲಿರುವ ದೊಡ್ಡ ದೊಡ್ಡ ಸಂತೋಷಗಳು.

ಆ ಕಥೆಯನ್ನು ಅರ್ಧಕ್ಕೆ ನಿಲ್ಲಿಸಿದನಲ್ಲಾ ಮುಂದೆ ಹೇಳ್ತೀನಿ ಕೇಳಿ. ಕೆಲಸದಲ್ಲಿದ ಹುಡುಗನ ಮಾತನ್ನು ಕೇಳಿದ ಸಂಗೀತ ನಿರ್ದೇಶಕ  ಪುನಃ ಮೈಸೂರಿಗೆ ಬಂದು, ಒಂದು ಒಳ್ಳೆಯ ಕೆಲಸಕ್ಕೆ ಸೇರಿ, ಕೆಲಸದ ಜೊತೆ ಜೊತೆಗೆ ಸಂಗೀತ ಸಾಧನೆಯನ್ನು ಮಾಡಿ ದೊಡ್ಡ ಸಂಗೀತಗಾರನಾಗುತ್ತಾನೆ.

ನಾವು ಬಾಳುತ್ತಿರುವ ಒಂದು ಸಣ್ಣ ಜೀವನ ಇನ್ನೊಬ್ಬರ ಕನಸಾಗಿರುತ್ತದೆ. ತೆರೆಯ ಮೇಲೆ ಕಾಣುವ ಸಿನೆಮಾ ಹೀರೋಗಳಾಗುವ ಬದಲು, ನಮ್ಮ ಜೀವನವೆಂಬ ಕಥೆಗೆ ನಾವೇ ಹೀರೋಗಳಾಗೋಣ. ಯೋಚಿಸಿ ನೋಡಿ. 

– ಗಣೇಶ ಬರ್ವೆ ಮಣೂರು
ಇನ್‌ಫೋಸಿಸ್‌ ಉದ್ಯೋಗಿ

Advertisement

Udayavani is now on Telegram. Click here to join our channel and stay updated with the latest news.

Next