Advertisement

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

01:43 PM Sep 20, 2024 | Team Udayavani |

ಉದಯವಾಣಿ ಸಮಾಚಾರ
ಚಿತ್ರದುರ್ಗ: 21ನೇ ಶತಮಾನದ ಭಾರತ ಯಾವುದೇ ಎತ್ತರವನ್ನು ಸಾಧಿಸುವುದಾದರೂ ಅದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ
ಕೈಗಾರಿಕೆಗಳ ಯಶಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಂಸದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.

Advertisement

ನಗರದ ಕೈಗಾರಿಕಾ ವಲಯದಲ್ಲಿರುವ ಕೇಂದ್ರ ಸರ್ಕಾರದ ಎಂಎಸ್‌ಎಂಇ ಇಲಾಖೆಯ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಿಂದ ನಡೆಯುತ್ತಿರುವ ಕೇಂದ್ರೀಯ ಹಂಜಿ ಕಾರ್ಯಾಗಾರಕ್ಕೆ ಭೇಟಿ ನೀಡಿ ವೀಕ್ಷಿಸಿದ ನಂತರ ಅವರು ಮಾತನಾಡಿದರು.

ನಮ್ಮ ದೇಶದ ರಫ್ತು ಪ್ರಮಾಣ ಹೆಚ್ಚಾಗಲು ಮತ್ತು ಭಾರತದ ಉತ್ಪನ್ನಗಳು ಹೊಸ ಮಾರುಕಟ್ಟೆಗಳನ್ನು ತಲುಪಲು ಭಾರತದ ಎಂಎಸ್‌ಎಂಇ ವಲಯ ಬಲಿಷ್ಠವಾಗಬೇಕಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಭಾರತದ ಬೆಳವಣಿಗೆಯ ಪ್ರಯಾಣದ ಬಹುದೊಡ್ಡ ಆಧಾರಸ್ತಂಭವಾಗಿದೆ. ಈ ವಲಯವು ಭಾರತದ ಆರ್ಥಿಕತೆಯ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿದೆ. ಈ ವಲಯವನ್ನು ಬಲಪಡಿಸುವುದು ಇಡೀ ಸಮಾಜವನ್ನು ಬಲಪಡಿಸಿದಂತಾಗುತ್ತದೆ. ಈ
ಕಾರಣದಿಂದಾಗಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರದ ಅತ್ಯುನ್ನತ ಆದ್ಯತೆಗಳಲ್ಲಿ ಒಂದಾಗಿ ಈ ವಲಯವನ್ನು ನೋಡುತ್ತಿದೆ ಎಂದರು.

ಈ ವಲಯವನ್ನು ಬಲಪಡಿಸಲು ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅಗ್ರಪಾಲನ್ನು ಒದಗಿಸುತ್ತಿದೆ. ಸುಮಾರು 11 ಕೋಟಿಗೂ ಹೆಚ್ಚು ಜನರು ಈ ವಲಯದೊಂದಿಗೆ ಸಂಪರ್ಕ ಹೊಂದಿದ್ದಾರೆ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಈ ವಲಯವನ್ನು ಉತ್ತೇಜಿಸುವ ಸಲುವಾಗಿ ಅನೇಕ ರಿಯಾಯಿತಿ ಯೋಜನೆಗಳನ್ನು ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆಯ ಮೂಲಕ ನೀಡಿದ್ದರ ಪರಿಣಾಮವಾಗಿ ವಲಯ ಈಗ ಚೇತರಿಸಿಕೊಂಡಿದೆ ಎಂದು ತಿಳಿಸಿದರು.

ಇಡೀ ದಕ್ಷಿಣ ಭಾರತದಲ್ಲಿ ಕರ್ನಾಟಕದ ಚಿತ್ರದುರ್ಗ ಮತ್ತು ಕೇರಳದಲ್ಲಿ ಮಾತ್ರ ಕೇಂದ್ರೀಯ ಹಂಜಿ ಕಾರ್ಯಾಗಾರಗಳು
ಕಾರ್ಯನಿರ್ವಹಿಸುತ್ತಿವೆ. ಚಿತ್ರದುರ್ಗದ ಹಂಜಿ ಕಾರ್ಯಾಗಾರದಲ್ಲಿ ಸುಮಾರು 90 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸುಮಾರು 5 ಎಕರೆ ಪ್ರದೇಶದಲ್ಲಿ 1995ರಲ್ಲಿ ಪ್ರಾರಂಭವಾದ ಈ ಘಟಕ ಪ್ರಸ್ತುತ ಪ್ರತಿ ವರ್ಷ 18-20 ಕೋಟಿ
ರೂ. ವಹಿವಾಟು ಹೊಂದಿದೆ ಎಂದು ಪ್ರೊಡಕ್ಷನ್‌ ಉಸ್ತುವಾರಿ ರಮೇಶ್‌, ಸಂಸದರಿಗೆ ಮಾಹಿತಿ ನೀಡಿದರು. ಹಂಜಿ ಕಾರ್ಯಾಗಾರದ ಸಹಾಯಕ ನಿರ್ದೇಶಕರು, ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advertisement

ಮೇಲ್ದರ್ಜೆಗೇರಿಸಲು ಕ್ರಮ
ಹಂಜಿ ಕಾರ್ಯಾಗಾರದಲ್ಲಿ ತಯಾರಾಗುವ ಖಾದಿ ಕಚ್ಚಾವಸ್ತು ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಿಗೆ ವಿತರಣೆಯಾಗುತ್ತದೆ. ನಮ್ಮ ದೇಶದ ತ್ರಿವರ್ಣ ಧ್ವಜ ತಯಾರಾಗುವ ಗರಗ ಗ್ರಾಮಕ್ಕೆ ಹಾಗೂ ಹುಬ್ಬಳ್ಳಿಯ ಬೆಂಗೇರಿಗೂ ಸಹ ಇಲ್ಲಿಂದಲೇ ಖಾದಿ ನೂಲು ಸರಬರಾಜಾಗುತ್ತದೆ.

ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ನಿವೃತ್ತಿ ವೇತನ ಇಲ್ಲ, ಇನ್ನುಳಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗುತ್ತಿವೆ ಎಂದು ಸಿಬ್ಬಂದಿಗಳು ಸಂಸದರಿಗೆ ವಿವರಿಸಿದರು. ನಾವು ರಾತ್ರಿ ಪಾಳದಲ್ಲಿ ಕೂಡ ಕೆಲಸ ಮಾಡುತ್ತಿದ್ದೇವೆ. ನಮಗೆ ಸಿಗಬೇಕಾದ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ದೊರೆತದ್ದೇ ಆದರೆ ಇನ್ನೂ ಹುಮ್ಮಸ್ಸಿನಿಂದ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಕಾರಜೋಳ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರನ್ನು ಒಂದು ಬಾರಿ ಈ ಘಟಕಕ್ಕೆ ಕರೆತರುತ್ತೇನೆ. ಈ ಘಟಕವನ್ನು ಮೇಲ್ದರ್ಜೇ ಗೇರಿಸಲು
ಅಗತ್ಯ ಕ್ರಮ ಕೈಗೊಳ್ಳಲು ಅವರ ಮನವೊಲಿಸುತ್ತೇನೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next