Advertisement

ಕಾಂಗ್ರೆಸ್‌ ಇಲ್ಲದ ಎಸ್‌.ಎಂ.ಕೃಷ್ಣ  ಬಿಗ್‌ ಜೀರೋ: ಮೊಯ್ಲಿ

10:39 AM Apr 28, 2017 | |

ತುಮಕೂರು: ಕಾಂಗ್ರೆಸ್‌ ಇಲ್ಲದ ಎಸ್‌.ಎಂ.ಕೃಷ್ಣ ಬಿಗ್‌ ಜೀರೋ ಎಂದು ನಂಜನಗೂಡು ಮತ್ತು ಚಾಮರಾಜನಗರ ಉಪಚುನಾವಣೆಯಲ್ಲಿ  ಮತದಾರರು ತೋರಿಸಿಕೊಟ್ಟಿದ್ದಾರೆಂದು ಮಾಜಿ ಮುಖ್ಯಮಂತ್ರಿ ಹಾಗೂ ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.

Advertisement

ನಗರದ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಗುರುವಾರ ಭೇಟಿ ನೀಡಿ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಬಿಜೆಪಿ ತೊರೆದ ಎಸ್‌.ಎಂ.ಕೃಷ್ಣ ಒಂದು ಚುನಾವಣೆಯನ್ನು ಹೊರತುಪಡಿಸಿದರೆ, ಉಳಿದಂತೆ ನೇರ ಚುನಾವಣೆಯಿಂದ ರಾಜಕಾರಣ ಮಾಡಿದವರಲ್ಲ. ವಿಧಾನಪರಿಷತ್‌, ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಪಾಲರಂತಹ ಹುದ್ದೆ ಅನುಭವಿಸಿದವರು ಎಂದು ಲೇವಡಿ ಮಾಡಿದರು.

ಮುಂದಿನ ಚುನಾವಣೆಗಳಲ್ಲಿ ಪಕ್ಷವನ್ನು ಸಂಘಟಿಸಲು ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ರಾಹುಲ್‌ಗಾಂಧಿ ಪಕ್ಷಕ್ಕೆ ಅಗತ್ಯವಿದೆ. ಅವರನ್ನು ವಿರೋಧಿಸುವ ಇತರೆ ಹಿರಿಯ ನಾಯಕರು ಪಕ್ಷಕ್ಕೆ ತಮ್ಮ ಕೊಡುಗೆ ಎನು ಎಂದು ಆತ್ಮಾವಲೋಕನ  ಮಾಡಿಕೊಳ್ಳಬೇಕು ಎಂದರು.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರ ಫ‌ಲವಾಗಿಯೇ ಅಲ್ಲಿ ಕಾಂಗ್ರೆಸ್‌ ಸೋಲು  ಕಾಣಬೇಕಾಯಿತು. ಆದರೆ, ಗೋವಾ, ಮಣಿಪುರ ಮತ್ತು ಪಂಜಾಬ್‌ನಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಿದ್ದು, ಗೆಲುವು ಪಡೆಯಲು ಸಹಕಾರಿಯಾಗಿತು ಎಂದು ಅಭಿಪ್ರಾಯಪಟ್ಟರು.

Advertisement

ಇವಿಎಂ ಬಗ್ಗೆ ಎದ್ದಿರುವ  ಕಲ್ಪನೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಎಲೆಕ್ಟ್ರಾನಿಕ್‌ ವೋಟಿಂಗ್‌ ಮಿಷನ್‌ ಬಗ್ಗೆ ಗೊತ್ತಿಲ್ಲದೆ ಮಾತನಾಡುವುದು ಬೇಡ. ಎರಡು ತಜ್ಞರ ಸಮಿತಿಯಿಂದ ಪರಿಶೀಲನೆ ನಡೆಸಿ ಇದ್ದ ಅನುಮಾನವನ್ನು ಬಗೆಹರಿಸಲಾಗಿದೆ. ತಂತ್ರಜಾnನದಿಂದಾಗಿ ಇಂದು ಚುನಾವಣೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದರು.

ಬಿಜೆಪಿ ರಾಜಾÂಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಚಾಮರಾಜನಗರ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ಪ್ರಬಲ ಲಿಂಗಾಯಿತ ಕೋಮುಗಳ ಪರ ನಿಂತು, ಅದೇ ಸಮುದಾಯದ ಸಣ್ಣ ಪುಟ್ಟ ಸಮುದಾಯಗಳನ್ನು ಕಡೆಗಣಿಸಿದ್ದರು. ಇದರ ಫ‌ಲವಾಗಿ ಆ ವರ್ಗದಲ್ಲಿಯೇ ಇರುವ ಇತರೆ ಅಲ್ಪಸಂಖ್ಯಾತ ವರ್ಗಗಳು ಒಂದಾಗಿ ಯಡಿಯೂರಪ್ಪ ಅವರ ವಿರುದ್ಧ  ನಿಂತಿದ್ದರಿಂದ ಕಾಂಗ್ರೆಸ್‌ ಗೆಲುವು ಸಾಧ್ಯವಾಯಿತು. ಎಸ್‌ಸಿ, ಎಸ್ಟಿ ಮತ್ತು ಲಿಂಗಾಯತ್‌ ಕಾಂಬಿನೇಷನ್‌ಗೆ ಜನ ಬೆಲೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ಸರ್ಕಾರ ತಲೆಕೆಡಿಸಿಕೊಳ್ಳಬೇಕಿಲ್ಲ: ಎತ್ತಿನ ಹೊಳೆ ಯೋಜನೆಯಿಂದ ದಕ್ಷಿಣ ಕನ್ನಡ ಜನರಿಗೆ ಯಾವುದೇ ತೊಂದರೆಯಾಗದು. ಇದು ನೇತ್ರಾವತಿ ತಿರುವು ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಇದು ಮಳೆಗಾಲದಲ್ಲಿ ನಾಲ್ಕು ತಿಂಗಳ ಕಾಲ ಮಾತ್ರ ಕುಮಾರಧಾರ ನದಿಪಾತ್ರದಲ್ಲಿ ಬೀಳುವ ಮಳೆಯ ನೀರನ್ನು ಸಂಗ್ರಹಿಸಿ ಬಯಲು ಸೀಮೆಗೆ ಪಂಪ್‌ ಮಾಡಲಾಗುತ್ತಿದೆ. ಸಮುದ್ರದ ಪಾಲಾಗುವ ನೀರಿನ ಶೇ.10ರಷುn ನೀರನ್ನು ಈ ಯೋಜನೆಗೆ ಬಳಕೆ ಮಾಡುತ್ತಿಲ್ಲ. ಕೆಲವರು ವಿರೋಧ ಮಾಡುವುದಕ್ಕೆ ಇರುವಂತಹವರು, ಪರಿಸರ ಮತ್ತೂಂದರ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸರಕಾರ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು  ಸಲಹೆ ನೀಡಿದರು.

ಶ್ರೀಗಳಿಂದ ಆಶೀರ್ವಾದ: ಶ್ರೀ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದ ವೀರಪ್ಪ ಮೊಯ್ಲಿ ಕೆಲಹೊತ್ತು ಸ್ವಾಮೀಜಿಯವರೊಂದಿಗೆ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ  ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ, ಮಾಜಿ ಅಧ್ಯಕ್ಷ ಎಸ್‌.ಷಫೀಅಹಮದ್‌, ಬಿಬಿಎಂಪಿ ಮಾಜಿ ಮೇಯರ್‌ ಪುಟ್ಟರಾಜು ಮತ್ತಿತರರಿದ್ದರು.

ಡಿಸೆಂಬರ್‌ ವೇಳೆಗೆ ಎತ್ತಿನ ಹೊಳೆ
ಈ ವರ್ಷದ ಡಿಸೆಂಬರ್‌ ವೇಳೆಗೆ ಎತ್ತಿನಹೊಳೆ ಯೋಜನೆ ನೀರು ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಯಲಿದೆ ಯೋಜನೆಗೆ ಎಲ್ಲಾ ಅಡೆತಡೆ ನಿವಾರಣೆಯಾಗಿದ್ದು, ಈಗಾಗಲೇ ಯೋಜನೆ ಕಾಮಗಾರಿ ಆರಂಭವಾಗಿದೆ. ಹಸಿರು ಪೀಠದಲ್ಲಿ ಬಪರ್‌ ಡ್ಯಾಂ ಜಾಗದಲ್ಲಿ ಮರಗಳನ್ನು ಕಟಾವು ಮಾಡುವ ಬಗ್ಗೆ ವ್ಯಾಜ್ಯ ಇದ್ದು, ಸದ್ಯದಲ್ಲಿಯೇ ಮುಕ್ತಾಯಗೊಳ್ಳುವ ವಿಶ್ವಾಸವಿದೆ.

ಎತ್ತಿನ ಹೊಳೆ ಯೋಜನೆ ಕಾವೇರಿ ಮತ್ತು ಕೃಷ್ಣ ಕೊಳ್ಳಗಳ ನಡುವೆ ಬರುವ ಒಂದು ವಿಶಿಷ್ಟ ಯೋಜನೆ. ಈಗಾಗಲೇ ರಾಜ್ಯ ಸರ್ಕಾರ ಕಳೆದ ವರ್ಷ ಈ ಯೋಜನೆಗೆ 3500 ಕೋಟಿ ಮತ್ತು ಪ್ರಸಕ್ತ ಸಾಲಿನಲ್ಲಿ 4000 ಕೋಟಿ ರೂ ಮೀಸಲಿರಿಸಿದೆ. ನಾಲೆಯ ಕೆಲಸ ಆರಂಭವಾಗಿದ್ದು, ಹೊಸನಗರದಿಂದ ಪೈಪ್‌ಲೈನ್‌ ಮೂಲಕ ಮಧ್ಯ ಕರ್ನಾಟಕದ 7 ಜಿಲ್ಲೆಗಳ 43 ತಾಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆಯಾಗಿದೆ. ಸದರಿ ಯೋಜನೆಯಿಂದ ಒಂದು ಜಿಲ್ಲೆಯ ಕನಿಷ್ಠ 30-40 ಕೆರೆಗಳನ್ನು ತುಂಬಿಸುವ ಆಶಯ ಹೊಂದಲಾಗಿದೆ. ಎತ್ತಿನ ಹೊಳೆ ಯೋಜನೆಯಿಂದ‌ ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ಜನರಿಗೆ ಶಾಶ್ವತ ಕುಡಿಯುವ ನೀರು ದೊರಕಿದಂತಾಗುತ್ತದೆ. ಬೆಂಗಳೂರು ನಗರದ ಪ್ರಮುಖ ಕೆರೆಗಳಾದ ಯಲಹಂಕ ಮತ್ತು ಹೆಸರುಘಟ್ಟ ಕೆರೆಗಳಿಗೆ ನೀರು ಹರಿಯಲಿದೆ. ಈ ಜಿಲ್ಲೆಗಳಲ್ಲಿರುವ 9 ನದಿಗಳೂ ಸಹ ಪುನಶ್ಚೇತನಗೊಳ್ಳಲಿವೆ. ಬಯಲು ಸೀಮೆಗೆ ನೀರು ತರಲು ಇದಕ್ಕಿಂತ ಉತ್ತಮ ಯೋಜನೆ ಮತ್ತೂಂದಿಲ್ಲ ಎಂದು ನುಡಿದರು.
 

Advertisement

Udayavani is now on Telegram. Click here to join our channel and stay updated with the latest news.

Next