Advertisement

ಯಕ್ಷ ಸೇವಕನಿಗೆ ಅರುವತ್ತರ ಸಂಭ್ರಮ

04:05 PM Jul 26, 2019 | mahesh |

ಒಂದು ವಿಸ್ಮ ಯ, ಒಂದು ಕಲೆ, ಸಾಹಿತ್ಯ,ಸಂಸ್ಕೃತಿ, ಸಂಘಟನೆ, ಜ್ಯೋತಿಷ, ಮಿಲಿಟರಿ,ಸಹೃದಯಿ ಮನಸ್ಸು, ತೋಟಗಾರಿಕೆ, ಸಂಶೋಧನೆ, ಸಂಗ್ರಹಣೆ ಎಲ್ಲವೂ ಆಗಿರುವ ಒಂದು ವಿಶಿಷ್ಟ ಶಕ್ತಿ ಮಧುಕರ ಭಾಗವತರು. ಅವರು ಭಾಗವತರಲ್ಲ. ಆದರೆ ಎಂತಹ ಭಾಗವತರನ್ನೂ ನಿರ್ದೇಶಿಸಬಲ್ಲ ಸಮರ್ಥ. ಅವರ ಹಿಂದಿನ ಅನೇಕ ತಲೆಮಾರುಗಳು, ಅವರ ಅಜ್ಜ, ಮುತ್ತಜ್ಜ ಎಲ್ಲರೂ ಭಾಗವತರು, ಹಿಮ್ಮೇಳವಾದನ ಪ್ರವೀಣರು, ವೇಷಧಾರಿಗಳು. ಸುಮಾರು 150 ವರುಷಗಳ ಇತಿಹಾಸವಿದ್ದ ಪಣಂಬೂರು ಮೇಳವನ್ನು ಇವರ ಕುಟುಂಬದ ಹಿರಿಯರೇ ನಡೆಸುತ್ತಿದ್ದುದು ಮಾತ್ರವಲ್ಲದೆ ಸ್ವತಃ ಕಲಾವಿದರಾಗಿ ಇದ್ದವರು. ಇವರ ಮನೆ ಭಾಗವತರ ಮನೆ ಎಂದೇ ಪ್ರಸಿದ್ಧಿ.

Advertisement

ಹಿರಿಯರ ಎಲ್ಲ ಪ್ರತಿಭೆಗಳ ವಂಶವಾಹಿಗಳು ಮಧುಕರ ಭಾಗವತರಲ್ಲಿ ಸಮ್ಮಿಲಿತಗೊಂಡವು. ಬಾಲ್ಯದಲ್ಲೇ ಯಕ್ಷಗಾನವನ್ನು ಶ್ರೀರಾಮ ಮಾಸ್ಟರ್‌ ಅವರಿಂದ ಕಲಿತು 11ನೇ ವಯಸ್ಸಿನಲ್ಲಿ ಪಣಂಬೂರು ಶ್ರೀ ನಂದನೇಶ್ವರ ಯಕ್ಷಗಾನ ಮಿತ್ರ ಮಂಡಳಿಯಲ್ಲಿ ಗೆಜ್ಜೆ ಕಟ್ಟಿದರು. ಹಿರಿಯ ಅಗರಿ ಭಾಗವತರು, ನೆಡ್ಲೆ, ದಿವಾಣ, ಕೋಳ್ಯೂರು, ಸಾಮಗ ಮೊದಲಾದ ಯಕ್ಷ ದಿಗ್ಗಜರ ಕೃಪೆಗೆ ಒಳಗಾದರು. ಹಿರಿಯರಾದ ಶ್ರೀರಾಮ ಐತಾಳ, ಪರಮೇಶ್ವರ ಐತಾಳ, ವೆಂಕಟ್ರಾ¿å ಐತಾಳ, ಶ್ರೀಧರ ಐತಾಳ, ಗೋಪಾಲ ಮಾಸ್ಟರ್‌ ಅವರ ಮಾರ್ಗದರ್ಶನದಲ್ಲಿ ಭರವಸೆಯ ಕಲಾವಿದನಾಗಿ ಮೂಡಿಬಂದರು. ಶಿಶುಪಾಲ, ಅತಿಕಾಯ, ಇಂದ್ರಜಿತು ಕಾಳಗದ ಲಕ್ಷ್ಮಣ, ಹನುಮಂತ, ವ್ಯಾಘ್ರಾಸುರ, ಗಜಾಸುರ ಮುಂತಾದ ವೈವಿಧ್ಯಮಯ ಪಾತ್ರಗಳಲ್ಲಿ ಮಿಂಚಿದರು.

18ರ ವಯಸ್ಸಿನಲ್ಲಿ ಅಟೋಮೊಬೈಲ್‌ ಡಿಪ್ಲೊಮಾ ಪೂರೈಸಿ ಭಾರತೀಯ ವಾಯುಸೇನೆ ಸೇರಿದರು. ರಜಾದಿನಗಳಲ್ಲಿ ಊರಿಗೆ ಬಂದಾಗಲೆಲ್ಲ ಯಕ್ಷಗಾನದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಸ್ವಯಂ ನಿವೃತ್ತಿ ಪಡೆದು ಸಮಾಜಕ್ಕಾಗಿ ತನ್ನನ್ನು ಅರ್ಪಿಸಿಕೊಂಡರು.ಪಣಂಬೂರು ನಂದನೇಶ್ವರ ಸಂಘದ ಸಕ್ರಿಯ ಕಾರ್ಯಕರ್ತನಾಗಿ, ಸಂಘಟಕನಾಗಿ ಬೆಳೆದವರು. ಅವರ ತಾಳಮದ್ದಳೆ- ಯಕ್ಷಗಾನ ಸಂಘಟನೆಗಳಲ್ಲಿ ಒಂದು ಮಿಲಿಟರಿ ಶಿಸ್ತು ಇದೆ. ಈ ಶಿಸ್ತನ್ನು ಕಲಾವಿದರು, ಪ್ರೇಕ್ಷಕರು ಸಹೃದಯದಿಂದ ಸ್ವೀಕರಿಸಿದ್ದಾರೆ. ಅವರೇ ಜ್ಯೋತಿಷಿಯಾದುದರಿಂದ ಕಾರ್ಯಕ್ರಮದ ಆರಂಭಕ್ಕೂ ಮುಹೂರ್ತ ಇದೆ. ಆರಂಭ ಮಧ್ಯಾಹ್ನ 2.03ಕ್ಕೆ ಅಂತಾದ್ರೆ ಹಿಮ್ಮೇಳ ಕಲಾವಿದರು ರಂಗದಲ್ಲಿ 2 ಘಂಟೆಗೆ ತಮ್ಮ ಪರಿಕರಗಳೊಂದಿಗೆ ಸಿದ್ಧರಾಗಿರುತ್ತಾರೆ.

ಹೀಗೆ ಅವರೊಬ್ಬ ಕ್ರಾಂತಿಕಾರಿ ಮೌನ ಸಂಘಟಕ. ಈ ಸಂಘಟನೆಗಳಲ್ಲಿ ದೃಶ್ಯಸಂಯೋಜನೆ – ಅದಕ್ಕೆ ಬೇಕಾದ ಪದ್ಯಗಳ ಹಾಗೂ ಕಲಾವಿದರ ಆಯ್ಕೆ, ಎಲ್ಲದರಲ್ಲೂ ಗುಣಮಟ್ಟಕ್ಕೆ ಪ್ರಾಶಸ್ತ್ಯ. ಹೀಗೆ ಕಲೆಯನ್ನು ಎತ್ತರಿಸಿದವರು. ಒಂದು ವೇಳೆ ಅವರು ಯೋಚಿಸಿದ ದೃಶ್ಯಗಳಿಗೆ, ಸಂದರ್ಭಗಳಿಗೆ ಸಿದ್ಧ ಪದ್ಯ ಇಲ್ಲದೇ ಇದ್ದರೆ ಅದನ್ನು ಸಮರ್ಥರಲ್ಲಿ ಬರೆಸುತ್ತಾರೆ. ಅವರ ಸಂಘಟನೆಯ ಇನ್ನೊಂದು ಪ್ರಮುಖ ಅಂಶವೆಂದರೆ ಕಲಾವಿದರನ್ನು, ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವಲ್ಲಿನ ದೃಷ್ಟಿಕೋನ. ಯೋಚಿಸುವ ಮನಸ್ಸುಗಳಿಗೆ ಪುಷ್ಕಳವಾದ ಆಹಾರವನ್ನು ಒದಗಿಸುವಲ್ಲಿ ಅವರು ಪಡುವ ಶ್ರಮ ಮೆಚ್ಚಲೇಬೇಕು. ಭಾಗವಹಿಸುವ ಕಲಾವಿದ ಎಲ್ಲಿಯಾದರೂ ಮೈಮರೆತು ಹಗುರವಾಗಿ ನಿರ್ವಹಣೆ ಮಾಡಿದರೆ ಆತನಿಗೆ ಬೇಕಾದ ಕಟು ಉತ್ತರ ಅವರಲ್ಲಿ ಸಿದ್ಧವಾಗಿಯೇ ಇರುತ್ತದೆ.

ಪ್ರದರ್ಶನಗಳ ಗುಣಮಟ್ಟದಲ್ಲಿ ಅವರದ್ದು ಮಿಲಿಟರಿ ಶಿಸ್ತು. ಇದು ಎಲ್ಲ ಕಡೆಯೂ ನಡೆದರೆ ಅದ್ಭುತ ಕಲಾ ಸಮಾಜವೇ ಸೃಷ್ಟಿಯಾಗಲಿಕ್ಕಿಲ್ಲವೇ? ಇದರೊಂದಿಗೆ ಕಳೆದ ಏಳರಿಂದ ಎಂಟು ದಶಕಗಳ ಆಟ – ಕೂಟಗಳ ಸಮಗ್ರ ದಾಖಲೆ ಅವರಲ್ಲಿದೆ.

Advertisement

ಮಧು-ಸುಧಾ ಅಭಿನಂದನೆ
ಮಧುಕರ ಭಾಗವತರು 60ನೇ ವರ್ಷಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಈ ಸಂತೋಷವನ್ನು ಅರ್ಥಪೂರ್ಣವಾಗಿಸಲು, ಸ್ಮರಣೀಯವನ್ನಾಗಿಸಲು ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಾರತೀಯ ವಾಯುಸೇನೆ (ನಿವೃತ್ತ) ಮಿತ್ರವೃಂದ ಜು. 28ರಂದು ಅಪರಾಹ್ನ 4.04ರಿಂದ ಶ್ರೀ ನಂದನೇಶ್ವರ ದೇವಸ್ಥಾನದ ರಜತಾಂಗಣದಲ್ಲಿ “ಮಧು-ಸುಧಾ ಅಮೃತಾಭಿನಂದನಾ’ ಸಮ್ಮಾನ ಸಮಾರಂಭ ಆಯೋಜಿಸಿದೆ. ಮಧುಕರ ಭಾಗವತರ ಸಾಧನಾ ಪಥದಲ್ಲಿ ಅವರ ಶ್ರೀಮತಿ ಸುಧಾ ಅವರ ಪ್ರೋತ್ಸಾಹವೂ ಅನನ್ಯ. ಅಭಿನಂದನ ಸಮಾರಂಭದ ಬಳಿಕ ಯಕ್ಷ – ನೃತ್ಯ ವೈಭವ ಹಾಗೂ “ಅತಿಕಾಯ ಮೋಕ್ಷ’ ಬಯಲಾಟ ಆಯೋಜಿಸಲಾಗಿದೆ.

ಡಾ| ಶ್ರುತಕೀರ್ತಿರಾಜ

Advertisement

Udayavani is now on Telegram. Click here to join our channel and stay updated with the latest news.

Next