Advertisement

ಮಜ್ಜಿಗೆಬೈಲು ಆನಂದ ಶೆಟ್ಟಿಯವರಿಗೆ ಸೀತಾನದಿ ಪ್ರಶಸ್ತಿ 

06:00 AM Oct 05, 2018 | Team Udayavani |

ಪ್ರಸಂಗಕರ್ತ, ತಾಳಮದ್ದಳೆ ಅರ್ಥದಾರಿ ಅಭಿನವ ಪಾರ್ಥಿಸುಬ್ಬ ಬಿರುದಾಂಕಿತ ಸೀತಾನದಿ ಗಣಪಯ್ಯ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ ಈ ಬಾರಿ ಬಡಗುತಿಟ್ಟಿನ ಸಂಪ್ರದಾಯದ ಕಲಾವಿದ ಮಜ್ಜಿಗೆಬೈಲು ಆನಂದ ಶೆಟ್ಟರಿಗೆ ನೀಡಲಾಗುತ್ತಿದೆ.ಸೀತಾನದಿಯವರ 31ನೇ ಸಂಸ್ಮರಣಾ ಸಮಾರಂಭ ಅಕ್ಟೋಬರ್‌ 7ರಂದು ತೆಕ್ಕಟ್ಟೆಯ ಹಯಗ್ರೀವ ಮಂಟಪದಲ್ಲಿ ಯಶಸ್ವಿ ಕಲಾವೃಂದ ತೆಕ್ಕಟ್ಟೆ ಇವರ ಆಶ್ರಯದಲ್ಲಿ ನೆರವೇರಲಿದೆ. 

Advertisement

 ಆನಂದ ಶೆಟ್ಟರು ಪಾರಂಪರಿಕ ವರ್ಚಸ್ಸಿನ ಪ್ರಾತಿನಿಧಿಕರಾಗಿ ಗುರುತಿಸಿಕೊಂಡವರು.ಸುಮಾರು 72 ವರ್ಷದ ಈ ಹಿರಿಯ ಕಲಾವಿದರು ನಡುಬಡಗಿನ ವೇಷವೈವಿಧ್ಯದಲ್ಲಿ ತನ್ನದೇ ಛಾಪು ಮೂಡಿಸಿ ಸಮಕಾಲಿನ ರಂಗಭೂಮಿಗೆ ಒಗ್ಗಿಕೊಳ್ಳದೆ ಸನಾತನ ಕಲಾಸಾರವನ್ನೇ ಗಂಭೀರವಾಗಿ ಹೀರಿಕೊಂಡ ಶಿಷ್ಟ ಕಲಾವಿದರು.ಡೇರೆ ಮೇಳಗಳ ಹೊಸ ಪ್ರಸಂಗಗಳು ಯಕ್ಷಗಾನಕ್ಕೆ ಲಗ್ಗೆ ಇಟ್ಟಾಗಲೂ ತನ್ನತನದೊಂದಿಗೆ ರಾಜಿ ಮಾಡಿಕೊಳ್ಳದೆ ಮುಂದುವರಿದವರು.ಗತ್ತು ಗಾಂಭೀರ್ಯದ ನಡೆ ಪ್ರೌಢ‌ ಸಾಹಿತ್ಯ ಯಕ್ಷಗಾನೀಯ ಸೊಗಡು ಮೈವೆತ್ತ ಅವರ ವೇಷಗಳಲ್ಲಿ ನಡುತಿಟ್ಟಿನ ಎರಡು ಶೈಲಿಗಳನ್ನು ಗುರುತಿಸಬಹುದಾಗಿದೆ.ಕರ್ಣ, ಜಾಂಬವ, ಭೀಷ್ಮ, ವಿಭೀಷಣ ಮುಂತಾದ ಎರಡನೇ ವೇಷಗಳಲ್ಲಿ ಹಾರಾಡಿ ಶೈಲಿಯ ಛಾಪು , ಸುಧನ್ವ, ಅರ್ಜುನ, ತಾಮ್ರಧ್ವಜ,ಪುಷ್ಕಳ, ದೇವವ್ರತ ಮುಂತಾದ ಪುರುಷ ವೇಷಗಳಲ್ಲಿ ಮಟಪಾಡಿ ಶೈಲಿಯ ಕಿರುಹೆಜ್ಜೆಯನ್ನು ಗುರುತಿಸಬಹುದಾಗಿದೆ.ಬಹುಕಾಲ ಮೊಳಹಳ್ಳಿ ಹೆರಿಯ ನಾಯ್ಕರೊಂದಿಗಿನ ಅವರ ಪುರುಷವೇಷ ಮಂದಾರ್ತಿ ಮೇಳದ ರಂಗಸ್ಥಳವನ್ನು ತುಂಬಿಸಿತ್ತು.

ಐದನೇ ತರಗತಿ ವಿದ್ಯಾಭ್ಯಾಸ ಪಡೆದ ಇವರಿಗೆ ತಂದೆಯೇ ಯಕ್ಷಗಾನದ ಗುರು.ಆ ಕಾಲದಲ್ಲಿ ತಂದೆಗೆ ಹೆಸರುತಂದ ಬಂಡಿಭೀಮ, ಸುಂದರ ರಾವಣ, ವಲಲ ಮುಂತಾದ ಪಾತ್ರಗಳು ಇವರನ್ನು ಯಕ್ಷಗಾನದತ್ತ ಸೆಳೆಯಿತು.ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಗೆಜ್ಜೆ ಕಟ್ಟಿದ ಇವರು ತಂದೆಯೊಂದಿಗೆ ಆಗಿನ ಕೊಡವೂರು ಮೇಳಕ್ಕೆ ಸೇರಿದರು.ಬಳಿಕ ಪೆರ್ಡೂರು ಗೋಳಿಗರಡಿ, ಅಮೃತೇಶ್ವರಿ,ಸಾಲಿಗ್ರಾಮ, ಮಾರಣಕಟ್ಟೆ ಮೇಳ ಸೇರಿ ಬಳಿಕ ದೀರ್ಘ‌ಕಾಲ ಹೆಗ್ಗುಂಜೆ ಭೋಜರಾಜ ಹೆಗ್ಡೆಯವರ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸಿದ್ದರು.ಜಾನುವಾರುಕಟ್ಟೆ ಭಾಗವತರು,ಮರಿಯಪ್ಪಾಚಾರ್‌,ಉಡುಪಿ, ಬಸವಕೋಡಿ ಶಂಕರ ಗಾಣಿಗ,ಮೊಳಹಳ್ಳಿ ಹೆರಿಯ, ಹೆರಂಜಾಲು ಸುಬ್ಬಣ್ಣ , ಮತ್ಯಾಡಿ ನರಸಿಂಹ ಶೆಟ್ಟಿಯವರ ಒಡನಾಟದ ಮಂದಾರ್ತಿ ಮೇಳದ ತಿರುಗಾಟ ಶೆಟ್ಟರ ಯಕ್ಷಗಾನ ಬದುಕಿನ ಸುವರ್ಣಯುಗ.ಪೆರ್ಡೂರು ಮೇಳದಲ್ಲಿ ನಗರ ಜಗನ್ನಾಥ ಶೆಟ್ಟಿ ಮತ್ತು ಐರೋಡಿ ಗೋವಿಂದಪ್ಪನವರೊಂದಿಗಿನ ಪೌರಾಣಿಕ ಪ್ರಸಂಗದ ಇವರ ವೇಷಗಳು ಜನಮನ್ನಣೆ ಪಡೆದಿದ್ದವು.ಬಯಲಾಟದ ಜೋಡಾಟದಲ್ಲಿ ಮಂಡಿ ಹಾಕುವುದರಲ್ಲಿ ಇವರನ್ನು ಸೋಲಿಸುವವರೇ ವಿರಳವಾಗಿತ್ತು.ಸುಮಾರು 50 ವರ್ಷ ಬಡಗುತಿಟ್ಟಿನ ರಂಗಸ್ಥಳವನ್ನು ಶ್ರೀಮಂತಗೊಳಿಸಿದ ಶೆಟ್ಟರು ಅರ್ಜುನ, ಪುಷ್ಕಳ, ಸುಧನ್ವ ಮುಂತಾದ ಪುರುಷವೇಷಗಳಿಗೆ ಜೀವತುಂಬಿ ತಿರುಗಾಟದ ಕೊನೆಯಲ್ಲಿ ಹಲವು ವರ್ಷ ಮಂದಾರ್ತಿ ಮೇಳದಲ್ಲಿ ಎರಡನೇ ವೇಷದಾರಿಯಾಗಿ ಬಡ್ತಿ ಹೊಂದಿ ಕರ್ಣ, ಜಾಂಬವ, ಮಾರ್ತಾಂಡತೇಜ ಮುಂತಾದ ಪ್ರಧಾನ ವೇಷಗಳಿಗೆ ನ್ಯಾಯ ಒದಗಿಸಿದ ಶೆಟ್ಟರು ಸದ್ಯ ಅನಾರೋಗ್ಯದಿಂದ ನಿವೃತ್ತಿ ಹೊಂದಿದ್ದಾರೆ.ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಸನ್ಮಾನಗಳು ಗಳು ಸಂದಿವೆ. 

 ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next