Advertisement

ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಪಪ್ಪಾಯಿ ಮಾರಾಟ

12:54 PM May 02, 2020 | Naveen |

ಸಿರುಗುಪ್ಪ: ತಾಲೂಕಿನ ವಿವಿಧ ಗ್ರಾಮಗಳಲ್ಲಿ 50 ಎಕರೆ ಪ್ರದೇಶಲ್ಲಿ ಬೆಳೆದ ಪಪ್ಪಾಯಿ ಹಣ್ಣುಗಳ ಮಾರಾಟ ನಡೆಯಿತು. ಹರಿಯಾಣ, ಬೆಂಗಳೂರು ಮತ್ತು ಹೈದ್ರಾಬಾದ್‌ನಿಂದ ತಾಲೂಕಿನಲ್ಲಿ ರೈತರು ಬೆಳೆದ ಪಪ್ಪಾಯಿ ಹಣ್ಣುಗಳನ್ನು ಖರೀದಿಸಲು ಮುಂದಾಗಿದ್ದು, ಪಪ್ಪಾಯಿ ಬೆಳೆದ ರೈತರಿಗೆ ಸದ್ಯ ಮಾರುಕಟ್ಟೆ ದೊರೆತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಪಪ್ಪಾಯಿ ಹಣ್ಣಿನ ಬೆಲೆ ನಿಗದಿಪಡಿಸಲಾಯಿತು.

Advertisement

ಉತ್ತಮ ಹಣ್ಣು ಒಂದು ಕೆಜಿಗೆ ರೂ.10, ಕಡಿಮೆ ಗುಣಮಟ್ಟದ ಹಣ್ಣಿಗೆ ರೂ.9ರಂತೆ ದೆಹಲಿ, ಬೆಂಗಳೂರು, ಹರಿಯಾಣದ ವ್ಯಾಪಾರಿಗಳು ರೈತರ ಹೊಲಗಳಿಗೆ ತೆರಳಿ ಹಣ್ಣನ್ನು ಖರೀದಿಸಿ ಲಾರಿಗಳ ಮೂಲಕ ತೆಗೆದುಕೊಂಡು ಹೋದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಪ್ಪಾಯಿ ಬೆಳೆಗಾರರಿಗೆ ಮಾರುಕಟ್ಟೆ ಸಮಸ್ಯೆ ಎದುರಾಗಿತ್ತು. ಮಾರುಕಟ್ಟೆಗೆ ಸಾಗಿಸಲು ಹಣವಿಲ್ಲದೆ ರೈತ ಕುಟುಂಬಗಳು ಕಂಗಾಲಾಗಿದ್ದವು. ನಿರೀಕ್ಷಿತ ಬೆಲೆ ಸಿಗದೆ ಇದ್ದರೂ ನ್ಯಾಯಯುತ ದರಕ್ಕೆ ಮಾರಾಟವಾಗುತ್ತಿದೆ. ಬೆಳೆಗೆ ತಗುಲಿದ ವೆಚ್ಚವಾದರೂ ಸಿಕ್ಕರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ರೈತರು ರೂ.10ಕ್ಕೆ ಒಂದು ಕೆಜಿ ಹಣ್ಣನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ಒಂದು ಎಕರೆ ಪಪ್ಪಾಯಿ ಬೆಳೆ ಬೆಳೆಯಲು ಸುಮಾರು ಒಂದು ಲಕ್ಷ ರೂ. ವರೆಗೆ ಖರ್ಚಾಗಿದೆ. 20 ರೂಪಾಯಿಗೆ ಒಂದು ಕಿಲೋ ಹಣ್ಣು ಮಾರಾಟವಾಗಿದ್ದರೆ ಉತ್ತಮ ಲಾಭ ದೊರೆಯುತ್ತಿತ್ತು.
ಆದರೆ 10 ರೂ.ಗೆ ಒಂದು ಕೆಜಿ ಹಣ್ಣು ಮಾರಾಟವಾಗುತ್ತಿರುವುದು ಯಾವುದೇ ಲಾಭವಿಲ್ಲದಂತಾಗಿದೆ ಎಂದು ಉಪ್ಪಾರಹೊಸಳ್ಳಿ ಗ್ರಾಮದ ರೈತ ರುದ್ರಗೌಡ ತಿಳಿಸಿದ್ದಾರೆ.

ತಾಲೂಕಿನಲ್ಲಿ ಬೆಳೆದ ಪಪ್ಪಾಯಿ ಬೆಳೆಗೆ ಅಂತಾರಾಜ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಲಾಕ್‌ಡೌನ್‌ ಸಡಲಿಕೆಯಾಗಿರುವುದರಿಂದ ಪಪ್ಪಾಯಿ ಹಣ್ಣುಗಳನ್ನು ಕೊಳ್ಳಲು ವ್ಯಾಪಾರಸ್ಥರು ಬರುತ್ತಿದ್ದಾರೆ. ಕಳೆದ ವರ್ಷ ಒಂದು ಕೆಜಿಗೆ ರೂ.20ಕ್ಕೆ ಮಾರಾಟವಾಗಿತ್ತು. ಆದರೆ ಈ ವರ್ಷ ರೂ.10ಕ್ಕೆ ಒಂದು ಕೆಜಿ ಹಣ್ಣು ಮಾರಾಟವಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next