Advertisement

ಸ್ವಂತ ಕಟ್ಟಡವಿದೆ; ಸೌಕರ್ಯವೇ ಇಲ್ಲ!

03:06 PM Oct 25, 2019 | |

ಸಿರುಗುಪ್ಪ: ಸಾರ್ವಜನಿಕ ಗ್ರಂಥಾಲಯ ಶ್ರೀಸಾಮಾನ್ಯರ ವಿಶ್ವವಿದ್ಯಾಲಯವಿದ್ದಂತೆ. ಸಾರ್ವಜನಿಕರಿಗೆ ವಿದ್ಯೆ, ಜ್ಞಾನ, ಓದಿನ ಬಗೆಗೆ ಅಭಿರುಚಿ ಬೆಳೆಸಲು ಸರ್ಕಾರ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಿದೆ.

Advertisement

ಆದರೆ ಸದ್ಯ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಜನಸಂಪರ್ಕವಿಲ್ಲದ ಸ್ಥಳದಲ್ಲಿ ನಿರ್ಮಾಣಗೊಂಡಿದೆ. ಸುಮಾರು 15 ವರ್ಷಗಳ ಹಿಂದೆ ತಾಲೂಕು ಕಚೇರಿ ಎದುರಿಗಿರುವ ಜಲಶುದ್ಧೀಕರಣ ಘಟಕದ ಆವರಣದಲ್ಲಿ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿತ್ತು. ಆಗ ಸಾಕಷ್ಟು ಸಂಖ್ಯೆಯಲ್ಲಿ ಓದುಗರು ಗ್ರಂಥಾಲಯಕ್ಕೆ ಬಂದು ಓದುತ್ತಿದ್ದರು. ಗ್ರಂಥಾಲಯಕ್ಕೆ ತನ್ನದೇ ಆದ ಸ್ವಂತಕಟ್ಟಡವಿಲ್ಲದ ಕಾರಣ ಅನೇಕ ವರ್ಷ ಜಲಶುದ್ಧೀಕರಣ ಘಟಕದ ಆವರಣದಲ್ಲಿಯೇ ಕಾರ್ಯನಿರ್ವಹಿಸಿತ್ತು.

ರಾಜೀವ್‌ಗಾಂಧಿ ನಗರದಲ್ಲಿ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ನಿರ್ಮಿಸಲಾಯಿತು. ಗ್ರಂಥಾಲಯವು ಜನಸಂಪರ್ಕ ಇಲ್ಲದ ಪ್ರದೇಶದಲ್ಲಿ ನಿರ್ಮಾಣವಾಗಿರುವುದರಿಂದ ಹೆಚ್ಚಿನ ಸಂಖ್ಯೆ ಓದುಗರು ಗ್ರಂಥಾಲಯಕ್ಕೆ ಬರುತ್ತಿಲ್ಲ. ಪಟ್ಟಣದ ಹೃದಯಭಾಗದಲ್ಲಿದ್ದರೆ ಎಲ್ಲರಿಗೂ ಅನುಕೂಲವಾಗುತ್ತಿತ್ತು.

15 ವರ್ಷದ ಹಿಂದೆ ನಿರ್ಮಾಣವಾದ ಗ್ರಂಥಾಲಯವು ಚಿಕ್ಕದಾಗಿದ್ದು, ಓದುಗರಿಗೆ ಕುಳಿತುಕೊಳ್ಳಲು ಅನಾನುಕೂಲವಿದೆ. ಕೇವಲ 20ರಿಂದ 25 ಕುರ್ಚಿ ಮತ್ತು ನಾಲ್ಕು ಟೇಬಲ್‌ಗ‌ಳು ಗ್ರಂಥಾಲಯದಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಓದುಗರು ಗ್ರಂಥಾಲಯಕ್ಕೆ ಬಂದರೆ ನಿಂತುಕೊಂಡು ಅಥವಾ ಹೊರಗಡೆ ಕುಳಿತುಕೊಂಡು ಓದಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ಗ್ರಂಥಾಲಯದ ಸುತ್ತಲೂ ಕುರುಚಲು ಪೊದೆಗಳು, ಗಿಡಗಂಟೆಗಳು ಬೆಳೆದು ಗ್ರಂಥಾಲಯದ ಪರಿಸರವೇ ನಿರ್ವಹಣೆ ಕೊರತೆಯಿಂದ ಹಾಳುಕೊಂಪೆಯಂತಾಗಿದೆ. ಇಲ್ಲಿಗೆ ಬರುವ ಓದುಗರಿಗೂ ಕಿರಿಕಿರಿ ಉಂಟಾಗಿದೆ.

ಗ್ರಂಥಾಲಯದಲ್ಲಿ ಕಾದಂಬರಿ, ಜೀವನ ಚರಿತ್ರೆ, ಕಥೆ, ಕವನ ಸೇರಿದಂತೆ ವಿವಿಧ ಸಾಹಿತ್ಯ ಮತ್ತು ವೈಜ್ಞಾನಿಕ, ಸಾಮಾಜಿಕ, ಧಾರ್ಮಿಕ, ದಾರ್ಶನಿಕರ ಸುಮಾರು 28,434 ಪುಸ್ತಕಗಳಿದ್ದು, ಇದರಲ್ಲಿ ಸುಮಾರು 10 ಸಾವಿರ ಪುಸ್ತಕಗಳು ಹಳೆ ಪುಸ್ತಕಗಳಾಗಿದ್ದು
ಹಾಳಾಗಿವೆ. ಆದರೆ ಓದುಗರ ಸಂಖ್ಯೆಯೂ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪುಸ್ತಕಗಳು ಇದೀಗ ಧೂಳು ಹಿಡಿಯುತ್ತಿವೆ.

Advertisement

ಈ ಗ್ರಂಥಾಲಯದಲ್ಲಿ ಒಟ್ಟು 1027 ಮಂದಿ ಓದುಗರು ಸದಸ್ಯತ್ವವನ್ನು ಪಡೆದಿದ್ದಾರೆ. ಆದರೆ ಪ್ರತಿನಿತ್ಯ ಇಲ್ಲಿಗೆ ಓದಲು ಬರುವವರ ಸಂಖ್ಯೆ 50ರಿಂದ 60 ಜನ ಮಾತ್ರ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಈ ಗ್ರಂಥಾಲಯದಲ್ಲಿ ಅಧ್ಯಯನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. 20ರಿಂದ 30 ಜನ ಸದಸ್ಯರು ಪ್ರತಿನಿತ್ಯ ಪುಸ್ತಕಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಗ್ರಂಥಾಲಯ ಕಟ್ಟಡದ ಜಾಗ ಚಿಕ್ಕದಾಗಿರುವುದರಿಂದ ಅವಶ್ಯವಿರುವ ಕುರ್ಚಿ ಬೆಂಚ್‌ ಇದ್ದರೂ ಸಹ ಸ್ಥಳವಿಲ್ಲದೇ ಪರದಾಡುವಂತಾಗಿದೆ. ಸಾಕಷ್ಟು ಸಮಯ ದಿನಪತ್ರಿಕೆ ಓದುವವರ ಸಂಖ್ಯೆ ಹೆಚ್ಚಿರುವುದರಿಂದ ಅವರಿಗೆ ಕುರ್ಚಿ, ಬೆಂಚ್‌ ಹಾಗೂ ಪುಸ್ತಕಗಳನ್ನು ಶೇಖರಿಸಿಡಲು ಕಪಾಟುಗಳ ಅವಶ್ಯಕತೆ ಇದೆ. ಆದರೆ ಇಲ್ಲಿ ಒಬ್ಬ ಗ್ರಂಥಪಾಲಕರು, ಒಬ್ಬ ಗ್ರಂಥಾಲಯ ಸಹಾಯಕ ಮತ್ತು ಇನ್ನಿಬ್ಬರು ಸಿಬ್ಬಂದಿ ಕಾರ್ಯನಿರ್ವಹಿಸಬೇಕು, ಆದರೆ ಒಬ್ಬ ಗ್ರಂಥಾಲಯ ಸಹಾಯಕ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಾರೆ.

ಈ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಶೇಖರಿಸಿಡಲು ಕಪಾಟುಗಳ ಕೊರತೆ ಇರುವುದರಿಂದ ಸಾಕಷ್ಟು ಸಂಖ್ಯೆಯ ಪುಸ್ತಕಗಳನ್ನು ಚೀಲಗಳಲ್ಲಿ, ರಟ್ಟಿನ ಬಾಕ್ಸ್ ಗಳಲ್ಲಿ ತುಂಬಿಡಲಾಗಿದೆ. ಶೌಚಾಲಯ ವ್ಯವಸ್ಥೆ ಇಲ್ಲ, ಮೂಲ ಸೌಲಭ್ಯಗಳು ಇಲ್ಲ, ಕುಡಿಯುವ ನೀರನ್ನು ಕ್ಯಾನ್‌ನಲ್ಲಿಟ್ಟು ಪೂರೈಕೆ ಮಾಡಲಾಗುತ್ತಿದೆ.

ಹಳೇ ಕಟ್ಟಡದೊಂದಿಗೆ ಹೊಸ ಕಟ್ಟಡವನ್ನು ಜೋಡಿಸಿ ಕಟ್ಟಿರುವುದರಿಂದ ಹೊಸ ಕಟ್ಟಡದಲ್ಲಿ ಓದುಗರಿಗೆ ವಿಶಾಲವಾದ ಹಾಲ್‌ ಕಟ್ಟಲಾಗಿದೆ. ಈ ಕಟ್ಟಡ ಉದ್ಘಾಟನೆಯಾದರೆ ಹೆಚ್ಚಿನ ಸಂಖ್ಯೆಯಲ್ಲಿ ಓದುಗರು ಕುಳಿತುಕೊಂಡು ಓದಲು ಅನುಕೂಲವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next