Advertisement

ಇಂದಿನಿಂದ ಸಿರ್ಸಿ ಮೇಲ್ಸೇತುವೆ ಕಾಮಗಾರಿ

11:06 AM Dec 16, 2019 | Team Udayavani |

ಬೆಂಗಳೂರು: ನಗರದ ಪ್ರಮುಖ ಸಂಚಾರ ದಟ್ಟಣೆ ಇರುವ ಮಾರ್ಗ “ಸಿರ್ಸಿ ಫ್ಲೈಓವರ್‌’ (ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ)ನಲ್ಲಿ ವಾಹನ ಸಂಚಾರ ಸೋಮವಾರದಿಂದ ಸುಮಾರು ಒಂದು ತಿಂಗಳು ಭಾಗಶಃ ಸ್ಥಗಿತಗೊಳ್ಳಲಿದೆ.

Advertisement

2.65 ಕಿ.ಮೀ. ಉದ್ದದ ಉದ್ದೇಶಿತ ಮೇಲ್ಸೇತುವೆಯಲ್ಲಿ ಡಿ. 16ರಿಂದ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುವ ವೇಳೆ ಮೈಸೂರು ರಸ್ತೆಯ ಮೇಲ್ಸೇತುವೆ ಮಾರ್ಗವಾಗಿ ರಾಯನ್‌ ವೃತ್ತದ ಮಾರ್ಗದಲ್ಲಿ ಎಲ್ಲ ರೀತಿಯ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಿಂದ ಪರ್ಯಾಯ ಮಾರ್ಗಗಳಲ್ಲಿ ವಾಹನದಟ್ಟಣೆ ಎಂದಿಗಿಂತ ಹೆಚ್ಚು ಇರಲಿದೆ. ಪುರಭವನದ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಹೋಗುವ ಒಂದು ಮಾರ್ಗವನ್ನು ಈಗಾಗಲೇ ಐದು ಕೋಟಿ ರೂ. ವೆಚ್ಚದಲ್ಲಿ ಕಳೆದ ಮಾರ್ಚ್‌ನಲ್ಲಿ ನೂತನ ತಂತ್ರಜ್ಞಾನ ಬಳಸಿಕೊಂಡು ಡಾಂಬರೀಕರಣ ಮಾಡಲಾಗಿತ್ತು. ಇದೀಗ ಮತ್ತೂಂದು ಭಾಗದ ರಸ್ತೆಗೆ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 30 ದಿನಗಳೊಳಗೆ ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಕಾಮಗಾರಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಗುರುತಿಸಲಾಗಿದೆ. ಸಿರ್ಸಿ ಮೇಲ್ಸೇತುವೆ ದುರಸ್ತಿಯನ್ನು ಎರಡು ಹಂತದಲ್ಲಿ ಕೈಗೊಂಡಿದ್ದು, ಮೊದಲ ಹಂತದ ಕಾಮಗಾರಿಯು ಬಾಡಿ ಬಿಲ್ಡರ್‌ ಫ್ಲೈಓವರ್‌ ಅಪ್‌ ರ್‍ಯಾಂಪ್‌ ಜಂಕ್ಷನ್‌ನಿಂದ ಬ್ರಿಯಾಂಡ್‌ ವೃತ್ತದ ಮೇಲ್ಸೇತುವೆ ಮೇಲ್ಭಾಗದ ಜಂಕ್ಷನ್‌ವರೆಗೆ ಹಾಗೂ ಎರಡನೇ ಹಂತದ ಕಾಮಗಾರಿಯು ಬ್ರಿಯಾಂಡ್‌ ವೃತದ ಮೇಲ್ಸೇತುವೆಯ ಮೇಲ್ಭಾಗದ ಜಂಕ್ಷನ್‌ನಿಂದ ಎನ್‌.ಆರ್‌. ರಸ್ತೆಯ ಫ್ಲೈಓವರ್‌ನ ಕೆಳಭಾಗದ ರ್‍ಯಾಂಪ್‌ ಜಂಕ್ಷನ್‌ನವರೆಗೆ ನಡೆಯಲಿದೆ.

ಉದ್ದೇಶಿತ ಕಾಮಗಾರಿ ನಡೆಯುವಾಗ ಈ ಮಾರ್ಗದಲ್ಲಿ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಲಾಗಿದೆ. ಇದಕ್ಕೆ ಪರ್ಯಾಯ ರಸ್ತೆಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಡಿ. 16ರಿಂದ ಮೊದಲ ಹಂತ ಪ್ರಾರಂಭವಾಗಲಿದೆ. ಸುಮನಹಳ್ಳಿ ಮೇಲ್ಸೇತುವೆಯ ದುರಸ್ತಿ ಕಾಮಗಾರಿಯೂ ಸೋಮವಾರದಿಂದ ಪ್ರಾರಂಭವಾಗಲಿದೆ. ಆದರೆ, ಈ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಬಿಬಿಎಂಪಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next